ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ದಿನೆ ದಿನೆ ತಾರಕಕ್ಕೆ ಏರುತ್ತಿದೆ. ದಿನಕ್ಕೊಂದು ಹೇಳಿಕೆ, ದಿನಕ್ಕೊಂದು ಬೆಳವಣಿಗೆ ಆಗ್ತಿರೋ ಈ ಗಂಭೀರವಾದ ವಿಚಾರಕ್ಕೆ ಅಂತ್ಯ ಯಾವಾಗ ಅನ್ನೋದು ಸಾರ್ವಜನಿಕರಿಂದ ಪ್ರಶ್ನೆ ಎದ್ದಿತ್ತು. ಅದೆಲ್ಲದಕ್ಕೂ ಫುಲ್ ಸ್ಟಾಪ್ ಎಂಬಂತೆ ಪಾಲಿಕೆ ಅಧಿಕಾರಿಗಳು ಈದ್ಗಾ ವಿವಾದಕ್ಕೆ ಇತಿಶ್ರೀ ಹಾಡಲು ಮುಂದಾಗಿದ್ದಾರೆ.
ಹಲವು ತಿರುವು ಮುರುವುಗಳಿಗೆ ಸಾಕ್ಷಿಯಾಗ್ತಿರೋ ಈದ್ಗಾ ಮೈದಾನ ವಿಚಾರ, ಇದೀಗ ರಾಜಕೀಯ ಜಿದ್ದಾಜಿದ್ದಿಗೆ ತಿರುವು ಪಡೆದುಕೊಳ್ತಿದೆ. ಇಷ್ಟು ದಿನ ಸ್ಥಳೀಯ ಶಾಸಕ ಜಮೀರ್ ಅಹ್ಮದ್ ಇದ್ರಲ್ಲಿ ಮುಂಚೂಣೆಯಲ್ಲಿದ್ದರು. ಇದು ವಕ್ಫ್ ಬೋರ್ಡ್ ಸಂಬಂದಿಸಿದ ಆಟದ ಮೈದಾನ ಅಂತೆಲ್ಲಾ ಪಾಲಿಕೆ ಅಧಿಕಾರಿಗಳ ನಡುವೆ ಚರ್ಚೆ ಆಗ್ತಿದ್ದವು. ಇದರ ಬೆನ್ನಲ್ಲೆ ಸ್ಥಳೀಯ ಸಂಸದ ಪಿ.ಸಿ ಮೋಹನ್ ಹೆಜ್ಜೆ ಇಟ್ಟಿದ್ದು, ಇದು ಯಾರ ಸ್ವತ್ತು ಎಂಬುದು ಸರ್ಕಾರ ತೀರ್ಮಾನ ಮಾಡಲಿ, ಕೇವಲ ಒಂದು ಸಮುದಾಯದ ಕಾರ್ಯಕ್ರಮಕ್ಕೆ ಸೀಮಿತವಾಗಿರೋದು ಬೇಡ. ಎಲ್ಲಾ ಧರ್ಮದವರಿಗೂ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲು ಮೀಸಲಾಗಲಿ ಎಂದು ಪಾಲಿಕೆಗೆ ಮನವಿ ಸಲ್ಲಿಸಿದರು. ಜೊತೆಗೆ ಸ್ವಾತಂತ್ರ್ಯದಿನೋತ್ಸವ, ಗಣೇಶೋತ್ಸವ, ದೀಪಾವಳಿ ಸೇರಿದಂತೆ ಎಲ್ಲಾ ರೀತಿಯ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಲಿ ಎಂದು ಮನವಿ ಪತ್ರದಲ್ಲಿ ಮನವಿ ಮಾಡಿದ್ದರು. ಹೀಗಾಗಿ ದಿನಕಳೆದಂತೆ ರಾಜಕೀಯವಾಗಿ ತಿರುವು ಪಡೆದುಕೊಳ್ಳುತ್ತಿರುವ ಚಾಮರಾಜಪೇಟೆ ಈದ್ಗಾ ಮೈದಾನದ ಸಮಸ್ಯೆಯನ್ನ ಆದಷ್ಟು ಬೇಗ ಬಗೆಹರಿಸಲು ಪಾಲಿಕೆ ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ.
ವಿವಾದ ಶೀಘ್ರವೇ ಇತ್ಯರ್ಥ ಮಾಡುವಂತೆ ಪಾಲಿಕೆ ಆಯುಕ್ತರಿಗೆ ಸಿಎಂ ತಾಕೀತು.
ಈದ್ಗಾ ಮೈದಾನ ಸಂಬಂಧ ಆಗ್ತಿರುವ ಸಮಸ್ಯೆಗಳು ಕೂಡಲೇ ಬಗೆಹರಿಯುವಂತೆ ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್ಗೆ ಸಿಎಂ ಬೊಮ್ಮಾಯಿ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ವಿವಾದಕ್ಕೆ ಫುಲ್ ಸ್ಟಾಪ್ ಹಾಕೋದಕ್ಕೆ ಇದೀಗ ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದು, ಇದು ಯಾರ ಸ್ವತ್ತು ಎಂಬುದರ ಕುರಿತು ಮೂಲ ದಾಖಲೆಗಳನ್ನ ಸಲ್ಲಿಸುವಂತೆ ನೋಟೀಸ್ ಹೊರಡಿಸಲಾಗಿದೆ. ಕಳೆದ ಒಂದು ತಿಂಗಳಿಂದ ಸಂಬಂಧಪಟ್ಟವರಿಗೆ ಪಾಲಿಕೆ ವತಿಯಿಂದ ನೋಟೀಸ್ ಹೊರಡಿಸಿದ್ದು, ಇನ್ನೂ ಕೂಡ ಉತ್ತರ ಸಿಕ್ಕಿಲ್ಲ. ದಾಖಲೆಗಳು ಸಲ್ಲಿಕೆಯಾಗಿಲ್ಲ. ಏನೆ ಆದರೂ ಚುನಾವಣೆಗಳು ಸಮೀಪಿಸುತ್ತಿರುವ ಹೊತ್ತಲ್ಲಿ ಇಂಥಾ ವಿವಾದಕ್ಕೆ ಅವಕಾಶ ಕೊಡಬೇಡಿ ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ ಎಂದು ಬಿಬಿಎಂಪಿ ಮೂಲಗಳಿಂದ ಮಾಹಿತಿ ಇದೆ.

ಕಂದಾಯ ಇಲಾಖೆಗೆ ಪತ್ರ : ಮಧ್ಯ ಪ್ರವೇಶಿಸಿ ಇತ್ಯರ್ಥ ಕಾಣಿಸಲು ಪಾಲಿಕೆ ಮನವಿ.
ಈದ್ಗಾ ಎಂಬ ಹೆಸರು ತೆಗೆದು ಜಯಚಾಮರಾಜೇಂದ್ರ ಒಡೆಯರ್ ಹೆಸರು ನಾಮಕರಣವಾಗಲಿ ಎಂಬ ನಿಟ್ಟಿನಲ್ಲಿ ಜುಲೈ 12ರಂದು ಚಾಮರಾಜಪೇಟೆ ಬಂದ್ ಗೆ ಕರೆ ನೀಡಲಾಗಿತ್ತು. ಬಂದ್ ಯಶಸ್ವಿಯಲ್ಲಿರುವ ಚಾಮರಾಜಪೇಟೆ ನಾಗರಿಕರ ವೇದಿಕೆ ಮುಂದುವರೆದ ಭಾಗವಾಗಿ ಮತ್ತಷ್ಟು ಹೋರಾಟ ನಡೆಸಲು ಪ್ಲ್ಯಾನ್ ರೂಪಿಸಿದೆ. ಹೀಗಾಗಿ ಈ ವಿವಾದಕ್ಕೊಂದು ಕೊನೆಗಾಣಿಸಲು ಬಿಬಿಎಂಪಿ ಮುಖ್ಯ ಕಮಿಷನರ್ ಮುಂದಾಗಿದ್ದಾರೆ. ಬಿಬಿಎಂಪಿ, ವಕ್ಫ್ ಸೇರಿದಂತೆ ಯಾರ ಬಳಿಯೂ ಮೈದಾನದ ಸೂಕ್ತ ದಾಖಲೆಗಳಿಲ್ಲ. ಈ ಕಾರಣ ಕಂದಾಯ ಇಲಾಖೆಗೆ ಈಗಾಗಲೇ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರಿಂದ ಪತ್ರ ಬರೆಯಲಾಗಿದೆ. 2021ರ ರಾಜ್ಯ ಪತ್ರದಲ್ಲಿ ಈ ಸ್ವತ್ತು ಬಿಬಿಎಂಪಿಯದ್ದು ಎಂದು ಉಲ್ಲೇಖವಾಗಿದೆ. ಈ ವಿಚಾರವಾಗಿಯೂ ಕಂದಾಯ ಇಲಾಖೆಗೆ ಬರೆದಿರುವ ಪತ್ರದಲ್ಲಿ ಹೇಳಲಾಗಿದೆ. ಇದೇ ಪ್ರಕಾರ ಪ್ರಕರಣ ಕೈಗೆತ್ತಿಕೊಂಡು ಯಾವುದೇ ದಾಖಲೆಗಳು ಯಾರೂ ಸಲ್ಲಿಸದ ಕಾರಣ ಪಾಲಿಕೆಯದ್ದೇ ಎಂದು ಮತ್ತೊಮ್ಮೆ ಅಧಿಸೂಚನೆ ಹೊರಡಿಸಲು ನೂತನ ಪ್ಲ್ಯಾನ್ ಸಿದ್ದವಾಗಿದೆ ಎಂದು ಬಿಬಿಎಂಪಿ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.






