• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಜಾತ್ರೆ-ಸಂತೆಯ ಬಯಲಲಿ ಮತಾಂಧತೆಯ ಕರಾಳ ನೆರಳು

ನಾ ದಿವಾಕರ by ನಾ ದಿವಾಕರ
March 30, 2022
in ಅಭಿಮತ
0
ಜಾತ್ರೆ-ಸಂತೆಯ ಬಯಲಲಿ ಮತಾಂಧತೆಯ ಕರಾಳ ನೆರಳು
Share on WhatsAppShare on FacebookShare on Telegram

ಕೋಮುವಾದದ ಕ್ಯಾನ್ವಾಸ್ ದೊಡ್ಡದು. ಈ ಜನವಿರೋಧಿ ಮನಸ್ಥಿತಿಯನ್ನು ಸಮಾಜದ ಅಂತರಂಗದಲ್ಲೇ ಸೃಷ್ಟಿಸುವ ಮತೀಯವಾದ ಮತ್ತು ಮತಾಂಧತೆಯ ಬೇರುಗಳು ಆಳಕ್ಕಿಳಿದಷ್ಟೂ ಮನುಜ ಸಮಾಜವನ್ನು ದ್ವೇಷದ ಬೃಹತ್ ವೃಕ್ಷಗಳು ಆವರಿಸುತ್ತಲೇ ಹೋಗುತ್ತವೆ. ಜನಸಾಮಾನ್ಯರ ನಿತ್ಯ ಜೀವನದಲ್ಲಿ ಕನಿಷ್ಠ ಮಟ್ಟದ ಗಮನ ಸೆಳೆಯಬೇಕಾದ ಜಾತಿ, ಮತ, ಧರ್ಮದ ಆಚರಣೆಗಳು, ಸಮಾಜ ನಿರ್ಮಾಣದ ಮುಖ್ಯ ಭೂಮಿಕೆಯಾಗಿ ಪರಿವರ್ತನೆಯಾದಾಗ ಈ ಅಸ್ಮಿತೆಗಳ ಬೇರುಗಳು ಜನರ ಮನಸ್ಥಿತಿಯನ್ನೂ ಸಂಕುಚಿತಗೊಳಿಸುತ್ತಲೇ ಹೋಗುತ್ತದೆ. ಹೀಗೆ ಸಂಕುಚಿತಗೊಂಡ ಮನಸುಗಳೇ ಮತೀಯ ಶಕ್ತಿಗಳು ಬಿತ್ತುವ ದ್ವೇಷದ ಬೀಜಗಳಿಗೆ ಫಲವತ್ತಾದ ಭೂಮಿಕೆಯಾಗುತ್ತವೆ.

ADVERTISEMENT

ತಮ್ಮ ಬದುಕು, ಬವಣೆ, ಸಂಕಷ್ಟಗಳೆಲ್ಲಕ್ಕೂ ಇಡೀ ಸಮಾಜವನ್ನು ನಿಯಂತ್ರಿಸುವ ಒಂದು ಕ್ರೂರ ಅರ್ಥವ್ಯವಸ್ಥೆ ಮತ್ತು ಈ ಕ್ರೌರ್ಯವನ್ನು ಸಮರ್ಥಿಸಿಕೊಂಡೇ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವಂತಹ ಮತ ಧರ್ಮಗಳ ಸಾಂಸ್ಥಿಕ ನೆಲೆಗಳು ಮೂಲ ಕಾರಣ ಎಂಬ ಸುಡುವಾಸ್ತವವನ್ನು ಜನರು ಅರ್ಥಮಾಡಿಕೊಳ್ಳದ ಹೊರತು ಈ ದ್ವೇಷ ಬೀಜಗಳಿಂದ ಮೊಳಕೆಯೊಡೆಯುವ ಸಸಿಗಳನ್ನು ಕಿತ್ತೊಗೆಯಲಾಗುವುದಿಲ್ಲ. ಭಾರತದಲ್ಲಿ ಕೋಮುವಾದ ಮತ್ತು ಮತೀಯ ದ್ವೇಷದ ಬೀಜಗಳಿಗೆ ಶತಮಾನದಷ್ಟು ಇತಿಹಾಸವಿದೆ. ಹಿಂದೂ-ಮುಸ್ಲಿಂ ಸಮೀಕರಣವನ್ನು ಬದಿಗಿಟ್ಟು ನೋಡಿದಾಗಲೂ, ಈ ದೇಶದ ಇತಿಹಾಸದಲ್ಲಿ ಒಂದು ಇಡೀ ಜನಾಂಗ. ಅಸ್ಪೃತೆಯಂತಹ ಹೀನ ಆಚರಣೆಯಿಂದ ಇಂದಿಗೂ ಅಗೋಚರವಾಗಿ ಬಹಿಷ್ಕೃತವಾಗಿಯೇ ಬದುಕುತ್ತಿದೆ.

ಜನಸಮುದಾಯಗಳ ಮೇಲೆ ತನ್ನದೇ ಆದ ವಾರಸುದಾರಿಕೆ ಮತ್ತು ಹಕ್ಕೊತ್ತಾಯಗಳನ್ನು ಹೇರುತ್ತಾ, ಉತ್ತರದಾಯಿತ್ವ ಇಲ್ಲದ ಒಂದು ಶೋಷಕ ವ್ಯವಸ್ಥೆಯನ್ನು ಹೇರುವ ಮೂಲಕ ಭಾರತದ ವೈದಿಕಶಾಹಿ ಪರಂಪರೆಯು ಜಾತಿ ವ್ಯವಸ್ಥೆಯಂತಹ ಒಂದು ಕ್ರೂರ ಪೆಡಂಭೂತವನ್ನು ಸೃಷ್ಟಿಸಿದೆ. ಮನುಷ್ಯನ ಹುಟ್ಟಿನ ಮೂಲದಿಂದಲೇ ಸೃಷ್ಟಿಸಲಾಗುವ ಕಂದರಗಳು ಅಂತಿಮ ಪಯಣದವರೆಗೂ ಮುಂದುವರೆಯುವಂತಹ ಒಂದು ವಿಕೃತ ವ್ಯವಸ್ಥೆಗೆ ಭಾರತೀಯರಾದ ನಾವು ಒಗ್ಗಿಹೋಗಿದ್ದೇವೆ.  ತಮ್ಮ ಪಯಣ ಮುಗಿಸಿ ಇಹಲೋಕ ತ್ಯಜಿಸಿದ ನಂತರವೂ ತುಳಿತಕ್ಕೊಳಗಾದ, ಬಹಿಷ್ಕೃತ ಸಮುದಾಯದ ಜೀವಗಳು ಪತ್ಯೇಕತೆಯ ಶಿಕ್ಷೆಯನ್ನು ಅನುಭವಿಸಬೇಕಾದ ಒಂದು ದುರಂತ ಸನ್ನಿವೇಶವನ್ನು ಇಂದಿಗೂ ಭಾರತ ಎದುರಿಸುತ್ತಿದೆ.

Also Read : ಮುಸ್ಲಿಂ ವ್ಯಾಪಾರಿಗಳ ಉಪಸ್ಥಿತಿ ಇಲ್ಲದೇ ಕಾಪು ಜಾತ್ರೆ ಆರಂಭ, ಮುಕ್ತಾಯ

ಸಾಮಾಜಿಕ ಬದುಕಿನ ಮತ್ತು ಸಾಂಸ್ಕೃತಿಕ ಹೆಜ್ಜೆಗಳ ಪ್ರತಿ ಹಂತದಲ್ಲೂ ಅನ್ಯರನ್ನು ಸೃಷ್ಟಿಸುತ್ತಾ ‘ನಮ್ಮವರೆಂಬ ’ ಭದ್ರಕೋಟೆಗಳನ್ನು ನಿರ್ಮಿಸುವ ಒಂದು ಕ್ರೂರ ಜಾತಿ ವ್ಯವಸ್ಥೆ ಅತಿಮಾನುಷ ಶಕ್ತಿಗಳನ್ನು ಆರಾಧಿಸುತ್ತಲೇ ಸಮಾಜದ ಗರ್ಭದಲ್ಲಿ ಅಮಾನುಷತೆಯ ಬೀಜಗಳನ್ನು ಬಿತ್ತುತ್ತಾ ಬಂದಿದೆ. ಈ ಭದ್ರಕೋಟೆಗಳೊಳಗೆ ತಮ್ಮದೇ ಆದ ಹಿತವಲಯವನ್ನು ಸೃಷ್ಟಿಸಿಕೊಳ್ಳುವ ಪ್ರತಿಯೊಂದು ಜಾತಿ ಸಮುದಾಯವೂ ಅನ್ಯ ಜಾತಿಯನ್ನು ಕೀಳೆಂದು ಭಾವಿಸುತ್ತಾ ಶೋಷಣೆಗೊಳಪಡಿಸುವುದು ಇಲ್ಲಿನ ಜಾತಿ ವ್ಯವಸ್ಥೆಯ ವೈಶಿಷ್ಟ್ಯ. ಭಾರತೀಯ ಸಮಾಜದಲ್ಲಿ ಶತಮಾನಗಳಿಂದ ತಮ್ಮ ಅಸ್ತಿತ್ವ ಕಂಡುಕೊಂಡಿರುವ ಜನಸಮುದಾಯಗಳು ತಮ್ಮ ಮತಶ್ರದ್ಧೆ ಮತ್ತು ಧಾರ್ಮಿಕ ಆಚರಣೆಗಳ ಕಾರಣಕ್ಕಾಗಿಯೇ ಈ   ‘ ಅನ್ಯವರ್ಗ’ಕ್ಕೆ ಸೇರಿಬಿಡುತ್ತವೆ.

ಜಾತಿ ವ್ಯವಸ್ಥೆಯ ದೌರ್ಜನ್ಯಗಳಿಗೆ, ಅಸ್ಪೃಶ್ಯತೆಯಂತಹ ಅಮಾನುಷ ಹೀನ ಪದ್ಧತಿಗೆ ಕುರುಡಾಗಿರುವ ಸಮಾಜದಲ್ಲಿ ಈ ‘ ಅನ್ಯವರ್ಗ’ವನ್ನು ಸೃಷ್ಟಿಸುವುದು ಬಹಳ ಸುಲಭ ಎನ್ನುವುದನ್ನು ಈ ದೇಶದ ಸಾಂಸ್ಕೃತಿಕ ರಾಷ್ಟ್ರೀಯತೆಯ ರಾಜಕಾರಣ ನಿರೂಪಿಸಿದೆ. ಇಡೀ ಸಮಾಜವನ್ನು ತನ್ನ ಬೌದ್ಧಿಕ ಆಧಿಪತ್ಯಕ್ಕೊಳಪಡಿಸುವ ಮೂಲಕ ಸಾಂಸ್ಕೃತಿಕ ನೆಲೆಯಲ್ಲಿ, ಸಾಮಾಜಿಕಾರ್ಥಿಕ ನೆಲೆಯಲ್ಲಿ ಪಾರಮ್ಯ ಸಾಧಿಸಲೆತ್ನಿಸುವ ಬಹುಸಂಖ್ಯಾವಾದದ ರಾಜಕೀಯ ಶಕ್ತಿಗಳು ಇಂದು ಈ ದೇಶದ ದಲಿತರನ್ನೂ, ಅಲ್ಪಸಂಖ್ಯಾತರನ್ನೂ, ಮಹಿಳೆಯರನ್ನೂ ಮತ್ತು ಅವಕಾಶವಂಚಿತ ಜನಸಮುದಾಯಗಳನ್ನೂ ಅಸ್ಮಿತೆಗಳ ಚೌಕಟ್ಟಿನಲ್ಲಿ ಬಂಧಿಸುವ ಪ್ರಯತ್ನ ಮಾಡುತ್ತಿವೆ. ಈ ರಾಜಕೀಯ ಶಕ್ತಿಗಳನ್ನು ಹಿಂದುತ್ವ ರಾಜಕಾರಣ ಪ್ರಧಾನವಾಗಿ ಪ್ರತಿನಿಧಿಸುತ್ತದೆ. ಆದರೆ ಹಿಂದುತ್ವವನ್ನು ತಾತ್ವಿಕವಾಗಿ ಒಪ್ಪದ ರಾಜಕೀಯ ಶಕ್ತಿಗಳೂ ಸಹ ತಮ್ಮ ಸ್ಪಷ್ಟ ಧೋರಣೆಯನ್ನು ವ್ಯಕ್ತಪಡಿಸದೆ ಇರುವುದು ವಾಸ್ತವ.

ಈ ದ್ವೇಷ ರಾಜಕಾರಣದ ಒಂದು ಆಯಾಮವನ್ನು ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೇ ಮಾರಕವಾಗುವಂತಹ ಹಿಜಾಬ್ ವಿವಾದದಲ್ಲಿ ಕಂಡಿದ್ದೇವೆ. ಸಾಂವಿಧಾನಿಕ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ ಮತ್ತು ಶಿಕ್ಷಣದ ಹಕ್ಕು ಮತ್ತು ಆದ್ಯತೆ, ಈ ಮೂರು ವಿಚಾರಗಳಲ್ಲಿ ಶಿಕ್ಷಣದ ಹಕ್ಕುಗಳಿಗಿಂತಲೂ ಧಾರ್ಮಿಕ ಸ್ವಾತಂತ್ರ್ಯವೇ ಪ್ರಧಾನವಾಗುವಂತಹ ಒಂದು ಭಾವನಾತ್ಮಕ ಸನ್ನಿವೇಶವನ್ನು ಸೃಷ್ಟಿಸಲಾಗಿದೆ. ಶಾಲಾ ವ್ಯಾಸಂಗ ಮಾಡುವ ಎಳೆ ವಯಸ್ಸಿನ ಹೆಣ್ಣು ಮಕ್ಕಳು ಇಂದು ಮತೀಯವಾದದ ರಾಜಕೀಯ ಮೇಲಾಟಗಳಿಗೆ ಬಲಿಯಾಗುತ್ತಿರುವುದನ್ನು ಕಂಡೂ ಕಾಣದಂತಿದ್ದೇವೆ. ಸಮಾಜದಲ್ಲಿ ಢಾಳಾಗಿ ಕಾಣುತ್ತಿರುವ ಈ ಅಸೂಕ್ಷ್ಮತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಜಾಸತ್ತಾತ್ಮಕ ಧ್ವನಿಗಳು ಸದ್ದು ಮಾಡಬೇಕಿದೆ. ಆದರೆ ಮತಶ್ರದ್ಧೆ ಮತ್ತು ಧಾರ್ಮಿಕ ನಂಬಿಕೆಗಳೇ ಪ್ರಧಾನವಾಗಿ ಸದ್ದುಮಾಡುತ್ತಿದೆ.

ಈ ಸಂದರ್ಭದಲ್ಲೇ ಕೆಲವು ಹಿಂದೂ ಮೂಲಭೂತವಾದಿ ಸಂಘಟನೆಗಳು ಮುಸ್ಲಿಂ ಸಮುದಾಯದ ಆರ್ಥಿಕ ಬೆನ್ನೆಲುಬನ್ನು ಮುರಿಯುವ ಪ್ರಯತ್ನದಲ್ಲಿ ತೊಡಗಿವೆ. ಶಾಲಾವಲಯದಲ್ಲಿ ಸೌಹಾರ್ದ ವಾತಾವರಣವನ್ನು ಕಲುಷಿತಗೊಳಿಸಿ, ಮತಾಂಧತೆಯ ಮಾಲಿನ್ಯ ಹರಡಿದ ನಂತರ ಈಗ ಮತಾಂಧರ ದೃಷ್ಟಿ ಈ ದೇಶದ ಬಹುತ್ವ ಸಂಸ್ಕೃತಿಯ ಮೂಲ ಸೆಲೆ ಎಂದೇ ಹೇಳಬಹುದಾದ ಜಾತ್ರೆಗಳ ಮೇಲೆ ಬಿದ್ದಿದೆ. ಭಾರತದಲ್ಲಿ ಜಾತ್ರೆಗಳಿಗೆ ಒಂದು ವಿಶಿಷ್ಟ ಸ್ಥಾನ ಇದೆ. ವೈದಿಕಶಾಹಿಯಿಂದ ಮುಕ್ತವಾದ ಶೂದ್ರ ಸಮುದಾಯದ ದೇವಾನುದೇವತೆಗಳೇ ಪ್ರಧಾನವಾಗಿರುವ ಸಾವಿರಾರು ಜಾತ್ರೆ, ರಥೋತ್ಸವಗಳು ಭಾರತದಲ್ಲಿ ನಡೆಯುತ್ತಲೇ ಇರುತ್ತವೆ. ಜನಪದ ಸಂಸ್ಕೃತಿಯಿಂದ ಉಗಮಿಸಿರುವ ನೂರಾರು ದೇವತೆಗಳು ಜನಸಾಮಾನ್ಯರ, ವಿಶೇಷವಾಗಿ ದುಡಿಯುವ ಜನತೆಯ ಸಾಂತ್ವನದ ನೆಲೆಗಳಾಗಿ ಕಂಡುಬರುತ್ತವೆ. ತಮ್ಮ ಬದುಕಿನ ಸಂಕಷ್ಟಗಳಿಗೆ ಸಾಂತ್ವನ ಹೇಳುವ ಸಾಂಸ್ಕೃತಿಕ ನೆಲೆಗಳಾಗಿ ಈ ದೈವಗಳನ್ನು ಕಾಣುವ ಪರಿಶಿಷ್ಟ ಸಮುದಾಯಗಳು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ತಮ್ಮ ಸಾಮಾಜಿಕ-ಸಾಂಸ್ಕೃತಿಕ ಸೌಹಾರ್ದತೆಯನ್ನೂ ಸಾರುತ್ತಾ ಬಂದಿವೆ.

ಭಾರತದ ಬಹುತ್ವ ಸಂಸ್ಕೃತಿಯನ್ನು ಮತ್ತಾವ ಕ್ಷೇತ್ರದಲ್ಲಿ ಕಾಣಲಾಗದಿದ್ದರೂ, ಈ ಜಾತ್ರೆಗಳಲ್ಲಿ ಕಾಣಬಹುದು. ಜಾತಿ, ಮತ, ಧರ್ಮ, ಪಂಥ ಮತ್ತು ಭಾಷಿಕ ಅಸ್ಮಿತೆಗಳನ್ನೂ ಮರೆತು, ಸಾಮಾಜಿಕ ಅಂತಸ್ತು ಮತ್ತು ಸ್ಥಾನಮಾನಗಳನ್ನೂ ಬದಿಗೊತ್ತಿ, ಇಡೀ ಗ್ರಾಮ ಸಮುದಾಯ ಒಂದಾಗಿ ಆಚರಿಸುವ ಈ ಜಾತ್ರೆಗಳಲ್ಲಿ ಈ ದೇಶದ ಅಲ್ಪಸಂಖ್ಯಾತರೂ ಅವಿಭಾಜ್ಯ ಅಂಗವಾಗಿಯೇ ನಡೆದುಬಂದಿದ್ದಾರೆ.  ಪುರಿ ಜಗನ್ನಾಥ ದೇವಾಲಯದಿಂದ ಮೈಸೂರಿನ ಚಾಮುಂಡೇಶ್ವರಿಯವರಿಗೆ, ಕೋಲಾರದ ಕೋಲಾರಮ್ಮನಿಂದ ಕೊಲ್ಲೂರು ಮೂಕಾಂಬಿಕೆಯವರೆಗೆ ಈ ಶ್ರದ್ಧೆ ಮತ್ತು ನಂಬಿಕೆಗಳು ಸಾಮುದಾಯಿಕ, ಧಾರ್ಮಿಕ ಅಸ್ಮಿತೆಗಳ ಚೌಕಟ್ಟುಗಳನ್ನು ಭೇದಿಸಿ ಸೌಹಾರ್ದತೆಯ ದ್ಯೋತಕವಾಗಿ ಬೆಳೆದುಬಂದಿವೆ.

ಭಾರತದ ಉದ್ದಗಲಕ್ಕೂ ಕಂಡುಬರುವ ಸ್ಥಳೀಯ ನಂಬಿಕೆಗಳನ್ನಾಧರಿಸಿದ ಆಚರಣೆಗಳು ಜಾತ್ರೆಗಳ ರೂಪದಲ್ಲಿ, ಉತ್ಸವ, ರಥೋತ್ಸವದ ರೂಪದಲ್ಲಿ ಮತ್ತು ಸಾಮೂಹಿಕ ಹಬ್ಬಗಳ ರೂಪದಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಂಡಿವೆ. ವೈದಿಕ ಪರಂಪರೆಯ ಶ್ರೇಷ್ಠತೆಯ ಅಹಮಿಕೆ, ತಾರತಮ್ಯದ ಆಚರಣೆಗಳು ಮತ್ತು ಪಾರಮ್ಯದ ಹಂಗಿಲ್ಲದೆ ಬೆಳೆದುಬಂದಿರುವ ಈ ಜನಪದೀಯ ಸಾಂಸ್ಕೃತಿಕ ನೆಲೆಗಳು ಆಧುನಿಕ ಕಾಲಘಟ್ಟದಲ್ಲೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡೇ ಬಂದಿವೆ. ಸ್ಥಳೀಯ ಗ್ರಾಮ ದೇವತೆಗಳು, ಜನಪದೀಯ ಸಾಂಸ್ಕೃತಿಕ ವ್ಯಕ್ತಿ ಮತ್ತು ಘಟನೆಗಳು ಇಂತಹ ಜಾತ್ರೆಗಳಿಗೆ ಒಂದು ಸಾಂಸ್ಕೃತಿಕ ಸಮನ್ವಯದ ಬುನಾದಿಯನ್ನು  ಒದಗಿಸುತ್ತಲೇ ಬಂದಿವೆ. ಭಾರತದ ಉಳಿದೆಲ್ಲಾ ಬೌದ್ಧಿಕ ವಲಯದಲ್ಲಿ ಆದಂತೆಯೇ ಈ ಜನಪದೀಯ ನೆಲೆಗಳಲ್ಲೂ ವೈದಿಕ ಪರಂಪರೆಯೇ ಆವರಿಸಿ, ಆಕ್ರಮಿಸುತ್ತಿರುವುದನ್ನು ಗಮನಿಸುತ್ತಿದ್ದೇವೆ. ಇದರ ಮೂಲ ಕಾರಣಗಳನ್ನು ಶೋಧಿಸಬೇಕಿದೆ.

ಆದರೆ ಪ್ರಸ್ತುತ ಸಂದರ್ಭದಲ್ಲಿ ಈ ಸಾಂಸ್ಕೃತಿಕ ಸಮನ್ವಯದ ನೆಲೆಗಳಲ್ಲೂ ಜಾತಿ, ಮತ, ಪಂಥೀಯ ಗೋಡೆಗಳನ್ನು ನಿರ್ಮಿಸುವ ಪ್ರಯತ್ನವನ್ನು ಕೆಲವು ಮತಾಂಧ ಸಂಘಟನೆಗಳು ಮಾಡುತ್ತಿರುವುದು ಚಿಂತೆಗೀಡುಮಾಡುವ ವಿಚಾರವಾಗಿದೆ. ಬಹುತ್ವ ಭಾರತದ ಸಮನ್ವಯ ಸಂಸ್ಕೃತಿಯ ಮೂಲ ಸೆಲೆಯಂತೆ ಕಾಣುವ ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿರುವ ಜಾತ್ರೆಗಳು ಮತ್ತು ಸಂತೆಮಾಳಗಳು ಇಂದಿಗೂ ಸಹ ಜನಸಮುದಾಯಗಳ ನಡುವೆ ಇರಬಹುದಾದ ತಾರತಮ್ಯದ ಗೋಡೆಗಳನ್ನು ಕೆಡವುತ್ತಾ ಒಂದು ಸೌಹಾರ್ದಯುತ ಸಮಾಜವನ್ನು ಕಟ್ಟುವುದರಲ್ಲಿ ನಿರತವಾಗಿವೆ. ಈ ಮಾರುಕಟ್ಟೆ ತಾಣಗಳು ಶ್ರೀಮಂತಿಕೆಯಲ್ಲಿ ಮೆರೆಯುವ ಬಂಡವಳಿಗ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ. ಬದಲಾಗಿ ತಮ್ಮ ನಿತ್ಯ ಬದುಕಿನ ಜೀವನೋಪಾಯದ ಮಾರ್ಗಗಳನ್ನು ಕಲ್ಪಿಸಿಕೊಳ್ಳುವ ತಾಣಗಳಾಗಿರುತ್ತವೆ. ಈ ಜಾತ್ರೆಗಳಲ್ಲಿ, ಸಂತೆಗಳಲ್ಲಿ ವ್ಯಾಪಾರ ವಹಿವಾಟು ನಡೆಸುವ ಯಾವುದೇ ಸಮುದಾಯದ ವ್ಯಕ್ತಿಗಾದರೂ ಅದು ಜೀವನೋಪಾಯದ ಮಾರ್ಗವಾಗಿರುತ್ತದೆಯೇ ಹೊರತು, ಬಂಡವಾಳಶೇಖರಣೆ ಅಥವಾ ಲಾಭ ಗಳಿಕೆಯ ದಂಧೆ ಆಗಿರುವುದಿಲ್ಲ. ಹಾಗಾಗಿಯೇ ಮಾರುಕಟ್ಟೆಯ ಸಹಜ ಪೈಪೋಟಿಯ ನಡುವೆಯೇ ಸಂತೆಗಳಲ್ಲಿ, ಜಾತ್ರೆಗಳಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ನಡೆಸುವವರ ನಡುವೆ ಒಂದು ಸಮನ್ವಯದ, ಸೌಹಾರ್ದತೆಯ ವಾತಾವರಣ ನಿರ್ಮಾಣವಾಗಿರುತ್ತದೆ.

Also Read : ಹಿಂದೂ ಅಲ್ಲವೆಂದು ದೇಗುಲದ ಉತ್ಸವದಲ್ಲಿ ನೃತ್ಯ ಪ್ರದರ್ಶನಕ್ಕೆ ನಕಾರ : ಎಲ್ಲಿದೆ ‘ವಸುದೈವ ಕುಟುಂಬಕಂ’? ಎಂದ ಸಂಸದ ಶಶಿ ತರೂರ್!

ಇಂತಹ ಒಂದು ಸಾಂಸ್ಕೃತಿಕ ಸಮನ್ವಯದ ವಾತಾವರಣವನ್ನು ಕಲುಷಿತಗೊಳಿಸಲು, ಮತಾಂಧತೆಯ ವಿಷಾನಿಲವನ್ನು ಹರಡುತ್ತಿರುವುದು ದುರಂತ. ಮೂಲತಃ ಶೂದ್ರಾದಿ ದೇವಾನುದೇವತೆಗಳು ಮತ್ತು ಜನಪದೀಯ ನಂಬಿಕೆಗಳನ್ನಾಧರಿಸಿದ ಈ ಜಾತ್ರೆಗಳಲ್ಲಿ ತನ್ನ ಬೇರುಗಳನ್ನು ಹರಡಲು ಯತ್ನಿಸುತ್ತಿರುವ ವೈದಿಕಶಾಹಿ ಪರಂಪರೆ ಅಲ್ಲಿ ತನ್ನದೇ ಆದ ಮಡಿವಂತಿಕೆ, ಪ್ರತ್ಯೇಕತೆ, ಶ್ರೇಷ್ಠತೆಯ ವ್ಯಸನಗಳನ್ನು ಪಸರಿಸಲು ಪ್ರಯತ್ನಿಸುತ್ತಿದೆ. ಇದರ ಒಂದು ಭಾಗವಾಗಿಯೇ ಕೆಲವು ಹಿಂದೂ ಸಂಘಟನೆಗಳು, ಜಾತ್ರೆಗಳಲ್ಲಿ ಮುಸಲ್ಮಾನರ ಅಂಗಡಿ ಮುಗ್ಗಟ್ಟುಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸುತ್ತಿವೆ. ಮತೀಯ ಆಲೋಚನೆ ಮತ್ತು ಮತಾಂಧತೆಯಿಂದ ಮುಕ್ತವಾಗಿರುವ ಒಂದು ಸಮನ್ವಯದ ನೆಲದಲ್ಲಿ ಮತಾಂಧತೆಯ ವಿಷಬೀಜಗಳನ್ನು ಬಿತ್ತುವ ಮೂಲಕ, ಜನಸಮುದಾಯಗಳ ನಡುವೆ ತಾರತಮ್ಯದ, ಪ್ರತ್ಯೇಕತೆಯ ಗೋಡೆಗಳನ್ನು ನಿರ್ಮಿಸುವ ಇಂತಹ ಪ್ರಯತ್ನಗಳನ್ನು ಪ್ರಜ್ಞಾವಂತ ಸಮಾಜ ವಿರೋಧಿಸಲೇಬೇಕಿದೆ.

ದೇಶ ಸ್ವತಂತ್ರವಾಗಿ ಏಳು ದಶಕಗಳು ಕಳೆದರೂ ಇಂದಿಗೂ ದೇವಾಲಯದ ಆವರಣಗಳಲ್ಲಿ ಸಹಪಂಕ್ತಿ ಭೋಜನವನ್ನು ಕಾಣಲಾಗದ ದುರಂತ ಸನ್ನಿವೇಶವನ್ನು ನಾವು ನೋಡುತ್ತಿದ್ದೇವೆ. ದೇವಸ್ಥಾನಗಳಲ್ಲಿ, ಪೂಜಾ ಸ್ಥಳಗಳಲ್ಲಿ ಅಸ್ಪೃಶ್ಯತೆಯ ಆಚರಣೆಯೂ ಇಂದಿಗೂ ಜಾರಿಯಲ್ಲಿದೆ. ಅನ್ನ ಉಣ್ಣುವ ಜಾಗದಲ್ಲಿ ಪ್ರತ್ಯೇಕತೆಯ ಗೋಡೆಗಳನ್ನು ಕಟ್ಟುವುದರಲ್ಲಿ ನಿಷ್ಣಾತವಾಗಿರುವ ಶಕ್ತಿಗಳೇ ಇಂದು ಅನ್ನ ಸಂಪಾದಿಸುವ ಜಾಗಗಳಲ್ಲೂ ಬೇಲಿಗಳನ್ನು ನಿರ್ಮಿಸಲು ಮುಂದಾಗುತ್ತಿವೆ. ಜಾತ್ರೆಗಳಲ್ಲಿ ಮುಸಲ್ಮಾನರ ಅಂಗಡಿ ಮುಗ್ಗಟ್ಟುಗಳನ್ನು ನಿಷೇಧಿಸುವ ಆಗ್ರಹದ ಹಿಂದೆ, ಸಮನ್ವಯ ಸಂಸ್ಕೃತಿಯನ್ನು ಭಂಗಗೊಳಿಸುವ, ಸಾಂಸ್ಕೃತಿಕ ಸೌಹಾರ್ದತೆಯನ್ನು ಕದಡುವ ಕುತಂತ್ರ ಇರುವುದನ್ನು ಗಮನಿಸಬೇಕಿದೆ.

ಈ ಸಮನ್ವಯ ಸಂಸ್ಕೃತಿಯನ್ನು ಹಿಂದೂಗಳ ಜಾತ್ರೆಗಳಲ್ಲಿ ಕಾಣುವಂತೆಯೇ, ಕ್ರೈಸ್ತರ ಹಲವು ಹಬ್ಬ, ಉತ್ಸವಗಳಲ್ಲಿ, ಮುಸಲ್ಮಾನರ ಉರುಸ್, ಮೊಹರಂ ಮುಂತಾದ ಹಬ್ಬಗಳ ಸಂದರ್ಭದಲ್ಲಿ ಕಾಣುತ್ತಲೇ ಬಂದಿದ್ದೇವೆ. ಜನಸಾಮಾನ್ಯರ ಬದುಕಿನ ಒಂದು ಭಾಗವಾಗಿಯೇ ಬೆಳೆದುಬಂದಿರುವ ಸ್ಥಳೀಯ ಮಾರುಕಟ್ಟೆಗಳು ಸದಾ ಸಮನ್ವಯತೆಯೊಂದಿಗೇ ನಡೆದುಬಂದಿವೆ. ಮದುವೆ, ಮುಂಜಿ, ನಾಮಕರಣ, ಹಬ್ಬ ಹರಿದಿನಗಳ ಸಂದರ್ಭಗಳಲ್ಲಿ ಸಣ್ಣ ವ್ಯಾಪಾರದ ವಲಯ ಎಲ್ಲ ಮತ ಧರ್ಮಗಳನ್ನೂ ಪ್ರತಿನಿಧಿಸುತ್ತಲೇ ಬಂದಿದೆ. ಹೂ ಮಾರುವವರಿಂದ ಹಿಡಿದು, ಪೂಜಾ ಸಾಮಗ್ರಿಯನ್ನು ಮಾರುವವರವರೆಗೆ, ಧಾರ್ಮಿಕ ಆಚರಣೆಗಳ ಉಪಕರಣಗಳನ್ನು ಒದಗಿಸುವವರೆಗೆ, ಈ ಸಾಂಸ್ಕೃತಿಕ ಸಮನ್ವಯವನ್ನು ವ್ಯಾಪಾರಿ ವಲಯ ಕಾಪಾಡಿಕೊಂಡುಬಂದಿದೆ.

ಈ ಸಮನ್ವಯದ ನಡುವೆಯೇ ತಲೆದೋರುವ ಅಸ್ಪೃಶ್ಯತೆಯಂತಹ ಹೀನ ಆಚರಣೆಗಳನ್ನು ನಮ್ಮ ಸಮಾಜ ನಿರ್ಲಕ್ಷಿಸುತ್ತಾ ಬಂದಿರುವುದನ್ನೂ ಈ ಸಂದರ್ಭದಲ್ಲಿ ಮರೆಯುವಂತಿಲ್ಲ. ದೇವಸ್ಥಾನಗಳಲ್ಲಿ ಸಹಪಂಕ್ತಿ ಭೋಜನವನ್ನು ನಿರಾಕರಿಸುವ, ಮಡೆ ಸ್ನಾನದಂತಹ ಸಾಂಸ್ಕೃತಿಕ ದೌರ್ಜನ್ಯವನ್ನು ಪ್ರೋತ್ಸಾಹಿಸುವ ಒಂದು ಕ್ರೂರ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ತಾರತಮ್ಯದ ನೆಲೆಗಳು ಇಂದು ವಿಸ್ತೃತ ನೆಲೆಯಲ್ಲಿ ಅನಾವರಣಗೊಳ್ಳುತ್ತಿವೆ. ಈ ತಾರತಮ್ಯದ ನೆಲೆಗಳನ್ನು ಮತಾಂಧ ಶಕ್ತಿಗಳು ಆಕ್ರಮಿಸಿಕೊಂಡಷ್ಟೂ ಸಾಮಾಜಿಕ ಸೌಹಾರ್ದತೆ ನಾಶವಾಗುತ್ತಲೇ ಹೋಗುತ್ತದೆ. ಹಿಂದುತ್ವ ರಾಜಕಾರಣದ ಏಕಮುಖಿ ಸಂಸ್ಕೃತಿಯನ್ನು ಹೇರುವ ಹುನ್ನಾರಗಳಿಗೆ ಪೂರಕವಾಗಿಯೇ ಈ ಆಕ್ರಮಣಗಳೂ ನಡೆಯುತ್ತಿರುವುದು ಸ್ಪಷ್ಟ.

ಮಾರುಕಟ್ಟೆ ಆರ್ಥಿಕತೆಯ ದೃಷ್ಟಿಯಿಂದಲೂ ಮುಸಲ್ಮಾನರ ವ್ಯಾಪಾರ ನಿಷೇಧಿಸುವ ಪ್ರಯತ್ನಗಳು ಹಲವು ಪಲ್ಲಟಗಳಿಗೆ ಕಾರಣವಾಗುತ್ತವೆ. ಮುಸಲ್ಮಾನರ ಅಂಗಡಿಯಲ್ಲಿ ಬಿಕರಿಯಾಗುವ, ವಿನಿಮಯವಾಗುವ ಪದಾರ್ಥಗಳ ಹಿಂದೆ ಹಲವು ಹಿಂದೂ, ಕ್ರೈಸ್ತ ಸಮುದಾಯಗಳ ಶ್ರಮವೂ ಇರುತ್ತದೆ. ಬಿಕರಿಯಾಗುವ ಪದಾರ್ಥಗಳು ಮೂಲತಃ ಮಾನವ ಶ್ರಮದಿಂದ ಉತ್ಪಾದಿತವಾಗಿರುತ್ತವೆ. ಈ ಉತ್ಪಾದನೆಯ ಪ್ರಕ್ರಿಯೆಯಲ್ಲಿನ ಶ್ರಮವನ್ನು ಜಾತಿ, ಮತ, ಧರ್ಮದ ನೆಲೆಯಲ್ಲಿ ವಿಂಗಡಿಸಲು ಸಾಧ್ಯವಾಗುವುದೂ ಇಲ್ಲ. ಆದರೆ ಒಂದು ನಿರ್ದಿಷ್ಟ ಮತದ ವ್ಯಾಪಾರಿಗಳಿಗೆ ನಿರ್ಬಂಧ ಹೇರುವುದರಿಂದ, ಉತ್ಪಾದನಾ ವಲಯದ ಸರಾಗ ವಹಿವಾಟುಗಳೂ ಪ್ರಕ್ಷುಬ್ಧವಾಗುತ್ತವೆ ಎಂಬ ವಾಸ್ತವವನ್ನು ನಾವು ಗ್ರಹಿಸಬೇಕಿದೆ. ರೇಷ್ಮೆ ಗೂಡು ತಯಾರಿಸುವವರು ಹಿಂದೂ ಆಗಿದ್ದರೆ, ನೂಲು ತೆಗೆಯುವವರು ಮುಸ್ಲಿಂ ಆಗಿರುತ್ತಾನೆ. ಸೀರೆ ನೇಯುವವನು ನೇಕಾರನಾಗಿರುತ್ತಾನೆ ಅದನ್ನ ಒಬ್ಬ ಮಾರ್ವಾಡಿಯೋ, ವೈಶ್ಯನೋ, ಮುಸಲ್ಮಾನನೋ ಮಾರಾಟ ಮಾಡುತ್ತಾನೆ. ಈ ಶ್ರಮಶಕ್ತಿಯ ವಾಹಿನಿಯೇ ಸಮಾಜದಲ್ಲಿ ಸಮನ್ವಯತೆ, ಸೌಹಾರ್ದತೆಯನ್ನು ಸಂರಕ್ಷಿಸಲು ಸಾಧ್ಯ.

ತಮ್ಮ ಶ್ರಮಶಕ್ತಿಯ ಮೂಲಕ ಸಮಾಜದ ವಿಭಿನ್ನ ಸಮುದಾಯಗಳನ್ನು ಬೆಸೆಯುವ ದುಡಿಯುವ ವರ್ಗಗಳಲ್ಲಿ ಜಾತಿ, ಮತ, ಧರ್ಮ ಅಥವಾ ಪಂಥೀಯ ಪ್ರಜ್ಞೆಯನ್ನು ಬೆಳೆಸುವುದರ ಬದಲು, ವರ್ಗಪ್ರಜ್ಞೆಯನ್ನು ಬೆಳೆಸಲು ಯತ್ನಿಸಿದ್ದರೆ ಬಹುಶಃ ಭಾರತ ಈ ದುಸ್ಥಿತಿಗೆ ತಲುಪುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ತಮ್ಮ ಸಾಂಸ್ಕೃತಿಕ ಬೇರುಗಳನ್ನು ಅರಿತು, ತಮ್ಮ ಶ್ರಮಾಧಾರಿತ ಬದುಕಿನ ಮಾರ್ಗಗಳನ್ನು ಹಸನುಗೊಳಿಸುತ್ತಾ, ಜಾತಿ, ಮತ, ಧರ್ಮಗಳ ವಿಷಬೀಜಗಳನ್ನು ಕಿತ್ತೊಗೆದು ಬಹುತ್ವ ಭಾರತದ ಸಮನ್ವಯ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ಈ ದೇಶದ ದುಡಿಯುವ ವರ್ಗಗಳ ಮೇಲಿದೆ. ಜಾತಿ-ವರ್ಗ ತಾರತಮ್ಯಗಳಿಂದ ಹೊರತಾದ, ದೌರ್ಜನ್ಯಗಳಿಂದ ಮುಕ್ತವಾದ, ಅಸ್ಪೃಶ್ಯತೆ ಮತ್ತು ಪ್ರತ್ಯೇಕತೆಯಂತಹ ಹೀನ ಆಚರಣೆಗಳಿಂದ ಮುಕ್ತವಾದ, ಮತೀಯತೆ-ಮತಾಂಧತೆಯಂತಹ ವಿಷವಲಯದಿಂದ ಮುಕ್ತವಾದ, ಒಂದು ಮಾನವೀಯ ವಾತಾವರಣವನ್ನು ಸೃಷ್ಟಿಸುವ ಮೂಲಕ, ಇಂದು ಬಿತ್ತಲಾಗುತ್ತಿರುವ ಮತಾಂಧತೆಯ ವಿಷಬೀಜಗಳನ್ನು ನಿರ್ವೀರ್ಯಗೊಳಿಸಲು ಮುನ್ನಡೆಯಬೇಕಿದೆ. ಆಗಲೇ ಕರ್ನಾಟಕ ಅಥವಾ ಭಾರತ “ ಸರ್ವ ಜನಾಂಗದ ಶಾಂತಿಯ ತೋಟ” ಆಗಲು ಸಾಧ್ಯ.

Tags: BJPCongress PartyCovid 19ಕರಾಳ ನೆರಳುಜಾತ್ರೆ-ಸಂತೆನರೇಂದ್ರ ಮೋದಿಬಿಜೆಪಿಮತಾಂಧತೆಮಂದಿರ ಮಸೀದಿ ಶಾಲೆ
Previous Post

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಕೊಲ್ಲಲು ಬಿಜೆಪಿ ಪ್ರಯತ್ನಿಸುತ್ತಿದೆ : ಎಎಪಿ ಆರೋಪ

Next Post

ಸಚಿವ ಈಶ್ವರಪ್ಪರಿಗೆ ಸಂಕಷ್ಟ : ದ್ವೇಷ ಭಾಷಣ ಮಾಡಿದ್ದಕ್ಕೆ FIR ದಾಖಲಿಸಲು ಕೋರ್ಟ್‌ ಸೂಚನೆ!

Related Posts

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್
Top Story

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

by ಪ್ರತಿಧ್ವನಿ
April 17, 2026
0

ವಿಶೇಷ ಲೇಖನ : ನಾ ದಿವಾಕರ (ಕೃಪೆ : ಭೀಮವಾದ ವಿಶೇಷ ಸಂಚಿಕೆ ಏಪ್ರಿಲ್‌ 2026) ಡಾ. ಬಿ.ಆರ್. ಅಂಬೇಡ್ಕರ್‌ ಕರ್ನಾಟಕಕ್ಕೆ ಭೇಟಿ ನೀಡಿದ ಚಾರಿತ್ರಿಕ ಸಂದರ್ಭಗಳನ್ನು...

Read moreDetails
ಭಾರತದಲ್ಲಿ ಸಮಕಾಲೀನ ಪ್ರಭುತ್ವ..

ಭಾರತದಲ್ಲಿ ಸಮಕಾಲೀನ ಪ್ರಭುತ್ವ..

March 21, 2026
ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

March 18, 2026
ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

March 1, 2026
ಕನ್ಯಾಕುಮಾರಿ- ಕಾಶ್ಮೀರ ರೈತ ಜಾಗೃತಿ ಯಾತ್ರೆ: MSPಗೆ ಸಿಗಲಿರುವುದೇ ಕೇಂದ್ರದ ಅಸ್ತು?

ಕನ್ಯಾಕುಮಾರಿ- ಕಾಶ್ಮೀರ ರೈತ ಜಾಗೃತಿ ಯಾತ್ರೆ: MSPಗೆ ಸಿಗಲಿರುವುದೇ ಕೇಂದ್ರದ ಅಸ್ತು?

February 3, 2026
Next Post
ಸಚಿವ ಈಶ್ವರಪ್ಪರಿಗೆ ಸಂಕಷ್ಟ : ದ್ವೇಷ ಭಾಷಣ ಮಾಡಿದ್ದಕ್ಕೆ FIR ದಾಖಲಿಸಲು ಕೋರ್ಟ್‌ ಸೂಚನೆ!

ಸಚಿವ ಈಶ್ವರಪ್ಪರಿಗೆ ಸಂಕಷ್ಟ : ದ್ವೇಷ ಭಾಷಣ ಮಾಡಿದ್ದಕ್ಕೆ FIR ದಾಖಲಿಸಲು ಕೋರ್ಟ್‌ ಸೂಚನೆ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada