ಕರ್ನಾಟಕ ಸರ್ಕಾರ, ರೈತ ವಿರೋಧಿ ಭೂ ಸುಧಾರಣೆ ತಿದ್ದುಪಡಿ ಸುಗ್ರೀವಾಜ್ಞೆ, ಎ ಪಿ ಎಂ ಸಿ ತಿದ್ದುಪಡಿ ಸುಗ್ರೀವಾಜ್ಞೆ, ಕಾರ್ಮಿಕ ವಿರೋಧಿ ತಿದ್ದುಪಡಿ ಹಾಗೂ ವಿದ್ಯುಚಕ್ತಿ ತಿದ್ದುಪಡಿ ಸುಗ್ರೀವಾಜ್ಞೆಗಳ ವಿಧೇಯಕಗಳು, ಕಳೆದ ವಿಧಾನ ಮಂಡಲದ ಅಧಿವೇಶನದಲ್ಲಿ ಶಾಸನ ಸಭೆಯ ಅನುಮೋದನೆ ಪಡೆಯಲು ವಿಫಲವಾಗಿವೆ, ರಾಜ್ಯಾದ್ಯಂತ ರೈತರು, ಕೂಲಿಕಾರರು, ಪ್ರಗತಿಪರ ನಾಗರೀಕರು, ದಲಿತರು ಬಾರಿ ಪ್ರತಿರೋಧವನ್ನು ವ್ಯಕ್ತಪಡಿಸಿ ರಾಜ್ಯಾದ್ಯಂತ ಹಲವು ಚಳುವಳಿಗಳನ್ನು ನಡೆಸಿ ಸ್ವಯಂ ಪ್ರೇರಿತವಾಗಿ ಬಂದ್ ಆಚರಣೆ ಮಾಡಿ ಸರ್ಕಾರವನ್ನು ಎಚ್ಚರಿಸುವ ಕಾರ್ಯ ನಡೆಸಲಾಗಿದೆ, ವಿರೋಧ ಪಕ್ಷಗಳು ತೀವ್ರವಾಗಿ ಪ್ರತಿರೋಧಿಸಿವೆ. ಪರಿಸ್ಥಿತಿ ಹೀಗಿರುವಾಗ, ಮತ್ತೆ ಸದರಿ ವಿಧೇಯಕಗಳನ್ನು ಪುನಃ ಹಿಂಬಾಗಿಲಿನಿಂದ ಮರಳಿ ಸುಗ್ರೀವಾಜ್ಞೆಗಳಾಗಿ ಜಾರಿಗೆ ತರಲು ಮಂತ್ರಿಮಂಡಲ ಕ್ರಮವಹಿಸಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಬಲವಾಗಿ ಖಂಡಿಸುತ್ತದೆ ಎಂದು ರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾಗಿರುವ ಕುರುಬೂರು ಶಾಂತಕುಮಾರ್ ಅವರು ರಾಜ್ಯಪಾಲ ವಾಜುಭಾಯಿ ವಾಲಾ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠವು 2017 ರಲ್ಲಿ ಮತ್ತು ಬಿಹಾರ ಸರ್ಕಾರ ಪ್ರಕರಣದಲ್ಲಿ ಶಾಸನ ಸಭೆಯ ಅನುಮೋದನೆ ಪಡೆಯದ ಸುಗ್ರೀವಾಜ್ಞೆಗಳನ್ನು ಪುನರ್ ಸುಗ್ರೀವಾಜ್ಞೆಯಾಗಿ ಹೊರಡಿಸುವುದು ಈ ಸಂವಿಧಾನಕ್ಕೆ ಎಸಗುವ ವಂಚನೆಯಾಗಿದೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪಿಗೆ ವಿರುದ್ಧವಾದ ಮತ್ತು ಸಂವಿಧಾನವನ್ನು ಉಲ್ಲಂಘಿಸುವ ಕೆಲಸದಲ್ಲಿ ತೊಡಗಿದೆ. ವಿಧಾನ ಮಂಡಲ ಮತ್ತು ಜನತೆ ತೀವ್ರವಾಗಿ ವಿರೋಧಿಸುತ್ತಿರುವಾಗ, ಸರ್ವೋಚ್ಚ ನ್ಯಾಯಾಲಯ ಈ ರೀತಿಯ ಕ್ರಮಗಳು ಸಂವಿಧಾನವನ್ನು ವಂಚಿಸುವ ಕ್ರಮಗಳೆಂದು ತೀವ್ರವಾಗಿ ಆಕ್ಷೇಪಿಸಿರುವಾಗ ಅಷ್ಟೊಂದು ತರಾತುರಿಯಲ್ಲಿ ಸಂವಿಧಾನ ವಿರೋಧಿಯಾಗಿ ಅವುಗಳನ್ನು ಮರಳಿ ತುರ್ತಾಗಿ ಜಾರಿಗೆ ತರುವ ಅಗತ್ಯವಾದರೂ ಏನು? ಯಾರ ಲಾಭಕ್ಕಾಗಿ ? ಎಂದು ಒಕ್ಕೂಟವು ಪ್ರಶ್ನಿಸಿದೆ.

ಯಾವುದೇ ಕಾರಣಕ್ಕೂ ರಾಜ್ಯ ಸಚಿವ ಸಂಪುಟದ 22.10.2020 ರ ಶಿಫಾರಸ್ಸಿನಂತಹ ರೈತ ವಿರೋಧಿ, ಕಾರ್ಮಿಕ ವಿರೋಧಿ, ಈ ಸುಗ್ರೀವಾಜ್ಞೆಗಳ ಮಾನ್ಯತೆ ನೀಡದೇ ಈ ಸೂಚನೆಗಳನ್ನು ತಾವು ಒಪ್ಪದೇ, ಅವುಗಳನ್ನು ವಾಪಾಸು ಕಳುಹಿಸಬೇಕು ಮತ್ತು ವಿಧಾನ ಮಂಡಲದ ಅಧಿಕಾರಿಗಳನ್ನು ಮತ್ತು ಸಂವಿಧಾನವನ್ನು ಸಂರಕ್ಷಿಸಲು ಸೂಕ್ತ ನಿರ್ದೇಶನ ನೀಡಬೇಕೆಂದು ಶಾಂತಕುಮಾರ್ ವಿನಂತಿಸಿದ್ದಾರೆ.
ಬಿಹಾರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಚುನಾವಣೆಯಲ್ಲಿ ಮತ ನೀಡಿ ಅಧಿಕಾರಕ್ಕೆ ಬಂದರೆ, ಕರೋನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂಬುವುದು ಮತದಾರರನ್ನು ವಂಚಿಸುವ ಪ್ರಕ್ರಿಯೆಯಾಗಿದೆ. ಇಂತಹ ರಾಜಕೀಯ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ತಕ್ಷಣವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸುತ್ತೇವೆ ಎಂದೂ ಒಕ್ಕೂಟ ಹೇಳಿದೆ.






