ಕಲಬುರಗಿ : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಇನ್ನು ಡೇಟ್ ಫಿಕ್ಸ್ ಆಗಿಲ್ಲ, ಸಮಯ ನಿಗದಿಯಾಗದೇ ನಾನು ಹೇಗೆ ಹೇಳಲಿ? ಬದಲಾವಣೆಯಾಗುತ್ತೋ ಇಲ್ಲವೋ ಅನ್ನೋದನ್ನು ಹೇಗೆ ಹೇಳಲಿ? ಸಮಯ ನಿಗದಿಯಾದ ಮೇಲೆ ಅಗತ್ಯ ನಿರ್ಧಾರ ಪಡೆಯುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿ, ನಾಯಕತ್ವ ಬದಲಾವಣೆಯ ಬಗ್ಗೆ ಎಲ್ಲರೂ ಸೇರಿ ವಿಚಾರ ಮಾಡುತ್ತೇವೆ ಎಂದು ನಾನು ಹೇಳುತ್ತೇನೆ. ಅದನ್ನು ಬಿಟ್ಟು ನೀವು ಹೈಕಮಾಂಡ್ ಮೇಲೆ ತಪ್ಪು ಹೊರೆಸುತ್ತೀರಿ. ನೀವು ಸುಮ್ಮನೆ ತಪ್ಪು ಸಂದೇಶ ಕೊಡಬೇಡಿ ಎಂದು ಮಾಧ್ಯಮಗಳ ಕಿವಿ ಹಿಂಡಿದ್ದಾರೆ.
ನಾವು ಯಾವುದೇ ನಿರ್ಣಯ ತೆಗೆದುಕೊಂಡರೆ ಪಕ್ಷದ ಮೇಲೆ ಏನು ಪರಿಣಾಮ ಆಗುತ್ತದೆ ಅನ್ನೋದನ್ನ ಚರ್ಚಿಸುತ್ತೇವೆ. ಬಳಿಕ ಅದಕ್ಕೆ ಸಂಬಂಧಿಸಿದಂತೆ ತೀರ್ಮಾನ ಮಾಡುತ್ತೇವೆ. ಅಲ್ಲದೆ ನಾವು ರಾಜ್ಯದ ಹಿತದೃಷ್ಟಿಯಿಂದ ಉತ್ತಮ ನಿರ್ಣಯ ತೆಗೆದುಕೊಳ್ಳುತ್ತೇವೆ ಎನ್ನುವ ಮೂಲಕ ಪರೋಕ್ಷವಾಗಿ ಮುಂದಿನ ದಿನಗಳಲ್ಲಿ ನಾಯಕತ್ವದ ಬದಲಾವಣೆಯ ಸುಳಿವು ನೀಡಿದ್ದಾರೆ.
ಪ್ರಪಂಚದಲ್ಲಿ ನಡೆಯುತ್ತಿರುವ ಯುದ್ಧ ನಿಲ್ಲಲಿ..
ಇದನ್ನೂ ಓದಿ : ಪಶ್ಚಿಮ ಬಂಗಾಳದಲ್ಲಿ ಮತದಾನ ಗೊಂದಲ: ಇವಿಎಂ ತೊಂದರೆ ಆರೋಪ, ಮರುಮತದಾನ ಚಿಂತನೆ
ಬುದ್ಧ ಪೌರ್ಣಿಮೆಯ ಶುಭಾಶಯಗಳನ್ನು ತಿಳಿಸಿದ ಖರ್ಗೆ, ಬುದ್ದನ ತತ್ವಗಳು ಇಂದಿಗೂ ಸಹ ವಿಶ್ವದಾದ್ಯಂತ ಪಸರಿಸಿವೆ.ಬುದ್ಧನ ಅಷ್ಟಾಂಗ ಮಾರ್ಗಗಳು ಜನರಿಗೆ ಪ್ರೇರಣೆಯಾಗಿವೆ. ಹೀಗಾಗಿ ಪ್ರಪಂಚದಲ್ಲಿ ಬುದ್ಧ ಪೂರ್ಣಿಮೆಯನ್ನು ಎಲ್ಲರೂ ಆಚರಣೆ ಮಾಡುತ್ತಿದ್ದಾರೆ. ಪ್ರಪಂಚದಲ್ಲಿ ನಡೆಯುತ್ತಿರುವ ಯುದ್ಧ ನಿಲ್ಲಬೇಕು. ಎರಡು ದೇಶದ ಕಲಹ ನೂರಾರು ದೇಶಗಳಿಗೆ ಸಮಸ್ಯೆಯಾಗಿದೆ. ಪಂಡಿತ ಜವಹಾರಲಾಲ್ ನೆಹರೂರಂತೆ ವಿದೇಶ ನೀತಿ ಪಾಲನೆ ಮಾಡಿದರೆ ಉಳಿಯುತ್ತೆವೆ. ನಾವು ಯಾವ ದೇಶದ ಪರ ಸಹ ನಿಲ್ಲಬಾರದು, ಇದನ್ನ ನಮ್ಮ ದೇಶದ ಪ್ರಧಾನಿ ಅರ್ಥಮಾಡಿಕೊಂಡು ಒಂದು ದೇಶ ವ್ಯಕ್ತಿ ಪರ ನಿಲ್ಲಬಾರದು ಎಂದು ಖರ್ಗೆ ಟೀಕಿಸಿದ್ದಾರೆ.
ಬೆಲೆ ಏರಿಕೆ ಮಾಡುವುದಿಲ್ಲ ಅಂದಿದ್ದ ಮೋದಿ..
ಕಮರ್ಷಿಯಲ್ ಸಿಲಿಂಡರ್ ಒಂದೆ ದಿನದಲ್ಲಿ 993 ರೂಪಾಯಿ ಏರಿಕೆಯಾಗಿದೆ. ಯುದ್ಧದ ಎಫೆಕ್ಟ್ ನಿಂದ 993 ರೂಪಾಯಿ ಏರಿಕೆ ಮಾಡಿದೆ. ಪ್ರಧಾನಿ ಮೋದಿ ನಾವು ಯಾವುದು ದರ ಏರಿಕೆ ಮಾಡಲ್ಲ ಅಂತಾ ಹೇಳಿದ್ದರು. ಆದರೆ ಈಗ ಪ್ರತಿಯೊಂದು ವಸ್ತುಗಳ ದರಗಳ ಏರಿಕೆ ಮಾಡುತ್ತಿದ್ದಾರೆ. ಈ ಮೂಲಕ ದೇಶದ ಜನರಿಗೆ ಬೆಲೆ ಏರಿಕೆಯ ಸಮಸ್ಯೆ ತಂದಿಟ್ಟಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.






