ಲಾಕ್ಡೌನ್ನಿಂದ ಅನ್ಯರಾಜ್ಯಗಳಲ್ಲಿ ಬಾಕಿಯಾಗಿರುವ ವಲಸೆ ಕಾರ್ಮಿಕರು ಪರಿಸ್ಥಿತಿಗೆ ಒಳಗಾಗಿ ಕಾಲ್ನಡಿಗೆಯಲ್ಲಿ ತಮ್ಮೂರುಗಳಿಗೆ ಹೊರಟಿದ್ದರೆ ಅವರನ್ನು ಲಭ್ಯವಿರುವ ಬಸ್ಸುಗಳಲ್ಲಿ ಅಥವಾ ವಿಶೇಷ ʼಶ್ರಮಿಕ್ʼ ರೈಲುಗಳಲ್ಲಿ ಕಳುಹಿಸಬೇಕೆಂದು ಗೃಹ ಕಾರ್ಯದರ್ಶಿ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿ ಮತ್ತು ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಮಹಾರಾಷ್ಟ್ರದಲ್ಲಿ ನಡೆದ ರೈಲು ದುರಂತವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ, ವಲಸೆ ಕಾರ್ಮಿಕರ ಕುರಿತು ಇನ್ನಷ್ಟು ಕಾಳಜಿ ವಹಿಸಿದೆ. ಈಗಾಗಲೇ ವಲಸೆ ಕಾರ್ಮಿಕರಿಗೆ ತಮ್ಮೂರುಗಳಿಗೆ ತೆರಳಲು ವಿಶೇಷ ಶ್ರಮಿಕ್ ರೈಲುಗಳ ಸೇವೆ ಶುರು ಮಾಡಲಾಗಿತ್ತು. ಆದರೆ ಲಾಕ್ಡೌನ್ ಘೋಷಿಸಿದ 40 ದಿನಗಳ ಬಳಿಕ ವಿಶೇಷ ರೈಲು ಸೇವೆ ಪ್ರಾರಂಭಿಸಲಾಗಿತ್ತು. ಆದರೆ ಅದಾಗಲೇ ಕಾರ್ಮಿಕರು ಕಾಲ್ನಡಿಗೆಯಲ್ಲಿ ಯಾತ್ರೆ ಆರಂಭಿಸಿದ್ದರು.
ಹೀಗೊಂದು ಸೇವೆ ತಮಗಾಗಿ ಆರಂಭಗೊಂಡಿರುವ ಮಾಹಿತಿಯೂ ಇಲ್ಲದ ಕಾರ್ಮಿಕರು ಇನ್ನೂ ಸಾವಿರಾರು ಸಂಖ್ಯೆಯಲ್ಲಿ ತಮ್ಮೂರುಗಳಿಗೆ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ. ರಸ್ತೆಗಳ ಮೂಲಕ ಹಾಗೂ ರೈಲು ಹಳಿಗಳ ಮೂಲಕ ಸಾಗುತ್ತಿರುವ ಕಾರ್ಮಿಕರು ಕಂಡು ಬಂದರೆ ಅವರಿಗೆ ಆಹಾರ, ತಾತ್ಕಾಲಿಕ ಸೂರು ಹಾಗೂ ವೈದ್ಯಕೀಯ ಸವಲತ್ತುಗಳನ್ನು ನೀಡಿ ಲಭ್ಯವಿರುವ ಸಾರಿಗೆ ಸೇವೆಯ ಮೂಲಕ ಅವರನ್ನು ತಮ್ಮೂರುಗಳಿಗೆ ಕಳುಹಿಸಬೇಕೆಂದು ಗೃಹ ಕಾರ್ಯದರ್ಶಿ ಪತ್ರದಲ್ಲಿ ಹೇಳಿದ್ದಾರೆ.
ಮುಖ್ಯವಾಗಿ ಇಂತಹ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಗೃಹ ಕಾರ್ಯದರ್ಶಿ ರಾಜ್ಯಗಳ ಮುಖ್ಯ ಕಾರ್ಯದರ್ಶಿ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳಿಗೆ, ಇವರ ಕಾಳಜಿ ವಹಿಸುವಂತೆ ಎರಡು ಪತ್ರಗಳನ್ನು ಬರೆದಿದ್ದಾರೆ. ಕ್ಯಾಬಿನೆಟ್ ಕಾರ್ಯದರ್ಶಿ ಹಾಗೂ ಮುಖ್ಯ ಕಾರ್ಯದರ್ಶಿಗಳ ನಡುವೆ ಮೇ 10 ರಂದು ನಡೆದ ವೀಡಿಯೋ ಕಾನ್ಫರೆನ್ಸ್ ಚರ್ಚೆಯ ಹಿನ್ನಲೆಯಲ್ಲಿ ಎರಡೂ ಪತ್ರಗಳನ್ನು ಕಳುಹಿಸಲಾಗಿದೆ. ಸೋಮವಾರ ಕಳುಹಿಸಿದ್ದಾರೆನ್ನುವ ಪತ್ರದಲ್ಲಿ ವಲಸೆ ಕಾರ್ಮಿಕರಿಗೆ ಅಗತ್ಯವಿರುವ ವೈದ್ಯಕೀಯ ಸವಲತ್ತು ಮತ್ತು ಸೇವೆಗಳ ಕುರಿತು ಕಾಳಜಿ ವಹಿಸುವಂತೆ ಕೇಂದ್ರ ಆದೇಶಿಸಿದೆ.