ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ದಂಪತಿ ದಾಂಪತ್ಯ ಜೀವನದ 18ನೇ ವರ್ಷದ ಸಂಭ್ರಮದಲ್ಲಿದ್ದಾರೆ. ಹಲವು ವರ್ಷಗಳಿಂದ ಪತಿಯ ಸಿನಿಮಾಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ತೆರೆಮರೆಯಲ್ಲೇ ಸಕ್ರಿಯರಾಗಿದ್ದ ಶಿಲ್ಪಾ ಗಣೇಶ್, ಇದೀಗ ಹಿನ್ನೆಲೆ ಗಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.ಕನ್ನಡ ಹಾಗೂ ತುಳು ದ್ವಿಭಾಷೆಯಲ್ಲಿ ನಿರ್ಮಾಣವಾಗಿರುವ ‘ಪಿಚ್ಚರ್’ ಚಿತ್ರದ ‘ಗೋಕುಲದ ರಾಧೆ…’ ಹಾಡಿನ ಮೂಲಕ ಮೊದಲ ಬಾರಿಗೆ ಹಿನ್ನೆಲೆ ಗಾಯನಕ್ಕೆ ಧ್ವನಿ ನೀಡಿರುವ ಶಿಲ್ಪಾ ಗಣೇಶ್, ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಸಿನಿ ಪಯಣ, ಮದುವೆ ಬಳಿಕದ ಅನುಭವಗಳು ಹಾಗೂ ಅಭಿಮಾನಿಗಳ ಕ್ರೇಜ್ ಕುರಿತು ಮನಮುಕ್ತವಾಗಿ ಮಾತನಾಡಿದ್ದಾರೆ.

2008ರಲ್ಲಿ ಗಣೇಶ್ ಹಾಗೂ ಶಿಲ್ಪಾ ಅವರ ವಿವಾಹ ನಡೆದಾಗ ನಟನಿಗೆ ಅಪಾರ ಮಹಿಳಾ ಅಭಿಮಾನಿಗಳಿದ್ದ ಕಾರಣ ಅದು ಸಾಕಷ್ಟು ಸುದ್ದಿಯಾಗಿತ್ತು. ಆ ದಿನಗಳನ್ನು ನೆನಪಿಸಿಕೊಂಡ ಶಿಲ್ಪಾ, “ಸಿನಿಮಾ ಸ್ಟಾರ್ಗಳಿಗೆ ಅಭಿಮಾನಿಗಳು ಇರುವುದು ಸಹಜ ಎಂದು ತಿಳಿದಿತ್ತು. ಆದರೆ ಮದುವೆಯಾದ ಬಳಿಕ ಅಭಿಮಾನಿಗಳ ಪ್ರೀತಿ ಎಷ್ಟೊಂದು ತೀವ್ರವಾಗಿರುತ್ತದೆ ಎಂಬುದು ಅರಿವಾಯಿತು. ರಾತ್ರಿ-ಹಗಲು ಎನ್ನದೆ ಮನೆ ಬಾಗಿಲು ತಟ್ಟುತ್ತಿದ್ದರು. ಕೆಲವು ಘಟನೆಗಳು ಇಂದಿಗೂ ನೆನಪಾದರೆ ಅಚ್ಚರಿ ಆಗುತ್ತದೆ. ಹೇಳಿಕೊಳ್ಳಲು ಸಾಧ್ಯವಾಗದಷ್ಟು ವಿಭಿನ್ನ ಫ್ಯಾನ್ ಕ್ಷಣಗಳೂ ಇದ್ದವು” ಎಂದು ತಿಳಿಸಿದ್ದಾರೆ.

ಗಾಯಕಿಯಾಗಿ ಮೊದಲ ಹೆಜ್ಜೆ ಇಟ್ಟಿರುವ ಕುರಿತು ಸಂತಸ ವ್ಯಕ್ತಪಡಿಸಿದ ಅವರು, “ಹಾಡುವ ಆಸೆ ಮೊದಲಿನಿಂದಲೂ ಇತ್ತು. ನಾವು ನಿರ್ಮಿಸಿರುವ ಸಿನಿಮಾದಲ್ಲೇ ಒಂದು ದಿನ ಹಾಡಬೇಕು ಎಂಬ ಕನಸು ಇತ್ತು. ಈಗ ಅದು ನನಸಾಗಿದೆ. ನಾನು ಹಾಡಬಲ್ಲೆ ಎಂಬುದು ಗಣೇಶ್ ಅವರಿಗೆ ಗೊತ್ತಿತ್ತು. ‘ಇದು ನಮ್ಮ ಸಿನಿಮಾ, ನೀನೇ ಹಾಡು’ ಎಂದು ಅವರು ಪ್ರೋತ್ಸಾಹಿಸಿದರು” ಎಂದು ಹೇಳಿದ್ದಾರೆ.ತಮ್ಮ ಸಿನಿಮಾ ನಿರ್ಮಾಣದ ಪಯಣದ ಬಗ್ಗೆ ಮಾತನಾಡಿದ ಶಿಲ್ಪಾ, ಬಾಲ್ಯದಿಂದಲೇ ಸಿನಿಮಾಗಳ ಮೇಲೆ ಆಸಕ್ತಿ ಇತ್ತು. ಮುಂಬೈನಲ್ಲಿ ವಿದ್ಯಾಭ್ಯಾಸ ಮಾಡಿದ್ದರಿಂದ ಹಿಂದಿ ಸಿನಿಮಾಗಳ ಪ್ರಭಾವ ಹೆಚ್ಚಾಗಿತ್ತು.

ಮದುವೆಯಾದ ಒಂದು ವರ್ಷದೊಳಗೆ ನಿರ್ಮಾಣ ಸಂಸ್ಥೆ ಆರಂಭಿಸಿ ‘ಮಳೆಯಲಿ ಜೊತೆಯಲಿ’ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಹೆಜ್ಜೆ ಇಟ್ಟೆವು. ಚಿತ್ರದ ಯಶಸ್ಸು ಮತ್ತು ಹಾಡುಗಳ ಜನಪ್ರಿಯತೆಯೇ ಸಿನಿಮಾ ನಿರ್ಮಾಣದ ಮೇಲಿನ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿತು ಎಂದು ವಿವರಿಸಿದರು.ತುಳು ಸಿನಿಮಾಗಳ ನಿರ್ಮಾಣದ ಬಗ್ಗೆ ಮಾತನಾಡಿದ ಅವರು, “ನಮ್ಮ ಮಾತೃಭಾಷೆಯಾದ ತುಳು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂಬುದು ನಮ್ಮ ಕನಸು. ಇತ್ತೀಚಿನ ವರ್ಷಗಳಲ್ಲಿ ತುಳು ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ತುಳು ಚಿತ್ರಗಳಲ್ಲಿ ಮನರಂಜನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಪ್ರೇಕ್ಷಕರು ಎರಡು ಗಂಟೆಗಳ ಕಾಲ ಎಲ್ಲಾ ಒತ್ತಡ ಮರೆತು ನಗುತ್ತಾ ಚಿತ್ರವನ್ನು ಆಸ್ವಾದಿಸಬೇಕು ಎಂಬ ಉದ್ದೇಶದಿಂದಲೇ ‘ಪಿಚ್ಚರ್’ ಚಿತ್ರವನ್ನು ನಿರ್ಮಿಸಿದ್ದೇವೆ” ಎಂದು ಹೇಳಿದರು.





