ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದ್ದು, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ (ಏ.17) ಆದೇಶಿಸಿದೆ.ಪ್ರಕರಣದ ವಿಚಾರಣೆ ವೇಳೆ ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡುವಂತೆ ಆರೋಪಿಗಳು ಮನವಿ ಸಲ್ಲಿಸಿದ್ದರೂ, ನ್ಯಾಯಾಲಯ ಅದನ್ನು ತಿರಸ್ಕರಿಸಿ ಗಂಭೀರ ಆರೋಪದ ಹಿನ್ನೆಲೆ ಜೀವಾವಧಿ ಶಿಕ್ಷೆಯನ್ನು ಘೋಷಿಸಿದೆ.

ಜೀವಾವಧಿ ಶಿಕ್ಷೆ ಎಂದರೆ ಅಪರಾಧಿಯು ತನ್ನ ಇಡೀ ಜೀವನಾವಧಿಯನ್ನು ಕಾರಾಗೃಹದಲ್ಲೇ ಕಳೆದಿರಬೇಕು ಎಂಬರ್ಥ. ಕೊಲೆ, ಅತ್ಯಾಚಾರ ಸೇರಿದಂತೆ ಗಂಭೀರ ಅಪರಾಧಗಳಲ್ಲಿ ಸಾಮಾನ್ಯವಾಗಿ ಇಂತಹ ಶಿಕ್ಷೆ ವಿಧಿಸಲಾಗುತ್ತದೆ.
ಸಾಮಾನ್ಯವಾಗಿ ಕೆಲವರು ಜೀವಾವಧಿ ಶಿಕ್ಷೆಯನ್ನು 14 ಅಥವಾ 20 ವರ್ಷಗಳ ಶಿಕ್ಷೆ ಎಂqದು ಭಾವಿಸುವುದು ತಪ್ಪು. ಸುಪ್ರೀಂ ಕೋರ್ಟ್ 2012ರ ತೀರ್ಪಿನಲ್ಲಿ ಸ್ಪಷ್ಟಪಡಿಸಿದಂತೆ, ಜೀವಾವಧಿ ಶಿಕ್ಷೆ ಎಂದರೆ ಕೈದಿ ಜೀವಂತವಾಗಿರುವವರೆಗೆ ಜೈಲಿನಲ್ಲೇ ಇರಬೇಕಾಗಿದೆ.ಆದರೆ, ಕೆಲ ವಿಶೇಷ ಸಂದರ್ಭಗಳಲ್ಲಿ ಸರ್ಕಾರ ಸನ್ನಡತೆ ಆಧಾರವಾಗಿ ಶಿಕ್ಷೆಯನ್ನು ಕಡಿಮೆ ಮಾಡಬಹುದು ಅಥವಾ ಪೆರೋಲ್ ನೀಡಬಹುದು.
ಪೆರೋಲ್ ಮೂಲಕ ಕೈದಿ ಕೆಲವು ದಿನಗಳು ಅಥವಾ ವಾರಗಳ ಕಾಲ ತಾತ್ಕಾಲಿಕವಾಗಿ ಹೊರಬರಲು ಅವಕಾಶ ದೊರಕುತ್ತದೆ. ಸರ್ಕಾರ ಕ್ಷಮಾದಾನ ಅಥವಾ ಶಿಕ್ಷೆ ರದ್ದು ಮಾಡುವ ನಿರ್ಧಾರ ಕೈಗೊಂಡರೂ, ಕೈದಿ ಕನಿಷ್ಠ 14 ವರ್ಷಗಳ ಜೈಲು ಶಿಕ್ಷೆಯನ್ನು ಕಡ್ಡಾಯವಾಗಿ ಪೂರೈಸಿರಬೇಕು. 14 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಬಿಡುಗಡೆ ಮಾಡುವ ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.






