ಮಂಡ್ಯ ಜಿಲ್ಲೆ ರಾಜಕಾರಣವೇ ವಿಶೇಷ. ಕಳೆದ ಬಾರಿ 7ಕ್ಕೆ 7 ಸ್ಥಾನಗಳಲ್ಲೂ ಜೆಡಿಎಸ್ ಗೆಲ್ಲಿಸಿದ್ದ ಮಂಡ್ಯದ ಜನರು ಈ ಬಾರಿ ಮಂಡ್ಯದಲ್ಲಿ ಕಾಂಗ್ರೆಸ್ಗೆ ಉಘೇ ಎಂದಿದ್ದಾರೆ. ನಾಗಮಂಗಲ ಶಾಸಕ, ಹಾಲಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ದ್ವೇಷ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದಾರೆ. ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ನಾಗಮಂಗಲಕ್ಕೆ ಹೋಗಿದ್ದಾಗ, ನಮ್ಮ ಪಕ್ಷದವರನ್ನು ಬಿಟ್ಟು ಬೇರೆ ಯಾರೊಬ್ಬರ ಪತ್ರಕ್ಕೂ ನಾನು ಒಂದೇ ಸಹಿ ಕೂಡ ಮಾಡಲ್ಲ ಎಂದಿದ್ದರು. ಇದಿಗ ವರ್ಗಾವಣೆ ದಂಧೆ ಆರೋಪದ ಚರ್ಚೆಗಳು ನಡೆಯುತ್ತಿರುವಾಗ ದ್ವೇಷದಿಂದ KSRTC ಬಸ್ ಡ್ರೈವರ್ ಕಂ ಕಂಡೆಕ್ಟರ್ ವರ್ಗಾವಣೆ ಮಾಡಿದ್ದು, ಚಾಲಕ ಜಗದೀಶ್ ಡೆತ್ನೋಟ್ನಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಹೆಸರು ಬರೆದಿಟ್ಟು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ಜೊತೆಗೆ ಹೋರಾಟ ಮಾಡ್ತಿದ್ದಾರೆ.

ಚಲುವರಾಯಸ್ವಾಮಿ ವಿರುದ್ಧ ತಿರುಗಿ ಬಿದ್ದ ಸಾರಿಗೆ ಸಿಬ್ಬಂದಿ..!
KSRTC ಬಸ್ ಚಾಲಕ ವಿಷ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ KSRTC ನಾಗಮಂಗಲ ಡಿಪೋ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದೆ ಆಕ್ರೋಶ ಹೊರ ಹಾಕಿದ್ದಾರೆ. ಡಿಪೋದಲ್ಲೇ ನಿಂತಿವೆ 60ಕ್ಕೂ ಹೆಚ್ಚು ಬಸ್ಗಳು. ಸಚಿವ ಚಲುವರಾಯಸ್ವಾಮಿ ಸೂಚನೆ ಮೇರೆಗೆ ಚಾಲಕ ಜಗದೀಶ್ ವರ್ಗಾವಣೆ ಮಾಡಲಾಗಿತ್ತು. ಮಹಿಳಾ ಪ್ರಯಾಣಿಕರ ಜೊತೆ ಅಸಭ್ಯ ವರ್ತನೆ ಕಾರಣ ಕೊಟ್ಟು ಅಧಿಕಾರಿಗಳು ವರ್ಗಾವಣೆ ಮಾಡಿದ್ದರು. ಚಾಲಕ ಕಂ ಕಂಡಕ್ಟರ್ ಜಗದೀಶ್ ಹುಟ್ಟೂರು ನಾಗಮಂಗಲದ ಹಂದೇನಹಳ್ಳಿ ಗ್ರಾಮಸ್ಥರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಸಚಿವ ಚಲುವರಾಯಸ್ವಾಮಿ ದ್ವೇಷ ರಾಜಕಾರಣವೇ ನನ್ನ ಮಗನ ಈ ಸ್ಥಿತಿಗೆ ಕಾರಣ ಎಂದು ಜಗದೀಶ್ ತಂದೆ ರಾಜೇಗೌಡ ಆಕ್ರೋಶ ಹೊರಹಾಕಿದ್ದಾರೆ. ನಾವು ಮೊದಲಿನಿಂದಲೂ ಜೆಡಿಎಸ್ ಮತ್ತು ಕುಮಾರಸ್ವಾಮಿ ಅಭಿಮಾನಿಗಳು. ನನ್ನ ಸೊಸೆ ಗ್ರಾಮ ಪಂಚಾಯತಿ ಸದಸ್ಯೆ ಅನ್ನೋ ಕಾರಣಕ್ಕೆ ಕಿರುಕುಳ ನೀಡಿದ್ದಾರೆ. ನಮಗೆ ನಮ್ಮ ಮಗನೇ ಆಶ್ರಯ ಎಂದು ಕಣ್ಣೀರು ಹಾಕಿದ್ದಾರೆ.
ಮೈಸೂರು ಆಸ್ಪತ್ರೆಗೆ ಕುಮಾರಸ್ವಾಮಿ ಭೇಟಿ, ಆಕ್ರೋಶ..!
ನಾಗಮಂಗಲ KSRTC ಉದ್ಯೋಗಿ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಆಸ್ಪತ್ರೆಗೆ ಭೇಟಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಮುಂದಿನ 48 ಗಂಟೆಗಳ ಕಾಲ ನಿಗಾ ಘಟಕದಲ್ಲಿ ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಿದ ಬಳಿಕ ಆರೋಗ್ಯದ ಸ್ಥಿತಿಗತಿ ತಿಳಿಯಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆ ಬಳಿಕ ಮಾತನಾಡಿರುವ ಕುಮಾರಸ್ವಾಮಿ, ಸಚಿವ ಎನ್. ಚಲುವರಾಯಸ್ವಾಮಿ ವಜಾ ಮಾಡುವಂತೆ ಆಗ್ರಹ ಮಾಡಿದ್ದಾರೆ. ಸರ್ಕಾರ ಬಂದ ಒಂದು ತಿಂಗಳಲ್ಲೇ ದ್ವೇಷದ ರಾಜಕಾರಣ ಹೆಚ್ಚಾಗಿದೆ. ಕೂಡಲೇ ಚಲುವರಾಯಸ್ವಾಮಿ ವಜಾ ಮಾಡಿ, ಪ್ರಕರಣದ ತನಿಖೆ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಮಂತ್ರಿಗಳು ಹದ್ದುಬಸ್ತಿನಲ್ಲಿ ಕೆಲಸ ಮಾಡಬೇಕು. ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ದ್ವೆಷದ ರಾಜಕಾರಣ ಶುರುವಾಗಿದೆ. ದುಡ್ಡು ಬೇಕಾದರೆ ಮಾಡಿಕೊಳ್ಳಲಿ, ಜೀವದ ಜೊತೆ ಚೆಲ್ಲಾಟ ಬೇಡ ಎಂದು ಆಗ್ರಹ ಮಾಡಿದ್ದಾರೆ.

‘ಕಾಂಗ್ರೆಸ್ ಬೆಂಬಲಿಗರ ಮೂಲಕ ಕಿರುಕುಳ’ ಅಲ್ಲಗಳೆದ ಸಚಿವ
ಸರ್ಕಾರ ಬಂದು ಐವತ್ತು ದಿನ ಆಗಿದೆ, ವರ್ಗಾವಣೆ ಮಾಡಿಕೊಳ್ಳುವುದಾದರೆ ಮಾಡಿಕೊಳ್ಳಲಿ. ಆದರೆ ಈ ರೀತಿ ದ್ವೇಷ ರಾಜಕಾರಣ ಸರಿಯಲ್ಲ. ಡ್ರೈವರ್ ಕಂ ಕಂಡಕ್ಟರ್ ಜಗದೀಶ್ ಪತ್ನಿ ಪಂಚಾಯತಿ ಸದಸ್ಯರು. ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಬಂದಿದೆ. ಊರಿನಲ್ಲಿರುವ ರೌಡಿ ಚೇಲಾ ಮಹದೇವ ಎಂಬಾತ ಜಗದೀಶ್ ಕುಟುಂಬಕ್ಕೆ ಕಿರುಕುಳ ನೀಡಿದ್ದಾನೆ. ಆ ಹೆಣ್ಣು ಮಗಳು ಜೆಡಿಎಸ್ ಪಕ್ಷ ಬಿಟ್ಟು ಕಾಂಗ್ರೆಸ್ ಸೇರುವಂತೆ ಒತ್ತಡ ಹೇರಿದ್ದಾನೆ. ಇತ್ತ ಜಗದೀಶ್ಗೆ ಅಧಿಕಾರಿಗಳ ಮೂಲಕ ಕಿರುಕುಳ ಕೊಟ್ಟಿರುವುದನ್ನು ಜಗದೀಶ್ ಡೆತ್ ನೋಟ್ನಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ. ಸಚಿವರ ಆದೇಶ ಇದೆ, ಒತ್ತಡ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ, ಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ತನಿಖೆ ಮಾಡಿ ಎಂದಿದ್ದಾರೆ. ಆದರೆ ಸಚಿವ ಚಲುವರಾಯಸ್ವಾಮಿ ಮಾತ್ರ ನಾನು ಯಾವುದೇ ಒತ್ತಡ ಹೇರಿಲ್ಲ. ನನ್ನ ವಿರುದ್ಧ ಆರೋಪ ಸುಳ್ಳು, ಜೆಡಿಎಸ್ ರಾಜಕೀಯ ಮಾಡುತ್ತಿದೆ ಎಂದಿದ್ದಾರೆ.
ಕುಮಾರಸ್ವಾಮಿ ಆರೋಪ ಸುಳ್ಳು, ರಾಜಕೀಯ ಇರಬಹುದು – ಸಿಎಂ

ಡೆತ್ ನೋಟ್ನಲ್ಲಿ ಸಚಿವ ಚಲುವರಾಯಸ್ವಾಮಿ ಹೆಸರು ಪ್ರಸ್ತಾಪದ ವಿಚಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ನನಗೆ ವಿಷಯ ಗೊತ್ತಿಲ್ಲ, ವಿಚಾರ ಮಾಡುತ್ತೇನೆ. ಅವರ ಹೆಂಡತಿ ಪಂಚಾಯತ್ ಮೆಂಬರ್, ಅಧ್ಯಕ್ಷರಾಗಲು ಪ್ರಯತ್ನ ಮಾಡ್ತಾ ಇದ್ದಾರೆ. ಇದು ರಾಜಕೀಯ ಇರಬಹುದು ಎಂಬುದು ನನಗೆ ಅನಿಸುತ್ತದೆ. ವರ್ಗಾವಣೆ ಮಾಡಿದ್ದಾರೆ, ಇಲಾಖೆಯವರು ಮಾಡಿದ್ದಾರೆ. ವರ್ಗಾವಣೆ ಆಯಿತು ಎಂದು ವಿಷ ಕುಡಿದ್ದಾರೆ ಎಂಬುದು ಸುದ್ದಿ. ಕುಮಾರಸ್ವಾಮಿ ಅವರ ಆರೋಪದಲ್ಲಿ ಹುರುಳಿಲ್ಲ. ಆದರೂ ವರದಿ ತರಿಸಿಕೊಳ್ಳುತ್ತೇನೆ. ಕುಮಾರಸ್ವಾಮಿ ಅವರು ಹತಾಶರಾಗಿದ್ದಾರೆ, ದ್ವೇಷದಿಂದ ಮಾತನಾಡುತ್ತಾರೆ. ಸರ್ಕಾರ ಬಂದಿದೆ ಸಾರ್ವಜನಿಕ ವರ್ಗಾವಣೆ ನಡೆಯುತ್ತಿದೆ. ಲಂಚ, ದಂಧೆ ನಡೆದಿದೆ ಎಂಬುದು ಸುಳ್ಳು ಆರೋಪ. ಕುಮಾರಸ್ವಾಮಿ ಯಾವಗಲೂ ಹಿಟ್ ಅಂಡ್ ರನ್ ಮಾಡ್ತಾರೆ. ಯಾವ ಪ್ರಕರಣದಲ್ಲಿ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿದ್ದರು, ಹೇಳಿ ನೋಡೋಣ ಎಂದು ಮರು ಸವಾಲು ಹಾಕಿದ್ದಾರೆ. ಆದರೆ ನಾಗಮಂಗಲದ ಈ ಪ್ರಕರಣವನ್ನು ಸಿಎಂ ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಕಾಣಿಸುತ್ತಿದ್ದು, ಚಲುವರಾಯಸ್ವಾಮಿಗೆ ಬುದ್ಧಿ ಹೇಳಬೇಕಿದೆ.
ಕೃಷ್ಣಮಣಿ






