ವಿಶೇಷ ಲೇಖನ : ದಿನೇಶ್ ಅಮೀನ್ ಮಟ್ಟ , ಹಿರಿಯ ಪತ್ರಕರ್ತರು..
ಬೆಂಗಳೂರು : ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಆಹ್ವಾನ ನೀಡಿದ್ದಾರೆ. ಆದರೆ ಈ ವೇಳೆ ಕ್ಲಿಕ್ಕಿಸಲಾಗಿರುವ ಫೋಟೋ ಹಂಚಿಕೊಂಡು ಸಂಸದ ತೇಜಸ್ವಿ ಸೂರ್ಯ ಸಿದ್ದರಾಮಯ್ಯರನ್ನು ಟೀಕಿಸಿದ್ದರು. ಅಲ್ಲದೆ ಇದು ರಾಜಕಾರಣಿಗಳ ಅಹಂಕಾರದ ಕನ್ನಡಿಯಾಗಿದೆ ಎಂದು ಜರಿದಿದ್ದರು.

ಇದಕ್ಕೆ ಹಿರಿಯ ಪತ್ರಕರ್ತರಾಗಿರುವ ದಿನೇಶ್ ಅಮೀನ್ ಮಟ್ಟು ಸುದೀರ್ಘ ಬರಹದ ಜೊತೆಗೆ ತೇಜಸ್ವಿ ಸೂರ್ಯ ಮದುವೆಯ ಸಮಯದಲ್ಲಿನ ಫೊಟೋ ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ. ಅವರ ಬರಹ ಈ ಕೆಳಗಿನಂತಿದೆ..
ದೇಶಕ್ಕಾಗಿ ತನ್ನ ಕುಟುಂಬವನ್ನೇ ತ್ಯಾಗಮಾಡಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿ ಕ್ರಿಕೆಟ್ ಕಪ್ ಗಳನ್ನು ಗೆದ್ದು ಕೋಟ್ಯಂತರ ಭಾರತೀಯರು ಇಡೀ ಜಗತ್ತಿನ ಎದುರು ತಲೆಗಳನ್ನು ಆಕಾಶದೆತ್ತರಕ್ಕೆ ಏರಿಸಿ ನಡೆದಾಡುವಂತೆ ಮಾಡಿದ್ದ ಅಪ್ರತಿಮ ಕ್ರಿಕೆಟ್ ಕಲಿ ಮತ್ತು ಹಿರಿಯರೂ ಜನಾನುರಾಗಿಗಳಾಗಿರುವ ಶ್ರೀಶ್ರೀಶ್ರೀ ವೆಂಕಟೇಶ್ ಪ್ರಸಾದ್ ಅವರು ಮುಖ್ಯಮಂತ್ರಿ ಕಾರ್ಯಾಲಯಕ್ಕೆ ಬರುತ್ತಿದ್ದಂತೆಯೇ…
ಇದನ್ನೂ ಓದಿ : ಭ್ರಷ್ಟಾಚಾರದಲ್ಲಿ ಬೆಂದಿರುವ ಅಸ್ಸಾಂನಲ್ಲಿ ಈ ಸಲ ಭಾರಿ ಬದಲಾವಣೆ : ಡಿ.ಕೆ. ಶಿವಕುಮಾರ್..
ಜುಜುಬಿ ಏಳು ಕೋಟಿ ಕನ್ನಡಿಗರ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯನವರು ಕೂತ ಕುರ್ಚಿಯಿಂದ ದಿಗ್ಗನೇ ಎದ್ದು ಶ್ರೀಗಂಧದ ಮಾಲೆಯನ್ನು ಹಿಡಿದು ಮುಖ್ಯದ್ವಾರದ ವರೆಗೆ ಹೋಗಿ ತಲೆ ಬಾಗಿ ನಡುಬಗ್ಗಿಸಿ ಸಾಧ್ಯವಾದರೆ ಸಾಷ್ಟಾಂಗ ವಂದನೆ ಸಲ್ಲಿಸಿ ಸ್ವಾಗತಿಸಬೇಕಾಗಿತ್ತು. ಸಿದ್ದರಾಮಯ್ಯನವರು ವಯಸ್ಸಿನಲ್ಲಿ ಹಿರಿಯರಿದ್ದರೇನಂತೆ? ವೆಂಕಟೇಶ್ ಪ್ರಸಾದ್ ಕಿರಿಯರಿದ್ದರೇನಂತೆ? ನಮ್ಮ ಸನಾತನ ಪರಂಪರೆ ಏನು ಹೇಳುತ್ತೆ? ಮುಖ್ಯಮಂತ್ರಿಯವರ ನಡವಳಿಕೆ
ಅತಿಖಂಡನೀಯ.
ಸಿದ್ದರಾಮಯ್ಯನವರು ಮರ್ಯಾದಾ ಪುರುಷೋತ್ತಮ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ಆದರ್ಶ ನಡವಳಿಕೆಯನ್ನು ನೋಡಿಯಾದರೂ ಕಲಿಯಬೇಕಿತ್ತು. ಹಿಂದುಳಿದ ಜಾತಿಗೆ ಸೇರಿರುವ ಮೋದಿಯವರು ಹೇಗೆ ತಮ್ಮ ಪಕ್ಷದ ಹಿರಿಯರು ಮತ್ತು ವಿಪ್ರಕುಲೊತ್ತಮರಾದ ಅಟಲ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣೀ, ಮುರಳಿ ಮನೋಹರ ಜೋಷಿ ಅವರನ್ನು ಕಂಡ ಕೂಡಲೇ ಓಡೋಡಿ ಹೋಗಿ ಅವರ ಪಾದಕ್ಕೆ ಬಿದ್ದು ನಮಸ್ಕರಿಸುತ್ತಿದ್ದರು. ಅವರನ್ನು ಕರೆದುಕೊಂಡು ಹೋಗಿ ಮಾರ್ಗದರ್ಶಕ ಮಂಡಲದ ಸಿಂಹಾಸನದಲ್ಲಿ ಕೂರಿಸಿ ಗೌರವಿಸಿದ್ದರು ಎನ್ನುವುದು ಎಲ್ಲ ಜನನಾಯಕರಿಗೆ ಒಂದು ಆದರ್ಶವಾಗಬೇಕು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯರ ಮನೆಸುತ್ತ ಏನಿದು ದುರ್ನಾತ? ಯಾರಾದರೂ ಮಹಾನಗರಪಾಲಿಕೆಗೆ ಪೋನ್ ಮಾಡಿ ತುರ್ತಾಗಿ ಅಸಹ್ಯಕರ ತ್ಯಾಜ್ಯ ವಿಲೇವಾರಿ ಮಾಡಲು ಹೇಳಿ. ದುರ್ನಾತ ಕಸದ್ದಲ್ವಾ? ಜಾತಿಯದ್ದಾ? ಮೆದುಳು ತೊಳೆಯುವುದು ಪೌರಕಾರ್ಮಿಕರ ಕೆಲಸ ಅಲ್ವಾ? ಹಾಗಿದ್ದರೆ ಆ ಮಹಾನುಭಾವರ ಕೈಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ “ಜಾತಿ ವಿನಾಶ’ ಕೃತಿಯನ್ನು ಕೊಡಿ. ಇದೀಗ ಬಂದ ಪೋಟೊ ನೋಡಿ. ಸನ್ಮಾನ್ಯ ಸಂಸದರು ಸಿದ್ದರಾಮಯ್ಯನವರ ಪಾದಕ್ಕೆ ಬಿದ್ದು ಭಾರತೀಯ ಸಂಸ್ಕೃತಿಗೆ ಅವಮಾನ ಮಾಡಿದ್ದು. ಪೋಟೋ ಕೆಳಗಡೆ ಇದೆ.






