ಕರೋನಾ ಕಾಲದ ಸಂಕಟ-ಸಂಕಷ್ಟಗಳಿಗೆ ಎಣೆಯಿಲ್ಲ. ಉಳ್ಳವರ ಗೋಳು ಒಂದಾದರೆ, ಇಲ್ಲದವರ ನರಳಾಟ ನೂರು. ಒಂದು ಕಡೆ ರೋಗ ತರುವ ಸಾವಿನ ಭೀತಿ. ಮತ್ತೊಂದು ಕಡೆ ಹಸಿವು ತರುವ ಸಾವಿನ ಭೀತಿ. ಇದು ದೇಶದ ಕಡುಬಡವರು, ಕೂಲಿಕಾರ್ಮಿಕರು, ವಲಸೆ ಕೂಲಿಗಳು ಮತ್ತು ರೈತರ ಅತ್ತ ಧರಿ, ಇತ್ತ ಪುಲಿ ಎಂಬ ಸ್ಥಿತಿ.
ದಿನದ ದುಡಿಮೆ ದಿನದ ಬದುಕು ಎಂಬ ಸ್ಥಿತಿಯಲ್ಲಿರುವ ದೇಶದ ಶೇ.30ರಷ್ಟು ಜನರ ಪಾಲಿಗೆ ಕರೋನಾ ಎಂಬುದು ಕೇವಲ ಒಂದು ಸೋಂಕಲ್ಲ; ಅದು ಅವರ ಪಾಲಿಗೆ ದಶಕಗಳ ಕಾಲ ದುಃಸ್ವಪ್ನವಾಗಿ ಕಾಡುವ ದುರಂತ. ಸೋಂಕಿತರಾದರೂ, ಆಗದೇ ಇದ್ದರೂ ಅವರ ಪಾಲಿಗೆ ಇದು ದುಃಸ್ವಪ್ನವೇ, ಸಾವು- ಬದುಕಿನ ಹೋರಾಟವೇ. ದುಡಿವ ಕೈಗೆ ಕೆಲಸವಿಲ್ಲ; ಉಣ್ಣುವ ಹೊಟ್ಟೆಗೆ ಗಂಜಿ ಇಲ್ಲ. ಬೆಳೆ ಬೆಳೆಯುವ ರೈತನಿಗೆ ಬಿತ್ತಲು ಬೀಜವಿಲ್ಲ, ಹಾಕಲು ಗೊಬ್ಬರವಿಲ್ಲ, ಕೊನೆಗೆ ಎಲ್ಲವೂ ಇದ್ದರೂ, ದುಡಿಯುವ ಜನರಿಲ್ಲ. ಹಾಗಾಗಿ ಆಗಾಗ ಸುರಿಯುತ್ತಿರುವ ಮಳೆಯ ನಡುವೆಯೂ ಕೈಕೈ ಹೊಸಕಿಕೊಂಡು ಮನೆಯ ಮಾಡು ನೋಡುತ್ತಾ ಕಾಲಕಳೆಯುವ ಅಸಹಾಯಕತೆ ರೈತನದ್ದು. ಇದು ಲಾಕ್ ಡೌನ್ ತಂದ ಆಪತ್ತು.
ಪಡಿತರ ವಿತರಣೆ, ಜನ್ ಧನ್ ಖಾತೆಗೆ ಐದು ನೂರು ರೂ. ಹಣ, ಕೃಷಿ ಉತ್ಪನ್ನ ಸಾಗಣೆಗೆ ಮುಕ್ತ ಅವಕಾಶ, ಸಾಲ ವಸೂಲಿ ಮತ್ತು ಕಂತು ತುಂಬುವ ಅವಧಿ ವಿಸ್ತರಣೆಯಂತಹ ಸರ್ಕಾರದ ಕ್ರಮಗಳು ವಾಸ್ತವವಾಗಿ ಹಳ್ಳಿಗಾಡಿನ ಜನರಿಗೆ ಬಹುತೇಕ ಟಿವಿ- ಪತ್ರಿಕೆಗಳ ಸುದ್ದಿಯಾಗಿವೆ ಅಷ್ಟೇ. ಸರ್ಕಾರದ ಪರಿಹಾರ- ಪ್ಯಾಕೇಜುಗಳನ್ನು ಜನರಿಗೆ ತಲುಪಿಸಲು, ತಲುಪುವಂತೆ ಕಣ್ಗಾವಲು ವಹಿಸಲು ರಾಜಧಾನಿಯ ಅಧಿಕಾರದ ಪಡಸಾಲೆಗಳಿಂದ ಸಾಧ್ಯವಾಗದು ಎಂಬುದಕ್ಕೆ ಸದ್ಯದ ಸ್ಥಿತಿಯೇ ನಿದರ್ಶನ.
ಆದರೆ, ಅಧಿಕಾರದ ವಿಕೇಂದ್ರೀಕರಣದ ಆಶಯದ ಪಂಚಾಯ್ತಿ ವ್ಯವಸ್ಥೆಯಲ್ಲಿ ನೈಜ ಜನಪರ ಕಾಳಜಿಯ, ಕಾನೂನು-ಕಾಯ್ದೆಯ ಅರಿವಿನ ವ್ಯಕ್ತಿಗಳು ಅಧಿಕಾರದ ಚುಕ್ಕಾಣಿ ಹಿಡಿದಿದ್ದರೆ, ಇಂತಹ ಸಂಕಷ್ಟದ ಹೊತ್ತಲ್ಲಿ ಹೇಗೆ ಕಟ್ಟಕಡೆಯ ವ್ಯಕ್ತಿಯ ಪಾಲಿಗೆ ಬದುಕು ಸಹನೀಯವಾಗಬಹುದು ಎಂಬುದಕ್ಕೆ ಒಂದು ಉದಾಹರಣೆ ಸಾಗರ ತಾಲೂಕಿನ ಶರಾವತಿ ಹಿನ್ನೀರು ದ್ವೀಪ ಪ್ರದೇಶ ತುಮರಿ ಗ್ರಾಮ ಪಂಚಾಯ್ತಿ ಒಂದು ನಿದರ್ಶನ.
ಮಾರ್ಚ್ 24ರಂದು ಪ್ರಧಾನಿ ಮೋದಿಯವರು ದಿಢೀರ್ ಲಾಕ್ ಡೌನ್ ಘೋಷಿಸಿದ ಬಳಿಕ, ಮೊದಲೇ ಹೊರಜಗತ್ತಿನ ಸಂಪರ್ಕವಂಚಿತ (ಲಾಂಚ್ ಹೊರತುಪಡಿಸಿ ಉಳಿದ ಹೊರ ಸಂಪರ್ಕಗಳು ದುರ್ಲಭ) ಈ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗರು ಅಕ್ಷರಶಃ ಕೋರೈಂಟೈನ್ ಆಗಿಹೋದರು. ಎರಡು ಪಂಚಾಯ್ತಿ ವ್ಯಾಪ್ತಿಯ ಸುಮಾರು 20 ಸಾವಿರ ಜನಸಂಖ್ಯೆಯನ್ನು ಹೊಂದಿರುವ ಈ ದ್ವೀಪ ಪ್ರದೇಶದಲ್ಲಿ ಬಹುತೇಕರ ಜೀವನ ನಡೆಯುವುದೇ ಕೃಷಿ ಕೂಲಿಯ ಮೇಲೆ. ಆದರೆ, ಲಾಕ್ ಡೌನ್ ನಿಂದಾಗಿ ಗುಂಪಾಗಿ ಜನರು ಒಂದೆಡೆ ಸೇರುವುದು, ಕೆಲಸ ಮಾಡುವುದಕ್ಕೆ ಬ್ರೇಕ್ ಬೀಳುತ್ತಲೇ ಅಂತಹ ಕೃಷಿ ಕಾರ್ಮಿಕರ ಬದುಕು ದಿಢೀರನೇ ಸ್ಥಗಿತವಾಯಿತು.
ಅಂತಹ ಹೊತ್ತಲ್ಲಿ ಪಂಚಾಯ್ತಿ ಆಡಳಿತ ಜನರ ನೆರವಿಗೆ ನಿಲ್ಲುವ ನಿರ್ಧಾರ ಮಾಡಿ, ದ್ವೀಪವಾಸಿಗಳ ಬವಣೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿತು. ಅದರ ಭಾಗವಾಗಿ, ಮೊದಲು ಸರ್ಕಾರದ ಸೂಚನೆಯಂತೆ 40 ಜನರ ಕೋವಿಡ್ ಕಣ್ಗಾವಲು ಸಮಿತಿ ರಚನೆ ಮಾಡಲಾಯಿತು. ಬಳಿಕ ನಿಯಮಿತವಾಗಿ ಆ ಸಮಿತಿಯ ಸಭೆ, ಏನೆಲ್ಲಾ ಮಾಡಬೇಕಿದೆ. ಜನರಿಗೆ ನೆರವಾಗಲೂ ಯಾವ ಪ್ರಯತ್ನಗಳನ್ನು ಮಾಡಬಹುದು, ಯಾರು ನಿಜಕ್ಕೂ ಸಂಕಷ್ಟದಲ್ಲಿದ್ದಾರೆ? ಹೊರ ಪ್ರದೇಶದಿಂದ ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಬಂದವರು ಯಾರು? ಮುಂಬೈ, ಬೆಂಗಳೂರಿನಂಥ ಊರುಗಳಿಂದ ಲಾಕ್ ಡೌನ್ ಘೋಷಣೆ ಬಳಿಕ ಬಂದವರು ಯಾರು? ಎಂಬ ಬಗ್ಗೆ ಚರ್ಚಿಸಿ, ಮುಂದಿನ ಕಾರ್ಯಯೋಜನೆ ತೀರ್ಮಾನಿಸಲಾಯಿತು. ಪಂಚಾಯ್ತಿ ಆಡಳಿತ ಮನೆ- ಮನೆ ಭೇಟಿ ನೀಡಿ, ಹೊರಗಿನಿಂದ ಬಂದವರಿಗೆ ನೋಟಿಸ್ ಜಾರಿ ಮಾಡಿ, ನಿಗಾ ಇಟ್ಟಿತು.
ಜೊತೆಗೆ ಸಂಕಷ್ಟಕ್ಕೀಡಾದ ಜನರಿಗೆ ಸ್ಥಳೀಯ ಆಡಳಿತ ತತಕ್ಷಣವೇ ಸ್ಪಂದಿಸಬೇಕು ಎಂಬ ಹಿನ್ನೆಲೆಯಲ್ಲಿ ಪಂಚಾಯ್ತಿ ಕಚೇರಿ ನಿತ್ಯವೂ ಬೆಳಿಗ್ಗೆ 8ರಿಂದ ರಾತ್ರಿ 8 ರ ತನಕ ತೆರೆದಿರುವಂತೆ ನೋಡಿಕೊಳ್ಳಲಾಯಿತು. ಕಚೇರಿಯಲ್ಲಿ ಅಧ್ಯಕ್ಷರು ಖುದ್ದು ಹಾಜರಿದ್ದು, ಸಮಸ್ಯೆ- ಸಂಕಷ್ಟ ಹೇಳಿಕೊಂಡು ಬರುವ ಜನರಿಗೆ ನೆರವು ನೀಡುವ ಬದ್ಧತೆ ತೋರಿದರು. ಪಂಚಾಯ್ತಿ ಸಿಬ್ಬಂದಿ ಮತ್ತು ಆಡಳಿತ ಮಂಡಳಿಯವರ ಮೊಬೈಲ್ ಸಂಖ್ಯೆಗಳೇ ಹೆಲ್ಪ್ ಲೈನ್ ಗಳಾಗಿ ಬದಲಾದವು.
ಮೂರೂ ಕಡೆ ನೀರಿನಿಂದ ಆವೃತವಾಗಿರುವ ಪ್ರದೇಶದಲ್ಲಿ ತುರ್ತು ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆ(ಲಾಂಚ್ ಸೇರಿದಂತೆ) ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಎದುರಾಗಬಹುದಾದ ತುರ್ತು ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸುವ ಬಗ್ಗೆ ಮುಂದಾಲೋಚನೆ ಮಾಡಿದ ಪಂಚಾಯ್ತಿ, ತನ್ನ ವ್ಯಾಪ್ತಿಯ ಪ್ರಸಿದ್ಧ ಯಾತ್ರಾ ಸ್ಥಳ ಸಿಗಂದೂರಿನ ಆ್ಯಂಬುಲೆನ್ಸನ್ನು ಪಡೆದುಕೊಂಡು, ನಿರಂತರ 24 ತಾಸು ಪಂಚಾಯ್ತಿ ವ್ಯಾಪ್ತಿಯ ಜನರ ತುರ್ತು ಸೇವೆಗೆ ನಿಯೋಜಿಸಿತು.
ಪಂಚಾಯ್ತಿ ವ್ಯಾಪ್ತಿಯಲ್ಲಿ ಮಂಗನಕಾಯಿಲೆ (ಕೆಎಫ್ ಡಿ) ಪ್ರಕರಣಗಳು ಉಲ್ಬಣಿಸಿದ್ದು, ಮಹಿಳೆಯೊಬ್ಬರು ಮೃತಪಟ್ಟಿದ್ದು, 9 ಮಂದಿಗೆ ಸೋಂಕು ದೃಢಪಟ್ಟಿದೆ. ಆ ಹಿನ್ನೆಲೆಯಲ್ಲಿ ಮಾರಣಾಂತಿಕ ಕೆಎಫ್ ಡಿ ಮತ್ತು ಕರೋನಾ ಬಾಧೆಯ ಹಿನ್ನೆಲೆಯಲ್ಲಿ ರೋಗಿಗಳನ್ನು ತುರ್ತಾಗಿ 150 ಕಿಮೀ ದೂರದ ಮಣಿಪಾಲ ಅಥವಾ ಶಿವಮೊಗ್ಗದ ಆಸ್ಪತ್ರೆಗಳಿಗೆ ಕರೆದೊಯ್ಯಲು ಆಂಬ್ಯುಲೆನ್ಸ್ ವ್ಯವಸ್ಥೆ ನೆರವಾಗಿದೆ. ಈ ಹದಿನೈದು ದಿನದಲ್ಲಿ ಸುಮಾರು 15 ಮಂದಿ, ಕೀಮೋ ಥೆರಫಿ, ಹೆರಿಗೆ ಸೇರಿದಂತೆ ವಿವಿಧ ಉದ್ದೇಶದ ರೋಗಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಖಾಸಗೀ ಆ್ಯಂಬುಲೆನ್ಸ್ ಗೆ ಕನಿಷ್ಠ ಹತ್ತು ಸಾವಿರ ಬಾಡಿಗೆ ತೆರಬೇಕಾದ ಪರಿಸ್ಥಿತಿಯಲ್ಲಿ; ಕೇವಲ ಇಂಧನ ವೆಚ್ಚವನ್ನು ಮಾತ್ರ ಪಡೆದು ರೋಗಿಗಳನ್ನು ಆಸ್ಪತ್ರೆಗಳಿಗೆ ತಲುಪಿಸಿ ಚಿಕಿತ್ಸೆ ಪಡೆದು ವಾಪಸು ಮನೆಗೆ ಕರೆತರುವ ವಿನೂತನ ವ್ಯವಸ್ಥೆಯಾಗಿದೆ.
ಆ್ಯಂಬುಲೆನ್ಸ್ ಜೊತೆಗೆ, ಪಂಚಾಯತ್ ವ್ಯಾಪ್ತಿಯ ಜನರಿಗೆ ಅಗತ್ಯ ತುರ್ತು ಔಷಧ ತಲುಪಿಸುವ ವ್ಯವಸ್ಥೆಯನ್ನೂ ಪಂಚಾಯ್ತಿಯೇ ಮಾಡಿದೆ. ಯಾವುದೇ ವ್ಯಕ್ತಿಗೆ ತುರ್ತಾಗಿ ಬೇಕಾದ ಔಷಧಿಯ ಹೆಸರು ಮತ್ತು ಪ್ರಮಾಣವನ್ನು ಪಂಚಾಯ್ತಿ ಸಿಬ್ಬಂದಿ ಅಥವಾ ಅಧ್ಯಕ್ಷರ ಮೊಬೈಲ್ ಗೆ ಕರೆ ಮಾಡಿ ಅಥವಾ ಮೆಸೇಜ್ ಮಾಡಿ ಮಾಹಿತಿ ನೀಡಿದರೆ, ಔಷಧ ತರಿಸಿಕೊಡುವ ವ್ಯವಸ್ಥೆ ಇದು. ಸ್ಥಿತವಂತರಾದರೆ ಔಷಧದ ವೆಚ್ಚವನ್ನು ಮಾತ್ರ ನೀಡಬೇಕಾಗುತ್ತದೆ. ಕಡುಬಡವರಾದರೆ, ಔಷಧವನ್ನೂ ಉಚಿತವಾಗಿ ಅವರ ಮನೆಗೆ ತಲುಪಿಸುವ ಜೀವಪರ ಕಾಳಜಿಯನ್ನು ಪಂಚಾಯ್ತಿ ಬದ್ಧತೆಯಿಂದ ಕೈಗೆತ್ತಿಕೊಂಡಿದೆ.
ಜೊತೆಗೆ ಕರೋನಾ ಮತ್ತು ಕೆಎಫ್ ಡಿ ಸೋಂಕಿನ ಹಿನ್ನೆಲೆಯಲ್ಲಿ ಜೀವಕ್ಕೆ ಅಪಾಯವನ್ನೂ ಲೆಕ್ಕಿಸದೆ ಮನೆಮನೆ ಸಮೀಕ್ಷೆ, ರಕ್ತ ಮತ್ತು ಕಫದ ಮಾದರಿ ಸಂಗ್ರಹದಂತಹ ಕೆಲಸದಲ್ಲಿ ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರಿಗೆ ಪಂಚಾಯ್ತಿಯಿಂದಲೇ ವಾರಕ್ಕೆ 200 ರೂ. ಪ್ರೋತ್ಸಾಹಧನ ಮತ್ತು ಉಚಿತ ಮಾಸ್ಕ್ ವಿತರಣೆ ಮಾಡಲಾಗುತ್ತಿದೆ. ಇದು ಕೂಡ ವಿನೂತನ ಜನಪರ ಪ್ರಯೋಗ.
ಹಾಗೇ ಪಂಚಾಯ್ತಿ ವ್ಯಾಪ್ತಿಯಲ್ಲಿ ಲಾಕ್ ಡೌನ್ ನಿಂದಾಗಿ ಸಿಲುಕಿಕೊಂಡ ಬಿಹಾರ ಮೂಲದ ನಾಲ್ವರು ದಿನಗೂಲಿಗಳಿಗೆ ಪಂಚಾಯತ್ ಮಳಿಗೆಯಲ್ಲಿ ಆಶ್ರಯ ಮತ್ತು ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ, ಪಂಚಾಯ್ತಿ ವ್ಯಾಪ್ತಿಯ ಹಿನ್ನೀರು ಅಂಚಿನ ಪ್ರದೇಶದಲ್ಲಿ ಎಂ ಪಿ ಎಂ ನೆಡುತೋಪು ಕಡಿತಲೆ (ಕಟಾವು) ಮಾಡುವ 56 ಮಂದಿ ಹೊರ ಜಿಲ್ಲೆಯ ಜನರಿಗೆ ಪಂಚಾಯ್ತಿಯಿಂದ ಪಡಿತರ, ಅವರ ಮಕ್ಕಳಿಗೆ ಪೌಷ್ಟಿಕ ಆಹಾರ(ಮಕ್ಕಳ ಕಲ್ಯಾಣ ಇಲಾಖೆಯಿಂದ) ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.
ಊರಿನ ದಿನಸಿ ಅಂಗಡಿ, ನ್ಯಾಯಬೆಲೆ ಅಂಗಡಿ (ಸೊಸೈಟಿ)ಗಳ ಮುಂದೆ ಚೌಕ ಬರೆದು, ವೃತ್ತದಲ್ಲಿ ಬ್ಯಾರಿಕೇಡ್ ಹಾಕಿ ಸಾಮಾಜಿಕ ಅಂತರ ಮತ್ತು ಲಾಕ್ ಡೌನ್ ನಿಯಮ ಪಾಲನೆಯ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಪಡಿತರ ಪಡೆಯಲು ಸುಮಾರು 800ಕ್ಕೂ ಅಧಿಕ ಕಾರ್ಡುದಾರರು ಒಮ್ಮೆಲೇ ಸೊಸೈಟಿಯ ಮುಂದೆ ಜನಜಂಗುಳಿ ನೆರೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ವಿನೂತನ ಕ್ರಮವಾಗಿ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಿಗೇ ಹೋಗಿ, ಆಯಾ ಹಳ್ಳಿಯ ಜನರಿಗೆ ಅಲ್ಲಿಯೇ ಪಡಿತರ ವಿತರಿಸುವ ವ್ಯವಸ್ಥೆಯನ್ನೂ ಸೊಸೈಟಿಯ ಆಡಳಿತ ಮಂಡಳಿಯೊಂದಿಗೆ ಜಂಟಿಯಾಗಿ ಜಾರಿಗೆ ತರಲಾಗಿದೆ. ಹಾಗೇ ಪಂಚಾಯ್ತಿ ವ್ಯಾಪ್ತಿಯ 60 ಮಂದಿ ಮೀನುಗಾರರಿಗೆ ಅವರವರ ಮನೆ ಬಾಗಿಲಿಗೇ ಪಡಿತರ ತಲುಪಿಸಲಾಗಿದೆ.
ಹಾಗೆ ನೋಡಿದರೆ, ಈ ಸಂಕಷ್ಟದ ಹೊತ್ತಲ್ಲಿ ಪಂಚಾಯ್ತಿ ಎಂಬ ಸ್ಥಳೀಯ ಆಡಳಿತ ಕೇವಲ ಸಾರ್ವಜನಿಕ ವಿಷಯಗಳನ್ನಷ್ಟೇ ನಿಭಾಯಿಸುತ್ತಿಲ್ಲ, ಸಂಕಷ್ಟದ ಹೊತ್ತಲ್ಲಿ ಜನರ ಬದುಕಿನ ವೈಯಕ್ತಿಕ ಆಪತ್ತು, ಅವಘಡಗಳಿಗೂ ಸ್ಪಂದಿಸುತ್ತಿದೆ ಎಂಬುದಕ್ಕೆ ಒಂದು ನಿದರ್ಶನ ಮನೆಯವರೊಂದಿಗೆ ಮನಃಸ್ತಾಪ ಮಾಡಿಕೊಂಡು ಲಾಕ್ ಡೌನ್ ಹೊತ್ತಲ್ಲಿ ಊರು ತೊರೆದು ಎಲ್ಲೋ ದೂರದ ಊರಲ್ಲಿ ಅಲೆದಾಡುತ್ತಿದ್ದ ಹಿರಿಯ ಜೀವವೊಂದನ್ನು ಪತ್ತೆ ಮಾಡಿ, ಮನವೊಲಿಸಿ ಕರೆತಂದು ಮನೆಮಂದಿಯೊಂದಿಗೆ ಮತ್ತೆ ಹೊಂದಿಕೊಂಡು ಹೋಗುವಂತೆ ಮಾಡಿದ ಘಟನೆ. ಅಷ್ಟೇ ಅಲ್ಲ; ಆ ಹಿರಿಯ ಜೀವದ ವಯೋಸಹಜ ಮಾನಸಿಕ ಆತಂಕ ದೂರ ಮಾಡುವ ಸಲುವಾಗಿ ಒಂದು ಉಪ ತಂಡ ರಚಿಸಿ, ನಿತ್ಯ ಅವರೊಂದಿಗೆ ಸಮಾಲೋಚನೆ ನಡೆಸಿ, ಸಮಾಧಾನ ಮಾಡುವ ವ್ಯವಸ್ಥೆಯನ್ನೂ ಪಂಚಾಯ್ತಿ ಅಧ್ಯಕ್ಷ ಜಿ ಟಿ ಸತ್ಯನಾರಾಯಣ ಅವರು ಮಾಡಿದ್ದಾರೆ.
ಇದು ಕೇವಲ ದಶಕದ ಹಿಂದೆ ಬಹುತೇಕ ನಾಗರಿಕ ಸೌಲಭ್ಯಗಳಿಂದ ವಂಚಿತವಾಗಿದ್ದ, ಈಗಲೂ ತಾಲೂಕು ಮತ್ತು ಜಿಲ್ಲಾ ಕೇಂದ್ರಕ್ಕೆ ತಲುಪಲು ಲಾಂಚನ್ನೇ ಅವಲಂಬಿಸಿರುವ, ದ್ವೀಪ ಪ್ರದೇಶವಾಗಿರುವ ತುಮರಿ ಪಂಚಾಯ್ತಿಯ ಜನಪರ ಕಾಳಜಿಯ ಯಶೋಗಾಥೆ. ಕರೋನಾ ಮತ್ತು ಲಾಕ್ ಡೌನ್ ನಂಥ ಹೊತ್ತಲ್ಲಿ ನಿಜವಾಗಿಯೂ ಸ್ಥಳೀಯ ಪಂಚಾಯ್ತಿಗಳು ಎಲ್ಲಾ ಮಿತಿಗಳ ನಡುವೆಯೂ ಹೇಗೆ ಜನಪರವಾಗಿ ಕೆಲಸ ಮಾಡಬಹುದು, ಜನರ ಆತಂಕದ ಹೊತ್ತಲ್ಲಿ ನಾವಿದ್ದೇವೆ ನಿಮ್ಮೊಂದಿಗೆ ಎಂಬುದನ್ನು ತೋರಿಸಿಕೊಡಬಹುದು ಎಂಬುದಕ್ಕೆ ಒಂದು ಅತ್ಯುತ್ತಮ ಮಾದರಿ.