ಕರ್ನಾಟಕದಲ್ಲಿ ಹೊಸದಾಗಿ ರಚಿಸಿದ ವಿಜಯನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಪ್ಟೆಂಬರ್ 23ರಿಂದ ಇದುವರೆಗೆ ಆರು ಜನರು ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಈ ಮಧ್ಯೆ, 100 ಕ್ಕೂ ಹೆಚ್ಚು ಜನರನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
2,000 ಜನಸಂಖ್ಯೆ ಹೊಂದಿರುವ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿ ಈ ಸಾವುಗಳು ವರದಿಯಾಗಿವೆ. ಮೂಲಗಳ ಪ್ರಕಾರ, ಸಾವಿನ ಸರಣಿ ಸೆಪ್ಟೆಂಬರ್ 23 ರಿಂದ ಪ್ರಾರಂಭವಾಗಿದೆ. ಸಪ್ಟೆಂಬರ್ 23ರಂದು ಇಬ್ಬರು ವ್ಯಕ್ತಿಗಳು ಅತಿಸಾರದಿಂದ ಸಾವನ್ನಪ್ಪಿದ್ದರು ಮತ್ತು ಅಕ್ಟೋಬರ್ 1 ರಂದು ಮತ್ತೊಬ್ಬರು ಸಾವನ್ನಪ್ಪಿದರು.
ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ ಆಗಸ್ಟ್ ಆರಂಭದಲ್ಲಿಯೇ ಹಳ್ಳಿಯ ಜನರು ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸಿದ್ದರು ಮತ್ತು ಈ ಬಗ್ಗೆ ಹೆಚ್ಚಿನ ವಿಚಾರಣೆ ಕೈಗೊಂಡು ನೀರಿನ ಮಾದರಿಗಳನ್ನು ಸಂಗ್ರಹಿಸಿದಾಗ ಆ ನೀರು ಕುಡಿಯಲು ಯೋಗ್ಯವಲ್ಲ ಎಂದು ಸಾಬೀತಾಗಿತ್ತು. ಆಗ ಗ್ರಾಮವು ಬಳ್ಳಾರಿ ಜಿಲ್ಲೆಯಲ್ಲಿತ್ತು.

ಅಕ್ಟೋಬರ್ 2 ರಂದು ವಿಜಯನಗರ ಜಿಲ್ಲೆಯನ್ನು ಮುಖ್ಯಮಂತ್ರಿ ಅನಾವರಣಗೊಳಿಸಿದರು. ಆ ಹೊತ್ತಿಗಾಗುವಾಗಲೇ ವಾಂತಿ ಮತ್ತು ಅತಿಸಾರ ಖಾಯಿಲೆಯಿಂದ ಗ್ರಾಮಸ್ಥರು ಸಾವನ್ನಪ್ಪಿದ್ದರು. ಆಡಳಿತಾಧಿಕಾರಿಯೊಬ್ಬರ ಪ್ರಕಾರ ಕೊಳವೆಬಾವಿಗೆ ಹೊಸ ಪೈಪ್ಲೈನ್ಗಳನ್ನು ಅಳವಡಿಸುವ ಸಮಯದಲ್ಲಿ ಕೊಳಚೆನೀರು ಮತ್ತು ಹಾನಿಗೊಳಗಾದಾಗ ನೀರು ಕುಡಿಯುವ ನೀರಿನೊಂದಿಗೆ ಬೆರೆತು ಈ ಅನಾಹುತ ಸಂಭವಿಸಿದೆ.
ಮೃತರನ್ನು ಲಕ್ಷ್ಮಮ್ಮ (50), ಬಸಮ್ಮ ಹವನೂರು (72), ನೀಲಪ್ಪ ಬೆಳವಗಿ (63), ಗೊನೆಪ್ಪ (55), ಮಹದೇವಪ್ಪ (70) ಮತ್ತು ಕೆಂಚಮ್ಮ (73) ಎಂದು ಗುರುತಿಸಲಾಗಿದೆ. ಜಿಲ್ಲಾಡಳಿತವು ಗ್ರಾಮದಲ್ಲಿ ತಾತ್ಕಾಲಿಕ ಆಸ್ಪತ್ರೆಯನ್ನು ಸ್ಥಾಪಿಸಿದೆ ಮತ್ತು ರೋಗಿಗಳನ್ನು ಸ್ಥಳಾಂತರಿಸಲು ಎರಡು ಆಂಬ್ಯುಲೆನ್ಸ್ಗಳನ್ನು ನಿಯೋಜಿಸಲಾಗಿದೆ.
ವಿಜಯನಗರ ಜಿಲ್ಲಾ ಆರೋಗ್ಯಾಧಿಕಾರಿ ಜನಾರ್ಧನ್ ಹೆಚ್ ಎಲ್ ಮಾತನಾಡಿ ಚರಂಡಿ ಪೈಪ್ಲೈನ್ ಸೋರಿಕೆಯಿಂದಾಗಿ ನೀರು ಕಲುಷಿತಗೊಂಡಂತೆ ತೋರುತ್ತಿದೆ ಎಂದು ಹೇಳಿದ್ದಾರೆ ಮತ್ತು “ರೋಗಿಗಳನ್ನು ಬಳ್ಳಾರಿ, ಹೊಸಪೇಟೆ, ಹುಬ್ಬಳ್ಳಿಗೆ ಸ್ಥಳಾಂತರಿಸಲಾಗಿದೆ ಮತ್ತು ಸಾರ್ವಜನಿಕ ಬಳಕೆಗಾಗಿ ಗ್ರಾಮದಲ್ಲಿ ಆರ್ಒ ವಾಟರ್ ಪ್ಲಾಂಟ್ ಸ್ಥಾಪಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಘಟನೆಯು ಗಂಭೀರ ಸ್ವರೂಪದ್ದಾಗಿದೆ ಎಂದು ಹೇಳಿ ಮೃತರ ಕುಟುಂಬಕ್ಕೆ 3 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಮಂಗಳವಾರ ಈ ಬಗ್ಗೆ ತನಿಖೆಗೂ ಆದೇಶಿಸಿ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿದ್ದಾರೆ.

ಸಾವುಗಳನ್ನು ದೃಢಪಡಿಸಿರುವ ವಿಜಯನಗರ ಜಿಲ್ಲೆಯ ಉಪ ಆಯುಕ್ತ ಪಿ ಅನಿರುದ್ಧ್ ಶ್ರವಣ್ “ಆಗಸ್ಟ್ ಮೊದಲ ವಾರದಲ್ಲಿ ಈ ಸಮಸ್ಯೆ ಮೊದಲು ಬೆಳಕಿಗೆ ಬಂದಿತ್ತು ಆದರೆ ಸೆಪ್ಟೆಂಬರ್ 23 ರಂದು ಇಬ್ಬರು ವ್ಯಕ್ತಿಗಳು ಸತ್ತ ನಂತರ 54 ಜನರು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ ” ಎಂದು ಹೇಳಿದ್ದಾರೆ.
ನಾವು ಹಳ್ಳಿಯ ನೀರಿನ ಮೂಲಗಳು ಮತ್ತು ಬೋರ್ವೆಲ್ಗಳನ್ನು ಮುಚ್ಚಿ ಆರ್ಒ ಪ್ಲಾಂಟ್ ಅನ್ನು ಸ್ಥಾಪಿಸಿದ್ದೇವೆ. ಇತರ ಮೂಲಗಳಿಂದ ನೀರನ್ನು ಬಳಸಬೇಡಿ ಮತ್ತು ಅವುಗಳನ್ನು ಕುದಿಸಿ ಬಳಸಿ ಎಂದು ಗ್ರಾಮಸ್ಥರಿಗೆ ತಿಳಿಸಲಾಗಿದೆ. ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು ಜಿಲ್ಲಾಡಳಿತ ಮತ್ತು ಅಧಿಕಾರಿಗಳು ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.






