ಭಾರತದ ದಲಿತ ಮುಸ್ಲಿಮ್ ಮತ್ತು ದಲಿತ ಕ್ರೈಸ್ತರನ್ನು ಪರಿಶಿಷ್ಟ ಜಾತಿಗೆ ಸೇರಿಸಿಸಬೇಕೆಂಬ ಬೇಡಿಕೆಯು ತುಂಬಾ ಹಳೆಯದು. ಈ ಸಂಗತಿಯು ಇಲ್ಲಿಯವರೆಗೆ ಕೇವಲ ಶೈಕ್ಷಣಿಕ ಚರ್ಚೆಗಳಿಗೆ ಮಾತ್ರ ಸೀಮಿತವಾಗಿತ್ತು. ಅನೇಕ ವರ್ಷಗಳ ನಂತರ, ದಲಿತ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಪರಿಶಿಷ್ಟರ ಸ್ಥಾನಮಾನದ ನಿರೀಕ್ಷೆಯು ಇದ್ದಕ್ಕಿದ್ದಂತೆ ನಿಜವಾಗುವಂತೆ ಭಾಸವಾಗುತ್ತಿದೆ. ಇದೇ ಅಕ್ಟೋಬರ್ ೮ ರಂದು ಕೆ.ಜಿ.ಬಾಲಕೃಷ್ಣನ್ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಆಯೋಗವೊಂದನ್ನು ನೇಮಿಸಿರುವ ಸುದ್ದಿ ಹೆಚ್ಚು ಈಗ ಪ್ರಚಾರ ಪಡೆದುಕೊಂಡಿದೆ. ಆದಾಗ್ಯೂ, ಸರಕಾರ ಸ್ವಯಂಪ್ರೇರಿತವಾಗಿ ಈ ಕುರಿತು ಆಯೋಗವನ್ನು ನೇಮಿಸಲಿಲ್ಲ. ಈ ಪ್ರಕರಣವು ನ್ಯಾಯಾಲಯಲ್ಲಿದ್ದು ಸರ್ವೋಚ್ಛ ನ್ಯಾಯಾಲಯದ ಪ್ರಶ್ನೆಗೆ ಪ್ರತಿಕ್ರೀಯೆಯಾಗಿ ಸರಕಾರ ಆಯೋಗವನ್ನು ನೇಮಿಸಿದೆ. ಈಗ ಸರಕಾರ ದಲಿತ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಪರಿಶಿಷ್ಟರ ಸ್ಥಾನಮಾನ ನೀಡಲು ಆಗುವುದಿಲ್ಲವೆಂದು ನ್ಯಾಯಾಲಯಕ್ಕೆ ಲಿಖಿತ ಮುಚ್ಚಳಿಕೆ ಸಲ್ಲಿಸಿದೆ.
ಆಗಸ್ಟ್ ೩೦ ರಂದು ಸರ್ವೋಚ್ಛ ನ್ಯಾಯಾಲಯವು ಎಂ ಇಜಾಜ್ ಅಲಿ Vs ಒಕ್ಕೂಟ ಸರಕಾರ ಪ್ರಕರಣದ ಜೊತೆಗೆ ದಲಿತ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಪರಿಶಿಷ್ಟರ ಸ್ಥಾನಮಾನ ನೀಡುವ ಬೇಡಿಕೆ ಕುರಿತ ಇನ್ನೊಂದಷ್ಟು ಗುಂಪುಗಳ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಪ್ರಕರಣಗಳನ್ನು ಪಟ್ಟಿ ಮಾಡಿದೆ. ಇವುಗಳಲ್ಲಿ ಸುಮಾರು ಕೇಸುಗಳು ೨೦೦೪ ಕ್ಕಿಂತ ಮೊದಲಿನವು ಎನ್ನಲಾಗುತ್ತಿದೆ. ಪರಿಶಿಷ್ಟರ ಸ್ಥಾನಮಾನದ ನಿರೀಕ್ಷೆಯು ದಲಿತ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಹೊಸ ಭರವಸೆಯನ್ನು ತರಬಲ್ಲದು, ಏಕೆಂದರೆ ಇದು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಪಡೆಯಲು ಆ ವರ್ಗಗಳಿಗೆ ಅವಕಾಶ ಕಲ್ಪಿಸುತ್ತದೆ. ಆದರೆˌ ಇದಕ್ಕೆ ಹಲವಾರು ಅಡಚಣಿಗಳುˌ ನಿರಾಕರಣೆ ಮತ್ತು ವಿರೋಧಗಳು ಕೂಡ ಕಂಡುಬರುತ್ತಿದೆ.
ಆಶ್ಚರ್ಯವೆಂದರೆ ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವುದಾಗಿ ಹೇಳಿಕೊಂಡಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಈ ಬೇಡಿಕೆಯ ಕುರಿತು ದಿವ್ಯ ಮೌನ ತಾಳಿವೆ. ದಲಿತ ಮತ್ತು ಆದಿವಾಸಿ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟದ ಮುಖಂಡ ಅಶೋಕ್ ಭಾರ್ತಿ ಇದನ್ನು ವಿರೋಧಿಸಿ ಪತ್ರ ಬರೆದರೆˌ ಸಂಸದ ತೋಲ್ ತಿರುಮಾವಳವನ್ ಮತ್ತು ಸಿಪಿಐ ಪಕ್ಷದ ನಾಯಕ ಡಿ ರಾಜಾರಂತಹ ಪ್ರಮುಖ ದಲಿತ ನಾಯಕರು ಈ ಬೇಡಿಕೆಯನ್ನು ಬೆಂಬಲಿಸಿದ್ದಾರೆ. ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಸದ್ಯಕ್ಕೆ ಏನನ್ನೂ ಹೇಳಿಲ್ಲ, ಆದರೆ ೨೦೦೭ ರಲ್ಲಿ ಅವರು ದಲಿತ ಕ್ರಿಶ್ಚಿಯನ್ ಗುಂಪುಗಳಿಗಾಗಿ ಸಂವಿಧಾನದ ೩೪೧ ನೇ ವಿಧಿಯ ತಿದ್ದುಪಡಿ ಬೇಡಿಕೆಯನ್ನು ಬೆಂಬಲಿಸಿ ಪತ್ರ ಬರೆದಿದ್ದರು. ಸಂವಿಧಾನದ ೩೪೧ ನೇ ವಿಧಿಯು ಅನೇಕ ಜಾತಿಗಳು ಅಥವಾ ಬುಡಕಟ್ಟುಗಳನ್ನು ಪರಿಶಿಷ್ಟ ಜಾತಿಗಳಾಗಿ ಪರಿಗಣಿಸುವ ಕುರಿತು ವಿವರಿಸುತ್ತದೆ.

ದಲಿತ ಮುಸ್ಲಿಮರು ಮತ್ತು ದಲಿತ ಕ್ರಿಶ್ಚಿಯನ್ನರನ್ನು ಪರಿಶಿಷ್ಟರ ಪಟ್ಟಿಗೆ ಸೇರಿಸುವುದು ಅಗತ್ಯವಾಗಿದೆ. ಮತಾಂತರವು ಅವರ ಜಾತಿ ಹಾಗು ಸಾಮಾಜಿಕ ಸ್ಥಾನಮಾನಗಳಲ್ಲಿ ಯಾವುದೆ ಬದಲಾವಣೆ ತಂದಿಲ್ಲ. ಈಗಲೂ ಕೂಡ ಅವರು ಅಸ್ಪೃಶ್ಯತೆ ಮತ್ತು ಹಿಂದೂ ದಲಿತರು ಎದುರಿಸುತ್ತಿರುವ ಶೋಷಣೆ ಮತ್ತು ದೌರ್ಜನ್ಯಗಳನ್ನು ಎದುರಿಸುತ್ತಲೇ ಇದ್ದಾರೆ. ಶೈಕ್ಷಣಿಕ ಅಧ್ಯಯನಗಳು, ಸಾಮಾಜಿಕ ಕಾರ್ಯಕರ್ತರ ಗುಂಪುಗಳುˌ ರಾಷ್ಟ್ರೀಯ ಮಟ್ಟದ ಆಯೋಗಗಳು ಮತ್ತು ರಾಜೇಂದರ್ ಸಾಚಾರ್, ರಂಗನಾಥನ್ ಮಿಶ್ರಾ, ಎಲೆಯ ಪೆರುಮಾಳ್ ಮತ್ತು ಸತೀಶ್ ದೇಶಪಾಂಡೆ ಮತ್ತು ಇತರರ ನೇತೃತ್ವದ ಆಯೋಗಗಳ ವರದಿಗಳು ಮುಸ್ಲಿಂ ಮತ್ತು ಕ್ರಿಶ್ಚಿಯನ್ನರನ್ನು ಧಾರ್ಮಿಕ ಆಧಾರದ ಮೇಲೆ ಪರಿಶಿಷ್ಟರ ಪಟ್ಟಿಯಿಂದ ಹೊರಗಿಡಬಾರದು ಎಂದು ಪುನರುಚ್ಚರಿಸಿವೆ.
ದಲಿತರನ್ನು ಹಿಂದುವಾಗಿ ಉಳಿಸಿಕೊಳ್ಳುವುದರಿಂದ ಯಾರಿಗೆ ಲಾಭ ?
ದಲಿತ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರಿಗೆ ಪರಿಶಿಷ್ಟರ ಸ್ಥಾನಮಾನ ನೀಡಬೇಕೆ ಬೇಡವೆ ಎನ್ನುವ ಚರ್ಚೆಗಿಂತ ಈ ದೇಶದ ದಲಿತರನ್ನು ಮತಾಂತವಾಗದಂತೆ ತಡೆದು ಅವರನ್ನು “ಹಿಂದೂ”ಗಳಾಗಿ ಉಳಿಸಿಕೊಳ್ಳುವುದರಿಂದ ಯಾರಿಗೆ ಲಾಭವಿದೆ ಎನ್ನುವುದು ನಮ್ಮ ಮೂಲಭೂತ ಪ್ರಶ್ನೆಯಾಗಬೇಕಿದೆ. ಇಲ್ಲಿನ ಮೇಲ್ವರ್ಗದವರು ಜಾತಿ ವ್ಯವಸ್ಥೆಯನ್ನು ಭಾರತೀಯ ಸಮಾಜದ ಮೂಲಭೂತ ಸಾಂಸ್ಥಿಕ ರಚನೆಯಾಗಿ ಅಸ್ಪಷ್ಟಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರಸ್ತುತ ದಿನದ ರಾಜಕೀಯ ಆಡಳಿತದಲ್ಲಿ ಭಾರತದ ಬಹುತ್ವ ಪರಂಪರೆಯನ್ನು ಹುಡಿಗೊಳಿಸಿ ದಲಿತರನ್ನು “ಹಿಂದೂ” ಧರ್ಮದಲ್ಲಿ ಬಂಧಿಸಿಟ್ಟುಕೊಳ್ಳುವ ಹಿಂದುತ್ವವಾದಿಗಳ ಉದ್ರಿಕ್ತ ಪ್ರಯತ್ನ ಇದಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಸರಕಾರದ ನೀತಿಗಳನ್ನು ಒಂದು ಅಸಂವಿಧಾನಿಕ ಸಂಘಟನೆ ನಿರ್ಧರಿಸುತ್ತಿದೆ. ಈ ದೇಶದಲ್ಲಿ ಅನೇಕ ಅನೈತಿಕ ಹಾಗು ಅನುಮಾನಾಸ್ಪದ ಚಟುವಟಿಕೆಗಳಿಂದ ಕುಖ್ಯಾತವಾಗಿರುವ ಸಂಘಟನೆಯೊಂದು ಈ ಜಾತ್ಯಾತೀತ ರಾಷ್ಟ್ರದ ಸರಕಾರವನ್ನು ನಿಯಂತ್ರಿಸುವ ಕಾರ್ಯ ಅಫಘಾನಿಸ್ತಾನ ಮುಂತಾದ ಮುಸ್ಲಿಮ್ ರಾಷ್ಟ್ರಗಳನ್ನು ಸಾಂಪ್ರದಾಯವಾದಿ ಮೌಲ್ವಿಗಳು ಹಾಗು ಧಾರ್ಮಿಕ ಮೂಲಭೂತವಾದಿಗಳು ನಿಯಂತ್ರಿಸುತ್ತಿರುವುದಕ್ಕಿಂತ ಹೆಚ್ಚು ಅಪಾಯಕಾರಿ ಸಂಗತಿಯಾಗಿದೆ. ಕಳೆದ ಏಳೆಂಟು ವರ್ಷಗಳ ಆಡಳಿತದಲ್ಲಿ ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾದ ಅನೇಕ ಕಾನೂನುಗಳು ಮತ್ತು ಯೋಜನೆಗಳು ಜಾರಿಗೆ ಬಂದಿವೆˌ ಅವುಗಳ ವಿವರ ಹೀಗಿದೆ:
೧. ಮತಾಂತರ ನಿಷೇಧ ಕಾನೂನು ತರುವ ಮೂಲಕ ಶೋಷಿತ ಸಮುದಾಯಗಳು ತಮ್ಮ ಸಂವಿಧಾನಬದ್ಧ ಹಕ್ಕುಗಳ ಅನ್ವಯ ತಮಗೆ ಬೇಕಾದ ಸಮಾನತಾ ಧರ್ಮ ಸ್ವೀಕರಿಸಲು ತಡೆಯೊಡ್ಡಿ ಅವರನ್ನು ಅಸಮಾತನೆ ತುಂಬಿರುವ ಹಿಂದೂ ಧರ್ಮದಲ್ಲಿ ಹಿಡಿದಿಟ್ಟುಕೊಂಡು ಕೋಮು ದೃವೀಕರಣದ ಆಧಾರದಲ್ಲಿ ಪರೋಕ್ಷ ಬ್ರಾಹ್ಮಣ ನಿಯಂತ್ರಿತ ಆಡಳಿತ ಶಾಸ್ವತಗೊಳಿಸಿಕೊಳ್ಳುವುದು.
೨. ದಲಿತ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರಿಗೆ ಪರಿಶಿಷ್ಟರ ಸ್ಥಾನಮಾನ ನೀಡಲಾಗದು ಎಂದು ನ್ಯಾಯಾಲಯಕ್ಕೆ ಅಫಿಡಿವಿಟ್ ಸಲ್ಲಿಸುವ ಮೂಲಕ ದಲಿತರನ್ನು ಮತಾಂತರ ಹೊಂದದೆ ಹಿಂದೂ ಮತಬ್ಯಾಂಕ್ ನಲ್ಲಿಯೆ ಉಳಿಸಿಕೊಳ್ಳುವುದು.
೩. ಹಿಂದೂ ಎಂದು ತಪ್ಪಾಗಿ ಕರೆಯಲ್ಪಡುವ ವೈದಿಕ ವ್ಯವಸ್ಥೆಯ ವಿರುದ್ಧ ಹುಟ್ಟಿರುವ ಲಿಂಗಾಯತ ಧರ್ಮಕ್ಕೆ ಕರ್ನಾಟಕ ಸರಕಾರ ಅಲ್ಪಸಂಖ್ಯಾತರ ಸ್ಥಾನಮಾನದ ಶಿಫಾರಸ್ಸು ಮಾಡಿದ್ದನ್ನು ಬಾಲೀಶ ಕಾರಣಗಳು ನೀಡಿ ನಿರಾಕರಿಸಿದ್ದು.
೪. ವೈದಿಕ ಧರ್ಮಕ್ಕಿಂತ ವಿಭಿನ್ನ ಆಚರಣೆ ಮತ್ತು ಸಂಪ್ರದಾಯ ಹೊಂದಿರುವ ಜಾರ್ಖಂಡನ ಶರಣ್ ಬುಡಕಟ್ಟು ಜನಾಂಗಕ್ಕೆ ಅಲ್ಪಸಂಖ್ಯಾತ ಸ್ಥಾನಮಾನಕ್ಕಾಗಿ ರಾಜ್ಯ ಸರಕಾರ ಮಾಡಿದ ಶಿಫಾರಸ್ಸನ್ನು ನಿರಾಕರಿಸಿದ್ದು.
೫. ನೆಹರು ಅವರು ಮತ್ತು ಹಿಂದಿನ ಸರಕಾರಗಳು ದೂರದೃಷ್ಟಿಯಿಂದ ಸ್ಥಾಪಿಸಿದ ಸಾರ್ವಜನಿಕ ಉದ್ಯಮಗಳನ್ನು ಚುನಾವಣಾ ದೇಣಿಗೆ ಕೊಡುವ ಖಾಸಗಿ ಕಾರ್ಪೋರೇಟ್ ಉದ್ಯಮಿಗಳಿಗೆ ವಹಿಸಿ ದಲಿತ ದಮನಿತರ ಮೀಸಲಾತಿಯನ್ನು ಪರೋಕ್ಷವಾಗಿ ಕೊನೆಗೊಳಿಸುವುದು.

ಭಾರತ ಬ್ರಿಟೀಷ್ ಆಡಳಿತದಿಂದ ವಿಮೋಚನೆಗೊಂಡು ಸ್ವತಂತ್ರ ಪಡೆದ ನಂತರದ ದಿನಗಳಲ್ಲಿ ಸಹಜವಾಗಿ ಹಿಂದೂ ಮೇಲ್ಜಾತಿಯ ರಾಜಕಾರಣಿಗಳ ಸಂಖ್ಯೆಯೆ ಹೆಚ್ಚಿನ ಪ್ರಮಾಣದಲ್ಲಿತ್ತು. ಅವರೆಲ್ಲರೂ ಭಾರತದ ಕ್ರೂರ ಜಾತಿ ವ್ಯವಸ್ಥೆಯ ಬೇರುಗಳ ಮೇಲೆ ದಾಳಿ ಮಾಡದೆ ಅದನ್ನು ಭಾರತದ ಸಂಸ್ಕೃತಿ ಅಥವಾ ವೈವಿಧ್ಯತೆ ಎಂದು ನಂಬಿಸಿತ್ತಾ ಬಂದಿರುವುದಲ್ಲದೆ ಜಾತಿಯ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದರೆ ಮಾತ್ರ ಭಾರತವು ಜಾತಿರಹಿತವಾಗಲು ಸಾಧ್ಯ ಎಂಬ ಹುಸಿ ನಿರೂಪಣೆಯನ್ನು ನಿರ್ಮಿಸುತ್ತಾ ಬಂದಿದ್ದಾರೆ. ಈ ಧೋರಣೆಯೆ ಅಂದಿನ ಮೇಲ್ಜಾತಿಯ ರಾಜಕಾರಣಿಗಳು ತಮ್ಮನ್ನು ತಾವು ಪ್ರತಿಭಾವಂತರು ಹಾಗು ಅರ್ಹ ನಾಯಕರೆಂದು ಬಿಂಬಿಸಿಕೊಳ್ಳಲು ಸಹಾಯ ಮಾಡಿತು. ಹಾಗೆ ಮಾಡುವ ಮೂಲಕ ಸಮಾಜದಲ್ಲಿ ಅವರು ಅಗತ್ಯಕ್ಕಿಂತ ಹೆಚ್ಚಿನ ಅಧಿಕಾರ, ಸ್ಥಾನಮಾನ ಮತ್ತು ಸವಲತ್ತುಗಳನ್ನು ಪಡೆದರು. ಹೀಗಾಗಿ, ೧೯೫೦ ರಲ್ಲಿ, ಅಂದಿನ ಗೃಹ ಸಚಿವ ವಲ್ಲಭಭಾಯಿ ಪಟೇಲ್ ಅವರು ಜನಗಣತಿಯನ್ನು ಜಾತಿ ಆಧಾರದಲ್ಲಿ ನಡೆಸುದಕ್ಕೆ ತಡೆ ನೀಡಿದ್ದರು. ಜಾತಿ ಆಧಾರದಲ್ಲಿ ಜನರ ದತ್ತಾಂಶವನ್ನು ಸಂಗ್ರಹಿಸುವುದು ಜಾತಿಯನ್ನು ಬಲಪಡಿಸಿದಂತೆ ಎನ್ನುವುದು ಅವರ ವಾದಿವಾಗಿತ್ತು.
ಮೇಲ್ಜಾತಿ ನಾಯಕರ ಈ ಜಾತಿರಹಿತ ಭಾರತದ ಕಟ್ಟುಕಥೆಯ ನಿರೂಪಣೆಯಲ್ಲಿ ಪರಿಶಿಷ್ಟ ಜಾತಿ ಹಾಗು ವರ್ಗವು ಅತ್ಯಂತ ಪ್ರಮುಖವಾಗಿ ಶೋಷಣೆಗೆ ಒಳಗಾಗುತ್ತಿದೆ. ಸಾಂವಿಧಾನಿಕ ಮೀಸಲಾತಿಯು ಆ ವರ್ಗಗಳಿಗೆ ಶಿಕ್ಷಣ, ರಾಜಕೀಯ ಮತ್ತು ಉದ್ಯೋಗದಲ್ಲಿ ಅವಕಾಶಗಳನ್ನು ಹಾಗು ಅವರ ಮೇಲಿನ ದೌರ್ಜನ್ಯಗಳ ವಿರುದ್ಧ ರಕ್ಷಣೆಯನ್ನು ನೀಡುತ್ತದೆ. ಆದರೆ, ಸಮಾನತೆ ಮತ್ತು ನ್ಯಾಯ ವಿತರಣೆಯ ವಿಷಯಗಳಲ್ಲಿ ಜಾತಿ ವ್ಯವಸ್ಥೆಯ ನಿರ್ಮೂಲನೆಯನ್ನು ಅದು ನಿರಾಕರಿಸುತ್ತದೆ. ಹಾಗಾಗಿಯೇ, ಮೀಸಲಾತಿ ಸೌಲಭ್ಯ ಘೋಷಿಸಿದಾಗಿನಿಂದಲೂ ಅದನ್ನು ನಿರಂತರವಾಗಿ ವಿರೋಧಸಿಕೊಂಡು ಬಂದಿರುವ ಮೇಲ್ಜಾತಿಯ ಜನರಿಂದ ದಲಿತ ವರ್ಗವು ನಿರಂತರವಾಗಿ ಆಕ್ರಮಣಕ್ಕೆ ಒಳಗಾಗುತ್ತಿದೆ. ಹಾಗಾಗಿˌ ಅಲ್ಪಸಂಖ್ಯಾತ ಧರ್ಮೀಯರ ವಿರುದ್ಧ ಮತಬ್ಯಾಂಕ್ ನ್ನು ಸಂಘಟಿಸಿ ರಾಜಕೀಯ ಲಾಭ ಗಳಿಸಿಕೊಳ್ಳಲು ದಲಿತ-ದಮನಿತರ ಮತಾಂತರವನ್ನು ತಡೆಹಿಡಿದು ಅವರನ್ನು “ಹಿಂದೂ” ಮತಬ್ಯಾಂಕಿನಲ್ಲಿ ಕಟ್ಟಿಹಾಕುವುದು ಮೇಲ್ಜಾತಿಗಳು ನಿಯಂತ್ರಿಸುವ ರಾಜಕೀಯ ಪಕ್ಷಗಳ ಉದ್ದೇಶವಾಗಿದೆ.
ಇಂದಿನ ಅಧುನಿಕ ಕಾಲಮಾನದಲ್ಲಿ ಜಾತಿಯ ಪ್ರಾಮುಖ್ಯತೆಯನ್ನು ನಿರಾಕರಿಸುವ ಪ್ರಯತ್ನಗಳ ನಡುವೆ ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆಯನ್ನು ಜೀವಂತವಾಗಿಡುವ ಪ್ರಬಲ ಪ್ರಯತ್ನಗಳು ಕೂಡ ನಡೆಯುತ್ತಿವೆ. ಇಂದು ಮುಸ್ಲಿಂ ಮತ್ತು ಕ್ರಿಶ್ಚಿಯನ್ ದಲಿತರು ಜಾತಿ ವ್ಯವಸ್ಥೆಯ ದ್ವಂದ್ವ ನಿರಾಕರಣೆಯನ್ನು ಎದುರಿಸುತ್ತಿದ್ದಾರೆ. ಅವರ ರಾಜಕೀಯ ಮತ್ತು ಧಾರ್ಮಿಕ ಮುಖಂಡರು ತಮ್ಮಲ್ಲಿ ಯಾವುದೇ ಜಾತಿಯಿಲ್ಲ ಎಂದು ಹೇಳುತ್ತಾ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಹವಣಿಸುತ್ತಾರೆ. ಆದರೆˌ ಇಂದಿನ ರಾಜಕೀಯ ಬೆಳವಣಿಗೆಗಳು ಭಾರತೀಯ ಮೂಲದ ಧರ್ಮಗಳು ಮತ್ತು ಹೊರಗಿನ ಧರ್ಮಗಳ ನಡುವಿನ ವಿಭಜನೆಯನ್ನು ಆಳಗೊಳಿಸುತ್ತಾ ಏಕೀಕೃತ ಹಿಂದೂ ಬಹುಮತವನ್ನು ಸೃಷ್ಟಿಸಲು ಹವಣಿಸುತ್ತಿದೆ. ಜಾತಿ ವ್ಯವಸ್ಥೆಗೆ ಪರ್ಯಾಯವಾಗಿ ಧರ್ಮಾಧಾರಿತ ವಿಭಜನೆಯು ಮೇಲ್ಜಾತಿಯ ರಾಜಕಾರಣಿಗಳಿಗೆ ಹೆಚ್ಚಿನ ಸಹಾಯ ಮಾಡಲಿದೆ.

ಶ್ರೇಷ್ಠ, ಕನಿಷ್ಟತೆಯ ಆಧಾರದಲ್ಲಿ ಹುಟ್ಟಿರುವ ಜಾತಿ ಗುಂಪುಗಾರಿಕೆಯು ಇಂದಿನ ಹಿಂದುತ್ವವಾದಕ್ಕಿಂತ ತುಂಬಾ ಹಳೆಯದು. ಇತಿಹಾಸಕಾರ ರಾಬರ್ಟ್ ಫ್ರೈಕೆನ್ಬರ್ಗ್ ರ ಕೃತಿಗಳು ೧೯ ಮತ್ತು ೨೦ನೇ ಶತಮಾನದಲ್ಲಿ ಬ್ರಾಹ್ಮಣರ ನೇತೃತ್ವದ ವೈದಿಕತೆಯ ಪುನರುಜ್ಜೀವನ ಚಳವಳಿಗಳು, ಹಾಗು ರಾಷ್ಟ್ರೀಯವಾದದ ಘೋಷಣೆಗಳು ಈ ನೆಲದ ದಲಿತ ವರ್ಗವನ್ನು ಹಿಂದುತ್ವದ ಗುಂಪಿಗೆ ಸೇರಿಸುವಲ್ಲಿ ವಹಿಸಿದ ಪಾತ್ರವವನ್ನು ವಿವರಿಸುತ್ತವೆ. ಮಾನವಶಾಸ್ತ್ರಜ್ಞ ಜೋಯಲ್ ಲೀ ಅವರು ೧೮೭೦ ರಿಂದ ೧೯೩೦ ರ ನಡುವೆ ಲಾಲ್ ಬೇಗೀಸ್ ಎಂದು ಕರೆಯಲ್ಪಡುವ ಅಸ್ಪೃಶ್ಯ ಪೌರ ಕಾರ್ಮಿಕರು ಆಧುನಿಕವಾಗಿ ವ್ಯಾಖ್ಯಾನಿಸಲಾದ ಹಿಂದೂ ಮತ್ತು ಮುಸ್ಲಿಮ ವರ್ಗಗಳಿಗಿಂತ ಭಿನ್ನವಾದ ಸಾಮಾಜೊ-ಧಾರ್ಮಿಕ ಸಮುದಾಯವಾಗಿತ್ತೆನ್ನಲು ಗಣನೀಯ ಆಕರ ಮೂಲಗಳನ್ನು ಒದಗಿಸುತ್ತಾರೆ. ಹೀಗಾಗಿ, ಜಾತಿ ವ್ಯವಸ್ಥೆಯು ಬ್ರಾಹ್ಮಣೇತರ Vs ಬ್ರಾಹ್ಮಣ ಅಥವಾ ಧಾರ್ಮಿಕ ಮತ್ತು ಧಾರ್ಮಿಕವಲ್ಲದ ಚೌಕಟ್ಟಿನ ಮೂಲಕ ಅದನ್ನು ವಿಶ್ಲೇಷಿಸುವ ಬದಲು ಅದರ ಆಚರಣೆಗಳೊಂದಿಗೆ ಉಪಖಂಡದಲ್ಲಿ ಶಾಶ್ವತವಾದ ಸಾಮಾಜಿಕ ವಿದ್ಯಮಾನವೆಂದು ತಿಳಿಯಬೇಕಾದ ಅಗತ್ಯವಿದೆ.
೨೦ನೇ ಶತಮಾನದ ಆರಂಭ ಹಾಗು ಮಧ್ಯದಲ್ಲಿ ಅಸ್ಪೃಶ್ಯರ ಬಗೆಗಿನ ವಸಹಾತುಶಾಹಿ ಸರಕಾರದ ಕಾಳಜಿಯು ಹಿಂದೂ ಮೇಲ್ಜಾತಿಯವರಲ್ಲಿ ಆತಂಕವನ್ನು ಸೃಷ್ಟಿಸಿತ್ತು. ಏಕೆಂದರೆ ಜನಗಣತಿಯಲ್ಲಿ ಅಸ್ಪೃಶ್ಯರನ್ನು ಪ್ರತ್ಯೇಕ ವರ್ಗವಾಗಿ ಪರಿಗಣಿಸಲು ಬ್ರಿಟಿಷರು ಒಪ್ಪಿಕೊಂಡಿದ್ದರು. ಬ್ರಿಟಿಷರು ಜಾತಿಯಾಧಾರದಲ್ಲಿ ವಿವಿಧ ಪ್ರಾತಿನಿಧಿಕ ವ್ಯವಸ್ಥೆಗಳನ್ನು ಪರಿಚಯಿಸುತ್ತಿದ್ದ ಸಮಯದಲ್ಲಿ ಇದು ಜಾತಿ ಗುಂಪುಗಳ ಸಂಖ್ಯೆಗಳು ಇದ್ದಕ್ಕಿದ್ದಂತೆ ಪ್ರಮುಖವಾಗಿಸಿತ್ತು. ಮುಸ್ಲಿಂ ಮೇಲ್ಜಾತಿಗಳು ಮುಸ್ಲಿಮರ ಏಕೀಕೃತ ಕಲ್ಪನೆಯನ್ನು ಪ್ರಕ್ಷೇಪಿಸೀವುದರ ಜೊತೆಗೆ ಅಸ್ಪೃಶ್ಯರನ್ನು ಹಿಂದೂಗಳೆಂದು ಪರಿಗಣಿಸಬಾರದು ಎಂದು ವಾದಿಸಿದ್ದರು. ಅದರಿಂದ ಭಯಭೀತರಾದ ಹಿಂದೂ ಮೇಲ್ಜಾತಿಯವರು ಅದಕ್ಕೆ ಪ್ರತಿಯಾಗಿ ದಲಿತರ ಸುಧಾರಣೆಯ ಭರವಸೆಯ ಮಾತನಾಡುವ ಮೂಲಕ ಅಸ್ಪೃಶ್ಯರನ್ನು ಹಿಂದೂ ಮಡಿಲಿನಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾದರು.
ಹಿಂದೂ ಧರ್ಮದಲ್ಲಿ ಗುರುತಿಸಿಕೊಳ್ಳುವ ದಲಿತರಿಗೆ ಮಾತ್ರ ಪರಿಶಿಷ್ಟ ಜಾತಿಯ ಸ್ಥಾನಮಾನವನ್ನು ನೀಡಬೇಕು ಎನ್ನುವ ವಾದವು ಸ್ವಾತಂತ್ರ್ಯ ನಂತರದ ಹಿಂದುತ್ವವಾದಿಗಳ ನಿಲುವಾಗಿದೆ. ಇದು ಕ್ರಮೇಣ ಬಹುತ್ವ ಸಂಸ್ಕೃತಿಯ ಜನರನ್ನೆಲ್ಲ ಬ್ರಾಹ್ಮಣರ ಯಜಮಾನಿಕೆಯ ಹಿಂದೂ ಮುಖ್ಯವಾಹಿನಿದಲ್ಲಿ ಸೇರಿಸಿಕೊಂಡು ಮೇಲ್ಜಾತಿಯ ಬ್ರಾಹ್ಮಣರ ಬಲವರ್ಧನೆಯನ್ನು ಶಾಶ್ವತಗೊಳಿಸಿˌ ವಿವಿಧ ಧರ್ಮಗಳಲ್ಲಿ ಗುರುತಿಸಿಕೊಂಡಿರುವ ದಲಿತರನ್ನು ಧರ್ಮದ ರೇಖೆಗಳಲ್ಲಿ ವಿಘಟಿಸುವಲ್ಲಿ ಸಹಕಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಇದು ಬಹು ಮುಖ್ಯವಾಗಿ, ದಲಿತ ಮುಸ್ಲಿಮರು ಮತ್ತು ದಲಿತ ಕ್ರಿಶ್ಚಿಯನ್ನರಿಗೆ ಸಮಾನ ಪೌರತ್ವದ ಹಕ್ಕುಗಳನ್ನು ಕೂಡ ನಿರಾಕರಿಸುವ ಕಾರ್ಯಕ್ಕೆ ಇಂಬು ನೀಡುತ್ತದೆ. ಅದರೊಟ್ಟಿಗೆ ಭಾರತೀಯ ಮೂಲದ ಬೌದ್ಧ ˌ ಸಿಖ್ ˌ ಲಿಂಗಾಯತ ಧರ್ಮಿಯರಿಗೂ ಕೂಡ ಹಿಂದೂ ಧರ್ಮದಡಿಯಲ್ಲಿ ಕಟ್ಟಿಹಾಕಿ ಸಾಂವಿಧಾನಿಕ ಸವಲತ್ತುಗಳನ್ನು ನಿರಾಕರಿಸುವ ಸಾಧ್ಯತೆಗಳು ಕೂಡ ನಿಚ್ಚಳವಾಗಿವೆ.






