ಅಮೆರಿಕದ ನ್ಯೂಯಾರ್ಕ್ ನಗರ ಮೇಯರ್ ಆಗಿರುವ ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ. ಅವರ ಹೇಳಿಕೆ ಇದೀಗ ರಾಜಕೀಯ ಮತ್ತು ಮಾಧ್ಯಮ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.9/11 ಉಗ್ರ ದಾಳಿಯ ಸಂತ್ರಸ್ತರ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬ್ರಿಟನ್ ದೊರೆ ಮೂರನೇ ಚಾರ್ಲ್ಸ್ ಹಾಗೂ ರಾಣಿ ಕೆಮಿಲ್ಲಾ ನ್ಯೂಯಾರ್ಕ್ಗೆ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ನಡೆದ ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಮಮ್ದಾನಿ, “ಅವಕಾಶ ಸಿಕ್ಕರೆ ಬ್ರಿಟನ್ ದೊರೆಯ ಬಳಿ ಕೊಹಿನೂರ್ ವಜ್ರವನ್ನು ಭಾರತಕ್ಕೆ ಹಿಂದಿರುಗಿಸುವಂತೆ ಕೇಳುತ್ತೇನೆ” ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆ ಅಮೆರಿಕದಲ್ಲಿ ಟೀಕೆಗಳಿಗೆ ಕಾರಣವಾಗಿದ್ದು, ಹಲವು ಮಾಧ್ಯಮಗಳು ಮಮ್ದಾನಿ ನಡೆಗೆ ವಿರೋಧ ವ್ಯಕ್ತಪಡಿಸಿವೆ. ವಿಶೇಷವಾಗಿ The New York Times ಪತ್ರಿಕೆ, ಬ್ರಿಟನ್ ದೊರೆಯ ಭೇಟಿಯಂತಹ ಸಂದರ್ಭಗಳಲ್ಲಿ ಮೇಯರ್ಗಳು ಪ್ರದರ್ಶಿಸಬೇಕಾದ ಶಿಷ್ಟಾಚಾರವನ್ನು ಮಮ್ದಾನಿ ಮರೆತಿದ್ದಾರೆ ಎಂದು ಟೀಕಿಸಿದೆ.

ಮಮ್ದಾನಿ ಅವರ ನಡೆ ವಸಾಹತುಶಾಹಿ ವಿರೋಧಿ ಮನೋಭಾವದಿಂದ ಪ್ರೇರಿತವಾಗಿದೆ ಎಂದು ಹೇಳಿರುವ ಪತ್ರಿಕೆ, “ಒಬ್ಬ ಮೇಯರ್ ಆಗಿ ಇಂತಹ ವಿಷಯಗಳನ್ನು ಅನವಶ್ಯಕ ವೇದಿಕೆಯಲ್ಲಿ ಎತ್ತುವುದು ಸರಿಯಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ, ಅವರು ಭಾರತದ ಅಧಿಕೃತ ಪ್ರತಿನಿಧಿಯೇ ಎಂಬ ಪ್ರಶ್ನೆಯನ್ನೂ ಎತ್ತಿದೆ.

ಇದೀಗ ವಿವಾದ ತೀವ್ರವಾಗುತ್ತಿದ್ದರೂ, ಮಮ್ದಾನಿ ಈ ಕುರಿತು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಕೊಹಿನೂರ್ ವಜ್ರವನ್ನು ಭಾರತಕ್ಕೆ ಹಿಂತಿರುಗಿಸುವ ವಿಚಾರ ಹಲವು ವರ್ಷಗಳಿಂದ ಚರ್ಚೆಯಲ್ಲಿದೆ. 1849ರಲ್ಲಿ ಪಂಜಾಬ್ ರಾಜರು ಮತ್ತು East India Company ನಡುವೆ ನಡೆದ ಒಪ್ಪಂದದ ಬಳಿಕ ಈ ವಜ್ರ ಬ್ರಿಟನ್ಗೆ ಹೋಗಿದ್ದು, ನಂತರ ರಾಣಿ ವಿಕ್ಟೋರಿಯಾ ಸೇರಿದಂತೆ ಬ್ರಿಟನ್ ರಾಜವಂಶದ ಸದಸ್ಯರು ಬಳಸಿಕೊಂಡು ಬಂದಿದ್ದಾರೆ.





