• Home
  • About Us
  • ಕರ್ನಾಟಕ
Thursday, June 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಆಳ್ವಿಕೆಯ ಉತ್ತರದಾಯಿತ್ವ – ಸಾಂವಿಧಾನಿಕ ಜವಾಬ್ದಾರಿ

ನಾ ದಿವಾಕರ by ನಾ ದಿವಾಕರ
June 11, 2025
in Top Story, ಕರ್ನಾಟಕ, ರಾಜಕೀಯ
0
ಆಳ್ವಿಕೆಯ ಉತ್ತರದಾಯಿತ್ವ – ಸಾಂವಿಧಾನಿಕ ಜವಾಬ್ದಾರಿ
Share on WhatsAppShare on FacebookShare on Telegram

——ನಾ ದಿವಾಕರ——

ADVERTISEMENT

ಸಾಂವಿಧಾನಿಕ ನೈತಿಕತೆ ರಾಜಕೀಯ ನಿಘಂಟಿನಿಂದಲೇ ಮಾಯವಾಗಿರುವ ಕಾಲದಲ್ಲಿ ಉತ್ತರದಾಯಿತ್ವದ ಪ್ರಶ್ನೆ ???

 77 ವರ್ಷಗಳ ಸ್ವತಂತ್ರ ಪ್ರಜಾತಂತ್ರದಲ್ಲಿ, 75 ವರ್ಷಗಳ ಗಣತಂತ್ರ ವ್ಯವಸ್ಥೆಯಲ್ಲಿ ಭಾರತ ಕಳೆದುಕೊಂಡಿರುವ ಅಮೂಲ್ಯ ವಸ್ತುಗಳೇನಾದರೂ ಇದ್ದರೆ ಅದು ʼಸಾಂವಿಧಾನಿಕ ನೈತಿಕತೆ ʼ ಮತ್ತು  ʼಆಳ್ವಿಕೆಯ ಉತ್ತರದಾಯಿತ್ವ ʼ . ಇನ್ನು ಸರಿಪಡಿಸಲಾಗದಷ್ಟು ಅಥವಾ ಮರಳಿ ಗಳಿಸಬಾರದ ರೀತಿಯಲ್ಲಿ ಕಣ್ಮರೆಯಾಗಿರುವ ಈ ಎರಡು ಆಡಳಿತಾತ್ಮಕ ಮೌಲ್ಯಗಳು ಪ್ರಜಾಪ್ರಭುತ್ವದ ಬುನಾದಿಯನ್ನು ಬಲಪಡಿಸುವ ಉದಾತ್ತ ಚಿಂತನೆಗಳಾಗಿದ್ದವು. ಆದರೆ ದುರದೃಷ್ಟವಶಾತ್‌ ಇಂದು ರಾಜಕೀಯ-ಸಾಮಾಜಿಕ-ಸಂವಹನ ಮಾಧ್ಯಮಗಳ ಸಂಕಥನದಲ್ಲಿ ಚರ್ಚೆಗೂ ಒಳಗಾಗದ ರೀತಿಯಲ್ಲಿ ಈ ಮೌಲ್ಯಗಳನ್ನು ನಾವು ಕಳೆದುಕೊಂಡಿದ್ದೇವೆ. ಇದಕ್ಕೆ ಪುಷ್ಠಿ ನೀಡುವ ರೀತಿಯಲ್ಲಿ ನವ ಉದಾರವಾದಿ ಮಾರುಕಟ್ಟೆ ಆರ್ಥಿಕತೆಯು, ಮಾನವೀಯತೆಯನ್ನೂ ಸೇರಿದಂತೆ ಎಲ್ಲ ಉದಾತ್ತ ಮೌಲ್ಯಗಳನ್ನೂ ಸರಕೀಕರಣಗೊಳಿಸಿದ್ದು (Commodification), ಸಾಮಾಜಿಕ ನ್ಯಾಯವೂ ಸಹ ರಾಜಕೀಯ ಮಾರುಕಟ್ಟೆಯ ವಿನಿಮಯ ವಸ್ತುವಾಗಿದೆ.

 ಸಾಂವಿಧಾನಿಕ ತನಿಖಾ ಸಂಸ್ಥೆಗಳು ಹಾಗೂ ಇತರ ಕಾನೂನಾತ್ಮಕ-ಆಡಳಿತಾತ್ಮಕ ಸಂಸ್ಥೆಗಳು ಆಡಳಿತಾರೂಢ ಪಕ್ಷಗಳಿಗೆ ಅಧೀನವಾಗಿ ನಡೆದುಕೊಳ್ಳುವ ಪರಂಪರೆಗೂ ಸ್ವತಂತ್ರ ಭಾರತದಷ್ಟೇ ವರ್ಷಗಳಾಗಿವೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ಇದು ಪರಾಕಾಷ್ಠೆ ತಲುಪಿದ್ದು ಮತ-ಧರ್ಮದ ಅಸ್ಮಿತೆಗಳ ನಡುವೆ ನಿಷ್ಕರ್ಷೆಯಾಗುವ ಹಂತ ತಲುಪಿದೆ. ಸುಸ್ಥಿರ-ಬಹುಮತದ ಸರ್ಕಾರಗಳು ಸಂವಿಧಾನವನ್ನು ಬಲಪಡಿಸುವ ಸಾಧನಗಳಾಗುವುದು ಸ್ವಾತಂತ್ರ್ಯದ ಪೂರ್ವಸೂರಿಗಳ ಕನಸಾಗಿತ್ತು. ಆದರೆ ವರ್ತಮಾನದ ಭಾರತದಲ್ಲಿ ಇದು ಸಂವಿಧಾನದ ಮೌಲ್ಯಗಳನ್ನು ಶಿಥಿಲಗೊಳಿಸುವ, ತತ್ವ-ಸಿದ್ಧಾಂತ ಹಾಗೂ ಆಡಳಿತನೀತಿಗಳ ನೆಲೆಯಲ್ಲಿ ಬಳಸಬಹುದಾದ ಅಸ್ತ್ರವಾಗಿ ಪರಿಣಮಿಸಿದೆ. 1975ರ ತುರ್ತುಪರಿಸ್ಥಿತಿ ಈ ನಿಟ್ಟಿನಲ್ಲಿ ಸ್ವತಂತ್ರ ಭಾರತದ ಒಂದು ಪ್ರಮುಖ ಕವಲು ಎಂದು ಗುರುತಿಸಬಹುದು.

 ಅಸಹಜ ಸಾವುಗಳ ಸಂಕೀರ್ಣತೆಗಳು

 ಈ ನಡುವೆಯೇ ವರ್ತಮಾನದ ಭಾರತೀಯ ಸಮಾಜ ಹಲವು ಸಮಾಜಘಾತುಕ ಚಟುವಟಿಕೆಗಳಿಗೆ ತವರು ಮನೆಯಂತಾಗಿದೆ. ಭಯೋತ್ಪಾದನೆ, ಮತೀಯ-ಕೋಮುದ್ವೇಷ, ಮತಾಂಧರ ಆಕ್ರಮಣಗಳು, ಅಸ್ಪೃಶ್ಯತೆಯನ್ನೂ ಒಳಗೊಂಡಂತೆ ಸಾಮಾಜಿಕ ಬಹಿಷ್ಕಾರ ಮತ್ತು ಅಂತರ್ಜಾತಿ ವಿವಾಹದ ಹಿನ್ನೆಲೆಯಲ್ಲಿ ನಡೆಯುವ ಹತ್ಯೆಗಳು, ಜಾತಿ ದೌರ್ಜನ್ಯಗಳು, ಮಹಿಳೆಯರ ಮೇಲಿನ ನಿರಂತರ ಅತ್ಯಾಚಾರ-ದೌರ್ಜನ್ಯಗಳು, ಮತಾಂತರ ಮತ್ತು ಆಹಾರ ಸಂಸ್ಕೃತಿಯ ನೆಲೆಯಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಹಾಗೂ ವ್ಯಕ್ತಿಗತ ನೆಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕೊಲೆಗಳು, ನಮ್ಮ ಸಮಾಜವನ್ನು ಶತಮಾನಗಳಷ್ಟು ಹಿಂದಕ್ಕೆ ಕೊಂಡೊಯ್ದಿವೆ. ಹೆಣ್ಣು ಭ್ರೂಣ ಹತ್ಯೆ ಸರ್ವವ್ಯಾಪಿಯಾಗಿದ್ದರೆ, 1995 ರಿಂದ 2022ರ ಅವಧಿಯಲ್ಲಿ 3,96,912 ರೈತರು ಸಾಲಭಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇತ್ತೀಚೆಗೆ ಮೈಕ್ರೋ ಫೈನಾನ್ಸ್‌ ಎಂಬ ಮಾರುಕಟ್ಟೆಯ ಭೂತ ಹಲವು ಜೀವಗಳನ್ನು ಬಲಿ ತೆಗೆದುಕೊಂಡಿದೆ.

ರೈತರ ಆತ್ಮಹತ್ಯೆಯನ್ನು ಹೊರತುಪಡಿಸಿ ಉಳಿದೆಲ್ಲವೂ ಮಾನವ ಸಮಾಜದ ಒಳಗೇ ಸಹಮಾನವರಿಂದ ನಡೆಯುವ ದುಷ್ಕೃತ್ಯಗಳಾಗಿರುತ್ತವೆ. ರೈತರ ಅಸಹಜ ಸಾವಿಗೆ ಜಾಗತೀಕರಣದ ಆರ್ಥಿಕ ನೀತಿಗಳು ಮತ್ತು ಕೃಷಿ ವಲಯದ ದಿವ್ಯ ನಿರ್ಲಕ್ಷ್ಯ ಕಾರಣವಾಗಿರುತ್ತದೆ. ಇದರಿಂದ ಹೊರತಾಗಿ ನೈಸರ್ಗಿಕ ವಿಕೋಪಗಳಿಂದ ಸಂಭವಿಸಿರುವ ದುರಂತಗಳಲ್ಲಿ ನೂರಾರು ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಹಿಮಾಲಯ ತಪ್ಪಲಿನ ಚಾರ್‌ಧಾಮ್‌ನಿಂದ ಕೇರಳದ ವಯನಾಡಿನವರೆಗೆ ಸಂಭವಿಸುತ್ತಲೇ ಇರುವ ಭೂಕುಸಿತ, ಅಕಾಲಿಕ ಪ್ರವಾಹಗಳಿಗೆ ಸರ್ಕಾರಗಳು ಅನುಸರಿಸುತ್ತಿರುವ ಬಂಡವಾಳಶಾಹಿ ಆರ್ಥಿಕತೆಯ ಅಭಿವೃದ್ಧಿ ಮಾದರಿಯೂ ಒಂದು ಕಾರಣವಾಗಿದೆ. ಮತ್ತೊಂದು ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗದ ಒತ್ತಡ ತಾಳಲಾರದೆ, ದುಬಾರಿ ಶುಲ್ಕ ಭರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಸಂಗಗಳೂ ಕಳೆದ ಹತ್ತು ವರ್ಷಗಳಲ್ಲಿ ಹೆಚ್ಚಾಗಿವೆ.

ಈ ಘಟನೆ ಬಗ್ಗೆ ಮಾತಾಡ್ಲೇ ಬಾರದು ಎಂದ ಸಿಎಂ  #siddaramaiah #pratidhvani

 ಮಹಿಳಾ ಸಮುದಾಯದ ದೃಷ್ಟಿಯಿಂದ ನೋಡಿದಾಗ ಮಥುರಾದಿಂದ ಭನ್ವಾರಿ ದೇವಿ, ಸೌಜನ್ಯ, ನಿರ್ಭಯ ಮತ್ತು ಇತ್ತೀಚಿನ ಅಭಯ ಪ್ರಕರಣದವರೆಗೂ, ಆಧುನಿಕ ಭಾರತದ ಮಹಿಳೆ ನಿರಂತರ ಶೋಷಣೆಗೊಳಗಾಗುತ್ತಿದ್ದು, ಬಲಿಯಾದ ಮಹಿಳೆಯ ದೇಹವನ್ನು ತುಂಡರಿಸಿ ಸೂಟ್‌ಕೇಸ್‌ಗಳಲ್ಲಿಟ್ಟು ಬಿಸಾಡುವ, ಶ್ರದ್ಧಾವಾಲ್ಕರ್‌ ಪ್ರಕರಣದಂತೆ ರೆಫ್ರಿಜರೇಟ್‌ನಲ್ಲಿಡುವ ಅಮಾನುಷ ಘಟನೆಗಳು ನಮ್ಮ ಸಮಾಜಕ್ಕೆ ಕಳಂಕಪ್ರಾಯವಾಗಿ ಪರಿಣಮಿಸಿದೆ. ದಲಿತ ಜಗತ್ತಿನಲ್ಲಿ ಬಿಹಾರದಿಂದ ಕರ್ನಾಟಕದವರೆಗೆ ಶೋಷಿತ ಸಮುದಾಯದ ಜನರು ಜೀವಂತ ದಹನಕ್ಕೆ, ಮಾರಣಾಂತಿಕ ಹಲ್ಲೆಗೆ, ಇಡೀ ಕಾಲೋನಿಗಳನ್ನೇ ಸುಟ್ಟುಹಾಕುವ ಘಟನೆಗಳು ಕೀಲ್ವೆನ್ಮಣಿಯಿಂದ ಕೊಪ್ಪಳದವರೆಗೂ ವಿಸ್ತರಿಸಿದೆ. ಈ ನಡುವೆ ಮರೆಯಲಾಗದ ಕಂಬಾಲಪಲ್ಲಿ, ಖೈರ್ಲಾಂಜಿಯ ಸಂತ್ರಸ್ತರು ನ್ಯಾಯಕ್ಕಾಗಿ ಚಾಚಿದ ಕೈಗಳನ್ನು ಹಿಂತೆಗೆಯುವ ಅವಕಾಶವನ್ನೇ ನಮ್ಮ ವ್ಯವಸ್ಥೆ ನೀಡಿಲ್ಲ.

 ಸಾಂಸ್ಕೃತಿಕ ರಾಜಕೀಯ ಆಯಾಮ

 ಕಳೆದ ಮೂರು ದಶಕಗಳಲ್ಲಿ ದೇಶದ ರಾಜಕಾರಣ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಒಂದು ಭಾಗವಾಗಿರುವ ಮತೀಯವಾದ, ಮತಾಂಧತೆ ಮತ್ತು ಮತದ್ವೇಷದ ವಾತಾವರಣದಲ್ಲಿ, ಕೋಮುದ್ವೇಷಕ್ಕೆ ಬಲಿಯಾದ ನೂರಾರು ಜೀವಗಳು ನಮಗೆ ಎದುರಾಗುತ್ತವೆ. ಅಕ್ಲಾಖ್-ಪೆಹ್ಲೂಖಾನ್‌ನಿಂದ ಇತ್ತೀಚಿನ ಪ್ರವೀಣ್‌ ನೆಟ್ಟಾರು-ಸುಹಾಸ್‌ ಶೆಟ್ಟಿ ಮತ್ತು ಫಾಝಿಲ್‌ ಅವರಂತಹ ಅಮಾಯಕರು ಅನ್ಯ ಮತದ್ವೇಷದ ಕಾರಣಕ್ಕಾಗಿಯೇ ಬಲಿಯಾಗಿದ್ದಾರೆ. ಈ ಹಿಂಸಾತ್ಮಕ ಚರಿತ್ರೆಯ ಸಮಗ್ರ ಸಂಶೋಧನೆ ನಡೆಸುವುದೇ ಆದರೆ, 21ನೇ ಶತಮಾನದ ಭಾರತ ನಿಜಕ್ಕೂ ನಾಗರಿಕತೆಯನ್ನು ಮೈಗೂಡಿಸಿಕೊಂಡಿದೆಯೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಡಿಜಿಟಲ್‌ ವೈಜ್ಞಾನಿಕ ಯುಗದ ತಂತ್ರಜ್ಞಾನಗಳು ಮಾನವ ಸಮಾಜವನ್ನು ಉನ್ನತಿಗೆ ಕೊಂಡೊಯ್ಯುವುದಕ್ಕಿಂತಲೂ ಹೆಚ್ಚಾಗಿ ಮನುಷ್ಯನಲ್ಲಿನ ಹಿಂಸೆ, ಕ್ರೌರ್ಯ, ಅಸಹನೆ, ದ್ವೇಷ ಮತ್ತು ಪ್ರತೀಕಾರದ ಮನೋಧೋರಣೆಗಳನ್ನು ಈಡೇರಿಸುವ ಹೊಸ ತಂತ್ರಗಳನ್ನು ಕಲಿಸಿಕೊಟ್ಟಿವೆ.

 ಈ ರೂಪಾಂತರಗೊಂಡ ಅಪರಾಧಿಕ ಜಗತ್ತಿನ ನಡುವೆ, ಸ್ವತಂತ್ರ ನಾಗರಿಕರಾಗಿ ನಾವು ಯೋಚಿಸಬೇಕಾಗಿರುವುದು, ಈ ದುರಂತಮಯ ಸಮಾಜಕ್ಕೆ ಕಾರಣಕರ್ತರು ಯಾರು ? ಅಪರಾಧ ಶೂನ್ಯದಲ್ಲಿ ಸಂಭವಿಸುವುದಿಲ್ಲ, ಅಪರಾಧಿಗಳನ್ನು ಕಾರ್ಖಾನೆಗಳಲ್ಲಿ ತಯಾರಿಸಲಾಗುವುದಿಲ್ಲ. ಆದರೆ ಕೋಮು ಹತ್ಯೆ- ಭಯೋತ್ಪಾದನೆಯನ್ನೂ ಸೇರಿದಂತೆ ಸಂಭವಿಸುತ್ತಿರುವ ಜೀವಹರಣದ ಕೃತ್ಯಗಳು ಆಧುನಿಕ ಸಮಾಜದ ನಡುವೆಯೇ ಸಂಭವಿಸುತ್ತಿವೆ. ಎಲ್ಲ ಘಟನೆಗಳಿಗೂ ಚುನಾಯಿತ ಸರ್ಕಾರಗಳೇ ನೇರ ಕಾರಣವಾಗಲಾರದು. ಆದರೆ ರೈತರ ಆತ್ಮಹತ್ಯೆ, ನೈಸರ್ಗಿಕ ವಿಕೋಪದಂತಹ ಘಟನೆಗಳಿಗೆ ಸರ್ಕಾರದ ಅಭಿವೃದ್ಧಿ ಯೋಜನೆಗಳೂ ಒಂದು ಕಾರಣವಾಗಿರುತ್ತದೆ. ರಾಜಕೀಯ ನೆಲೆಯಲ್ಲಿ ನೋಡಿದಾಗ ನಮ್ಮ ನಡುವೆ ಸಂಭವಿಸುತ್ತಿರುವ ಸಮಾಜಘಾತುಕ-ಹಿಂಸಾತ್ಮಕ-ದ್ವೇಷಾಸೂಯೆಗಳ ಕೃತ್ಯಗಳಿಗೆ ರಾಜಕೀಯ ಪಕ್ಷಗಳು ತಮ್ಮ ಸ್ವಹಿತಾಸಕ್ತಿ-ಅಸ್ತಿತ್ವ-ಅಧಿಕಾರಕ್ಕಾಗಿ ಸಮಾಜದ ಒಂದು ವರ್ಗವನ್ನು ಪೋಷಿಸುವ, ಉತ್ತೇಜಿಸುವ ಪ್ರಕ್ರಿಯೆಯನ್ನೂ ಗುರುತಿಸಬಹುದು.

 ಉನ್ಮತ್ತ ಮನಸ್ಥಿತಿಯ ಸಮಾಜದಲ್ಲಿ

 ಭಾರತದಲ್ಲಿ ದೈವಭಕ್ತಿಯ ಉನ್ಮಾದ ಮತ್ತು ಅದರಿಂದ ಸೃಷ್ಟಿಯಾಗುವ ಸಮೂಹ ಸನ್ನಿಯ ಪರಿಣಾಮ ಸಾವಿರಾರು ಸಾವುಗಳು ಕಳೆದ ಐವತ್ತು ವರ್ಷಗಳಲ್ಲಿ ಸಂಭವಿಸಿವೆ. ಇತ್ತೀಚಿನ ಕುಂಭಮೇಳ ಒಂದು ಜ್ವಲಂತ ನಿದರ್ಶನ. ಈ ಧಾರ್ಮಿಕ ಉನ್ಮಾದ ಮತ್ತು ಸಮೂಹ ಸನ್ನಿ ಮೆಕ್ಕಾದಲ್ಲೂ 2015ರಲ್ಲಿ 2000ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿತ್ತು. 1954ರ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಕಳೆದ ಎಪ್ಪತ್ತು ವರ್ಷಗಳಲ್ಲಿ ಧಾರ್ಮಿಕ ಉತ್ಸವ-ಸಮಾರಂಭಗಳಲ್ಲಿ 2500ಕ್ಕೂ ಹೆಚ್ಚು ಜನರು ಕಾಲ್ತುಳಿತದಿಂದ ಜೀವ ಕಳೆದುಕೊಂಡಿರುವುದನ್ನು ವಿಕಿಪೀಡಿಯಾ ದಾಖಲಿಸಿದೆ. ಇತ್ತೀಚೆಗೆ ತಿರುಪತಿ ದೇವಸ್ಥಾನದಲ್ಲೂ ಕಾಲ್ತುಳಿತಕ್ಕೆ ಹಲವು ಭಕ್ತಾದಿಗಳು ಮೃತಪಟ್ಟಿದ್ದರು. ಇದರಿಂದಾಚೆಗೆ ಆಧುನಿಕ ಭಾರತದಲ್ಲಿ De Facto ದೈವತ್ವ ಪಡೆದುಕೊಂಡಿರುವ ವಾಣಿಜ್ಯ ಸಿನೆಮಾದ ಹೀರೋಗಳು ಸಹ ತಮ್ಮ ಅಭಿಮಾನ ವೃಂದದ ಅತಿರೇಕದ ಭಕ್ತಿ-ಆರಾಧನೆಯ ಫಲಾನುಭವಿಗಳಾಗಿರುತ್ತಾರೆ. ಸಿನೆಮಾಗಳ ಬಿಡುಗಡೆಯ ಸಂದರ್ಭಕ್ಕೆ ನೀಡಲಾಗುವ ಮಾಧ್ಯಮ ಪ್ರಚಾರ ಇದಕ್ಕೆ ಕಾರಣವಾಗುತ್ತದೆ.

  ಸಿನೆಮಾ ಹೀರೋಗಳನ್ನು ದೈವೀಕವಾಗಿಸಿ ಅವರಿಗೆ ಕ್ಷೀರಾಭಿಷೇಕದಿಂದ ಹಿಡಿದು ಪೂಜಾರಾಧನೆ ಮಾಡುವವರೆಗೂ ವಿಸ್ತರಿಸುವ ಸಮೂಹ ಸನ್ನಿಗೆ ಮಿಲೆನಿಯಂ ಮಕ್ಕಳೂ ಸೇರಿದಂತೆ ಯುವ ಸಮೂಹ ಬಲಿಯಾಗಿರುವುದು ವಾಸ್ತವ. ಇಂತಹ ಸಾಮಾಜಿಕ ದುರ್ವ್ಯಸನದಿಂದ ದೂರ ಇರುವಂತೆ ಯಾವ ನಾಯಕ ನಟರೂ ವಿನಂತಿಸಿಕೊಳ್ಳುವುದಿಲ್ಲ. ಡಾ. ರಾಜ್‌ಕುಮಾರ್‌ ಪದೇ ಪದೇ ಹೀಗೆ ಹೇಳುತ್ತಿದ್ದರು. ಏಕೆಂದರೆ ಈ ಹೀರೋಗಳಿಗೆ ಈಗ ಅಂತಾರಾಷ್ಟ್ರೀಯ ಮಾರುಕಟ್ಟೆ ಇದೆ, ಅದರ ಹಿಂದೆ ಜಾಗತಿಕ ಕಾರ್ಪೋರೇಟ್‌ ಬಂಡವಾಳ ಮತ್ತು ಮಾರುಕಟ್ಟೆ ಇದೆ. ಇತ್ತೀಚೆಗೆ ತೆಲುಗು ನಟ ಅಲ್ಲೂ ಅರ್ಜುನ್‌ ಅವರ ಚಿತ್ರದ ಬಿಡುಗಡೆಯ ಸಮಯದಲ್ಲೇ ದುರಂತ ಸಂಭವಿಸಿತ್ತು. ಈ ಸಾಮಾಜಿಕ ವಿಕೃತಿಗಳಿಗೆ ಈಗ ಐಪಿಎಲ್‌ ಎಂಬ ಜೂಜಾಟ ಕ್ರಿಕೆಟ್‌ ಸ್ಪರ್ಶವನ್ನೂ ನೀಡಿದೆ. ಅದರ ಒಂದು ಆಯಾಮವನ್ನು ಚಿನ್ನಸ್ವಾಮಿ ಕ್ರೀಡಾಂಗಣದ ದುರಂತ ಎತ್ತಿತೋರಿಸಿದೆ.

 ಮತ್ತೊಂದೆಡೆ ಸಾಂಸ್ಕೃತಿಕ ರಾಜಕಾರಣದ ಭಾಗವಾಗಿ ಪೋಷಿಸಲ್ಪಡುತ್ತಿರುವ ಮತೀಯವಾದ, ಕೋಮುವಾದ ದೇಶಾದ್ಯಂತ ಸೃಷ್ಟಿಸಿರುವ ಮತಾಂಧತೆ ಮತ್ತು ಮತಶ್ರೇಷ್ಠತೆಯ ವ್ಯಸನ ಎಲ್ಲ ಧಾರ್ಮಿಕ ನೆಲೆಗಳಲ್ಲೂ ಗುರುತಿಸಬಹುದು. ಜಾತಿ ರಾಜಕಾರಣದ ಬೇರುಗಳು ಸಮಾಜದಲ್ಲಿ ಗಟ್ಟಿಗೊಳಿಸುತ್ತಿರುವ ಜಾತ್ಯಾಂಧತೆ ಮತ್ತು ಜಾತಿ ಶ್ರೇಷ್ಠತೆಯ ಪರಿಣಾಮವಾಗಿ ಶೋಷಿತ ಸಮುದಾಯಗಳು ನಿರಂತರ ದೌರ್ಜನ್ಯಕ್ಕೊಳಗಾಗುತ್ತಿವೆ. ಈ ವಾತಾವರಣದಲ್ಲೇ ರಕ್ಷಿಸಿ-ಸಲಹಲಾಗುತ್ತಿರುವ ಪಿತೃಪ್ರಧಾನ ಮೌಲ್ಯಗಳು ಮಹಿಳಾ ದೌರ್ಜನ್ಯಗಳಿಗೆ ಅಧಿಕೃತ ಮಾನ್ಯತೆ ನೀಡುವ ಮೊಹರುಗಳಾಗಿ ಪರಿಣಮಿಸುತ್ತವೆ. ಆಧುನಿಕೀಕರಣಗೊಂಡ ನಾಗರಿಕ ಪ್ರಪಂಚವೊಂದು ಎಲ್ಲ ರೀತಿಯ ಅಮಾನುಷತೆ, ಹಿಂಸೆ-ದೌರ್ಜನ್ಯ-ಕ್ರೌರ್ಯ ಮತ್ತು ಶೋಷಣೆಗಳಿಂದ ಮುಕ್ತವಾದಾಗ ಮಾತ್ರ ಆ ಸಮಾಜ ಉನ್ನತೀಕರಣದ ಹಾದಿಯಲ್ಲಿದೆ ಎಂದರ್ಥ ಅಲ್ಲವೇ ?

 ಜವಾಬ್ದಾರಿ ಮತ್ತು ಉತ್ತರದಾಯಿತ್ವ

 ಆದರೆ ಭಾರತ ಇದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದೆ. ಈ ನಡುವೆಯೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ 11 ಜನರು ಸಾವನ್ನಪ್ಪಿರುವುದು ರಾಜ್ಯವನ್ನು ತಲ್ಲಣಗೊಳಿಸಿದೆ. ಐಪಿಎಲ್‌ ಪಂದ್ಯಾವಳಿಯಲ್ಲಿ 18 ವರ್ಷಗಳ ನಂತರ ಪ್ರಶಸ್ತಿ ಪಡೆದ ಆರ್‌ಸಿಬಿ ತಂಡವನ್ನು ಸನ್ಮಾನಿಸುವ ರಾಜ್ಯ ಸರ್ಕಾರದ ತವಕ ಮತ್ತು ಆತುರದ ನಡೆ, ಪೂರ್ವಸಿದ್ಧತೆಗಳಿಲ್ಲದೆಯೇ ಏರ್ಪಡಿಸಲಾದ ಸಾರ್ವಜನಿಕ ಕಾರ್ಯಕ್ರಮ ಈ ದುರ್ಘಟನೆಗೆ ಕಾರಣವಾಗಿದೆ. ರಾಜ್ಯ ಸರ್ಕಾರ ತನ್ನ ತಪ್ಪನ್ನು ಒಪ್ಪಿಕೊಳ್ಳದೆ , ದುರ್ಘಟನೆಯ ಜವಾಬ್ದಾರಿಯನ್ನು ಪೊಲೀಸ್‌ ಇಲಾಖೆಯ ಹೆಗಲಿಗೇರಿಸಿ ಹಲವು ಅಧಿಕಾರಿಗಳನ್ನು ಅಮಾನತು ಮಾಡಿದೆ. ಪೂರ್ವಾನುಮತಿ ಇಲ್ಲದೆಯೇ ಕಾರ್ಪೋರೇಟ್‌ ಉದ್ದಿಮೆಯೊಂದು ಇಂತಹ ಕಾರ್ಯಕ್ರಮವನ್ನು ಆಯೋಜಿಸಿ ದುರ್ಘಟನೆಗೆ ಕಾರಣವಾಗಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯದ ಸ್ಪಷ್ಟ ಸಂದೇಶವನ್ನು ನೀಡುತ್ತದೆ ಅಲ್ಲವೇ ?

 ಈ ಎಲ್ಲ ದುರಂತಗಳಿಗೂ ಸರ್ಕಾರಗಳನ್ನು ನೇರ ಹೊಣೆ ಮಾಡಲಾಗುವುದಿಲ್ಲ ಎನ್ನುವುದು ವಾಸ್ತವ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಸಾಮಾಜಿಕ-ಸಾಂಸ್ಕೃತಿಕ-ಧಾರ್ಮಿಕ ಹಾಗೂ ಈಗ ಕ್ರಿಕೆಟ್‌ ಎಂಬ ಮಾರುಕಟ್ಟೆ ಕೇಂದ್ರಿತ ಕ್ರೀಡೆ, ನಡೆಯುವಾಗ ಸೂಕ್ತ ಕಾನೂನು ಬಂದೋಬಸ್ತ್‌ ಮಾಡುವುದು ಆಡಳಿತಾರೂಢ ಪಕ್ಷಗಳ ಜವಾಬ್ದಾರಿಯಾಗಿರುತ್ತದೆ. ಆಡಳಿತ ಜವಾಬ್ದಾರಿ ಮತ್ತು ಆಳ್ವಿಕೆಯ ಉತ್ತರದಾಯಿತ್ವ ಇವೆರಡೂ ಸಹ ಬೇರ್ಪಡಿಸಬಾರದ/ಬೇರ್ಪಡಿಸಲಾಗದ ಅಂಶಗಳು. ಉತ್ತರದಾಯಿತ್ವ ಇಲ್ಲದ ಜವಾಬ್ದಾರಿ ಕೇವಲ ತೋರಿಕೆಯಾಗುತ್ತದೆ. ಸಾಂವಿಧಾನಿಕವಾಗಿ ಇದು ಅಪೇಕ್ಷಿತವಾಗಲಾರದು. ಸರ್ಕಾರ ಯಾವುದೇ ಪಕ್ಷದಿಂದ ರಚನೆಯಾದರೂ, ಸಾಮಾಜಿಕ ಶಾಂತಿ, ಸೌಹಾರ್ದತೆ ಮತ್ತು ಸಮನ್ವಯವನ್ನು ಕಾಪಾಡುವುದು ಅವುಗಳ ಕರ್ತವ್ಯ. ಇದಕ್ಕೆ ಸಾಂವಿಧಾನಿಕ ನೈತಿಕತೆ ಮತ್ತು ಆಡಳಿತಾತ್ಮಕ ಉತ್ತರದಾಯಿತ್ವದ ಪ್ರಜ್ಞೆ ಮುಖ್ಯವಾಗುತ್ತದೆ. ಭಾರತದ ರಾಜಕೀಯ ಪಕ್ಷಗಳಲ್ಲಿ ಈ ಎರಡೂ ಮೌಲ್ಯಗಳು ನಶಿಸಿಹೋಗುತ್ತಿರುವುದು ದುರಂತವಾದರೂ ವಾಸ್ತವ.

 ರಾಜೀನಾಮೆಗೆ ಒತ್ತಾಯಿಸುವ ಚಟ

 ಈ ಹಿನ್ನೆಲೆಯಲ್ಲಿ ಗಮನಿಸಬೇಕಿರುವುದು ಕರ್ನಾಟಕದ ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್‌ ನಾಯಕರಿಂದ ಮುಖ್ಯಮಂತ್ರಿ-ಉಪಮುಖ್ಯಮಂತ್ರಿಯ ರಾಜೀನಾಮೆಯ ಆಗ್ರಹ. ಸಿದ್ಧರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ಒತ್ತಾಯಿಸಿ ಬಿಜೆಪಿ ಅಭಿಯಾನವನ್ನೇ ಹಮ್ಮಿಕೊಂಡಿದೆ. ಕಳೆದ ಎರಡು ವರ್ಷಗಳಲ್ಲಿ ಬಿಜೆಪಿಗೆ ಈ ಸರ್ಕಾರ-ಸಿದ್ಧರಾಮಯ್ಯನವರ ರಾಜೀನಾಮೆಗಾಗಿ ಆಗ್ರಹಿಸುವುದು ಒಂದು ಚಟವಾಗಿ ಪರಿಣಮಿಸಿದೆ. ಆದರೆ ಎಂತಹುದೇ ಸಮಾಜಘಾತುಕ ವಿಕೃತ ಘಟನೆಯಾದರೂ, ಮಾನವ ನಿರ್ಮಿತ ನಿಸರ್ಗ ದುರಂತವಾದರೂ ಅದರಿಂದ ಬಲಿಯಾಗುವ ಜೀವಗಳಿಗೆ ಜವಾಬ್ದಾರರರು ಯಾರು ಎಂಬ ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರಿಸಿ, ನೈತಿಕ ಜವಾಬ್ದಾರಿ ಹೊರುವ ಮನೋಭಾವ ಯಾವ ರಾಜಕೀಯ ಪಕ್ಷಗಳಲ್ಲೂ ಉಳಿದಿಲ್ಲ ಎನ್ನುವುದು ಸಮಕಾಲೀನ ಭಾರತ ನಿರೂಪಿಸಿರುವ ಕಟು ಸತ್ಯ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಆಳ್ವಿಕೆಯಲ್ಲಿರುವ ಸಚಿವರು, ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳು ತಮ್ಮ ಉತ್ತರದಾಯಿತ್ವವನ್ನು ಒಪ್ಪಿಕೊಂಡು, ಅವಘಡಗಳು ಸಂಭವಿಸಿದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿರುವ ಪ್ರಸಂಗಗಳು ಬೆರಳೆಣಿಕೆಯಷ್ಟು. 3000ಕ್ಕೂ ಹೆಚ್ಚು ಜನರನ್ನು ಬಲಿಪಡೆದ1984ರ ಸಿಖ್‌ ವಿರೋಧಿ ದಂಗೆಗಳ ಪ್ರಕರಣದಲ್ಲಿ 20 ವರ್ಷಗಳ ತನಿಖಾ ಆಯೋಗದ ವರದಿಯ ನಂತರ ಕಾಂಗ್ರೆಸ್‌ ಸಚಿವ ಜಗದೀಶ್ ಟೈಟ್ಲರ್‌ ರಾಜೀನಾಮೆ ನೀಡಿದ್ದರು. 2008ರ ಮುಂಬೈ ದಾಳಿ ಸಂಭವಿಸಿದಾಗ ಗೃಹ ಸಚಿವ ಶಿವರಾಜ್ ಪಾಟೀಲ್‌ ಕೂಡಲೇ ರಾಜೀನಾಮೆ ಸಲ್ಲಿಸಿದ್ದರು. ಕರ್ನಾಟಕದಲ್ಲಿ ಈಗ ನಶಿಸಿಹೋಗಿರುವ ಮೌಲ್ಯಾಧಾರಿತ ರಾಜಕಾರಣದ ರೂವಾರಿ ರಾಮಕೃಷ್ಣ ಹೆಗ್ಡೆ ತಮ್ಮ ವಿರುದ್ಧ ಫೋನ್‌ ಕದ್ದಾಲಿಕೆ ಆರೋಪ ಬಂದಾಗ ರಾಜೀನಾಮೆ ನೀಡಿದ್ದರು. ಬಹಳ ಹಿಂದೆ ಹೋದರೆ ಲಾಲ್‌ ಬಹದ್ದೂರ್‌ ಶಾಸ್ತ್ರಿ ರೈಲ್ವೆ ಸಚಿವರಾಗಿದ್ದಾಗ ಒಂದು ಅಪಘಾತ ಸಂಭವಿಸಿದ ಕಾರಣಕ್ಕೆ ಸಚಿವ ಸ್ಥಾನ ತೊರೆದಿದ್ದರು.

 ಇನ್ನುಳಿದಂತೆ ಭಾರತ ಕಂಡಿರುವ ಅತ್ಯಂತ ಭೀಕರ ಕೋಮು ಸಂಘರ್ಷ, ಮತಾಂಧರ ದಾಳಿ, ಮೋರ್ಬಿ ಸೇತುವೆಯಂತಹ ಸರ್ಕಾರಿ ಕಾಮಗಾರಿಯ ದುರಂತ, ಧಾರ್ಮಿಕ ಉತ್ಸವಗಳ ದುರಂತಗಳು ಈ ಯಾವುದೇ ಸಂದರ್ಭಗಳಲ್ಲೂ ಯಾವ ಸಚಿವರೂ “ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ ” ನಿದರ್ಶನಗಳಿಲ್ಲ. ಕರ್ನಾಟಕದಲ್ಲೇ ಬಾಗೂರು ನವಿಲೆ ಕಾಲುವೆ ನಿರ್ಮಾಣದ ಸಂದರ್ಭದಲ್ಲಿ ಹಾಸನ ಸುತ್ತಮುತ್ತಲಿನ ರೈತರ ಮೇಲಿನ ದೌರ್ಜನ್ಯಗಳಿಗಾಗಲೀ, ಡಾ ರಾಜ್‌ಕುಮಾರ್‌ ಅವರ ಮೃತದೇಹದ ಮೆರವಣಿಗೆಯಲ್ಲಿ ಸಂಭವಿಸಿದ ಸಾವುಗಳಿಗಾಗಲೀ, ಕಾವೇರಿ ಗಲಭೆಗಳಿಗಾಗಲಿ, 1980ರ ನರಗುಂದ ಬಂಡಾಯದಲ್ಲಿ ರೈತರ ಹತ್ಯೆಯಾದ ಘಟನೆಯಲ್ಲಾಗಲೀ, ಯಾವ ಮುಖ್ಯಮಂತ್ರಿಯೂ, ಯಾವ ಸಚಿವರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದ ನಿದರ್ಶನಗಳು ನಮ್ಮ ಮುಂದಿಲ್ಲ. ಹಾಗೆ ಸರ್ಕಾರಗಳ ನಿರ್ಲಕ್ಷ್ಯದಿಂದ ಸಾರ್ವಜನಿಕ ಜೀವನದಲ್ಲಿ ಅಮಾಯಕ ಜೀವಗಳು ಬಲಿಯಾದಾಗಲೆಲ್ಲಾ, ಆಳ್ವಿಕೆಯ ವಾರಸುದಾರರು ʼ ನೈತಿಕ ಹೊಣೆ ಹೊತ್ತು ʼ ರಾಜೀನಾಮೆ ನೀಡುವುದೇ ಆದರೆ, ಬಹುಶಃ ವರ್ತಮಾನ ಭಾರತದ ಯಾವ ರಾಜಕೀಯ ಪಕ್ಷವೂ ಅಧಿಕಾರಕ್ಕೆ ಅರ್ಹವಾಗುವುದಿಲ್ಲ. .

 ಆದಾಗ್ಯೂ ಸ್ಪಷ್ಟ ಬಹುಮತ ಪಡೆದಿರುವ ಸರ್ಕಾರವನ್ನು ಪದಚ್ಯುತಗೊಳಿಸುವುದಕ್ಕೆ ಅವಕಾಶಗಳನ್ನು ಕಾಯುವ ಒಂದು ರಾಜಕೀಯ ಪರಂಪರೆ ದೇಶದಲ್ಲಿ ವ್ಯವಸ್ಥಿತವಾಗಿ ಜಾರಿಯಲ್ಲಿದೆ. ಕರ್ನಾಟಕದ ವಿರೋಧ ಪಕ್ಷಗಳೂ ಇದನ್ನೇ ಅನುಸರಿಸುತ್ತವೆ. ಹಾಗಾಗಿ ಸಿದ್ಧರಾಮಯ್ಯ-ಡಿ ಕೆ ಶಿವಕುಮಾರ್‌ ಅವರ ರಾಜೀನಾಮೆಗಾಗಿ ಆಗ್ರಹಿಸುತ್ತಿವೆ. ಆದರೆ ಈ ಮಟ್ಟದ ನೈತಿಕತೆ ಭಾರತದ ರಾಜಕಾರಣದಲ್ಲಿ ಉಳಿದಿಲ್ಲ ಎನ್ನುವುದು ಅವರದೇ ಸರ್ಕಾರಗಳು ಇದ್ದಾಗಲೂ ನಿರೂಪಿತವಾಗಿದೆ. ಈ ರಾಜೀನಾಮೆಗಾಗಿ ಆಗ್ರಹಿಸುವುದನ್ನು ಒಂದು ಚಟವಾಗಿ ರೂಢಿಸಿಕೊಳ್ಳುವುದರ ಬದಲು, ಅಧಿಕಾರ ರಾಜಕಾರಣದಲ್ಲಿ ʼ ಉತ್ತರದಾಯಿತ್ವ ʼದ ಮೌಲ್ಯಗಳನ್ನು ಪುನರ್‌ ಸ್ಥಾಪಿಸುವ ನಿಟ್ಟಿನಲ್ಲಿ ಯೋಚಿಸಬೇಕಿದೆ. ಪ್ರಸ್ತುತ ಸಂದರ್ಭದಲ್ಲಿ ಇದು ಉತ್ಪ್ರೇಕ್ಷಿತ ನಿರೀಕ್ಷೆಯಾಗಿ ಕಾಣುವುದಾದರೂ ಭವಿಷ್ಯದ ದೃಷ್ಟಿಯಿಂದ ರಾಜಕೀಯ ಪಕ್ಷಗಳಲ್ಲಿ ಇದು ಆತ್ಮಾವಲೋಕನದ ಪ್ರಶ್ನೆಯಾಗಬೇಕಿದೆ.

 ಸಂವಿಧಾನ ರಕ್ಷಣೆಯ ಘೋಷಣೆಯ ನಡುವೆ

 ಆದರೆ ಸಾಂವಿಧಾನಿಕ ಮೌಲ್ಯಗಳನ್ನು, ಪ್ರಜಾಪ್ರಭುತ್ವವನ್ನು ಸಂರಕ್ಷಿಸಲು ದೇಶಾದ್ಯಂತ ನಿರಂತರ ಹೋರಾಟಗಳು ನಡೆಯುತ್ತಿರುವ ಸಂದರ್ಭದಲ್ಲಿ ಆಳ್ವಿಕೆಯ ಜವಾಬ್ದಾರಿ ಮತ್ತು ಆಳುವವರ ಉತ್ತರದಾಯಿತ್ವದ ಪ್ರಶ್ನೆಯನ್ನು ತಳಸಮಾಜದವರೆಗೂ ಕೊಂಡೊಯ್ದಾಗ, ಜನಸಾಮಾನ್ಯರಲ್ಲಿ ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸ ಇಮ್ಮಡಿಯಾಗುತ್ತದೆ. ತಮ್ಮ ಸರ್ಕಾರವಿದ್ದಾಗ ನಡೆಯುವ ದುರ್ಘಟನೆಗಳಿಗೆ Law will take its own course (ಕಾನೂನು ಪ್ರಕ್ರಿಯೆ ತನ್ನದೇ ಆದ ರೀತಿಯಲ್ಲಿ ನಿಭಾಯಿಸುತ್ತದೆ ) ಎಂಬ ಕಾರಣ ನೀಡುವ ಪಕ್ಷಗಳೇ, ವಿರೋಧ ಪಕ್ಷಗಳಾಗಿದ್ದಾಗ ಚುನಾಯಿತ ಸರ್ಕಾರ ಅಥವಾ ಮುಖ್ಯಮಂತ್ರಿಗಳು “ ನೈತಿಕ ಹೊಣೆ ಹೊತ್ತು ” ರಾಜೀನಾಮೆ ನೀಡಲು ಆಗ್ರಹಿಸುವುದು Hypocracy ಎನಿಸುವುದಿಲ್ಲವೇ ? ರಾಜಕೀಯ ಪಕ್ಷಗಳ, ನಾಯಕರ ಈ ದ್ವಂದ್ವ-ದ್ವಿಮುಖ ನೀತಿಯನ್ನು ನೈತಿಕತೆಯ ನೆಲೆಯಲ್ಲೇ ಪ್ರಶ್ನಿಸಬೇಕಿದೆ.  “ ಜವಾಬ್ದಾರಿ ಮತ್ತು ಉತ್ತರದಾಯಿತ್ವ ” ಇದನ್ನು ಪ್ರತ್ಯೇಕಿಸಿ ನೋಡುವುದು ಅನುಕೂಲಸಿಂಧು ರಾಜಕೀಯಕ್ಕೆ ಅಡಿಪಾಯವಾಗುತ್ತದೆ. ಈ ಆರೋಪಕ್ಕೆ ಯಾವ ಪಕ್ಷವೂ ಹೊರತಾದುದಲ್ಲ ಎನ್ನುವುದು ವಾಸ್ತವ.

 ಇದು ಸಾಕಾರಗೊಳ್ಳಬೇಕಾದರೆ ರಾಜಕೀಯ  ನಾಯಕರಲ್ಲಿ, ಪಕ್ಷಗಳಲ್ಲಿ ಡಾ. ಅಂಬೇಡ್ಕರ್‌ ಪ್ರತಿಪಾದಿಸಿದ, ಸಾಂವಿಧಾನಿಕ ನೈತಿಕತೆಯ ಪ್ರಜ್ಞೆ ಉಂಟಾಗಬೇಕು, ಆಳ್ವಿಕೆಯ ಜವಾಬ್ದಾರಿ ಮತ್ತು ನೈತಿಕ ಹೊಣೆ ಹೊರುವ ಉತ್ತರದಾಯಿತ್ವದ ಪ್ರಜ್ಞೆ ಬೇರೂರಬೇಕು. ಸಂವಿಧಾನ ಸಂರಕ್ಷಣೆಗಾಗಿ ಅಹರ್ನಿಶಿ ಹೋರಾಡುತ್ತಿರುವ ನೂರಾರು ಸಂಘಟನೆಗಳು ಇದನ್ನೇ ಮುಖ್ಯ ಕಾರ್ಯಸೂಚಿಯನ್ನಾಗಿಸಿಕೊಂಡು, ಗ್ರಾಮ ಪಂಚಾಯತ್‌ನಿಂದ ಸಂಸತ್ತಿನವರೆಗೂ ವಿಸ್ತರಿಸಿದರೆ, ರಾಜಕೀಯ ಪಕ್ಷಗಳಲ್ಲಿ ಈ ಪ್ರಜ್ಞೆ ಕೊಂಚ ಮಟ್ಟಿಗಾದರೂ ಮೂಡುವ ಸಾಧ್ಯತೆಗಳು ಇರುತ್ತವೆ. ಬೇಕೋ ಬೇಡವೋ ಈಗ ಇದು ಸಾರ್ವಜನಿಕರ ಜವಾಬ್ದಾರಿಯಾಗಿದೆ. ಇದನ್ನು ನಿಭಾಯಿಸುವ ವಿಧಾನಗಳ ಬಗ್ಗೆ ಪ್ರಗತಿಪರ ಸಂಘಟನೆಗಳು, ಹೋರಾಟ ನಿರತ ನಾಗರಿಕ ಸಮಾಜದ ಸಂಸ್ಥೆ-ಸಂಘಟನೆಗಳು ಗಂಭೀರವಾಗಿ ಯೋಚಿಸಬೇಕಿದೆ.. ಸ್ವಾತಂತ್ರ್ಯಪೂರ್ವ ಚರಿತ್ರೆಯಲ್ಲಿ ಹುದುಗಿರುವ ನಮ್ಮ ಅಂತರ್‌ ಪ್ರಜ್ಞೆಯನ್ನು ವರ್‌ತಮಾನಕ್ಕೆ ಎಳೆದು ತಂದು ಆತ್ಮಾವಲೋಕನಕ್ಕೆ ತೆರೆದುಕೊಳ್ಳುವುದು ವರ್ತಮಾನ ಭಾರತದ ತುರ್ತು – ಭವಿಷ್ಯ ಭಾರತದ ಅವಶ್ಯಕತೆ.

#watch ಸಿದ್ದು-ಡಿಕೆಶಿ ರಾಜಿನಾಮೆಗೆ ಹೈಕಮಾಂಡ್‌ ಸೂಚಿಸಿದ್ರಾ..!? #pratidhvani #siddaramaiah #dkshivakumar

-೦-೦-೦-

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಜಾತಿಗಣತಿ ಅಪಸ್ವರ, ಗೊಂದಲ ಬಗೆಹರಿಸಲು ಮತ್ತೊಮ್ಮೆ ಅವಕಾಶ: ಡಿಸಿಎಂ ಡಿ.ಕೆ. ಶಿವಕುಮಾರ್

Next Post

ಲಿಂಗಾಯತ & ಒಕ್ಕಲಿಗ ನಾಯಕರ ಒತ್ತಡಕ್ಕೆ ಮಣಿದ ಸರ್ಕಾರ – ಮರು ಜಾತಿಗಣತಿ ನಡೆಸಲು ಹೈ ಸೂಚನೆ !

Related Posts

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .
Top Story

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

by ಪ್ರತಿಧ್ವನಿ
June 18, 2025
0

ಪ್ರಮುಖಪಾತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ, "ಬಿಗ್ ಬಾಸ್" ಖ್ಯಾತಿಯ ತನಿಷಾ ಕುಪ್ಪಂಡ ಹಾಗೂ ಕಿಶನ್ ನಟನೆ . ಆರ್ ಹೆಚ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಎನ್ ಹನುಮಂತರಾಜು...

Read moreDetails
ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

June 18, 2025

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

June 18, 2025
Next Post
ಲಿಂಗಾಯತ & ಒಕ್ಕಲಿಗ ನಾಯಕರ ಒತ್ತಡಕ್ಕೆ ಮಣಿದ ಸರ್ಕಾರ – ಮರು ಜಾತಿಗಣತಿ ನಡೆಸಲು ಹೈ ಸೂಚನೆ !

ಲಿಂಗಾಯತ & ಒಕ್ಕಲಿಗ ನಾಯಕರ ಒತ್ತಡಕ್ಕೆ ಮಣಿದ ಸರ್ಕಾರ - ಮರು ಜಾತಿಗಣತಿ ನಡೆಸಲು ಹೈ ಸೂಚನೆ !

Recent News

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .
Top Story

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

by ಪ್ರತಿಧ್ವನಿ
June 18, 2025
ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
Top Story

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

by ಪ್ರತಿಧ್ವನಿ
June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ
Top Story

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

by ಪ್ರತಿಧ್ವನಿ
June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ
Top Story

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

by ಪ್ರತಿಧ್ವನಿ
June 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

June 18, 2025
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

June 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada