ಬಲಿಷ್ಠ, ಪ್ರಬಲ, ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಎಂಬ ವಿಶೇಷಣಗಳಿಂದ ಕರೆಸಿಕೊಳ್ಳಲು ಹಪಾಹಪಿಸುವ ನರೇಂದ್ರ ಮೋದಿಯವರು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ವಿಧಿ-ವಿಧಾನಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡಿದರೂ ಅವುಗಳನ್ನು ಅನುಷ್ಠಾನಕ್ಕೆ ತಂದಿದ್ದು ಹಾಗೂ ಕ್ಲಿಷ್ಟ ಸಂದರ್ಭದಲ್ಲಿ ಮಾದರಿಯ ನಡೆ ಅನುಸರಿಸಿದ್ದು ವಿರಳ ಎಂಬ ಆರೋಪ ಪ್ರಬಲವಾಗಿ ಕೇಳಿ ಬಂದಿದೆ. ಚೀನಾವು ಭಾರತದ ನೆಲೆಯನ್ನು ವಶಪಡಿಸಿಕೊಳ್ಳಲು ಯತ್ನಿಸಿದರೂ ಅದನ್ನು ಸಮರ್ಥವಾಗಿ ಎದುರಿಸಲು ತೋರಬೇಕಾದ ಮುತ್ಸದ್ದಿತನವನ್ನು ಮೋದಿಯವರು ಮೆರೆಯಲಿಲ್ಲ. ಭಾರತದ 20 ಸೈನಿಕರನ್ನು ಚೀನಾ ಬಲಿ ಪಡೆದ ನಂತರ ಸಾರ್ವಜನಿಕ ಮುಖಭಂಗ, ವಿಪಕ್ಷಗಳ ಟೀಕೆಯಿಂದ ಪಾರಾಗಲು ಸರ್ವಪಕ್ಷ ಸಭೆ ಕರೆಯುವ ತೀರ್ಮಾನವನ್ನು ದಿಗ್ಮೂಢರಾದ ಮೋದಿಯವರು ಮಾಡಿದ್ದರು. ತನ್ನ ಪ್ರಜೆಗಳ ಮೇಲೆ ತೀವ್ರ ನಿಗಾ ಇಡುವ, ನಿರಂಕುಶ ಪ್ರಭುತ್ವ, ಕ್ಸಿ ಜಿನ್ ಪಿಂಗ್ ಸರ್ವಾಧಿಕಾರಕ್ಕೆ ಒಳಪಟ್ಟಿರುವ ಚೀನಾ ಪ್ರೇರೇಪಿಸಿದ ನಂತರ ಮೋದಿಯವರಿಗೆ ಸರ್ವಪಕ್ಷ ಸಭೆ ಕರೆಯುವ ವಿಚಾರ ನೆನಪಿಗೆ ಬಂದಂತಿದೆ!
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದ ಲೋಪಗಳನ್ನು ಎತ್ತಿಹಿಡಿಯುವ ಪ್ರಮುಖ ಕೆಲಸ ಮಾಡುವ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೋದಿಯವರು ಕರ್ತವ್ಯ ನಿರ್ವಹಿಸಿದ್ದು ಅಪರೂಪ. ಅಪ್ರಿಯ ಸತ್ಯಗಳನ್ನು ಹೇಳುವ, ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನ್ನಲಾಗುವ ಮಾಧ್ಯಮಗಳನ್ನು ಅವರೆಂದೂ ಗಂಭೀರವಾಗಿ ಕಂಡೇ ಇಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಮೋದಿಯವರ ಕಳೆದ ಆರು ವರ್ಷಗಳ ಆಡಳಿತದಲ್ಲಿ ಅವರು ಒಂದೇ ಒಂದು ಸುದ್ದಿಗೋಷ್ಠಿ ನಡೆಸಿಲ್ಲ! ಈ ಮೂಲಕ ವಾಸ್ತವಕ್ಕೆ ಎದುರುಗೊಳ್ಳುವ, ಕಠಿಣ, ಭಿನ್ನ ಪ್ರಶ್ನೆಗಳನ್ನು ಎದುರಿಸಿ ದೇಶ ಹಾಗೂ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕಟ್ಟುವ ಮೂಲಕ ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅನುಕರಿಸುವ ಕೆಲಸವನ್ನು ಮೋದಿಯವರು ಮಾಡಿಯೇ ಇಲ್ಲ.
ದೇಶ ಹಾಗೂ ಜನತೆಯ ಹಿತಾಸಕ್ತಿಗಳನ್ನು ಕಾಯುವ ವಿಚಾರದಲ್ಲಿ ವಿಪಕ್ಷಗಳ ಸಲಹೆ-ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸುವ ಭವ್ಯ ಪರಂಪರೆಯನ್ನು ಭಾರತ ಅನುಸರಿಸಿಕೊಂಡು ಬಂದಿದೆ. ಆದರೆ, ತಮ್ಮ ಆಡಳಿತಾವಧಿಯಲ್ಲಿ ನರೇಂದ್ರ ಮೋದಿಯವರು ವಿರೋಧ ಪಕ್ಷಗಳ ನಾಯಕರನ್ನು ಅತ್ಯಂತ ಕಟು ಶಬ್ದಗಳಲ್ಲಿ ಟೀಕಿಸುವ ಮೂಲಕ ಅವರನ್ನು ಅಪಹಾಸ್ಯ ಮಾಡಿದ್ದೇ ಹೆಚ್ಚು. ಭಾರತದ ಭೂಪ್ರದೇಶವನ್ನು ಚೀನಾ ಅತಿಕ್ರಮಿಸಲು ಯತ್ನಿಸುತ್ತಿದೆ ಎಂಬುದನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಹಲವು ರಕ್ಷಣಾ ತಜ್ಞರು ವ್ಯಕ್ತಪಡಿಸಿದರೂ ಮೋದಿಯವರ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಬದಲಾಗಿ ರಾಹುಲ್ ಗಾಂಧಿ ಅವರ ಬಾಯಿ ಮುಚ್ಚಿಸಲು ಕೇಂದ್ರ ಸಚಿವ ರವಿಶಂಕರ ಪ್ರಸಾದ್, ಬಿಜೆಪಿಯ ಪ್ರಮುಖ ನಾಯಕರನ್ನು ನಿಯೋಜಿಸಿತ್ತೇ ವಿನಾ ದೇಶಕ್ಕೆ ಎದುರಾಗಿರುವ ಗಂಡಾಂತರವನ್ನು ತಪ್ಪಿಸಲು ರಾಜಕೀಯ ಹಾಗೂ ರಾಜತಾಂತ್ರಿಕ ಪ್ರಯತ್ನ ಮಾಡಲಿಲ್ಲ. ರಾಜಕೀಯ ಲಾಭ ಹೆಚ್ಚಾಗುವ ಸಂದರ್ಭದಲ್ಲಿ ವಿಪಕ್ಷಗಳನ್ನು ನಗಣ್ಯವಾಗಿ ಕಾಣುವ, ಕಠಿಣ ಸಂದರ್ಭದಲ್ಲಿ ವಿಪಕ್ಷಗಳ ಬೆಂಬಲ ಯಾಚಿಸುವ ಮೋದಿಯವರ ನಡೆ ಚರ್ಚಾರ್ಹ.
ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಕೇಂದ್ರೀಯ ಸಶಸ್ತ್ರ ಮೀಸಲು ಪಡೆಯ 45 ಯೋಧರನ್ನು ಉಗ್ರರು ಬಲಿ ಪಡೆದಾಗ ಹಾಗೂ ಆನಂತರ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತ ನಡೆಸಿದೆ ಎನ್ನಲಾದ ಬಾಲಕೋಟ್ ಏರ್ ಸ್ಟ್ರೈಕ್ ನಂತರ ವಿರೋಧ ಪಕ್ಷಗಳು ಸರ್ವಪಕ್ಷ ಕರೆಯುವಂತೆ ಒತ್ತಾಯಿಸಿದ್ದವು. ಈ ಸಂದರ್ಭದಲ್ಲಿ ಸರ್ವಪಕ್ಷ ಸಭೆ ಕರೆಯಲಾಯಿತಾದರೂ ಅದರ ನೇತೃತ್ವ ವಹಿಸಿದ್ದು ಹಾಲಿ ರಕ್ಷಣಾ ಸಚಿವ ಹಾಗೂ ಹಿಂದಿನ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ರಾಜನಾಥ್ ಸಿಂಗ್ ಹಾಗೂ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಎಂಬುದನ್ನು ಇಲ್ಲಿ ನೆನೆಯಬಹುದು.
ಇದಕ್ಕೂ ಮುನ್ನ ಮೋದಿಯವರ ಮಹತ್ವಾಕಾಂಕ್ಷಿ ತೀರ್ಮಾನ ಎನ್ನಲಾದ ನೋಟು ರದ್ದತಿಯಿಂದ ದೇಶದ ಜನರು ಎದುರಿಸಿದ ಸಂಕಷ್ಟಗಳ ಬಗ್ಗೆ ಚರ್ಚಿಸಲು ಒಮ್ಮೆ ಸರ್ವಪಕ್ಷ ಸಭೆ ಕರೆಯಲಾಗಿತ್ತು. ಅದೇ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಉಂಟಾದ ಉದ್ವಿಗ್ನ ಸ್ಥಿತಿಯ ಬಗ್ಗೆ ಅವಲೋಕನ ನಡೆಸಲು ಆನಂತರ “ಒಂದು ರಾಷ್ಟ್ರ, ಒಂದು ಚುನಾವಣೆ”ಯ ಸಾಧಕ-ಬಾಧಕದ ಕುರಿತು ಚರ್ಚೆಸಲು ಮೋದಿಯವರ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಸಲಾಗಿತ್ತು. ಉಳಿದಂತೆ ಅಧಿವೇಶನ ಆರಂಭಕ್ಕೂ ಮುನ್ನ ನಡೆಯುವ ಔಪಚಾರಿಕ ಸರ್ವಪಕ್ಷ ಸಭೆಗಳನ್ನು ಬಿಟ್ಟರೆ ಮೋದಿಯವರು ವಿರೋಧ ಪಕ್ಷಗಳನ್ನು ಎಂದಿಗೂ ಗಂಭೀರವಾಗಿ ಪರಿಗಣಿಸಿಯೇ ಇಲ್ಲ.
ಈಗ ಚೀನಾದೊಂದಿಗಿನ ಸಂಘರ್ಷದ ವಿಚಾರವಾಗಿ ಸರ್ವಪಕ್ಷ ಸಭೆಯ ನಂತರ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವ ಬದಲಿಗೆ ಏಕಮುಖ ಸಂವಹನದ ಮೂಲಕ “ಭಾರತದ ಭೂಪ್ರದೇಶವನ್ನು ಯಾರೂ ಅತಿಕ್ರಮಿಸಿಲ್ಲ” ಎಂದು ಮೋದಿಯವರು ಘೋಷಿಸಿದ್ದರು. ಇದನ್ನು ಕಟುವಾಗಿ ಟೀಕಿಸಿದ್ದ ಕಾಂಗ್ರೆಸ್ ಒಳಗೊಂಡ ಕೆಲವು ವಿಪಕ್ಷಗಳು, ಸೈನಿಕರ ವೀರಮರಣವನ್ನು ಪ್ರಧಾನಿ ಅವಮಾನಿಸುತ್ತಿದ್ದಾರೆ. ಒಂದೊಮ್ಮೆ ಚೀನಾ ಅತಿಕ್ರಮಣ ನಡೆಸಿಲ್ಲ ಎನ್ನುವುದಾದರೆ “20 ಸೈನಿಕರು ಸಾವನ್ನಪ್ಪಿದ್ದೇಕೆ” ಎಂಬ ಗಂಭೀರ ಪ್ರಶ್ನೆಗಳನ್ನು ಎಸೆದಿದ್ದವು.
ಪರಿಸ್ಥಿತಿಯ ಲಾಭ ಪಡೆದಿದ್ದ ಚೀನಾ ವಿದೇಶಾಂಗ ಇಲಾಖೆಯು ನರೇಂದ್ರ ಮೋದಿಯವರ ಮಾತುಗಳನ್ನು ತನ್ನ ವಾದ ಸಮರ್ಥಿಸಲು ಬಳಸಿಕೊಂಡಿತ್ತು. ತಡವಾಗಿ ಎಚ್ಚೆತ್ತುಕೊಂಡು ಮೋದಿಯವರ ಕಾರ್ಯಾಲಯವು ಸ್ಪಷ್ಟನೆ ನೀಡಿತ್ತಲ್ಲದೇ ತಮ್ಮ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂಬರ್ಥದ ಮಾತುಗಳನ್ನು ಆಡಿದೆ. ದೇಶ ಗಂಭೀರ ಸಮಸ್ಯೆಗಳಿಗೆ ಸಿಲುಕಿದಾಗ ಪ್ರಧಾನ ಮಂತ್ರಿ ಹಾಗೂ ಅವರ ಕಾರ್ಯಾಲಯ, ವಿದೇಶಾಂಗ ಇಲಾಖೆ ಹಾಗೂ ರಕ್ಷಣಾ ಇಲಾಖೆಯ ಮುಖ್ಯಸ್ಥರು ಜವಾಬ್ದಾರಿಯುತವಾಗಿ ಒಂದೇ ಸಂದೇಶ ರವಾನೆಯಾಗುವಂತೆ ನೋಡಿಕೊಳ್ಳಬೇಕೆ ವಿನಾ ಸ್ಥಳೀಯವಾಗಿ ರಾಜಕೀಯ ಲಾಭಗಳಿಸುವ ಲೆಕ್ಕಾಚಾರ ಮುಖ್ಯವಾಗಬಾರದು. ದೇಶಿಯ ರಾಜಕೀಯವನ್ನು ಬದಿಗಿಟ್ಟು ರಾಷ್ಟ್ರೀಯ ಹಿತಾಸಕ್ತಿಯನ್ನು ಎತ್ತಿಹಿಡಿಯಲು ವಿರೋಧ ಪಕ್ಷಗಳ ಮುಂದೆ ವಾಸ್ತವ ವಿಚಾರಗಳನ್ನು ಬಿಡಿಸಿಟ್ಟು ಅವರು ನೀಡುವ ಸಲಹೆ-ಸೂಚನೆಗಳನ್ನು ಪಾಲಿಸಬೇಕು. ಇದ್ಯಾವುದನ್ನೂ ಮಾಡದ ನರೇಂದ್ರ ಮೋದಿಯವರ ಸರ್ಕಾರವು “ದೇಶದ ಗಡಿಯನ್ನು ವಿರೋಧಿ ಪಾಳೆಯಕ್ಕೆ ಧಾರೆ ಎರೆದುಕೊಡುವ ರೀತಿಯಲ್ಲಿ ನಡೆದುಕೊಂಡಿದೆ” ಎಂಬ ಗಂಭೀರ ಆರೋಪವನ್ನು ಹಲವು ನಿವೃತ್ತ ಸೇನಾ ಪ್ರಮುಖರು ಹಾಗೂ ದೇಶದ ಭೌಗೋಳಿಕ ಹಾಗೂ ರಕ್ಷಣಾ ತಜ್ಞರು ಮಾಡಿದ್ದಾರೆ.
ಸದ್ಯದ ಬೆಳವಣಿಗೆಯು ದೀರ್ಘಾವಧಿಯಲ್ಲಿ ಭಾರತಕ್ಕೆ ಪ್ರಮುಖ ಸಮಸ್ಯೆಯಾಗಿ ಕಾಡುವುದರಲ್ಲಿ ಅನುಮಾನವೇ ಇಲ್ಲ ಎನ್ನುವ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಆದರೆ, ಆಡಳಿತ ಪಕ್ಷವಾದ ಬಿಜೆಪಿ ಹಾಗೂ ಅದರ ನಾಯಕರು ಇದು ಪ್ರಮುಖ ವಿಚಾರವೇ ಅಲ್ಲ. ವಿರೋಧ ಪಕ್ಷಗಳು ಹಾಗೂ ಬಿಜೆಪಿ ವಿರೋಧಿಗಳು ದೇಶದ ರಕ್ಷಣಾ ವಿಚಾರಗಳನ್ನು ಇಟ್ಟುಕೊಂಡು ಪ್ರಧಾನಿ ಮೋದಿಯವರ ಇಮೇಜ್ ಗೆ ಹೊಡೆತ ನೀಡುವ ಕೆಲಸ ಮಾಡುತ್ತಿವೆ ಎಂಬ ಅಸಮರ್ಥನೀಯ ವಾದ ಮಂಡಿಸುತ್ತಿವೆ.