ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ನಡುವೆಯೇ, ಬೆಳಗಾವಿಯಲ್ಲಿ ಪರಿಷತ್ ಸದಸ್ಯ ಲಖನ್ ಜಾರ್ಕಿಹೊಳಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಿದ್ದರಾಮಯ್ಯ ರಾಜೀನಾಮೆ ಕಾಂಗ್ರೆಸ್ ಪತನಕ್ಕೆ ಕಾರಣವಾಗುತ್ತದೆ. ಪಕ್ಷ ಅಧಃಪತನದ ದಾರಿಗೆ ಹೋಗುತ್ತದೆ” ಎಂದು ಎಚ್ಚರಿಸಿದರು.

ಮೂರು ವರ್ಷಗಳ ಕಾಲ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸಮತೋಲನದಲ್ಲಿಟ್ಟಿದ್ದವರು ಸಿದ್ದರಾಮಯ್ಯ ಎಂದು ಹೇಳಿದ ಲಖನ್ ಜಾರಕಿಹೊಳಿ, ಚುನಾವಣೆ ವೇಳೆ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಅಡಚಣೆ ಆಗದಂತೆ ಜಾರಿಗೊಳಿಸಿದ್ದು ಅವರ ನಾಯಕತ್ವದಿಂದಲೇ ಸಾಧ್ಯವಾಯಿತು ಎಂದರು.

“ಇನ್ಮುಂದೆ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ನಿಲ್ಲುವ ಪರಿಸ್ಥಿತಿ ಬರುತ್ತದೆ. ಸರ್ಕಾರಿ ನೌಕರರಿಗೆ ಸಂಬಳ ನೀಡುವುದೂ ಕಷ್ಟವಾಗಬಹುದು” ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಹೈಕಮಾಂಡ್ ನಾಯಕರಾದ ರಣದೀಪ್ ಸಿಂಗದ ಹಾಗೂ ಕೆ ಸಿ ವೇಣುಗೋಪಾಲ ವಿರುದ್ಧವೂ ಲಖನ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

“ವೇಣುಗೋಪಾಲ್ ಮತ್ತು ಸುರ್ಜೇವಾಲಾಗೆ ಕನ್ನಡ ಗೊತ್ತಿಲ್ಲ, ರಾಜ್ಯದ ಸಮಸ್ಯೆಗಳ ಅರಿವು ಇಲ್ಲ. ಬೆಂಗಳೂರನ್ನು ಬಿಟ್ಟರೆ ಬೇರೆ ಊರುಗಳೇ ಗೊತ್ತಿಲ್ಲ. ಇಂಥವರು ಸಿದ್ದರಾಮಯ್ಯಗೆ ರಾಜೀನಾಮೆ ಕೊಡಲು ಹೇಳುತ್ತಿದ್ದಾರೆ” ಎಂದು ಟೀಕಿಸಿದರು.ಸಿದ್ದರಾಮಯ್ಯ ಕುರುಬ ಸಮುದಾಯದ ದೊಡ್ಡ ನಾಯಕ ಹಾಗೂ ರಾಜ್ಯದ ಮಾಸ್ ಲೀಡರ್ ಎಂದು ಬಣ್ಣಿಸಿದ ಅವರು, “ವೀರೇಂದ್ರ ಪಾಟೀಲರಿಗೆ ಆಗಿದ್ದ ಅನ್ಯಾಯವೇ ಇಂದು ಕುರುಬ ಸಮಾಜಕ್ಕೂ ಆಗಿದೆ” ಎಂದು ಹೇಳಿದರು.
“2028ರ ಚುನಾವಣೆಯಲ್ಲಿ ಕಾಂಗ್ರೆಸ್ಗೆ 40 ಸ್ಥಾನಗಳನ್ನೂ ಗೆಲ್ಲಲು ಸಾಧ್ಯವಾಗದು. ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಆಗಿ ಅವರ ನೇತೃತ್ವದಲ್ಲೇ ಚುನಾವಣೆಗೆ ಹೋಗಬೇಕಿತ್ತು” ಎಂದು ಅಭಿಪ್ರಾಯಪಟ್ಟರು.ಡಿಸಿಎಂ ಡಿಕೆ ಶಿವಕುಮಾರ್ ಕುರಿತು ಮಾತನಾಡಿದ ಅವರು, “ಡಿಕೆ ಶಿವಕುಮಾರ್ ಈಗಾಗಲೇ ಡಿಸಿಎಂ ಆಗಿದ್ದರು. ಹಿರಿಯರಿಗೆ ಸಚಿವ ಸ್ಥಾನಗಳೂ ಇದ್ದವು. ಆದರೂ ಹೈಕಮಾಂಡ್ ಜೇನುಗೂಡಿಗೆ ಕೈ ಹಾಕಿದೆ” ಎಂದು ವ್ಯಂಗ್ಯವಾಡಿದರು.
ಮುಂದುವರೆದು, “ಸಿದ್ದರಾಮಯ್ಯ ಅವರ ಕಣ್ಣೀರು 2028ರಲ್ಲಿ ಜ್ವಾಲಾಮುಖಿಯಂತೆ ಸ್ಫೋಟಿಸಲಿದೆ. ಯಡಿಯೂರಪ್ಪರನ್ನು ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ ಬಳಿಕ ಬಿಜೆಪಿಯ ಪರಿಸ್ಥಿತಿ ಏನಾಯಿತೋ, ಅದೇ ಸ್ಥಿತಿ ಕಾಂಗ್ರೆಸ್ಗೂ ಎದುರಾಗಲಿದೆ” ಎಂದು ಹೇಳಿದರು.

ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಅಹಿಂದ ಮತಗಳೇ ಕಾರಣ ಎಂದು ಹೇಳಿದ ಅವರು, “ಸಿದ್ದರಾಮಯ್ಯಗೆ ಆಗಿರುವ ಅನ್ಯಾಯಕ್ಕೆ ಜನರು ತಕ್ಕ ಪಾಠ ಕಲಿಸುತ್ತಾರೆ” ಎಂದು ಎಚ್ಚರಿಕೆ ನೀಡಿದರು.ಕೊನೆಯಲ್ಲಿ ವ್ಯಂಗ್ಯವಾಗಿ ಮಾತನಾಡಿದ ಲಖನ್ ಜಾರಕಿಹೊಳಿ, “ವೇಣುಗೋಪಾಲ್ ಮತ್ತು ಸುರ್ಜೇವಾಲಾ ದೊಡ್ಡ ನಾಯಕರು. ಇವರೇ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದರು. ಸಿದ್ದರಾಮಯ್ಯ ಪಾತ್ರವೇ ಇರಲಿಲ್ಲ ಅನ್ನಿಸುವಂತಾಗಿದೆ” ಎಂದು ಟೀಕಿಸಿದರು.






