ದೇಶವ್ಯಾಪಿ ಅಸಂಘಟಿತ ವಲಯವಷ್ಟೇ ಅಲ್ಲದೇ ಸಂಘಟಿತ ವಲಯದಲ್ಲೂ ಕೋಟ್ಯಂತರ ಜನರು ಉದ್ಯೋಗ ಕಳೆದುಕೊಂಡು ಕಂಗಾಲಾಗಿ ಭವಿಷ್ಯದ ಬಗ್ಗೆ ಚಿಂತಿಸುತ್ತಿರುವ ಹೊತ್ತಿನಲ್ಲೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಕಾರ್ಮಿಕರ ಭವಿಷ್ಯನಿಧಿ(ಪಿಎಫ್) ಜೋಳಿಗೆಗೆ ಕನ್ನ ಹಾಕಲು ಹೊರಟಿದೆ.
ಆ ಮೂಲಕ ಮೋದಿ ಸರ್ಕಾರವು ‘ವಚನಭ್ರಷ್ಟತನ’ ಪ್ರದರ್ಶಿಸಲು ಮುಂದಾಗಿರುವುದು ಕಾರ್ಮಿಕರನ್ನು ಆತಂಕಕ್ಕೀಡು ಮಾಡಿದೆ. ನಾಲ್ಕುವರೆ ಕೋಟಿ ಕಾರ್ಮಿಕರ ಭವಿಷ್ಯ ನಿಧಿ ಖಾತೆಯಲ್ಲಿರುವ ಠೇವಣಿಗೆ 2019-20ನೇ ಸಾಲಿನಲ್ಲಿ ಪಾವತಿಸಬೇಕಾದ ಬಡ್ಡಿ ಪ್ರಮಾಣವನ್ನು ಸರ್ಕಾರವು ಈಗಾಗಲೇ ಘೋಷಿಸಿದೆ. ಘೋಷಿತ ಬಡ್ಡಿದರದ ಪ್ರಕಾರ 2019-20ನೇ ಸಾಲಿನಲ್ಲಿ ಶೇ.8.5ರಷ್ಟು ಬಡ್ಡಿ ಪಾವತಿಸಬೇಕು. ಆದರೆ, ಪ್ರಧಾನಿ ಮೋದಿ, ನಿತ್ಯವೂ ಪೆಟ್ರೋಲ್ ಮತ್ತು ಡಿಸೇಲ್ ಮೂಲಕ ಜನರ ಜೇಬಿಗೆ ಕನ್ನ ಹಾಕುತ್ತಿರುವುದರ ಜತೆಗೆ ಕಾರ್ಮಿಕರ ಭವಿಷ್ಯ ನಿಧಿಯ ಘೋಷಿತ ಬಡ್ಡಿದರವನ್ನು ಭಾರಿ ಪ್ರಮಾಣದಲ್ಲಿ ತಗ್ಗಿಸುವ ಮೂಲಕ ಕನ್ನ ಹಾಕಲು ಮುಂದಾಗಿದ್ದಾರೆ. ಅಂದರೆ, ಘೋಷಿತ ಬಡ್ಡಿದರವನ್ನು ಶೇ.8.1ಕ್ಕೆ ತಗ್ಗಿಸಲು ಮುಂದಾಗಿದ್ದಾರೆ.
ಪಿಎಫ್ ಹೆಸರೇ ಹೇಳುವಂತೆ ಭವಿಷ್ಯ ನಿಧಿ. ನಿವೃತ್ತರಾದ ನಂತರ ಪಿಂಚಣಿ ವ್ಯವಸ್ಥೆಯೇ ಇಲ್ಲದ ಕಾರ್ಮಿಕ ವರ್ಗಕ್ಕೆ ನೆರವಾಗಲೆಂದೇ ರೂಪಿಸಲಾಗಿರುವ ನಿಧಿ ಇದು. ಈ ನಿಧಿಗೆ ಗರಿಷ್ಠ ಪ್ರಮಾಣದ ಸುರಕ್ಷತೆ ಇದೆ. ಪ್ರತಿ ವರ್ಷವೂ, ಆಯಾ ವಿತ್ತೀಯ ವರ್ಷ ಪೂರ್ಣಗೊಂಡ ನಂತರದಲ್ಲಿ ಬಡ್ಡಿದರವನ್ನು ಘೋಷಿಸಿ, ಬಡ್ಡಿ ಮೊತ್ತವನ್ನು ಆಯಾ ಕಾರ್ಮಿಕರ ಭವಿಷ್ಯ ನಿಧಿ ಖಾತೆಗೆ ವರ್ಗಾಹಿಸಲಾಗುತ್ತದೆ. 2019-20 ನೇ ಸಾಲಿನಲ್ಲಿ ಬಡ್ಡಿದರವನ್ನು ಶೇ.8.5ರಷ್ಟು ಎಂದು ಘೋಷಿಸಲಾಗಿದೆ. ಈ ಘೋಷಿತ ಬಡ್ಡಿದರವನ್ನು ವಿತ್ತೀಯ ವರ್ಷ ಪೂರ್ಣಗೊಂಡ ಎರಡು ತಿಂಗಳೊಳಗೆ ಖಾತೆಗೆ ವರ್ಗಾಹಿಸಲಾಗುತ್ತದೆ. 4.5 ಕೋಟಿ ಭವಿಷ್ಯ ನಿಧಿ ಖಾತೆ ಇರುವುದರಿಂದ ಬಡ್ಡಿ ವರ್ಗಾವಣೆಗೆ ಕೊಂಚ ಸಮಯಾವಕಾಶ ಬೇಕಾಗುತ್ತದೆ. ಈಗ ಎಲ್ಲವೂ ಡಿಜಟಲೀಕರಣಗೊಂಡಿದ್ದು ಹಿಂದಿಗಿಂತ ತ್ವರಿವಾಗಿ ಆಗುತ್ತಿದೆ.
ಈಗ ಮೋದಿ ಸರ್ಕಾರವು ಆರ್ಥಿಕ ನೀತಿಗಳ ವೈಫಲ್ಯಕ್ಕೆ ಕಾರ್ಮಿಕರು ಈಗಾಗಲೇ ಭಾರಿ ಬೆಲೆ ತೆರುವಂತಾಗಿದೆ. ಮೋದಿ ಸರ್ಕಾರ ಕಳೆದ ಐದು ವರ್ಷಗಳಿಂದ ಸತತವಾಗಿ ಪಿಎಫ್ ಬಡ್ಡಿದರ ಇಳಿಸುತ್ತಲೇ ಬಂದಿದೆ. 2015-16ರಲ್ಲಿ ಶೇ.8.80ರಷ್ಟು ಇದ್ದದ್ದು ಸತತವಾಗಿ ಕುಸಿದು 2019-20ನೇ ಸಾಲಿಗೆ ಶೇ.8.50ಕ್ಕೆ ತಗ್ಗಿದೆ. ಅಂದರೆ, ಕಳೆದ ಐದು ವರ್ಷಗಳಲ್ಲಿ 30 ಮೂಲ ಅಂಶಗಳಷ್ಟು ಅಂದರೆ ಶೇ.0.30ರಷ್ಟು ಬಡ್ಡಿದರ ಇಳಿಸಲಾಗಿದೆ. ಆದರೆ, ಮೋದಿ ಸರ್ಕಾರವು ಈಗ ಏಕಾಏಕಿ ಘೋಷಿತ ಬಡ್ಡಿದರವನ್ನು ಭಾರಿ ಪ್ರಮಾಣದಲ್ಲಿ ಕಡಿತ ಮಾಡಲು ಮುಂದಾಗಿದೆ. ಕಳೆದ ಐದು ವರ್ಷಗಳಲ್ಲಿ ಮಾಡಿರುವ ಕಡಿತಕ್ಕಿಂತ ಈಗ ಮಾಡಲಿರುವ ಕಡಿತವು ಹೆಚ್ಚಿದೆ. ಅಂದರೆ, 0.40ರಷ್ಟು ಕಡಿತ ಮಾಡಲಿದೆ. ಪಿಎಫ್ ಬಡ್ಡಿದರವು ಶೇ.8.10ಕ್ಕೆ ತಗ್ಗುತ್ತದೆ.
ವಾಸ್ತವವಾಗಿ 2018-19ರಲ್ಲಿ ಶೇ.8.65 ಇದ್ದದ್ದನ್ನು 2019-20ನೇ ಸಾಲಿಗೆ ಶೇ.8.10ಕ್ಕೆ ಇಳಿಸಿದಾಗ ಒಂದೇ ವರ್ಷದಲ್ಲಿ ಶೇ.0.55ರಷ್ಟು ಬಡ್ಡಿ ಕಡಿತ ಮಾಡಿದಂತಾಗುತ್ತದೆ. ಮೇಲ್ನೋಟಕ್ಕೆ ಇದು ಶೇಕಡಾ ಅರ್ಧಕ್ಕಿಂತ ಒಂಚೂರು ಹೆಚ್ಚು ಅನಿಸಿದರೂ ದೀರ್ಘಕಾಲದಲ್ಲಿ ಭವಿಷ್ಯ ನಿಧಿಯ ಮೊತ್ತ ದೊಡ್ಡಮಟ್ಟದಲ್ಲಿ ಕಡಿತವಾಗುತ್ತದೆ.
ಉದಾಹರಣೆಯನ್ನು ಗಮನಿಸಿ. ಕಳೆದ 20 ವರ್ಷಗಳಿಂದ ಉದ್ಯೋಗದಲ್ಲಿರುವ ಕಾರ್ಮಿಕರೊಬ್ಬರ ಭವಿಷ್ಯ ನಿಧಿ ಖಾತೆಯಲ್ಲಿ 20 ಲಕ್ಷ ರುಪಾಯಿ ಠೇವಣಿ ಇದೆ ಎಂದಿಟ್ಟುಕೊಳ್ಳಿ. 2019-20ನೇ ಸಾಲಿನಲ್ಲಿ ಒಂದು ವೇಳೆ ಬಡ್ಡಿದರವು ಶೇ.8.65ರಷ್ಟಿದ್ದರೆ, ವರ್ಷಾಂತ್ಯದಲ್ಲಿ 1,73,000 ರುಪಾಯಿ ಬಡ್ಡಿ ಮೊತ್ತ ಜಮೆ ಆಗುತ್ತದೆ. ಒಂದು ವೇಳೆ ಮೋದಿ ಸರ್ಕಾರ ಪ್ರಸ್ತಾಪಿಸಿರುವಂತೆ ಬಡ್ಡಿದರವನ್ನು ಶೇ.8.10ಕ್ಕೆ ಇಳಿಸಿತ್ತೆಂದಿಟ್ಟುಕೊಳ್ಳಿ. ಆಗ ಜಮೆಯಾಗುವ ಬಡ್ಡಿ ಮೊತ್ತವು 1,62,000 ರುಪಾಯಿಗಳು ಮಾತ್ರ. ಅಂದರೆ, ಬಡ್ಡಿ ಕಡಿತ ಮಾಡುವುದರಿಂದಾಗುವ ನಷ್ಟ 11,000 ರುಪಾಯಿಗಳು. ಕಾರ್ಮಿಕರು ಇನ್ನು 20 ವರ್ಷ ಉದ್ಯೋಗದಲ್ಲಿ ನಿವೃತ್ತರಾಗುತ್ತಾರೆ ಎಂದಿಟ್ಟುಕೊಳ್ಳಿ ಆಗ ಮೋದಿ ಸರ್ಕಾರ ಬಡ್ಡಿ ಕಡಿತ ಮಾಡುವುದರಿಂದಾಗುವ ನೇರ ನಷ್ಟವು 2,64,000 ರುಪಾಯಿಗಳು. ಆದರೆ, ಪ್ರತಿ ವರ್ಷ 11,000 ರುಪಾಯಿಗೆ ಬೀಳುವ ಬಡ್ಡಿಯನ್ನು ಲೆಕ್ಕಹಾಕಿದರೆ ಮುಂದಿನ 20 ವರ್ಷದಲ್ಲಿ ಕಾರ್ಮಿಕರಿಗಾಗುವ ನಷ್ಟವು ಸುಮಾರು 6,00,000 ರುಪಾಯಿಗಳಿಗಿಂತ ಹೆಚ್ಚಾಗುತ್ತದೆ.
ಮೋದಿ ಸರ್ಕಾರವು ಷೇರು ಮಾರುಕಟ್ಟೆ ಏರಿಳಿತವನ್ನು ಮುಂದಿಟ್ಟುಕೊಂಡು ಘೋಷಿತ ಶೇ.8.50ರಷ್ಟು ಬಡ್ಡಿ ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ. ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಭವಿಷ್ಯ ನಿಧಿ ಸಂಘಟನೆಯು ಕೈಗೊಂಡಿರುವ ನಿರ್ಧಾರ. ಒಂದು ವೇಳೆ ಷೇರುಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ಬಂದಾಗ ಬಡ್ಡಿದರವನ್ನು ದೊಡ್ಡಪ್ರಮಾಣದಲ್ಲಿ ಹೆಚ್ಚಿಸಿದ ಉದಾಹರಣೆಗಳಿಲ್ಲ. ಹೀಗಾಗಿ ಷೇರುಮಾರುಕಟ್ಟೆಯ ಲಾಭನಷ್ಟಗಳನ್ನು ಆಧರಿಸಿ ಬಡ್ಡಿದರ ಕಡಿತ ಮಾಡುವುದು ನ್ಯಾಯಸಮ್ಮತವಲ್ಲ.
ಇಪಿಎಫ್ಒ (ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ)ಯು ಸುಮಾರು 4.5 ಕೋಟಿ ಕಾರ್ಮಿಕರ 11 ಲಕ್ಷ ಕೋಟಿ ರುಪಾಯಿ ಠೇವಣಿಯನ್ನು ಹೊಂದಿದೆ. ಶೇ.8.65ರಷ್ಟು ದರದಲ್ಲಿ ಬಡ್ಡಿ ನೀಡಿದರೆ ವಾರ್ಷಿಕ 95,150 ಕೋಟಿ ರುಪಾಯಿ ಬಡ್ಡಿ ಮೊತ್ತ ನೀಡಬೇಕಾಗುತ್ತದೆ. ಈ ಬಡ್ಡಿದರವನ್ನು ಶೇ.8.10ಕ್ಕೆ ಇಳಿಸಿದರೆ, ವಾರ್ಷಿಕ 89,100 ಕೋಟಿ ರುಪಾಯಿ ಬಡ್ಡಿ ಮೊತ್ತ ಪಾವತಿಸಬೇಕಾಗುತ್ತದೆ. ಅಂದರೆ, ಶೇ.8.65ರಿಂದ ಶೇ.8.10ಕ್ಕೆ ಬಡ್ಡಿದರ ಇಳಿಸುವುದರಿಂದ ಮೋದಿ ಸರ್ಕಾರದ ಬೊಕ್ಕಸಕ್ಕೆ ಉಳಿಯುವ ಮೊತ್ತವು 6,050 ಕೋಟಿ ರುಪಾಯಿಗಳು! ಪ್ರಧಾನಿ ಮೋದಿ ಸರ್ಕಾರವು ಕಾರ್ಮಿಕರ ಭವಿಷ್ಯ ನಿಧಿಯಿಂದಲೇ 6,060 ಕೋಟಿ ರುಪಾಯಿ ಕನ್ನ ಹಾಕಲು ಮುಂದಾಗಿದೆ.
ನಿಮಗೆ ನೆನಪಿರಬಹುದು, ಮೇ ತಿಂಗಳ ಅಂತ್ಯದಲ್ಲಿ ಪ್ರಧಾನಿ ಮೋದಿ ಸರ್ಕಾರವು ಈ ದೇಶದ ಲಕ್ಷಾಂತರ ಹಿರಿಯ ಜೀವಗಳ ಮಾಸಿಕ ಆದಾಯಕ್ಕೆ ಕತ್ತರಿ ಹಾಕಿತ್ತು. ಕರೋನಾ ಸೋಂಕು ಹರಡುತ್ತಿರುವ ಈ ಸಂಕಷ್ಟ ಕಾಲದಲ್ಲಿ ಹಿರಿಯ ಜೀವಿಗಳಿಗೆ ನೆರವಾಗುವ ಬದಲು ಕಂಟಕವಾಗಿ ಪರಿಣಮಿಸಿತ್ತು. ಮೋದಿ ಸರ್ಕಾರದ ನಿರ್ಧಾರದಿಂದ ಹಿರಿಯ ಜೀವಗಳ ಮಾಸಿಕ ಆದಾಯದಲ್ಲಿ ಸರಿಸುಮಾರು ಶೇ. 7.5 ರಿಂದ 10ರಷ್ಟು ಕೊರತೆ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಮೂರು ವರ್ಷಗಳ ಹಿಂದೆ ‘ಪ್ರಧಾನ ಮಂತ್ರಿ ವಯೋ ವಂದನ ಯೋಜನೆ’ಯನ್ನು (ಪಿಎಂವಿವಿವೈ) ಜಾರಿಗೆ ತಂದಿದೆ. ಈ ಯೋಜನೆಯ ಉದ್ದೇಶವು 60 ವರ್ಷ ಮೀರಿದ ಹಿರಿಯ ನಾಗರಿಕರಿಗೆ ಸುಸ್ಥಿರ ಮಾಸಿಕ ಆದಾಯವನ್ನು ನೀಡುವುದಾಗಿದೆ.
ಈ ಯೋಜನೆ ಪ್ರಕಾರ ಹಿರಿಯ ನಾಗರಿಕರು ಗರಿಷ್ಠ 15 ಲಕ್ಷ ರೂಪಾಯಿಗಳನ್ನು ಠೇವಣಿ ಇಡಬೇಕು. ಠೇವಣಿ ಇಟ್ಟ ಹಿರಿಯ ನಾಗರಿಕರಿಗೆ ಶೇ.8ರ ದರದಲ್ಲಿ ಮುಂದಿನ ಹತ್ತು ವರ್ಷಗಳ ವರೆಗೆ ಬಡ್ಡಿಯನ್ನು ನೀಡುವು ಸರ್ಕಾರದ ವಾಗ್ದಾನವಾಗಿತ್ತು. ಲಕ್ಷಾಂತರ ಹಿರಿಯರು ಕೇಂದ್ರ ಸರ್ಕಾರವೇ ಮುಂದಿನ ಹತ್ತು ವರ್ಷಗಳ ಕಾಲ ಶೇ.8ರಷ್ಟು ಬಡ್ಡಿ ದರವನ್ನು ನಿಗದಿ ಮಾಡಿದ್ದರಿಂದ ನಂಬಿಕೊಂಡು ಬೇರೆಡೆ ಇಟ್ಟಿದ್ದ ಠೇವಣಿಗಳನ್ನು ಹಿಂಪಡೆದು ಪಿಎಂವಿವಿವೈ ಯೋಜನೆಯಲ್ಲಿ ತೊಡಗಿಸಿದರು. ಆದರೆ, 2020-21ನೇ ಸಾಲಿನ ಪಿಎಂವಿವಿವೈ ಯೋಜನೆಯ ಠೇವಣಿ ಮೇಲಿನ ಬಡ್ಡಿಯನ್ನು
ಶೇ.8ರಿಂದ ಶೇ.7.4ಕ್ಕೆ ತಗ್ಗಿಸಿದೆ. ಮೇಲ್ನೋಟಕ್ಕೆ ಇದು ಶೇ.0.6ರಷ್ಟು ಮಾತ್ರ ಬಡ್ಡಿ ಕಡಿತ ಎನಿಸುತ್ತದೆ. ಆದರೆ ಈ ಬಡ್ಡಿ ಆದಾಯ ನಂಬಿರುವ ಹಿರಿಯ ಜೀವಗಳಿಗೆ ಆಗುವ ಅನ್ಯಾಯ ಬಹು ಡ್ಡದು. ಶೇ.8 ರಷ್ಟು ಬಡ್ಡಿ ಇದ್ದಾಗ 15 ಲಕ್ಷ ಠೇವಣಿ ಇಟ್ಟವರಿಗೆ ಮಾಸಿಕ 10,000 ರುಪಾಯಿ ಬಡ್ಡಿ ಬರುತ್ತಿತ್ತು. ವರ್ಷಕ್ಕೆ ಒಟ್ಟು ಬಡ್ಡಿ ಆದಾಯವು 1,20,000 ರುಪಾಯಿಗಳಾಷ್ಟುತ್ತಿತ್ತು. ಬಡ್ಡಿ ದರವನ್ನು ಶೇ.7.4ಕ್ಕೆ ತಗ್ಗಿಸಿದ್ದರಿಂದ ಮಾಸಿಕ 10,000 ಬಡ್ಡಿ ಆದಾಯ ಗಳಿಸುತ್ತಿದ್ದ ಹಿರಿಯ ನಾಗರಿಕರಿಗೆ ಈಗ ಬರುವ ಆದಾಯ 9,250 ರುಪಾಯಿ. ವಾರ್ಷಿಕ ಆದಾಯ 1,11,000 ರುಪಾಯಿ ಮಾತ್ರ. ಅಂದರೆ ಏಕಾಏಕಿ ಶೇ.7.50ರಷ್ಟು ಆದಾಯವನ್ನು ಕಡಿತ ಮಾಡಿದಂತಾಗಿದೆ. ಮುಂದಿನ ಹತ್ತು ವರ್ಷಗಳಲ್ಲಿ ಹಿರಿಯರಿಗಾಗುನ ನಷ್ಟವು 90,000 ರೂಪಾಯಿಗಳು.
ಹಿರಿಯ ಜೀವಗಳ ನಂತರ ಪ್ರಧಾನಿ ಮೋದಿ ಸರ್ಕಾರವು ಕಾರ್ಮಿಕರ ಭವಿಷ್ಯ ನಿಧಿಗೆ ಕನ್ನ ಹಾಕಿದೆ. ಈಗಾಗಲೇ ಕೆಲಸ ಕಳೆದುಕೊಂಡವರು, ಮುಂದೆ ಕೆಲಸ ಕಳೆದುಕೊಳ್ಳುವವರು, ನಂಬಿರುವ ಭವಿಷ್ಯ ನಿಧಿಯ ಒಟ್ಟು ಮೊತ್ತವು ಮೋದಿ ಸರ್ಕಾರದ ನಿರ್ದಯ ನಿರ್ಧಾರದಿಂದ ಕಡಿತಗೊಳ್ಳಲಿದೆ. ಉದ್ಯೋಗದಲ್ಲಿರುವವರ ಭವಿಷ್ಯ ನಿಧಿಯು ಭಾರಿ ಪ್ರಮಾಣದಲ್ಲಿ ಕಡಿತವಾಗಲಿದೆ.