ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸವಿರುವ ಸದಾಶಿವನಗರದ ಹೈಪ್ರೊಫೈಲ್ ಪ್ರದೇಶದಲ್ಲಿ ವಾಮಾಚಾರದಂತಹ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ನಿವಾಸಕ್ಕೆ ಅತಿ ಸಮೀಪದ ರಸ್ತೆಯಲ್ಲೇ ಈ ಘಟನೆ ಬೆಳಕಿಗೆ ಬಂದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸದಾಶಿವನಗರದ ಜಿಬಿಎ ಮೈದಾನದ ಮುಂಭಾಗದ ರಸ್ತೆಯಲ್ಲಿ ಅಪರಿಚಿತರು ರಸ್ತೆ ಮಧ್ಯಭಾಗದಲ್ಲಿ ದೊಡ್ಡ ವೃತ್ತಾಕಾರದ ಗುರುತು ಬರೆದು, ಕೋಳಿಯನ್ನು ಬಲಿ ಕೊಟ್ಟು ನಿಂಬೆಹಣ್ಣುಗಳನ್ನು ಇಟ್ಟು ವಾಮಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದ ಸ್ಥಳದಲ್ಲೇ ಕೋಳಿಯ ಕಳೇಬರ ಪತ್ತೆಯಾಗಿದ್ದು, ಕತ್ತರಿಸಿದ ಕೋಳಿಯ ತಲೆಯನ್ನು ಬೀದಿನಾಯಿಯೊಂದು ಕಚ್ಚಿಕೊಂಡು ಹೋಗುತ್ತಿರುವ ದೃಶ್ಯಗಳು ಸ್ಥಳೀಯರ ಗಮನ ಸೆಳೆದಿವೆ.

ಮಧ್ಯರಾತ್ರಿ ಅಥವಾ ಮುಂಜಾನೆ ವೇಳೆಯಲ್ಲಿ ಯಾರಿಗೂ ತಿಳಿಯದಂತೆ ಈ ಕೃತ್ಯ ಎಸಗಿ ದುಷ್ಕರ್ಮಿಗಳು ಪರಾರಿಯಾಗಿರುವ ಸಾಧ್ಯತೆ ಇದೆ. ಸದಾ ಪೊಲೀಸ್ ಭದ್ರತೆ ಮತ್ತು ಕಟ್ಟುನಿಟ್ಟಿನ ನಿಗಾವಹಿಸುವ ವ್ಯವಸ್ಥೆ ಇರುವ ವಿವಿಐಪಿ ಪ್ರದೇಶದಲ್ಲೇ ಇಂತಹ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮತ್ತು ಆತಂಕ ಮೂಡಿಸಿದೆ.ರಸ್ತೆ ಮಧ್ಯೆ ಬಿದ್ದಿರುವ ಕೋಳಿ ಹಾಗೂ ನಿಂಬೆಹಣ್ಣುಗಳನ್ನು ಕಂಡ ಸ್ಥಳೀಯರು ಭಯಭೀತರಾಗಿದ್ದು, ಕೆಲವರು ಆ ಮಾರ್ಗದಲ್ಲಿ ಸಂಚರಿಸಲು ಹಿಂಜರಿಯುತ್ತಿರುವುದು ಕಂಡುಬಂದಿದೆ. ವಿಶೇಷವಾಗಿ ಮಕ್ಕಳು ಹಾಗೂ ಮಹಿಳೆಯರಲ್ಲಿ ಆತಂಕ ಹೆಚ್ಚಾಗಿದೆ.

ಇಷ್ಟೊಂದು ಭದ್ರತೆ ಇರುವ ಪ್ರದೇಶದಲ್ಲಿ ಈ ರೀತಿಯ ಕೃತ್ಯ ಹೇಗೆ ನಡೆದಿದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು, ಪೊಲೀಸರ ಗಸ್ತು ವ್ಯವಸ್ಥೆಯ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿವೆ. ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.






