ಪಂಜಾಬ್ ಕಾಂಗ್ರೆಸ್ ಘಟಕದಲ್ಲಿ ಜನನಾಯಕರಾದ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು ಕ್ರಿಕೆಟಿಗ ಎಂಬ ಖ್ಯಾತಿಯಿಂದಾಗಿ ರಾಜಕೀಯಕ್ಕೆ ‘ಪ್ಯಾರಚೂಟ್ ಎಂಟ್ರಿ’ ನೀಡಿದ ನವಜೋತ್ ಸಿಂಗ್ ಸಿಧು ನಡುವೆ ಬಹಳ ದಿನಗಳಿಂದ ಶೀತಲ ಸಮರ ನಡೆಯುತ್ತಲೇ ಇತ್ತು. ಕಳೆದ ಒಂದು ತಿಂಗಳಿನಿಂದ ಇದು ತಾರಕಕ್ಕೇ ಏರಿತ್ತು. ಬಿಕ್ಕಟ್ಟು ಬಗೆಹರಿಸಲು ಪಡಿಪಾಟಿಲು ಪಟ್ಟ ಕಾಂಗ್ರೆಸ್ ಹೈಕಮಾಂಡ್ ಕಡೆಗೆ ನವಜೋತ್ ಸಿಂಗ್ ಸಿಧು ಅವರಿಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡುವ ಮೂಲಕ ತಿಪ್ಪೆ ಸಾರಿಸಿದೆ.
2ನೇ ಇನ್ನಿಂಗ್ಸ್ನಲ್ಲಿ ಸಿಧುಗೆ ಮುನ್ನಡೆ
ನವಜೋತ್ ಸಿಂಗ್ ಸಿಧು ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದವರು. ಅಮರೀಂದರ್ ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದ ನವಜೋತ್ ಸಿಂಗ್ ಸಿಧು ತಮ್ಮ ‘ಸ್ಟಾರ್ ಗಿರಿ’ಯ ಕಾರಣಕ್ಕೆ ಅಮರೀಂದರ್ ಸಿಂಗ್ ಅವರ ಸಹೋದ್ಯೋಗಿ ಎನ್ನುವುದನ್ನು ಮರೆತು ಪರ್ಯಾಯ ನಾಯಕನಾಗುವ ಕನಸು ಕಂಡರು. ಆದರೆ ಅಮರೀಂದರ್ ಸಿಂಗ್ ಹಾಕಿದ ಗೂಗ್ಲಿಗಳನ್ನು ಎದುರಿಸಲಾಗದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮುಂದಿನ ವರ್ಷ ವಿಧಾನಸಭಾ ಚುನಾವಣೆ ಬರುತ್ತಿದ್ದು ಈಗಲೇ ತಮ್ಮ ನಾಯಕತ್ವವನ್ನು ಖಾತರಿ ಪಡಿಸಿಕೊಳ್ಳದಿದ್ದರೆ ಅಮರೀಂದರ್ ಸಿಂಗ್ ಎದುರು ರಾಜಕೀಯ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎಂದು ‘ಬಂಡಾಯದ ಎರಡನೇ ಇನ್ನಿಂಗ್ಸ್’ ಶುರುಮಾಡಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಪಡೆಯುವ ಮೂಲಕ ಮುನ್ನಡೆ ಸಾಧಿಸಿದ್ದಾರೆ.
ಆದರೆ, ಹಿನ್ನಡೆ ಅನುಭವಿಸಿರುವುದು ಕ್ಯಾಪ್ಟನ್ ಅಮರೀಂದರ್ ಸಿಂಗ್ ಅಲ್ಲ, ಬದಲಿಗೆ ಕಾಂಗ್ರೆಸ್ ಹೈಕಮಾಂಡ್. ಕಾಂಗ್ರೆಸ್ ಹೈಕಮಾಂಡ್ 2017ರಲ್ಲಿ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯ ಬೆಳವಣಿಗೆಗಳನ್ನು ಅಧ್ಯಯನ ಮಾಡಬೇಕಿತ್ತು. ದೇಶಾದ್ಯಂತ ಸೋತಿದ್ದ ಕಾಂಗ್ರೆಸ್ ಪಕ್ಷಕ್ಕೆ ಪಂಜಾಬ್ ಗೆಲುವು ಅತ್ಯಗತ್ಯ ಆಗಿತ್ತು. ಆದ ಕಾರಣಕ್ಕೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರಿಗೆ ರಣತಂತ್ರ ರೂಪಿಸುವ ಹೊಣೆಗಾರಿಕೆ ನೀಡಿತ್ತು. ಆದರೆ ಕಾಂಗ್ರೆಸ್ ಮನಸ್ಥಿತಿಗೆ ಪ್ರಶಾಂತ್ ಕಿಶೋರ್ ಕಾರ್ಯಶೈಲಿ ಒಗ್ಗುವುದಿಲ್ಲ ಎನ್ನುವುದನ್ನು ಬಹಳ ಬೇಗ ಗ್ರಹಿಸಿದ ಅನುಭವಿ ರಾಜಕಾರಣಿ ಅಮರೀಂದರ್ ಸಿಂಗ್ ಪಕ್ಷವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಹೈಕಮಾಂಡ್ ಕೃಪಾಶೀರ್ವಾದ ಇದ್ದ ಪ್ರಶಾಂತ್ ಕಿಶೋರ್ ಅವರನ್ನು ಪಂಜಾಬಿನಿಂದ ಹೊರ ಕಳಿಸಿದರು. ಬಳಿಕ ಗೆದ್ದು ಅಧಿಕಾರಯುತವಾಗಿ ಗದ್ದುಗೆ ದಕ್ಕಿಸಿಕೊಂಡರು.
ಇದು ಅಮರೀಂದರ್ ಸಿಂಗ್, ನವಜೋತ್ ಸಿಂಗ್ ಮತ್ತು ಪಂಜಾಬ್ ಕಾಂಗ್ರೆಸ್ ಇತಿಹಾಸ. ಸದ್ಯದ ಬೆಳವಣಿಗೆಯಿಂದ ಮುಜುಗರಕ್ಕೀಡಾಗಿರುವ ಅಮರೀಂದರ್ ಸಿಂಗ್ ತಿರುಗಿ ಬೀಳುವ ಎಲ್ಲಾ ಸಾಧ್ಯತೆಗಳಿವೆ. ಆಗ ಮುಖಭಂಗ ಅನುಭವಿಸುವ ಸರದಿ ನವಜೋತ್ ಸಿಂಗ್ ಸಿಧು ಅವರದಾಗಲಿದೆ. ಒಕ್ಕೂಟ ಸರ್ಕಾರ ತಂದಿರುವ ಮೂರು ಕೃಷಿ ಕಾನೂನುಗಳನ್ನು ರದ್ದು ಪಡಿಸುವಂತೆ ಈಗಲೂ ಪಂಜಾಬ್ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಕಾನೂನುಗಳ ಕಾರಣಕ್ಕೆ ಬಿಜೆಪಿ ಮತ್ತು ಅದರ ಮಿತ್ರಪಕ್ಷವಾಗಿದ್ದ ಅಖಾಲಿ ದಳದ ಬಗ್ಗೆ ಅಲ್ಲಿ ವ್ಯಾಪಕವಾದ ವಿರೋಧವಿದೆ. ಆಮ್ ಆದ್ಮಿ ಪಕ್ಷ ಕಳೆದ ಬಾರಿ ಚುನಾವಣೆ ಸೋತ ಬಳಿಕ ಸತ್ತಂತಿತ್ತು. ಈಗ ಪರಿಸ್ಥಿತಿಯ ಲಾಭ ಪಡೆಯಲು ಅವಣಿಸುತ್ತಿದೆ. ಇದು ಬಹಿರಂಗ ಗುಟ್ಟು. ಆದುದರಿಂದ ಈಗಲೂ ಅಲ್ಲಿ ಗೆಲ್ಲುವ ಅವಕಾಶ ಇರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಗೆಲ್ಲುವ ಅವಕಾಶ ಇದೆ ಎಂಬ ಕಾರಣಕ್ಕಾಗಿಯೇ ನವಜೋತ್ ಸಿಂಗ್ ಸಿಧು ಅಧ್ಯಕ್ಷ ಸ್ಥಾನಕ್ಕೆ ಹಠ ಹಿಡಿದು ಕುಳಿತಿದ್ದರು. ಗೆದ್ದ ಮೇಲೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಷ್ಟು ದುರ್ಬಲರಲ್ಲ ಕ್ಯಾಪ್ಟನ್ ಅಮರೀಂದರ್ ಸಿಂಗ್.
ಪಂಜಾಬಿನಲ್ಲೂ ಕರ್ನಾಟಕದ ಪರಿಸ್ಥಿತಿ!
ಕರ್ನಾಟಕದಲ್ಲಿ ಹೇಗೆ ಸಿದ್ದರಾಮಯ್ಯ ಜನಾನುರಾಗಿ ನಾಯಕರೋ ಹಾಗೆ ಪಂಜಾಬಿನಲ್ಲಿ ಅಮರೀಂದರ್ ಸಿಂಗ್. ಇಲ್ಲಿ ಹೇಗೆ ಡಿ.ಕೆ. ಶಿವಕುಮಾರ್ ಒಂದು ಸಮುದಾಯದ ನಾಯಕರೋ ಹಾಗೆ ಅಲ್ಲಿ ನವಜೋತ್ ಸಿಂಗ್ ಸಿಧು ಒಂದು ವರ್ಗದ ಮುಖಂಡ. ಕರ್ನಾಟಕದ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಆಗುವುದನ್ನು ಸಿದ್ದರಾಮಯ್ಯ ವಿರೋಧಿಸಿದ್ದರು. ತಮ್ಮದೇ ಬೆಂಬಲ ಅಧ್ಯಕ್ಷ ಆಗಿರಬೇಕೆಂದು ಅಪೇಕ್ಷೆ ಪಟ್ಡಿದ್ದರು. ಅಲ್ಲೂ ಅಷ್ಟೇ; ಅಮರೀಂದರ್ ಸಿಂಗ್ ಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ತಮ್ಮದೇ ಬೆಂಬಲಿಗ ಇರಬೇಕೆಂದು ನಿರೀಕ್ಷಿಸಿದ್ದರು. ಅದಕ್ಕಾಗಿ ನವಜೋತ್ ಸಿಂಗ್ ಸಿಧುಗೆ ಕೊಡಬೇಡಿ ಎನ್ನುತ್ತಿದ್ದರು. ಕಡೆಗೆ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ಪಿಸಿಸಿ ಅಧ್ಯಕ್ಷ ಸ್ಥಾನವನ್ನು ಡಿ.ಕೆ. ಶಿವಕುಮಾರ್ ಅವರಿಗೇ ನೀಡಿತು. ಅದೇ ರೀತಿ ಅಲ್ಲಿ ನವಜೋತ್ ಸಿಂಗ್ ಸಿಧುಗೆ ಕೊಟ್ಟಿದೆ.
ಡಿ.ಕೆ. ಶಿವಕುಮಾರ್ ಮತ್ತು ನವಜೋತ್ ಸಿಂಗ್ ಸಿಧು ಇಬ್ಬರಿಗೂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಟ್ಟಗಳು ಸಿಕ್ಕಿರುವುದು ದೆಹಲಿ ನಾಯಕರ ಕಾರಣಕ್ಕೆ. ಡಿ.ಕೆ. ಶಿವಕುಮಾರ್ ಅವರಿಗೆ ದಿವಂಗತ ಅಹಮದ್ ಪಟೇಲ್ ಕಾರಣಕ್ಕೆ ಪಟ್ಟ ಲಭಿಸಿತು. ಜ್ಯೋತಿರಾಧಿತ್ಯ ಸಿಂಧ್ಯ ಕಾಂಗ್ರೆಸ್ ಬಿಟ್ಟ ಸಂದರ್ಭದಲ್ಲಿ ವಿಚಲಿತರಾದ ಕಾಂಗ್ರೆಸ್ ಹೈಕಮಾಂಡ್ ಡಿ.ಕೆ. ಶಿವಕುಮಾರ್ ಅವರಿಗೆ ಅಧ್ಯಕ್ಷ ಸ್ಥಾನ ಕರುಣಿಸಿತು. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಜಿತೀಂದ್ರ ಪ್ರಸಾದ್ ಕಾಂಗ್ರೆಸ್ ಬಿಟ್ಟರು. ರಾಜಸ್ಥಾನದಲ್ಲಿ ಸಚಿನ್ ಪೈಲಟ್ ವಿಚಾರದಲ್ಲಿ ಸಮಸ್ಯೆಗಳಿವೆ. ಇವುಗಳ ನಡುವೆ ಪಕ್ಷ ಅಧಿಕಾರದಲ್ಲಿರುವ ಪಂಜಾಬಿನಲ್ಲಿ ನವಜೋತ್ ಸಿಂಗ್ ಸಿಧು ಅವರಂತಹವರು ಪಕ್ಷ ಬಿಡಬಾರದೆಂದು ಮಣೆ ಹಾಕಲಾಗಿದೆ. ಪ್ರಶಾಂತ್ ಕಿಶೋರ್ ಅವರ ಕಾರಣಕ್ಕೆ ಸಿಧುಗೆ ಅಧ್ಯಕ್ಷ ಸ್ಥಾನ ಲಭಿಸಿದೆ. ಈ ಮೂಲಕ ಕಾಂಗ್ರೆಸ್ ಹೈಕಮಾಂಡ್ ಒಂದು ರೀತಿಯಲ್ಲಿ ಒತ್ತಡ ತಂತ್ರಕ್ಕೆ ಮಣಿದಿದೆ. ಸದ್ಯ ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ನಡೆಯುತ್ತಿರುವ ವಿದ್ಯಾಮಾನಗಳು ಗೊತ್ತೇ ಇವೆ. ಮುಂದೆ ಪಂಜಾಬಿನಲ್ಲೂ ಇದೇ ರೀತಿ ನಡೆದರೆ ಅದಕ್ಕೆ ಕಾಂಗ್ರೆಸ್ ಹೈಕಮಾಂಡ್ ನಾಯಕರೇ ಹೊಣೆ.