ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಬಾಂಗ್ಲಾ ಪ್ರಜೆಯನ್ನು ಸಚಿವರಾಗಿ ಸೇರಿಸಿದ್ದಾರೆಂಬ ಆರೋಪಗಳು ಕೇಳಿ ಬಂದಿವೆ. ಕೇಂದ್ರ ಸಂಪುಟ ಪುನರ್ರಚನೆ ಬಳಿಕ ಬಾಂಗ್ಲಾದ ಪ್ರಜೆ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಪ್ರತಿಪಕ್ಷಗಳು ಗಂಭೀರ ಆರೋಪ ಹೊರಿಸಿದೆ. ಬಿಜೆಪಿಯ ಕೆಲ ನಾಯಕರು ಪ್ರತಿಪಕ್ಷಗಳ ಆರೋಪವನ್ನು ತಳ್ಳಿ ಹಾಕಿದ್ದರಾದರೂ, ಪಶ್ಚಿಮ ಬಂಗಾಳ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಯಾಂತನ್ ಬಸು ಈ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ.
ಕೇಂದ್ರ ಗೃಹ ಸಚಿವಾಲಯದ ನೂತನ ರಾಜ್ಯ ಸಚಿವ ನಿಶಿತ್ ಪ್ರಮಾಣಿಕ್ ಪೌರತ್ವದ ಕುರಿತು ಕಾಂಗ್ರೆಸ್ ಹಾಗೂ ಟಿಎಂಸಿ ನಾಯಕರು ಪ್ರಶ್ನೆಗಳನ್ನೆತ್ತಿದ್ದು, ನಿಶ್ಚಿತ್ ಪ್ರಮಾಣಿಕ್ ಭಾರತೀಯ ಪ್ರಜೆ ಅಲ್ಲ, ಬಾಂಗ್ಲಾದ ಪ್ರಜೆ ಎಂದು ಆರೋಪಿಸಲಾಗಿತ್ತು.

ಸಂಸತ್ತಿನ ಮಾನ್ಸೂನ್ ಅಧಿವೇಶನ ಆರಂಭದ ಹೊತ್ತಿನಲ್ಲೇ ಈ ಕೇಂದ್ರ ಸಚಿವರ ಪೌರತ್ವದ ಕುರಿತು ಗೊಂದಲಗಳು ಏರ್ಪಟ್ಟಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳದ ಬಿಜೆಪಿ ಸಂಸದರಾಗಿರುವ ಅವರು ಭಾರತದ ಪ್ರಜೆಯಲ್ಲ ಬದಲಿಗೆ ಬಾಂಗ್ಲಾದೇಶದವರಿರಬೇಕು ಎಂದು ಟಿಎಂಸಿ, ಕಾಂಗ್ರೆಸ್ ಮುಖಂಡರು ಆರೋಪಿಸಿದ್ದರು.
ಅಸ್ಸಾಂ ಕಾಂಗ್ರೆಸ್ ಸಂಸದ ರಿಪುನ್ ಬೋರಾ ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ನಿಶಿತ್ ಪ್ರಾಮಾಣಿಕ್ರವರ ಜನ್ಮಸ್ಥಳ ಮತ್ತು ಪೌರತ್ವದ ಬಗ್ಗೆ ತನಿಖೆಯಾಗಬೇಕೆಂದು ಆಗ್ರಹಿಸಿದ್ದರು.
ಕೆಲವು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಬೋರಾ,”ವಿದೇಶಿ ಪ್ರಜೆಯನ್ನು ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರುವುದು ಅತ್ಯಂತ ಕಳವಳಕಾರಿ ವಿಷಯ” ಎಂದು ಆತಂಕ ವ್ಯಕ್ತಪಡಿಸಿದ್ದರು.
ಅದಾಗಿ ಒಂದೇ ದಿನದಲ್ಲಿ, ಭಾನುವಾರ, ಪಶ್ಚಿಮ ಬಂಗಾಳ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಯಾಂತನ್ ಬಸು ಅವರು ನಿಶಿತ್ ಪ್ರಾಮಾಣಿಕ್ ಭಾರತಕ್ಕೆ ವಲಸಿಗರಾಗಿ ಬಂದವರೆಂದು ಒಪ್ಪಿಕೊಂಡಿದ್ದಾರೆ.
ಭಾರತಕ್ಕೆ ಬಾಂಗ್ಲಾದಿಂದ ವಲಸಿಗರಾಗಿ ಬಂದಿರುವ ಲಕ್ಷಾಂತರ ಮಂದಿಯಂತೆ ನಿಶಿತ್ ಪ್ರಮಾಣಿಕ್ ಅವರೂ ವಲಸಿಗರಾಗಿ ಬಂದಿದ್ದಾರೆ. ಈಗಾಗಲೇ ಭಾರತದಲ್ಲಿ ಸಿಎಎ ಜಾರಿಗೊಳಿಸಲಾಗಿದೆ. ಇದು ಬಾಂಗ್ಲಾದ ವಲಸಿಗರಿಗೆ ಭಾರತದಲ್ಲಿ ಪೌರತ್ವ ನೀಡುತ್ತದೆ. ಹಾಗಿದ್ದ ಮೇಲೂ ಇಂತಹ ಪ್ರಶ್ನೆಗಳು ಯಾಕೆ ಉದ್ಭವಿಸಬೇಕು ಎಂದು ಬಸು ಅವರು ಕೇಳಿರುವುದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.

ಬಂಗಾಳದ ಸಚಿವ, ಟಿಎಂಸಿ ನಾಯಕ ಇಂದ್ರಾನಿಲ್ ಸೇನ್ ಕೂಡಾ ಕೇಂದ್ರ ಸಚಿವ ನಿಶಿತ್ ಪ್ರಾಮಾಣಿಕ್ ಬಾಂಗ್ಲಾದೇಶದವರಾಗಿರಬಹುದು ಎಂಬ ವಿಷಯ ಕೇಳಿ ಆಘಾತ ವ್ಯಕ್ತಪಡಿಸಿದ್ದಾರೆ.
ಅದಕ್ಕೂ ಮೊದಲು, ನಿತೀಶ್ ಅವರ ಪೌರತ್ವದ ಕುರಿತು ಪ್ರತಿಪಕ್ಷಗಳ ಆರೋಪಗಳನ್ನು ಬಂಗಾಳ ಬಿಜೆಪಿಯು ನಿರಾಕರಿಸಿತ್ತು.
“ಇದುವರೆಗೂ ಯಾರೂ ನಿತೀಶ್ ಅವರು ಭಾರತದವರಲ್ಲ ಎಂಬ ಆಧಾರಗಳನ್ನು ಒದಗಿಸಿಲ್ಲ. ಸುಮ್ಮೆನೆ ಆರೋಪ ಮಾಡದೆ, ದಾಖಲೆ ತೋರಿಸಿ” ಎಂದು ಪಶ್ಚಿಮ ಬಂಗಾಳದ ಬಿಜೆಪಿ ವಕ್ತಾರ ಸಮಿಕ್ ಭಟ್ಟಾಚಾರ್ಯ ಸವಾಲು ಹಾಕಿದ್ದರು.
ಬಾಂಗ್ಲಾದೇಶ ಮೂಲದ ಧಾರ್ಮಿಕ ಸಂಘಟನೆ ʼಪೂಜಾರ್ ಮೇಳʼ ಎಂಬ ಜಾಲತಾಣ ಖಾತೆಯು ಹಾಕಿದ ಪೋಸ್ಟ್ನಿಂದ ಈ ವಿವಾದ ಭುಗಿಲೆದ್ದಿದೆ. ಪ್ರಾಮಾಣಿಕ್ರವರು ಕೇಂದ್ರ ಇಲಾಖೆಯ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಈ ಖಾತಯಿಂದ “ಗಾಯ್ಬಂಧ ಜಿಲ್ಲೆಯ ಪಾಲಶ್ಬರಿ ಪೊಲೀಸ್ ಠಾಣೆ ವ್ಯಾಪ್ತಿಯ ಹರಿನಾಥಪುರದ ಪುತ್ರರವರ ಸಾಧನೆಯಿದು. ಅವರು ಪಶ್ಚಿಮ ಬಂಗಾಳದಲ್ಲಿ ಕಂಪ್ಯೂಟರ್ ಸೈನ್ಸ್ ಅಧ್ಯಯನ ನಡೆಸಿದ್ದರು” ಎಂದು ಪೋಸ್ಟ್ ಹಾಕಲಾಗಿತ್ತು
ಗಾಯ್ಬಂಧ ಜಿಲ್ಲೆಯು ಬಾಂಗ್ಲಾದೇಶದಲ್ಲಿದೆ. ಅದಾಗ್ಯೂ, ಪ್ರಾಮಾಣಿಕ್ರವರ ಲೋಕಸಭಾ ಬಯೋಡೇಟಾದಲ್ಲಿ ಅವರ ಜನ್ಮ ಸ್ಥಳವನ್ನು ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಜಿಲ್ಲೆಯ ದಿನ್ಹಟ ಎಂದು ನಮೂದಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ಇದೀಗ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೇ ಕೇಂದ್ರ ಸಚಿವನನ್ನು ಬಾಂಗ್ಲಾದಿಂದ ಬಂದ ವಲಸಿಗ ಎಂದು ಒಪ್ಪಿಕೊಂಡಿರುವುದರಿಂದ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.





