ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಈಗ ಮತ್ತೊಂದು ಕುತೂಹಲಕಾರಿ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ — “ರಾಜೀನಾಮೆ ಅಧಿಕೃತವಾಗಿ ಅಂಗೀಕಾರವಾಗಿದೆಯಾ? ಅಥವಾ ಇನ್ನೂ ಬಾಕಿಯಿದೆಯಾ?”
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ಅವರು ಲೋಕಭವನದಲ್ಲಿ ರಾಜ್ಯಪಾಲರ ಕಾರ್ಯದರ್ಶಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಆದರೆ ರಾಜ್ಯಪಾಲರು ರಾಜ್ಯದ ಹೊರಗಿರುವ ಹಿನ್ನೆಲೆ, ರಾಜೀನಾಮೆ ಅಂಗೀಕಾರದ ಪ್ರಕ್ರಿಯೆ ಕುರಿತು ಹಲವು ಪ್ರಶ್ನೆಗಳು ಎದ್ದಿವೆ.

ರಾಜಭವನ ಮೂಲಗಳ ಪ್ರಕಾರ, ಮುಖ್ಯಮಂತ್ರಿ ರಾಜೀನಾಮೆಯನ್ನು ಅಧಿಕೃತವಾಗಿ ಅಂಗೀಕರಿಸುವ ಅಧಿಕಾರ ಕೇವಲ ರಾಜ್ಯಪಾಲರಿಗೆ ಮಾತ್ರ ಇದೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭು ಶಂಕರ್ ಅವರು ರಾಜೀನಾಮೆ ಪತ್ರ ಸ್ವೀಕರಿಸಿದರೂ, ಅದು ತಕ್ಷಣವೇ ಅಂಗೀಕಾರವಾದಂತಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ರಾಜ್ಯಪಾಲರು ಪ್ರಸ್ತುತ ಮುಂಬೈ ಪ್ರವಾಸದಲ್ಲಿರುವುದರಿಂದ, ಅವರು ವಾಪಸ್ ಬಂದ ಬಳಿಕ ಅಥವಾ ಹೊರರಾಜ್ಯದಲ್ಲಿದ್ದರೂ ಸಂವಿಧಾನಾತ್ಮಕವಾಗಿ ನಿರ್ಧಾರ ಕೈಗೊಳ್ಳಬಹುದು ಎಂದು ಕಾನೂನು ತಜ್ಞರು ಹೇಳಿದ್ದಾರೆ.

ಭಾರತ ಸಂವಿಧಾನದ ವಿಧಿ 164ರ ಪ್ರಕಾರ ಮುಖ್ಯಮಂತ್ರಿ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಬೇಕು. ಆದರೆ ರಾಜ್ಯಪಾಲರು ಭೌತಿಕವಾಗಿ ಬೆಂಗಳೂರಿನಲ್ಲೇ ಇರಬೇಕೆಂಬ ನಿಯಮ ಇಲ್ಲ. ಅವರು ಬೇರೆ ರಾಜ್ಯದಲ್ಲಿದ್ದರೂ ಅಥವಾ ಪ್ರವಾಸದಲ್ಲಿದ್ದರೂ ರಾಜೀನಾಮೆ ಅಂಗೀಕರಿಸಬಹುದು ಎಂದು ಸಂವಿಧಾನ ತಜ್ಞರು ವಿವರಿಸಿದ್ದಾರೆ.ಈ ನಡುವೆ, ಹೊಸ ಸರ್ಕಾರ ರಚನೆಯಾಗುವವರೆಗೆ ಸಿದ್ದರಾಮಯ್ಯ ಅವರನ್ನು ‘ಕೇರ್ಟೇಕರ್ ಸಿಎಂ’ ಆಗಿ ಮುಂದುವರಿಯಲು ರಾಜ್ಯಪಾಲರು ಕೇಳುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಆಗುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಈಗ ಶಾಸಕಾಂಗ ಪಕ್ಷದ ಸಭೆ ಹಾಗೂ ಪ್ರಮಾಣವಚನ ಸಮಾರಂಭದ ದಿನಾಂಕ ಅಂತಿಮಗೊಳಿಸುವ ಚಟುವಟಿಕೆಯಲ್ಲಿ ತೊಡಗಿದೆ ಎನ್ನಲಾಗಿದೆ.

ಸಿದ್ದರಾಮಯ್ಯ ಏನು ಹೇಳಿದರು?
ರಾಜೀನಾಮೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, “ನಾನು ಕಾಂಗ್ರೆಸ್ ಹೈಕಮಾಂಡ್ ಸೂಚನೆ ಪಾಲಿಸಿದ್ದೇನೆ. ರಾಜೀನಾಮೆ ಪತ್ರವನ್ನು ರಾಜ್ಯಪಾಲರ ಕಚೇರಿಗೆ ಸಲ್ಲಿಸಿದ್ದೇನೆ. ಮುಂದಿನ ಕ್ರಮ ಸಂವಿಧಾನಾತ್ಮಕವಾಗಿ ನಡೆಯಲಿದೆ” ಎಂದು ಹೇಳಿದ್ದಾರೆ.






