
ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಭಾಗದಲ್ಲಿ ದಶಕಗಳಿಂದ ಕಾಡುತ್ತಿದ್ದ ನಕ್ಸಲ್ವಾದ ಅಂತಿಮ ಹಂತಕ್ಕೆ ಬಂದು ನಿಂತಿದೆ. ವಿಕ್ರಂಗೌಡ ಎನ್ಕೌಂಟರ್ ಬಳಿಕ ಸರ್ಕಾರದ ಮೇಲೆ ಸಾಕಷ್ಟು ಮಂದಿ ಒತ್ತಡ ಹೇರುವ ಕೆಲಸ ಮಾಡಿದ್ದರು. ಎಲ್ಲದಕ್ಕೂ ಎನ್ಕೌಂಟರ್ ಪರಿಹಾರವಲ್ಲ, ಶರಣಾಗತಿಗೆ ಅವಕಾಶ ಮಾಡಿಕೊಡಿ ಅನ್ನೋ ಮನವಿಯನ್ನು ಮಾನವ ಹಕ್ಕುಗಳ ಹೋರಾಟಗಾರರು ಸರ್ಕಾರದ ಮುಂದಿಟ್ಟಿದ್ದರು. ಜೊತೆಗೆ ನ್ಯಾಯಾಂಗ ತನಿಖೆ ಹಾಗೂ ಶರಣಾಗತಿಗೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಅದರಂತೆ ಸರ್ಕಾರ ಪತ್ರಿಕಾ ಪ್ರಕಟಣೆ ಮೂಲಕ ಶರಣಾಗತಿ ಬಯಸುವ ನಕ್ಸಲರು ಶರಣಾಗುವಚಂತೆ ಸೂಚಿಸಿತ್ತು. ಇದೀಗ ನಕ್ಸಲರ ಶರಣಾಗುವ ನಿರ್ಧಾರ ಮಾಡಿದ್ದಾರೆ.

ಸರ್ಕಾರದ ಸೂಚನೆಯಂತೆ ಶರಣಾಗತಿಗೆ 6 ಮಂದಿ ನಕ್ಸಲರು ನಿರ್ಧಾರ ಮಾಡಿದ್ದು, ಚಿಕ್ಕಮಗಳೂರಲ್ಲಿ ಬುಧವಾರ ನಕ್ಸಲರು ಶರಣಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆರ ನಕ್ಸಲ್ ಶರಣಾಗತಿ ವಿಚಾರವಾಗಿ ನಮಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ ಎಂದಿದ್ದಾರೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್, ಶರಣಾಗತಿ ವಿಚಾರ ಖಚಿತವಾದರೆ ನಮಗೆ ಸರ್ಕಾರದಿಂದ ರೈಟಿಂಗ್ನಲ್ಲಿ ಬರುತ್ತದೆ. ಅದರ ಪ್ರಕಾರ ಕಮಿಟಿ ಛೇರ್ಮನ್ ಆಗಿ ನಾನು ಪ್ರಕ್ರಿಯೆ ಶುರು ಮಾಡ್ತೀನಿ. ರಾಜ್ಯ ಮಟ್ಟದ ಕಮಿಟಿ ಮೊದಲಿನಿಂದಲೂ ಇದೆ. ರಾಜ್ಯ ಸರ್ಕಾರದಿಂದ ನಮಗೆ ಮಾಹಿತಿ ಕೊಡ್ತಾರೆ. ರಾಜ್ಯ ಸರ್ಕಾರದಿಂದ ಮಾಹಿತಿ ಬಂದ ಬಳಿಕ ಪ್ರಕ್ರಿಯೆ ಮಾಡ್ತೇವೆ. ಜಿಲ್ಲಾ ಸರೆಂಡರ್ ಕಮಿಟಿಗೆ ಮಾಹಿತಿ ಬರುತ್ತದೆ ಎಂದಿದ್ದಾರೆ.
ಎಸ್ಪಿ ಮತ್ತೆ ಡಿಸಿಗೆ ಸರ್ಕಾರದಿಂದ ಮಾಹಿತಿ ಬರಲಿದೆ. ಎಸ್ಪಿ ಕಮಿಟಿಯ ಮೆಂಬರ್ ಸೆಕ್ರೇಟರಿ ಆಗಿರುತ್ತಾರೆ. ಆ ರೀತಿ ಮಾಹಿತಿ ಬಂದ್ರೆ ಮಾಧ್ಯಮದ ಮುಂದೆಯೇ ಎಲ್ಲವನ್ನೂ ತಿಳಿಸುತ್ತೇವೆ. ನಮಗೆ ಮಾಹಿತಿ ಬಂದ ತಕ್ಷಣ ಮೀಡಿಯಾ ಮುಂದೆ ತಿಳಿಸುವುದು ಮೊದಲ ಪ್ರಕ್ರಿಯೆ. ಮಾಜಿ ನಕ್ಸಲರ ಅಹವಾಲುಗಳ ಕುರಿತು ಎರಡು ಮೀಟಿಂಗ್ ಮಾಡಿದ್ದೇವೆ. ನಮ್ಮ ಹಂತದಲ್ಲಿ ಪರಿಹಾರವಾಗುವ ಸಣ್ಣ ಪುಟ್ಟ ಪರಿಹಾರ ಮಾಡುವ ಸಮಸ್ಯೆಗಳನ್ನ ಪರಿಹರಿಸುತ್ತಿದ್ದೇವೆ. ಕೊಪ್ಪ ತಾಲೂಕು ಕಚೇರಿಯಲ್ಲಿ ಒಬ್ಬರು ಗ್ರಾಮ ಸಹಾಯಕರಾಗಿ ಕೆಲಸ ಮಾಡ್ತಿದ್ದಾರೆ. ನಮ್ಮ ಜಿಲ್ಲಾಡಳಿತ ವತಿಯಿಂದ ಏನೇನು ಕ್ರಮಕೈಗೊಳ್ಳಬೇಕೋ ಅದೆಲ್ಲ ಆಗಿದೆ. ಉಳಿದಂತೆ ರಾಜ್ಯ ಸಮಿತಿಗೆ ಶಿಫಾರಸ್ಸು ಮಾಡಿದ್ದೇವೆ ಎಂದಿದ್ದಾರೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್.
ವಿಕ್ರಂಗೌಡ ಟೀಂನಲ್ಲಿದ್ದ ಮುಂಡಗಾರು ಲತಾ, ಸುಂದರಿ, ವನಜಾಕ್ಷಿ, ಜೀಶ ಹಾಗು ಆಂಧ್ರ ಮೂಲದ ನಕ್ಸಲ್ ಕೆ.ವಸಂತ ಮತ್ತು ಮಾರೆಪ್ಪ ಅರೋಲಿ ಶರಣಾಗಲಿದ್ದಾರೆ ಎನ್ನಲಾಗಿದೆ. ಜೊತೆಗೆ ನಕ್ಸಲರು ಶರಣಾಗಲು ಕೆಲವೊಂದು ಡಿಮ್ಯಾಂಡ್ ಕೂಡ ಮುಂದಿಟ್ಟಿದ್ದಾರೆ ಎನ್ನಲಾಗ್ತಿದೆ. ಮುಖ್ಯವಾಹಿನಿಗೆ ಬರುವ ಪ್ರಕ್ರಿಯೆ ಗೌರವಯುತ ಆಗಿರಬೇಕು. ಶರಣಾಗತಿ ಬಳಿಕ ಜೈಲುಗಳಲ್ಲಿ ಕೊಳೆಯುವಂತೆ ಆಗಬಾರದು. ಮೊಕದ್ದಮೆಗಳು ಒಂದೇ ಕೋರ್ಟ್ನಲ್ಲಿ ತ್ವರಿತ ವಿಚಾರಣೆ ಆಗಬೇಕು. ಶರಣಾದವರ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರ ಹೊರಬೇಕು. ಅತಂತ್ರ ಬದುಕು ಕೊನೆಗಾಣಿಸಿ ಸುಭದ್ರಗೊಳಿಸಬೇಕು. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಸರ್ಕಾರಗಳೂ ನಮ್ಮ ಬೇಡಿಕೆ ಒಪ್ಪಬೇಕು. ವಿಕ್ರಂಗೌಡ ಎನ್ಕೌಂಟರ್ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ನಕ್ಸಲರ ಶರಣಾಗತಿ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯೆ ನೀಡಿದ್ದು, ವಿಕ್ರಂಗೌಡ ಎನ್ಕೌಂಟರ್ ವೇಳೆ ಸಾಕಷ್ಟು ಜನರು ಮನವಿ ಮಾಡಿದ್ದರು. ಹೀಗಾಗಿ ನಾನೇ ಸೂಚನೆ ಕೊಟ್ಟಿದ್ದೇನೆ. ಶರಣಾಗುವ ನಕ್ಸಲರಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಕರ್ಯ ನೀಡುತ್ತೇವೆ ಎಂದಿದ್ದಾರೆ.








