ದೇವಸ್ಥಾನಗಳಲ್ಲಿ ಸಂಗ್ರಹವಾಗಿರುವ ಟನ್ಗಟ್ಟಲೆ ಚಿನ್ನವನ್ನು ಸಾರ್ವಜನಿಕ ಹಿತಕ್ಕಾಗಿ ಬಳಸಬೇಕು ಎಂಬ ಫಾದರ್ ಪೌಲ್ ಥಲೆಕ್ಕಟ್ ಅವರ ಹೇಳಿಕೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ವಿವಿಧ ವಲಯಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಕೇರಳದ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಧಾರ್ಮಿಕ ಸಂಸ್ಥೆಗಳ ಆಸ್ತಿ ಮತ್ತು ವಿದೇಶಿ ನಿಧಿ ನಿಯಂತ್ರಣ ಕಾಯ್ದೆ (FCRA) ಕುರಿತು ಮಾತನಾಡುತ್ತಾ, ಕ್ರೈಸ್ತ ಸಂಸ್ಥೆಗಳು ಜನಸೇವೆಗಾಗಿ ತಮ್ಮ ಸಂಪತ್ತನ್ನು ಬಳಸುತ್ತಿವೆ ಎಂದು ಸಮರ್ಥಿಸಿದರು.

“ಕ್ರೈಸ್ತರು ಸಮಾಜ ಸೇವೆ ಮಾಡುತ್ತಿಲ್ಲವೇ? ತಮ್ಮ ಸಂಪತ್ತನ್ನು ಜನರಿಗಾಗಿ ಬಳಸುತ್ತಿಲ್ಲವೇ?” ಎಂದು ಪ್ರಶ್ನಿಸಿದ ಅವರು, ಇದೇ ಹಿನ್ನೆಲೆ ದೇವಾಲಯಗಳಲ್ಲಿರುವ ಅಪಾರ ಪ್ರಮಾಣದ ಚಿನ್ನವನ್ನು ಕೂಡ ಸಾರ್ವಜನಿಕ ಉಪಯೋಗಕ್ಕೆ ಬಳಸಬೇಕೆಂದು ಅಭಿಪ್ರಾಯಪಟ್ಟರು.

“ಚರ್ಚ್ಗಳು ಹಣವನ್ನು ಕೇವಲ ಸಂಗ್ರಹಿಸಿಟ್ಟುಕೊಳ್ಳುವುದಿಲ್ಲ. ಅದೇ ರೀತಿ ಅನೇಕ ದೇವಸ್ಥಾನಗಳಲ್ಲಿ ಟನ್ಗಟ್ಟಲೆ ಚಿನ್ನ ಸಂಗ್ರಹವಾಗಿದೆ. ಅದು ಜನರ ಹಿತಕ್ಕಾಗಿ ಬಳಕೆಯಾಗಬೇಕು” ಎಂದು ಅವರು ಹೇಳಿದ್ದಾರೆ.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಹಲವರು, ದೇವಾಲಯಗಳಿಗೆ ಭಕ್ತರು ನೀಡುವ ದಾನವು ಅವರ ನಂಬಿಕೆ ಮತ್ತು ಧಾರ್ಮಿಕ ಭಾವನೆಯ ಪ್ರತೀಕವಾಗಿದ್ದು, ಅದು ದೇವಾಲಯಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಮಾತ್ರ ಬಳಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. “ಭಕ್ತಿಯಿಂದ ನೀಡಿದ ದಾನಕ್ಕೆ ಇತರ ಸಮುದಾಯಗಳಿಗೆ ಹೇಗೆ ಹಕ್ಕು?” ಎಂಬ ಪ್ರಶ್ನೆಯನ್ನು ಕೂಡ ಉದ್ಘಾಟಿಸಿದ್ದಾರೆ.ಈ ವಿವಾದದ ಹಿನ್ನೆಲೆಯಲ್ಲಿ ಧಾರ್ಮಿಕ ಆಸ್ತಿಗಳ ಬಳಕೆ, ನಿಯಂತ್ರಣ ಮತ್ತು ಅದರ ಸಾಮಾಜಿಕ ಹೊಣೆಗಾರಿಕೆ ಕುರಿತ ಚರ್ಚೆ ಮತ್ತೊಮ್ಮೆ ತೀವ್ರಗೊಂಡಿದೆ.






