ಮಹತ್ವದ ತೀರ್ಪೊಂದರಲ್ಲಿ ಚುನಾಯಿತ ಜನಪ್ರತಿನಿಧಿಗಳ ವಿರುದ್ದದ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ ಶನಿವಾರ, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಅಕ್ರಮ ಡಿನೋಟಿಫಿಕೇಷನ್ ಪ್ರಕರಣಲ್ಲಿ ಕರ್ನಾಟಕ ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟನ್ನು ತಳ್ಳಿಹಾಕಿದೆ.

ಆ ಮೂಲಕ ಬಿ ಎಸ್ ಯಡಿಯೂರಪ್ಪ ಅವರಿಗೆ ದೊಡ್ಡ ಸಂಕಷ್ಟ ಎದುರಾಗಿದ್ದು, ಉಪ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯಲ್ಲಿ ಹದಿನೈದು ವರ್ಷಗಳ ಹಿಂದೆ ನಡೆಸಿದ್ದ ಅಕ್ರಮ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಈಗ ಮತ್ತೊಮ್ಮೆ ವಿಚಾರಣೆ ಎದುರಿಸುವ ಮತ್ತು ಸಂದರ್ಭ ಬಂದಲ್ಲಿ ಬಂಧನಕ್ಕೂ ಒಳಗಾಗುವ ಭೀತಿ ಎದುರಾಗಿದೆ.
ಬೆಂಗಳೂರಿನ ಪ್ರತಿಷ್ಠಿತ ಪ್ರದೇಶವಾದ ವೈಟ್ ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ನಡುವೆ ಐಟಿ ಮಾಹಿತಿ ತಂತ್ರಜ್ಞಾನ ಕಾರಿಡಾರ್ ನಿರ್ಮಾಣಕ್ಕಾಗಿ ಹಿಂದಿನ ಸರ್ಕಾರ ವಶಪಡಿಸಿಕೊಂಡಿದ್ದ 434 ಎಕರೆ ಜಮೀನಿನ ಕೆಲವು ಭಾಗಗಳಲ್ಲಿ ‘ಅಕ್ರಮ ಗಳಿಕೆಯ ಉದ್ದೇಶ’ಕ್ಕಾಗಿ 2006ರ ಜುಲೈ 21ರಂದು ಅಂದಿನ ಉಪಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ ಅಕ್ರಮವಾಗಿ ಡಿನೋಟಿಫೈ ಮಾಡಿದ ಪ್ರಕರಣ ಇದಾಗಿದೆ. ಆ ಅಕ್ರಮದ ಕುರಿತು 2013ರಲ್ಲಿ ವಾಸುದೇವ ರೆಡ್ಡಿ ಎಂಬುವರು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು. ಬೆಳ್ಳಂದೂರು ಭಾಗದ ಖಾಸಗಿ ವ್ಯಕ್ತಿಗಳಿಂದ ವಶಪಡಿಸಿಕೊಂಡಿದ್ದ ಭೂಮಿಯನ್ನು ಡಿನೋಟಿಫೈ ಮಾಡುವ ಮೂಲಕ ಮೂಲ ಮಾಲೀಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಈ ಡಿನೋಟಿಫಿಕೇಷನ್ ಹಿಂದೆ ‘ಲಾಭ’ದ ಉದ್ದೇಶವಿದೆ ಎಂದು ದೂರಿನಲ್ಲಿ ಹೇಳಲಾಗಿತ್ತು. ಲೋಕಾಯುಕ್ತ ಪೊಲೀಸರು 2015ರಲ್ಲಿ ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದರು.

ಇದೇ ಪ್ರಕರಣದ ಮತ್ತೊಬ್ಬ ಆರೋಪಿಯಾಗಿದ್ದ ಕಾಂಗ್ರೆಸ್ ಮುಖಂಡ ಆರ್ ವಿ ದೇಶಪಾಂಡೆ ವಿರುದ್ಧದ ದೂರನ್ನು ಹೈಕೋರ್ಟ್ 2015ರ ಅಕ್ಟೋಬರ್ 9ರಂದು ರದ್ದುಪಡಿಸಿದ ಹಿನ್ನೆಲೆಯಲ್ಲಿ, ಬಿ ಎಸ್ ಯಡಿಯೂರಪ್ಪ ಕೂಡ 2019ರಲ್ಲಿ ಹೈಕೋರ್ಟ್ ಮೊರೆಹೋಗಿ, ತಮ್ಮ ವಿರುದ್ಧದ ದೂರನ್ನು ರದ್ದುಮಾಡುವಂತೆ ಕೋರಿದ್ದರು. ಆದರೆ, 2020ರ ಡಿಸೆಂಬರ್ 22ರಂದು ಹೈಕೋರ್ಟ್ ಆ ಕೋರಿಕೆಯನ್ನು ತಳ್ಳಿ ಹಾಕಿದ್ದಲ್ಲದೆ, ಪ್ರಕರಣ ದಾಖಲಾಗಿ ಐದು ವರ್ಷ ಕಳೆದರೂ ತನಿಖೆ ನಡೆಸದೇ ಮುಗುಮ್ಮಾಗಿ ಇದ್ದ ಲೋಕಾಯುಕ್ತದ ನಿಷ್ಕ್ರಿಯತೆಯ ವಿರುದ್ದ ಕಿಡಿಕಾರಿತ್ತು. ಜೊತೆಗೆ ಪ್ರಕರಣದ ತನಿಖೆಯನ್ನು ಎಸಿಬಿಗೆ ವಹಿಸಿ ಆದೇಶ ಹೊರಡಿಸಿತ್ತು.
ಬಳಿಕ, 2021ರ ಜನವರಿ 18ರಂದು ಲೋಕಾಯುಕ್ತ ಪೊಲೀಸರು ಪ್ರಕರಣದ ಸಂಬಂಧ ಬಿ ರಿಪೋರ್ಟ್ ಸಲ್ಲಿಸಿ ಮುಕ್ತಾಯಗೊಳಿಸಿದ್ದರು. ಆದರೆ, ಲೋಕಾಯುಕ್ತ ಪೊಲೀಸರ ಆ ಕ್ರಮವನ್ನು ಪ್ರಶ್ನಿಸಿ ಮೂಲ ಅರ್ಜಿದಾರ ವಾಸುದೇವ್ ರೆಡ್ಡಿ ವಿಶೇಷ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟನ್ನು ವಿಶೇಷ ನ್ಯಾಯಾಲಯ ತಳ್ಳಿಹಾಕಿದೆ. ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಶ್ರೀಧರ್ ಗೋಪಾಲಕೃಷ್ಣ ಭಟ್, ಈ ಆದೇಶ ನೀಡಿದ್ದು, ತನಿಖಾಧಿಕಾರಿ ಸಲ್ಲಿಸಿದ್ದ ಬಿ ಅಂತಿಮ ವರದಿಯನ್ನು ಈ ಮೂಲಕ ತಳ್ಳಿಹಾಕಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ಲೋಕಾಯುಕ್ತದ ಡಿವೈಎಸ್ ಪಿ ಗೆ ನಿರ್ದೇಶಿಸಲಾಗಿದೆ” ಎಂದು ಹೇಳಿದ್ದಾರೆ.

ಅಲ್ಲದೆ, ತನಿಖಾಧಿಕಾರಿಗಳು ತನಿಖೆಯ ವಿಳಂಬದ ಕುರಿತು ಹೈಕೋರ್ಟ್ ಈ ಹಿಂದೆ ನೀಡಿರುವ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಕರಣದ ತನಿಖೆ ನಡೆಸಿ ಎಂದು ಖಡಕ್ ಎಚ್ಚರಿಕೆ ನೀಡಿರುವ ನ್ಯಾಯಾಧೀಶರು, ಲೋಕಾಯುಕ್ತ ಪ್ರಕರಣದ ಕುರಿತು ತಿಪ್ಪೇಸಾರಿಸುವ ತನಿಖೆ ನಡೆಸಿದೆ. ಗಂಭೀರ ತನಿಖೆ ನಡೆಸಿಲ್ಲ. ಹಾಗಾಗಿ, ಪ್ರಕರಣದ ಕುರಿತು ಸರಿಯಾದ ತನಿಖೆ ನಡೆಸಿ, ಆಗಸ್ಟ್ 21ರ ಒಳಗಾಗಿ ವರದಿ ಸಲ್ಲಿಸುವಂತೆ ಗಂಭೀರ ಸೂಚನೆ ನೀಡಿದ್ದಾರೆ.





