ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕನ್ನಡಿಗರನ್ನು ಆತಂಕಕ್ಕೆ ದೂಡುವಂತಹ ಮುನ್ಸೂಚನೆಯನ್ನು ನೀಡಿ ಹೋಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ 260 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಮೆಗಾ ಡೈರಿಯನ್ನು ಉದ್ಘಾಟಿಸಿದ ಬಳಿಕ ನಂದಿನಿ ಅಮುಲ್ ಒಂದಾಗುವ ಬಗ್ಗೆ ಸುಳಿವನ್ನು ಸೂಚ್ಯವಾಗಿ ನೀಡಿರುವ ಬೆನ್ನಲ್ಲೇ ನಂದಿನಿಯನ್ನು ಉಳಿಸಿಕೊಳ್ಳಬೇಕು ಎಂಬ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿದೆ.
ಡೇರಿ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಮಿತ್ ಶಾ, “ಅಮುಲ್ ಮತ್ತು ನಂದಿನಿ ಜಂಟಿಯಾಗಿ ಕೆಲಸ ಮಾಡಿದರೆ, ಮೂರು ವರ್ಷಗಳಲ್ಲಿ ಪ್ರತಿ ಗ್ರಾಮ ಮಟ್ಟದಲ್ಲಿ ಪ್ರಾಥಮಿಕ ಡೈರಿಗಳು ಇರುತ್ತವೆ” ಎಂದು ಹೇಳಿದ್ದಾರೆ.
“ಕರ್ನಾಟಕ ಹಾಲು ಮಹಾಮಂಡಳಿಯು (ಕೆಎಂಎಫ್) ಅಮುಲ್ನಿಂದ ಎಲ್ಲಾ ತಾಂತ್ರಿಕ ಬೆಂಬಲ ಮತ್ತು ಸಹಕಾರವನ್ನು ಪಡೆಯುತ್ತದೆ, ಈ ದಿಸೆಯಲ್ಲಿ ಕರ್ನಾಟಕ ಮತ್ತು ಗುಜರಾತ್ ಒಗ್ಗೂಡಿದರೆ ದೇಶಾದ್ಯಂತ ರೈತರಿಗೆ ಅನುಕೂಲವಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಈಗಾಗಲೇ ಗುಜರಾತ್ ಬ್ಯಾಂಕುಗಳೊಂದಿಗೆ ವಿಲೀನಗೊಂಡು ತಮ್ಮ ಅಸ್ತಿತ್ವಗಳನ್ನೇ ಕಳೆದುಕೊಂಡ ಕರ್ನಾಟಕ ಮೂಲದ ಬ್ಯಾಂಕುಗಳ ಬಗ್ಗೆ ಅಸಮಾಧಾನವನ್ನು ಹೊಂದಿರುವ ಕನ್ನಡಿಗರಿಗೆ ನಂದಿನಿ ಮೇಲೆ ಗುಜರಾತ್ ಕಣ್ಣು ಬಿದ್ದಿರುವುದು ಆತಂಕಕ್ಕೆ ಕಾರಣವಾಗಿದೆ. ಅಮಿತ್ ಶಾ ಅವರ ಈ ಹೇಳಿಕೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ಷೇಪ ಕೇಳಿಬಂದಿದ್ದು, ನಂದಿನಿಯು ಅಮುಲ್ ಜೊತೆ ವಿಲೀನಗೊಳ್ಳಬಹುದೆಂಬ ಆತಂಕವನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ.
#SaveNandini ಎಂಬ ಹ್ಯಾಷ್ಟ್ಯಾಗ್ ಮೂಲಕ ಕೆಎಂಎಫ್ ನಂದಿನಿಯನ್ನು ಉಳಿಸಬೇಕು ಎಂಬ ಟ್ವಿಟರ್ ಅಭಿಯಾನವೂ ಆರಂಭವಾಗಿದ್ದು, ಕರ್ನಾಟಕದ ಬ್ಯಾಂಕುಗಳನ್ನು ಇತರೆ ಬ್ಯಾಂಕ್ಗಳೊಂದಿಗೆ ವಿಲೀನಗೊಳಿಸಿ ಅದರ ಅಸ್ತಿತ್ವವನ್ನು ಇಲ್ಲವಾಗಿಸಿದಂತೆ ನಂದಿನಿಯನ್ನೂ ಗುಜರಾತ್ ಸಂಸ್ಥೆಗಳೊಂದಿಗೆ ವಿಲೀನಗೊಳಿಸಲು ಹೊರಟಿದ್ದಾರೆ ಎಂಬ ಅನುಮಾನದ ಮೇಲೆ ಬಿಜೆಪಿ ಹಾಗೂ ಅದರ ನಾಯಕರ ಮೇಲೆ ಅಸಮಾಧಾನ ವ್ಯಕ್ತವಾಗಲು ಶುರುವಾಗಿದೆ.
“ಈಗ ನಂದಿನಿ ಹಾಲಿಗೆ ಕರ್ನಾಟಕದ ಆರಾಧ್ಯ ದೈವ ಅಪ್ಪು ರಾಯಬಾರಿ; KMF ಸದ್ಯ ಲಾಭದಲ್ಲಿದೆ. ಇಂತಹ ಸಂಸ್ಥೆಯನ್ನು ಗುಜರಾತ್ ನ ಅಮುಲ್ ಜೊತೆಗೆ ಲೀನಗೊಳಿಸುವ ಹುನ್ನಾರವನ್ನ ಈಗಲೇ ಖಂಡಿಸಬೇಕು… ಇದು ಕರ್ನಾಟಕದ ರೈತರ ಬದುಕಿಗೆ ಕೊಡಲಿ ಪೆಟ್ಟು ಕೊಡುವುದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳಬೇಕು. ಗುಜರಾತ್ ನ “ಅಮುಲ್” ಮತ್ತು ಕರ್ನಾಟಕದ “ಕೆಎಂಎಫ್” ಒಟ್ಟಾಗಿ ಕೆಲಸ ಮಾಡಬೇಕು ಎಂದು ಇಂದು ಕೇಂದ್ರ ಗೃಹಸಚಿವ ಅಮಿತ್ ಷಾ ಹೇಳಿದ್ದಾರೆ. ಇದು ಅಪಾಯದ ಮುನ್ಸೂಚನೆ! ಈಗಾಗಲೇ ಕರ್ನಾಟಕದಲ್ಲಿ ಲಾಭದಲ್ಲಿದ್ದ ವಿಜಯ ಬ್ಯಾಂಕ್, ಮೈಸೂರು ಬ್ಯಾಂಕ್ ಗಳು ಅಸ್ತಿತ್ವ ಕಳೆದುಕೊಂಡಾಗಿದೆ.” ಎಂದು ಚೇತನ್ ಸೂರ್ಯ ಎಂಬವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ನಂದಿನಿ, KMF ಕರ್ನಾಟಕದ ಲಕ್ಷಾಂತರ ರೈತರಿಗೆ ನೆರವಾಗಿದೆ. ಈಗ ಅದನ್ನು ಅಮೂಲ್ ಜೊತೆ ವಿಲೀನ ಮಾಡಿದರೆ ಏನಾಗುತ್ತೆ? ಬ್ಯಾಂಕ್ ಆಫ್ ಬರೋಡಾದ ಜೊತೆ ಸೇರಿ ವಿಜಯಾ ಬ್ಯಾಂಕಿನ ನೂರು ವರ್ಷಗಳ ಇತಿಹಾಸ, SBI ಜೊತೆ SBM ಇತಿಹಾಸ ಮೂಲೆಗೆ ಸೇರಿದಂತೆ ಇಲ್ಲೂ ಆಗುತ್ತೆ. ಒಟ್ನಲ್ಲಿ ಅದರ ಆಡಳಿತದ ಚುಕ್ಕಾಣಿ ಕನ್ನಡಿಗರ ಕೈಯಲ್ಲಿ ಇರೋದು ಕೈತಪ್ಪುತ್ತಷ್ಟೆ.” ಎಂದು ವಸಂತ್ ಶೆಟ್ಟಿ ಎಂಬವರು ಆತಂಕ ವ್ಯಕ್ತಪಡಿಸಿದ್ದಾರೆ.
ಇದೆಲ್ಲಕ್ಕಿಂತ ಮುಖ್ಯವಾಗಿ ಕನ್ನಡಿಗರ ಉದ್ಯೋಗ ನಷ್ಟ ಆಗತ್ತೆ, ಕನ್ನಡಿಗರ ಆಸ್ಮಿತ ನಾಶ ಆಗತ್ತೆ. ಇವತ್ತು ನಮ್ಮ ಬ್ಯಾಂಕ್ಗಳನ್ನ ಆಗಲೇ ಕಳ್ಕೊಂಡು ಅನುಭವಿಸುತ್ತಿದ್ದೇವೆ. ಇವತ್ತು ಗ್ರಾಮೀಣ ಬ್ಯಾಂಕ್ ಗಳಲ್ಲಿ ಕನ್ನಡಿಗರು ಇಲ್ಲ ಎಂದು ಯಶವಂತ್ ಎಂಬವರು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಸಂಬಂಧಿಸಿದ ಇನ್ನಷ್ಟು ಟ್ವೀಟ್ಗಳು ಇಲ್ಲಿವೆ:






