ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆಯಾಗುತ್ತಿರುವ ಸಿಎಂ ಪುತ್ರ ಬಿ ವೈ ವಿಜಯೇಂದ್ರ ಲಂಚ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಜನಾಧಿಕಾರ ಸಂಘರ್ಷ ಪರಿಷತ್ನ ಪದಾಧಿಕಾರಿಗಳಾದ ಆದರ್ಶ್ ಆರ್ ಅಯ್ಯರ್, ಪ್ರಕಾಶ್ ಬಾಬು ಬಿ.ಕೆ, ವಿಶ್ವನಾಥ್ ಬಿ.ವಿಯವರು ಬಿವೈ ವಿಜಯೇಂದ್ರ ವಿರುದ್ಧ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದೂರಿನಲ್ಲಿ, ಸಿಎಂ ಪುತ್ರ ಬಿ.ವೈ ವಿಜಯೇಂದ್ರ ಮತ್ತು ಸಿಎಂ ಮೊಮ್ಮಗ ಶಶಿಧರ ಮರಡಿಯವರು ರಾಮಲಿಂಗಂ (ಕನ್ಸ್ಸ್ಟ್ರಕ್ಸನ್) ಎಂಬುವವರಿಂದ ಹಣ ನೀಡದಿದ್ದರೆ ನಿಮ್ಮ ಬಿಡಿಎ ಪ್ರಾಜೆಕ್ಟ್ ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿ ಆರ್ಟಿಜಿಎಸ್ ಮೂಲಕ ಅಪಾರ ಪ್ರಮಾಣದ (17 ಕೋಟಿ ರೂಗಳು) ಹಣವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. 1860 ರ ಭಾರತೀಯ ದಂಡ ಸಂಹಿತೆಯ(IPC) 120 (ಬಿ), ಸುಲಿಗೆ IPC 384, SEC 34ರ ಅನ್ವಯ ಕ್ರಮ ಕೈಗೊಳ್ಳಬೇಕೆಂದು ಜನಾಧಿಕಾರ ಸಂಘರ್ಷ ಪರಿಷತ್ ಆಗ್ರಹಿಸಿದ್ದಾರೆ.
ಅಲ್ಲದೆ, ಶಶಿಧರ್ ಮರಡಿ ವಾಟ್ಸಪ್ ಸಂದೇಶವನ್ನು ದೂರಿನಲ್ಲಿ ಲಗತ್ತಿಸಿದ್ದು, ಸಂದೇಶದಲ್ಲಿ ನಮೂದಿಸಿದ್ದ ಎಚ್ಡಿಎಫ್ಸಿ ಬ್ಯಾಂಕ್ ಖಾತೆ ಶಶಿಧರ್ ಅವರಿಗೆ ಸೇರಿರುವುದು ಎಂಬುವುದನ್ನು ಖಚಿತಪಡಿಸಿದ್ದಾರೆ. ಎಚ್ಡಿಎಫ್ಸಿ ಶೇಷಾದ್ರಿಪುರಂ ಖಾತೆಯಾಗಿದ್ದು, 100 ರುಪಾಯಿಗಳನ್ನು ಠೇವಣಿ ಮಾಡಿ ಖಾತೆ ಶಶಿಧರ್ ಮರಡಿ ಅವರಿಗೆ ಸೇರಿದ್ದೆಂಬುದನ್ನು ನಿರೂಪಿಸುವ ಚಲನ್ ಅನ್ನೂ ದೂರಿನೊಂದಿಗೆ ನೀಡಿದ್ದಾರೆ.

ಅಧಿಕಾರಿಯೊಬ್ಬರು ಮುಖ್ಯಮಂತ್ರಿ ಹೆಸರು ಬಳಸಿಕೊಂಡು ಕನ್ಸ್ಟ್ರಕ್ಷನ್ ಕಂಪನಿಯಿಂದ ಲಂಚ ಪಡೆದಿರುವುದು ತಿಳಿದಿದ್ದರೂ ಕೂಡಾ ಅಧಿಕಾರಿ ಮೇಲೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸದೆ ಬಿಟ್ಟಿರುವುದು ಬಿ ವೈ ವಿಜಯೇಂದ್ರ ಅವರ ಮೇಲೆ ಅನುಮಾನಕ್ಕೆ ಕಾರಣವಾಗಿದೆ. ಈ ಅನುಮಾನದ ಹಿನ್ನೆಲೆಯಲ್ಲಿ ಕನ್ಸ್ಟ್ರಕ್ಷನ್ ಕಂಪನಿಗೆ ಬೆದರಿಕೆ ಹಾಕಿ ಹಣ ನೀಡಲು ಒತ್ತಡ ಹೇರಿ ನಿರ್ಮಾಣ ಕಾರ್ಯಕ್ಕೆ ತಡೆ ಹಾಕಿರುವುದು ಸುಲಿಗೆ ಪ್ರಕರಣಕ್ಕೆ ಬಲವಾದ ಸಾಕ್ಷಿಯಾಗಿದೆ ಎಂದು ದೂರಿನಲ್ಲಿ ಜನಾಧಿಕಾರ ಸಂಘರ್ಷ ಪರಿಷತ್ ವಿವರಿಸಿದೆ.

ವಾಟ್ಸಾಪ್ ಚಾಟ್ಗಳಲ್ಲಿ ಶಶಿಧರ್ ಮರಡಿ ಎಂಬುವರು ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ನಂತರ ಹಣ ಪಡೆದಿರುವುದು, ನಗದು ಹಾಗೂ ಆರ್ಟಿಜಿಎಸ್ ಮೂಲಕ ತಮ್ಮ ಖಾತೆಗೆ ಹಣ ವರ್ಗಾವಣೆ ಆಗಿರುವುದು ಮತ್ತು ತಮ್ಮ ಸಹಚರರ ಮೂಲಕ ಸಮನ್ವಯ ಮಾಡಲು ತಿಳಿಸಿರುವುದು ಹಾಗೂ ಹಣ ಪಡೆದಿರುವ ಬಗ್ಗೆಯೂ ಖಚಿತಪಡಿಸಿರುವುದು ಈ ಪ್ರಕರಣಕ್ಕೆ ಹೆಚ್ಚಿನ ಪುಷ್ಟಿ ನೀಡುತ್ತದೆ ಎಂದು ದೂರಿನಲ್ಲಿ ಹೇಳಲಾಗಿದೆ.
Also Read: ಸಿಎಂ ಪುತ್ರ ವಿಜಯೇಂದ್ರ ಬಳಿಕ ಅಳಿಯ, ಮೊಮ್ಮಗನ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು!
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಣ ಕಂಪನಿ ರಾಮಲಿಂಗಂ ಕನ್ಸ್ಟ್ರಕ್ಷನ್ಸ್ ಮತ್ತು ಖಾಸಗಿ ಮಾಧ್ಯಮದ ಮುಖ್ಯಸ್ಯ ರಾಕೇಶ್ ಶೆಟ್ಟಿ ಅವರನ್ನು ಸಾಕ್ಷಿಗಳನ್ನಾಗಿ ಪರಿಗಣಿಸಬೇಕು ಎಂದು ದೂರಿನಲ್ಲಿ ಜನಾಧಿಕಾರ ಸಂಘರ್ಷ ಪರಿಷತ್ ಕೋರಿದೆ.
ವಿಜಯೇಂದ್ರ ಕರ್ನಾಟಕದಲ್ಲಿ ಸೂಪರ್ ಸಿಎಂ ಆಗಿದ್ದಾರೆಂಬ ಆರೋಪಗಳನ್ನು ವಿಪಕ್ಷಗಳು ಈ ಹಿಂದೆಯೇ ಮಾಡಿತ್ತು. ಬಿಜೆಪಿ ಶಾಸಕರಿಗೇ ವಿಜಯೇಂದ್ರ ಅವರು ಸರ್ಕಾರದಲ್ಲಿ ಪ್ರಭಾವ ಬೀರುವುದು ಅಸಂತೃಪ್ತಿ ತರಿಸಿತ್ತು. ಯಡಿಯೂರಪ್ಪರನ್ನು ಹಣಿಯಲು ಪಕ್ಷದೊಳಗೆ ಹಪಾಹಪಿಸುತ್ತಿರುವ ʼಆರ್ಎಸ್ಎಸ್ʼ ಹಿನ್ನೆಲೆಯ ಬಿಜೆಪಿ ನಾಯಕರಿಗೆ ವಿಜಯೇಂದ್ರ ಪ್ರಕರಣ ಮುಖ್ಯ ಎಳೆಯಾಗಲಿದೆ ಎನ್ನಲಾಗಿತ್ತು. ವಿಜಯೇಂದ್ರ ಕುರಿತಂತೆ ಬಿಜೆಪಿ ನಾಯಕರೇ ವಿಪಕ್ಷಗಳಿಗೆ ಮಾಹಿತಿ ನೀಡಿದ್ದರು ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ತೇಲಿ ಬರುತ್ತಿವೆ.
Also Read: BS ವಿಜಯೇಂದ್ರ ವಿರುದ್ಧ ಹೈಕಮಾಂಡ್ಗೆ ದೂರು ಕೊಟ್ಟವರು ಯಾರು..?
ಎರಡು ದಿನಗಳ ಹಿಂದೆಯಷ್ಟೇ ವಿಪಕ್ಷ ನಾಯಕ ಸಿದ್ಧರಾಮಯ್ಯ ವಿಜಯೇಂದ್ರ ಹಗರಣದ ಕುರಿತಂತೆ ಸರಣಿ ಟ್ವೀಟ್ ಮಾಡಿದ್ದರು. ʼಅಪ್ಪ-ಮಗ-ಅಳಿಯ-ಮೊಮ್ಮಗʼನ ಸರ್ಕಾರವೆಂದು ಯಡಿಯೂರಪ್ಪ ಸರ್ಕಾರವನ್ನು ಲೇವಡಿ ಮಾಡಿದ್ದರು. ಸದ್ಯ, ನಗರ ಪೊಲೀಸ್ ಆಯುಕ್ತ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೂ ದೂರು ತಲುಪಿದ್ದು, ಪೊಲೀಸ್ ಮಹಾ ನಿರ್ದೇಶಕರು ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.













