ಭಾರತದಲ್ಲಿರುವ ಸುಮಾರು 78.64 ಲಕ್ಷ ವಿಶೇಷ ಮಕ್ಕಳಲ್ಲಿ (physically disabled child) ಐದು ವರ್ಷ ವಯಸ್ಸಿನ ನಾಲ್ಕನೇ ಮೂರು ಭಾಗದಷ್ಟು ಮಕ್ಕಳು ಯಾವುದೇ ರೀತಿಯ ಶಿಕ್ಷಣ ಪಡೆದುಕೊಳ್ಳುವುದಿಲ್ಲ ಎನ್ನುತ್ತದೆ 2019ರ ಯುನೆಸ್ಕೋ ವರದಿ. ವಾಸ್ತವವಾಗಿ, ಇಂತಹ ಮಕ್ಕಳಲ್ಲಿ 12% ರಷ್ಟು ಮಕ್ಕಳು ಶಾಲೆಯಿಂದ ಬಲುಬೇಗ ಹೊರಬರುತ್ತಾರೆ ಮತ್ತು 27% ಮಕ್ಕಳು ಔಪಚಾರಿಕ ಶಿಕ್ಷಣ ಪಡೆದುಕೊಳ್ಳಲು ಶಿಕ್ಷಣ ಸಂಸ್ಥೆಗಳಿಗೆ ದಾಖಲಾಗುವುದೇ ಇಲ್ಲ, ದಾಖಲಾಗಬಯಸಿದರೂ ಇಲ್ಲಿನ ಶಿಕ್ಷಣ ಸಂಸ್ಥೆಗಳು ಅವರನ್ನು ದಾಖಲು ಮಾಡಿಕೊಳ್ಳಲು ಹಿಂದೆ ಮುಂದೆ ನೋಡುತ್ತವೆ.
ಇದಕ್ಕೆ ಪೂರಕ ಮಾಹಿತಿ ಎಂಬಂತೆ “ಕೆ.ಜಿ. ಹಳ್ಳಿಯಲ್ಲಿರುವ ನನ್ನ ಮನೆಯ ಸಮೀಪವಿರುವ ಎರಡು ಮುಖ್ಯವಾಹಿನಿಯ ಶಾಲೆಗಳಲ್ಲಿ ನನ್ನ ಮಗುವನ್ನು ಸ್ವೀಕರಿಸಲಿಲ್ಲ. ಶಾಲಾಧಿಕಾರಿಗಳು ನಿಮ್ಮ ಮಗು ಸಾಮಾನ್ಯ ಮಕ್ಕಳಂತೆ ಇಲ್ಲದೇ ಇರುವುದರಿಂದ ಶಾಲೆಗೆ ಪ್ರವೇಶ ನೀಡಲಾಗುವುದಿಲ್ಲ ” ಎಂದಿರುವುದಾಗಿ ಬೆಂಗಳೂರಿನ ಕೆ.ಜಿ ಹಳ್ಳಿಯ ವಿಶೇಷ ಮಗುವಿನ ತಾಯಿಯೊಬ್ಬರು ಹೇಳಿದ್ದಾರೆ.
ಹುಟ್ಟುತ್ತಲೇ ಮೆದುಳಿನ ಅಸಹಜ ಬೆಳವಣಿಗೆ (cerebral palsy)ಯಿಂದ ಬಳಲುತ್ತಿರುವ ಮಗುವನ್ನು ಕೇವಲ ಒಂದು ತಿಂಗಳ ಕಾಲ ಶಾಲೆಗೆ ಸೇರ್ಪಡಿಸಿಕೊಳ್ಳುವಂತೆ ತಾಯಿ ಕೇಳಿಕೊಂಡಿದ್ದರು. ಆದರೆ ಶಾಲೆಯ ಆಡಳಿತಾಧಿಕಾರಿಗಳು ಆ ಮಗುವನ್ನು ಒಂದು ದಿನದ ಮಟ್ಟಿಗೂ ಸೇರಿಸಿಕೊಳ್ಳಲು ಸಿದ್ಧರಿರಲಿಲ್ಲ.
ವಿಶೇಷ ಮಕ್ಕಳಿಗೆ ವಿಶೇಷ ಆರೈಕೆಯ ಅಗತ್ಯ ಖಂಡಿತಾ ಇದೆ. ಆದರೆ ಅವರನ್ನು ಈ ಒಂದು ಕಾರಣಕ್ಕಾಗಿ ಮುಖ್ಯವಾಹಿನಿಯ ಶಿಕ್ಷಣದಿಂದ ದೂರವಿಡುವುದು ಎಷ್ಟು ಸರಿ? ‘Inclusive Education Initiative’ ಎನ್ಜಿಒದ 2021ರ ವರದಿಯ ಪ್ರಕಾರ ಭಾರತದಲ್ಲಿ 90% ಪೋಷಕರೇ ತಮ್ಮ ಮಕ್ಕಳಾ ಕಲಿಕಾ ಪ್ರಕ್ರಿಯೆಯಲ್ಲಿ ಭಾಗವಹಿಸುವಲ್ಲಿ ಅಡತಡೆಗಳನ್ನು ಎದುರಿಸುತ್ತಾರೆ. ಅಲ್ಲದೆ ವಿಶೇಷ ಮಕ್ಕಳು ಎಲ್ಲಾ ಅಡೆತಡೆಗಳನ್ನು ಮೀರಿ ಶಾಲೆಗೆ ದಾಖಲಾದರೂ ಅಲ್ಲಿ ಇತರ ಮಕ್ಕಳಿಂದ ಬೆದರಿಕೆ, ಅವಹೇಳನ, ಅವಮಾನಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಬೆಂಗಳೂರಿನ ವಿಶೇಷ ಶಿಕ್ಷಣ ಸಲಹೆಗಾರರಾದ ಕವಿತಾ ನಾಯರ್.
ಈ ಮಕ್ಕಳ ಪೋಷಕರು ಶಾಲೆಯ ಶಿಕ್ಷಕರು, ಮ್ಯಾನೇಜ್ಮೆಂಟ್ವರೆಗೆ ದೂರು ಕೊಂಡೊಯ್ದರೂ ಅವು ನಿರ್ಲಕ್ಷ್ಯಕ್ಕೊಳಗಾಗುವುದೇ ಹೆಚ್ಚು. ಅವರಿಗೂ ಈ ಮಕ್ಕಳು ಹೊರೆ ಎನ್ನುವ ಭಾವ ಇರುತ್ತದೆ. ಇನ್ನೂ ಕೆಲವೊಮ್ಮೆ ಶಾಲೆಯ ಪ್ರತಿಷ್ಠೆ, ಶಾಲೆಯ ಬಗ್ಗೆ ಇರುವ ಸಾರ್ವಜನಿಕ ಅಭಿಪ್ರಾಯ ಕೆಡುತ್ತದೆ ಎನ್ನುವ ಕಾರಣಕ್ಕೆ ಇಂತಹ ಪ್ರಕರಣಗಳು ಮುಚ್ಚಿಹೋಗುವುದೇ ಹೆಚ್ಚು. ಹಾಗಾಗಿಯೇ ಭಾರತದ ಶಾಲೆಗಳಲ್ಲಿ ಅಂಗವೈಕಲ್ಯ ಹೊಂದಿರುವ ಮಕ್ಕಳ ದಾಖಲಾತಿ, ಅಂಕಿಅಂಶಗಳ ಪ್ರಕಾರ ನಾಲ್ಕನೇ ತರಗತಿಯವರೆಗೆ ಬೆರಳೆಣಿಕೆಯಷ್ಟಿದ್ದರೂ ಉನ್ನತ ಶಿಕ್ಷಣದಲ್ಲಿ ಇಲ್ಲವೇ ಇಲ್ಲ ಎನ್ನುವ ಮಟ್ಟಕ್ಕಿರುವುದು.
ಶಿಕ್ಷಣದ ಒಳಗೊಳ್ಳಿಸುವಲ್ಲಿನ ಸಮಸ್ಯೆ
ಸಮಸ್ಯೆಯ ಒಂದು ಭಾಗವು ಮಗುವಿನ ಅಂಗವೈಕಲ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ಇರುತ್ತದೆ. ಮುಂಬೈಯಲ್ಲಿನ ಅಂಗವೈಕಲ್ಯ ಹಕ್ಕುಗಳ ತಜ್ಞರಾದ ರಸ್ತಮ್ ಇರಾನಿ “ನಾವು ಇನ್ನೂ ಯಾವ ರೀತಿಯ ಅಂಗವೈಕಲ್ಯ ವ್ಯಕ್ತಿಯನ್ನು ಭಾದಿಸುತ್ತಿದೆ ಎಂಬುದರ ಬಗ್ಗೆ ಖಚಿತ ನಿಲುವಿಗೆ ಬರುವಷ್ಟು ಅಭಿವೃದ್ಧಿ ಹೊಂದಿಲ್ಲ” ಎನ್ನುತ್ತಾರೆ.
ಮುಖ್ಯವಾಹಿನಿಯ ಶಾಲೆಗಳಲ್ಲಿ ಕೆಲವು ಮಕ್ಕಳು ಅಧ್ಯಯನ ಮಾಡುತ್ತಿದ್ದರೂ ಸಹ, ಕಾಲೇಜಿನಲ್ಲಿ ಈ ಸಂಖ್ಯೆ ಅತ್ಯಂತ ಕಡಿಮೆ. ಯಾಕೆಂದರೆ ಅಂತಹ ವಿದ್ಯಾರ್ಥಿಗಳು ಆರಾಮದಾಯಕವಾಗಿ ಶಿಕ್ಷಣ ಪಡೆಯುವ ವ್ಯವಸ್ಥೆಯೇ ನಮ್ಮ ಕಾಲೇಜುಗಳಿಲ್ಲ. ಈ ಬಗ್ಗೆ ಮಾತಾಡುವ ಇರಾನಿ ” ನಾನು ಭಾರತದಲ್ಲಿ ಚಲನಚಿತ್ರ ಅಧ್ಯಯನದಲ್ಲಿ ಪದವಿ ಪಡೆಯಲು ಬಯಸಿದ್ದೆ. ಆದರೆ ದೇಶದಲ್ಲಿ ಇರುವ ಆಯ್ಕೆಗಳು ವಿಕಲಾಂಗ ಸ್ನೇಹಿಯಾಗಿರದೇ ಇರುವುದರಿಂದ ಅದು ಸಾಧ್ಯವಾಗಲಿಲ್ಲ” ಎನ್ನುತ್ತಾರೆ.
ಎರಡನೆಯದಾಗಿ ವಿಶೇಷ ಚೇತನರ ಶಿಕ್ಷಣದ ಬಗ್ಗೆ ಈಗ ಅಸ್ತಿತ್ವದಲ್ಲಿರುವ ಕಾನೂನು ಸ್ಪಷ್ಟವಾಗಿ ಏನನ್ನೂ ಹೇಳುವುದಿಲ್ಲ. ‘ವಿಶೇಷ ಚೇತನರ ಹಕ್ಕುಗಳ ಕಾಯ್ದೆ 2016’ ಶಿಕ್ಚಣ ಸಂಸ್ಥೆಗಳು ಅಗತ್ಯವಾಗಿ ‘ವಿಕಲಾಂಗರಿಗೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಗರಿಷ್ಠ ಪ್ರಯೋಜನ ಸಿಗುವಂತೆ ತನ್ನ ಪರಿಸರದಲ್ಲಿ ವ್ಯಕ್ತಿಗತವಾಗಿ ಅಥವಾ ಬೇರಾವುದೇ ರೀತಿಯಲ್ಲಿ ಅಗತ್ಯ ಬೆಂಬಲವನ್ನು, ಸಮಂಜಸವಾದ ಸೌಕರ್ಯವನ್ನು ಒದಗಿಸಬೇಕು’ ಎಂದು ಹೇಳುತ್ತದೆ. ಆದರೆ ‘Vidhi Centre for Legal Policy’ಯ 2020 ಮೇಯ ರಿವ್ಯೂ ಪ್ರಕಾರ, ‘ಸಮಂಜಸವಾದ ಸೌಕರ್ಯಗಳು’, ‘ವೈಯಕ್ತಿಕ ಬೆಂಬಲ’ ಮತ್ತು ‘ಪೂರ್ಣ ಒಳಗೊಳ್ಳುವಿಕೆ’ ಎಂಬ ಪದಗಳನ್ನು ವಿಸ್ತರಿಸಿ ಹೇಳಲಾಗಿಲ್ಲ. ಆದ್ದರಿಂದ ಸಂಸ್ಥೆಗಳು ಆ ಕಾನೂನನ್ನು ಬೇಕಾದಂತೆ ಬದಲಾಯಿಸಿ ಜಾರಿಗೆ ತರುತ್ತಿವೆ.
ಈ ಬಗ್ಗೆ ಮಾತನಾಡಿರುವ ಬೆಂಗಳೂರಿನ ಕವಿತಾ ನಾಯರ್ ಶಾಲೆಗಳ ನೀತಿಗಳನ್ನು ಎಷು ಸಾಧ್ಯವೋ ಅಷ್ಟು ಪರಿಷ್ಕರಿಸುವಂತಾಗಬೇಕು. ಅದರ ಜೊತೆಗೆ ಶಾಲಾಧಿಕಾರಿಗಳಿಗೆ ಒಳಗೊಳ್ಳುವಿಕೆ (inclusions) ಅಂದರೆ ಏನು ಎನ್ನುವುದರ ಬಗ್ಗೆ ಅರಿವು ಮೂಡಿಸಬೇಕು. ಮತ್ತು ನೀತಿಗಳನ್ನು ಅನುಷ್ಠಾನಗೊಳಿಸುವಾಗ ಶಾಲಾ ಪರಿಸರದಲ್ಲಿ ಅಗತ್ಯವಾದ ಬದಲಾವಣೆಗಳನ್ನು ಮಾಡಬೇಕಾಗಿದೆ ಎಂದು ಹೇಳುತ್ತಾರೆ.
ಯಾಕೆಂದರೆ ಇನ್ಕ್ಲೂಸಿವ್ ಶಿಕ್ಷಣದ ಕೊರತೆಯ ಸಮಸ್ಯೆಯು ಮುಖ್ಯವಾಹಿನಿಯ ಶಾಲೆಗಳಲ್ಲಿ ತರಬೇತಿ ಪಡೆಯದ ಶಿಕ್ಷಕರಿಂದ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಕೆಲವೊಮ್ಮೆ ಶಿಕ್ಷಕರು ಇಂತಹ ಮಕ್ಕಳನ್ನು ನಿಭಾಯಿಸಲು ಸಜ್ಜುಗೊಂಡಿರುವುದಿಲ್ಲ. ಜೊತೆಗೆ ಕೆಲವು ಮುಖ್ಯವಾಹಿನಿಯ ಶಾಲೆಗಳು ಕಡಿಮೆ ಸಂಪನ್ಮೂಲ, ಕಡಿಮೆ ಕೊಠಡಿಗಳು ಮತ್ತು ಕಡಿಮೆ ಶೈಕ್ಷಣಿಕ ಪರಿಕರಗಳನ್ನು ಹೊಂದಿರುತ್ತವೆ. ಇದರ ಜೊತೆಗೆ ವಿಶೇಷ ಮಕ್ಕಳಿಗಾಗಿ ಇರುವ ಶಾಲೆಗಳಲ್ಲೂ ನೂರಾರು ಸಮಸ್ಯೆಗಳಿವೆ. ಜನಸಾಮಾನ್ಯರ ಕೈಗೆಟುಕದ ಶುಲ್ಕ ಒಂದು ಕಡೆಯಾದರೆ ವಿಶೇಷ ಮಕ್ಕಳ ಬೇಕು ಬೇಡಗಳನ್ನು ಅರಿಯದೆ ಎಲ್ಲರಂತೆ ಅವರನ್ನೂ ಪರಿಗಣಿಸುವುದು ಸಮಸ್ಯೆ ಮತ್ತಷ್ಟು ಬೆಳೆಯಲು ಮತ್ತು ಮಕ್ಕಳು ಶಾಲೆಯಿಂದ ಹೊರಗುಳಿಯಲು ಕಾರಣವಾಗುತ್ತಿದೆ.