ಕೇಂದ್ರ ಗೃಹ ಸಚಿವ ಅಮಿತ್ ಷಾ ಇಂದು ರಾಜ್ಯಕ್ಕೆ ಆಗಮಿಸಿದ್ದಾರೆ. ಅಧಿಕೃತ ಕಾರ್ಯಕ್ರಮಗಳ ಜೊತೆಗೆ ಪಕ್ಷದ ಕಾರ್ಯಕ್ರಮಗಳಲ್ಲೂ ಭಾಗಿಯಾಗಲಿರುವ ಅಮಿತ್ ಷಾ ಕುಂದಗೋಳ ಹಾಗು ಬೆಳಗಾವಿಯಲ್ಲಿ ಬೃಹತ್ ಱಲಿ ನಡೆಸಲಿದ್ದಾರೆ. ಅಮಿತ್ ಷಾ ಬರುವ ಮುನ್ನವೇ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ನಿನ್ನೆ ವಿಜಯಪುರದಲ್ಲಿ ಭಾರತೀಯ ಜನತಾ ಪಾರ್ಟಿ ಹಾಗು ಬಿ.ಎಸ್ ಯಡಿಯೂರಪ್ಪ ವಿರೋಧಿ ಬಣಕ್ಕೆ ನೇರವಾಗಿಯೇ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಒಂದು ವೇಳೆ ಯಡಿಯೂರಪ್ಪ ಅವರನ್ನು ನಿರ್ಲಕ್ಷ್ಯ ಮಾಡಿದ್ರೆ, ಯಡಿಯೂರಪ್ಪಗೆ ಕಲ್ಲು ಹೊಡೆಯುವ ಪ್ರಯತ್ನ ಮಾಡಿದ್ರೆ ಅದರ ಪರಿಣಾಮ ಮುಂದಿನ ದಿನಗಳಲ್ಲಿ ಎದುರಿಸಲಿದ್ದೀರಿ ಎನ್ನುವ ಮೂಲಕ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಚುನಾವಣೆಯಲ್ಲಿ ಟಿಕೆಟ್ ಸಿಗುವ ವಿಶ್ವಾಸವಿದೆ..!
ವಿಜಯಪುರ ಜಿಲ್ಲೆ ಹೊರ್ತಿ ಗ್ರಾಮದಲ್ಲಿ ಮಾತನಾಡಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ, ಕಳೆದ ಬಾರಿ ಕೊನೆಯ ಕ್ಷಣದವರೆಗೂ ನಾನು ಚುನಾವಣೆಗೆ ನಿಲ್ಲುತ್ತೇನೆ ಎಂದಿತ್ತು. ಆದರೆ ಕೊನೆಯ ಕ್ಷಣದಲ್ಲಿ ನಿಲ್ಲಲು ಆಗಲಿಲ್ಲ. ಈ ಬಾರಿ ಹಾಗೇ ಆಗಬಾರದು ಎಂದುಕೊಂಡಿರುವೆ. ಪಕ್ಷ ಏನೇ ಜವಾಬ್ದಾರಿ ಕೊಟ್ಟರೂ ಯಾವುದೇ ಕ್ಷೇತ್ರ ಸೂಚನೆ ನೀಡಿದರೂ ಚುನಾವಣೆ ನಿಲ್ಲುತ್ತೇನೆ ಎಂದಿದ್ದಾರೆ. ಕೊನೆಯಲ್ಲಿ ಅಂತಿಮವಾಗಿ ಪಕ್ಷ ಏನೇ ನಿರ್ಧಾರ ಮಾಡಿದರು, ಒಬ್ಬ ಕಾರ್ಯಕರ್ತನಾಗಿ ಪಕ್ಷದ ನಾಯಕರು ಕೊಟ್ಟಿರುವ ಆದೇಶ ಪಾಲನೆ ಮಾಡುವೆ ಎನ್ನುವ ಮೂಲಕ ವಿಜಯೇಂದ್ರ ಪಕ್ಷನಿಷ್ಠೆಯನ್ನು ಪ್ರದರ್ಶನ ಮಾಡಿದ್ದಾರೆ. ಇದರ ಜೊತೆಗೆ ಯಡಿಯೂರಪ್ಪನವರ ವಿಚಾರವಾಗಿ ಯತ್ನಾಳ್ ಸೈಲೆಂಟ್ ಆಗಿದ್ದಕ್ಕೆ ಏನ್ ಹೇಳ್ತೀರಾ..? ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದು, ಪಕ್ಷದ ಹಿತ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ಪಕ್ಷದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ಯತ್ನಾಳ್ ಹಿರಿಯರಿದ್ದಾರೆ ಅವರ ಬಗ್ಗೆ ನಾನು ಮಾತನಾಡಲ್ಲ. ಮಾನ್ಯ ಬಿ ಎಸ್ ಯಡಿಯೂರಪ್ಪ ನವರು ನಾಲ್ಕು ಬಾರಿ ಸಿಎಂ ಆಗಿ, ಎಲ್ಲಾ ವರ್ಗದ ಜನರು ಒಪ್ಪಿಕೊಂಡ ಒಬ್ಬ ಧೀಮಂತ ನಾಯಕ, ರೈತ ನಾಯಕ, ಒಬ್ಬ ಹೋರಾಟಗಾರ. ಯಡಿಯೂರಪ್ಪನವರಿಗೆ ಕಲ್ಲನ್ನು ಎಸೆದರೆ ಅದು ಪಕ್ಷಕ್ಕೆ ಹೊಡೆತ ಬೀಳುತ್ತದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು, ಬರುವ ದಿನದಲ್ಲಿ ಇದು ಅರ್ಥವಾಗುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
![](https://pratidhvani.com/wp-content/uploads/2023/01/24by-vijayendra-1024x863.jpg)
ಅಮಿತ್ ಷಾ ಆಗಮನಕ್ಕೂ ಮುನ್ನ ಹುಲಿ ಘರ್ಜನೆ..!
ಮೋದಿ ಬಂದ್ರು ಹೋದ್ರು. ಅಮಿತ್ ಷಾ ಕೂಡ ರಾಜ್ಯಕ್ಕೆ ಬಂದಿದ್ದಾರೆ. ಆದರೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯಡಿಯೂರಪ್ಪ ಹಾಗು ವಿಜಯೇಂದ್ರ ಬಗ್ಗೆ ಟೀಕಾಸ್ತ್ರ ಮುಂದುವರಿಸಿದ್ದರು. ಈ ಬಗ್ಗೆ ಬಿಜೆಪಿ ಹೈಕಮಾಂಟ್ ನೋಟಿಸ್ ಕೊಡುವ ಕೆಲಸ ಮಾಡಿದೆ. ಆದರೆ ನನಗೆ ಯಾವುದೇ ನೋಟಿಸ್ ಬಂದಿಲ್ಲ, ಯಡಿಯೂರಪ್ಪ ಬಗ್ಗೆ ಟೀಕೆ ಮಾಡದಂತೆ ಹೈಕಮಾಂಡ್ ಸೂಚಿಸಿದೆ. ಹಿರಿಯರಿದ್ದಾರೆ ಯಡಿಯೂರಪ್ಪ ಅವರ ಬಗ್ಗೆ ಟೀಕೆ ಮಾಡೋದು ಬೇಡ ಎಂದಿದ್ದಾರೆ. ಹೈಕಮಾಂಡ್ ಹೇಳಿದ ಮೇಲೆ ಅದನ್ನು ಪಾಲಿಸುತ್ತೇನೆ ಎಂದಿದ್ದರು ಯತ್ನಾಳ್. ಆದರೆ ಅರುಣ್ ಸಿಂಗ್ ಗದಗದಲ್ಲಿ ಮಾತನಾಡಿ, ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೋಟಿಸ್ ಕೊಟ್ಟಿದ್ದೇವೆ ಎನ್ನುವ ಮೂಲಕ ಯಡಿಯೂರಪ್ಪ ಅವರನ್ನು ಟೀಕೆ ಮಾಡದಂತೆ ನಿಯಂತ್ರಣ ಮಾಡಿದ್ದೇವೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.
ಯಡಿಯೂರಪ್ಪ ಮುಖ್ಯ ಅನ್ನೋದನ್ನು ಅರಿತ ಭಾಜಪಾ..
ಯಡಿಯೂರಪ್ಪ ಇಲ್ಲದೆ ಚುನಾವಣೆ ಗೆಲ್ಲುವುದು ಕಷ್ಟ ಎನ್ನುವ ಸುಳಿವು ಬಿಜೆಪಿ ಹೈಕಮಾಂಡ್ಗೆ ಈಗಾಗಲೇ ಮನವರಿಕೆ ಆಗಿದೆ. ಬಹುತೇಕ ಶಾಸಕರು ಯಡಿಯೂರಪ್ಪ ಅವರನ್ನು ಚುನಾವಣೆಗೆ ಕಳುಹಿಸಿಕೊಡುವಂತೆ ಒತ್ತಡ ಹಾಕುತ್ತಿದ್ದಾರೆ. ಹೈಕಮಾಂಡ್ ಮಟ್ಟಕ್ಕೆ ಯಡಿಯೂರಪ್ಪ ಅವರನ್ನು ಕರೆದುಕೊಂಡು ಹೋಗಿ ರಾಜ್ಯದಲ್ಲಿ ಹೊಸ ನಾಯಕತ್ವಕ್ಕೆ ಪಟ್ಟ ಕೊಡುವ ತಯಾರಿ ನಡೆದಿತ್ತು. ಆದರೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಪಕ್ಷ ಚುನಾವಣೆಗೂ ಮುನ್ನವೇ ಸೋಲು ಒಪ್ಪಿಕೊಳ್ಳುವ ಪರಿಸ್ಥಿತಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಮೋದಿ, ಅಮಿತ್ ಷಾ, ಗಡ್ಕರಿ, ರಾಜನಾಥ್ ಸಿಂಗ್ ಕೂಡ ಬಂದು ಅಬ್ಬರದ ಪ್ರಚಾರ ಮಾಡಲು ಪ್ರವಾಸ ನಿಗದಿಯಾಗಿದೆ. ಆದರೆ ಅಂತಿಮವಾಗಿ ಯಡಿಯೂರಪ್ಪ ಬಾರದ ಹೊರತು ನಾವು ಚುನಾವಣೆಯಲ್ಲಿ ಗೆಲುವು ಅಸಾಧ್ಯ ಎನ್ನುವುದು ಬಿಜೆಪಿ ಶಾಸಕರ ಮಾತು. ಇದೇ ಕಾರಣಕ್ಕೆ ಹುಲಿಯನ್ನು ಟೀಕಿಸದಂತೆ ನೋಟಿಸ್ ಬಂದಿದೆ. ವಿಜಯೇಂದ್ರ ಕೂಡ ಖಡಕ್ ಮಾತನಾಡಿದ್ದಾರೆ.
![](https://pratidhvani.com/wp-content/uploads/2023/01/spotlight_1200x768-1024x576.jpeg)