ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾರ್ಜ್ಶೀಟ್ ಸಲ್ಲಿಕೆ ಆದ ಬೆನ್ನಲ್ಲೇ ನಟ ಪ್ರೇಮ್ ನೀಡಿರುವ ಹೇಳಿಕೆ ಸದ್ದು ಮಾಡುತ್ತಿದೆ. ರೇಣುಕಾಸ್ವಾಮಿ ಮಾಡಿದ್ದು ಒಳ್ಳೆಯ ಕೆಲಸ ಅಲ್ಲ ಎಂದು ದರ್ಶನ್ ಪರ ಪ್ರೇಮ್ ಮಾಧ್ಯಮದೊಂದಿಗೆ ಮಾತನಾಡಿದರು.
ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ನಟ ಪ್ರೇಮ್, ಈ ಪ್ರಕರಣದಿಂದ ದರ್ಶನ್ ಬೇಗ ಆಚೆ ಬರಲಿ ಎಂದರು. ಅವರು ಕಾಮನ್ ಮ್ಯಾನ್ ಅಲ್ಲ. ಇಂಡಸ್ಟ್ರಿಗೆ ದರ್ಶನ್ ಅವರ ಕೊಡುಗೆ ತುಂಬಾ ಇದೆ. ಅವರ ಮೇಲೆ ನಿರ್ಮಾಪಕರು ಕೋಟಿಗಟ್ಟಲೇ ಬಂಡವಾಳ ಹೂಡಿಕೆ ಮಾಡಿದ್ದಾರೆ. ಕನ್ನಡ ಇಂಡಸ್ಟ್ರಿಯಲ್ಲಿ ಇರುವ ಸೂಪರ್ ಸ್ಟಾರ್ಗಳಲ್ಲಿ ದರ್ಶನ್ ಕೂಡ ಒಬ್ಬರು. ಹಾಗಾಗಿ ಚಿತ್ರಮಂದಿರದಲ್ಲಿ ಜನ ತುಂಬೋ ಅಂತದ್ದು ಆಗಿರಬಹುದು. ಯಾವುದೇ ವಿಚಾರ ಆಗಿದ್ರು ಯಾವಾಗಲೂ ಅವರು ಉನ್ನತ ಸ್ಥಾನದಲ್ಲಿ ಇದ್ದರು. ಈ ಕೇಸ್ ಏನಾಗಿದೆ ಅಂತ ಗೊತ್ತಿಲ್ಲ. ಅದು ಏನೇ ಆಗಿರಲಿ ಅವರು ನಿರಪರಾಧಿಯಾಗಿ ಆಚೆ ಬರಲಿ. ಅವರಿಗೆ ಬೇಗ ಬೇಲ್ ಸಿಗಲಿ ಎಂದು ಹೇಳಿದರು.
ಫೋಟೋಗಳ ಬಗ್ಗೆ ಗೊತ್ತಿಲ್ಲ. ಸದ್ಯ ಈ ಕೇಸ್ ಕಾನೂನಿನ ಚೌಕಟ್ಟಿನಲ್ಲಿದೆ. ಇದರ ಬಗ್ಗೆ ನಾವೇನು ಮಾತನಾಡೋಕೆ ಆಗಲ್ಲ. ರೇಣುಕಾಸ್ವಾಮಿ ಕುಟುಂಬದ ಬಗ್ಗೆ ನಮಗೂ ನೋವಿದೆ. ಆದರೆ ರೇಣುಕಾಸ್ವಾಮಿ ಮಾಡಿದ್ದು ಒಳ್ಳೆಯ ಕೆಲಸ ಅಲ್ಲ. ದರ್ಶನ್ ಸಾಯಿಸಿದ್ದಾರೆ ಅನ್ನೋದು ಎಲ್ಲೂ ಪ್ರೂವ್ ಆಗಿಲ್ಲ ಎಂದಿದ್ದಾರೆ. ರೇಣುಕಾಸ್ವಾಮಿ ಮಾಡಿರುವ ಅಶ್ಲೀಲ ಮೆಸೇಜ್ಗಳು ಸರಿ ಇದೆಯಾ ಎಂದು ಪ್ರೇಮ್ ಪ್ರಶ್ನೆ ಮಾಡಿದ್ದಾರೆ.