ನೈಸರ್ಗಿಕ ವಿಕೋಪ, ಪ್ರಳಯ ಮೊದಲಾದವುಗಳಿಗೂ ಸೂರ್ಯನಿಗೂ ಸಂಬಂಧವಿದೆಯೇ? ಇಂತಹ ಪ್ರಶ್ನೆಯನ್ನು ಶೋಧಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮುಂದಾಗಿದ್ದು ಚಂದ್ರಯಾನ 3ರ ಯಶಸ್ಸಿನ ನಂತರ ಸೂರ್ಯನತ್ತ ಆದಿತ್ಯ-ಎಲ್1 ಉಪಗ್ರಹ ಹಾರಿಸುವ ಮೂಲಕ ಶನಿವಾರ (ಸೆಪ್ಟೆಂಬರ್ 2) ಹೊಸ ದಾಖಲೆ ಬರೆದಿದೆ.
ನಿಗದಿಪಡಿಸಿದ ಸಮಯದಲ್ಲಿ ಬೆಳಿಗ್ಗೆ 11.50ಕ್ಕೆ ಆದಿತ್ಯ ಎಲ್1 ಅಂತರಿಕ್ಷ ವೀಕ್ಷಣಾಲಯವು ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ಎಲ್ವಿ-ಸಿ 57 ರಾಕೆಟ್ ಮೂಲಕ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ.
ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿ, ರೋವರ್ ಕಾರ್ಯ ನಿರ್ವಹಿಸುತ್ತಿರುವ ಬೆನ್ನಲ್ಲೇ ಇಡೀ ಪ್ರಪಂಚ ಈಗ ಆದಿತ್ಯ ಉಡಾವಣೆ ನಂತರ ಭಾರತದತ್ತ ಹೊರಳಿ ನೋಡುತ್ತಿದೆ.
ಶನಿವಾರವೇ ಆದಿತ್ಯ-ಎಲ್1 ಅನ್ನು ಕೆಳಸ್ತರದ ಭೂಕಕ್ಷೆಯೊಂದಕ್ಕೆ ಸೇರಿಸಲಾಗುವುದು. ಕ್ರಮೇಣ ಭೂಕಕ್ಷೆಯ ಎತ್ತರವನ್ನು ಹೆಚ್ಚಿಸಲಾಗುತ್ತದೆ. ಬಳಿಕ ನಿಗದಿತ ದಿನವೊಂದರಲ್ಲಿ ಅದಿತ್ಯ ಲಗ್ರಾಂಜಿಯನ್ ಬಿಂದುವಿನತ್ತ ಯಾನ ಬೆಳೆಸಲಿದೆ. 125 ದಿನಗಳಲ್ಲಿ ಎಲ್-1 ಬಿಂದುವಿಗೆ ಸೇರಿಸಲಾಗುತ್ತದೆ. ಇದು ಸ್ಥಿರತೆ ಹೊಂದಿದ ವಿಶೇಷ ಕಕ್ಷೆಯಾಗಿದೆ. ಈ ವೀಕ್ಷಣಾಲಯಕ್ಕೆ ಯಾವ ಗ್ರಹಣವೂ ಬಾಧಿಸುವುದಿಲ್ಲ. ನಿರಂತರವಾಗಿ ಮತ್ತು ದೀರ್ಘವಾಗಿ ಅಡ್ಡಿ ಇಲ್ಲದೇ ಸೂರ್ಯನನ್ನು ಗಮನಿಸಲು ಸಹಾಯಕವಾಗುತ್ತದೆ.
ಆದಿತ್ಯ-ಎಲ್1 ಉಪಗ್ರಹದಲ್ಲಿ ಒಟ್ಟು ಏಳು ಉಪಕರಣಗಳಿದ್ದು, ನಾಲ್ಕು ಉಪಕರಣಗಳು ಸೂರ್ಯನನ್ನು ವೀಕ್ಷಣೆ ಮಾಡಿದರೆ ಉಳಿದ ಮೂರು ಉಪಕರಣಗಳು ಕಣಗಳು, ಪ್ಲಾಸ್ಮಾ, ಕಾಂತಕ್ಷೇತ್ರಗಳ ಅಧ್ಯಯನ ಮಾಡುತ್ತವೆ. ಇದು ಕೇವಲ ಇಸ್ರೋಯೋಜನೆಯಲ್ಲ, ಖಭೌತ ವಿಜ್ಞಾನಕ್ಕೆ ಸಂಬಂಧಿಸಿದ ದೇಶದ ಏಳು ಪ್ರಮುಖ ಸಂಸ್ಥೆಗಳು ಕೈಜೋಡಿಸಿರುವುದರಿಂದ ಇದು ರಾಷ್ಟ್ರೀಯ ಅಭಿಯಾನವಾಗಿದೆ ಎಂದು ಇಸ್ರೋ ವಿಜ್ಞಾನಿಯೊಬ್ಬರು ಹೇಳಿದ್ದಾರೆ.
ಗೋಲ ಬಿಂಬ ಸೆರೆ ಹಿಡಿಯುವ ಕ್ಯಾಮೆರಾ
ಸೂರ್ಯನ ಗೋಲದ ಬಿಂಬವನ್ನು ಅತಿ ಹೆಚ್ಚು ಸ್ಪುಟವಾಗಿ ಸೆರೆ ಹಿಡಿಯುವ ಮತ್ತು ಕೃತಕವಾಗಿ ಗ್ರಹಣವನ್ನು ಸೃಷ್ಟಿಸಿ ಅಧ್ಯಯನ ಮಾಡುವ ಉಪಕರಣಗಳು ವಿಶಿಷ್ಟವಾದವು ಎಂದು ಅವರು ಹೇಳಿದರು.
“ಸೂರ್ಯನನ್ನು ಕೂಲಂಕಷವಾಗಿ ಅರ್ಥ ಮಾಡಿಕೊಳ್ಳುವುದು ನಮ್ಮ ಮುಖ್ಯ ಉದ್ದೇಶ. ಅಲ್ಲದೇ, ಸೂರ್ಯನ ಹೊರ ಆವರಣ ಮತ್ತು ಒಳಗೆ ಚಿಮ್ಮುವ ಪ್ರಚಂಡ ಕಣ ಪ್ರವಾಹ, ಸೌರ ಜ್ವಾಲೆ, ವಿಕಿರಣಗಳು ಭೂಮಿಯತ್ತ ನುಗ್ಗುವಾಗ ಮುನ್ಸೂಚನೆ ನೀಡಿ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದಾಗಿದೆ. ಇಲ್ಲವಾದಲ್ಲಿ, ಭೂಮಿಯನ್ನು ಸುತ್ತುತ್ತಿರುವ ಉಪಗ್ರಹಗಳು, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾನಿ ಉಂಟು ಮಾಡಬಲ್ಲವು. 1989 ರಲ್ಲಿ ಕೆನಡಾದಲ್ಲಿ ಸೌರ ಕಣ ಪ್ರವಾಹದಿಂದ ದೊಡ್ಡ ಅವಘಡ ಸಂಭವಿಸಿತ್ತು” ಎಂದು ಅವರು ತಿಳಿಸಿದರು.
ನಾಸಾ, ಯೂರೋಪಿಯನ್ ಸ್ಪೇಸ್ ಏಜೆನ್ಸಿ ಮತ್ತು ಜಾಕ್ಸಾ ಮಾತ್ರ ದೊಡ್ಡ ಪ್ರಮಾಣದ ನೌಕೆಗಳನ್ನು ಸೂರ್ಯನ ಅಧ್ಯಯನಕ್ಕೆ ಕಳುಹಿಸಿದ್ದು, ಇಸ್ರೋ ನಾಲ್ಕನೆಯದು ಎಂದು ಅವರು ಹೇಳಿದರು.