ಬೆಂಗಳೂರು : ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಈ ವೇಳೆ ವಿಜಯ್, ತಾವು ಸ್ಪರ್ಧಿಸುತ್ತಿರುವ ಪೆರಂಬೂರು ಮತ್ತು ತಿರುಚ್ಚಿ ಪೂರ್ವದ ಮತದಾರರ ಕೈಗೆ ಸುಲಭವಾಗಿ ದೊರೆಯುವ ಭರವಸೆ ನೀಡಿದ್ದಾರೆ.

ಪ್ರಣಾಳಿಕೆ ಬಿಡುಗಡೆ ಮಾಡಿದ ನಂತರ ಮಾತನಾಡಿದ ವಿಜಯ್, ತಮಿಳುನಾಡಿನ ಎಲ್ಲಾ ಕ್ಷೇತ್ರಗಳು ನಮ್ಮದೆ ಆಗಿವೆ. ಎಲ್ಲೆಡೆ ನಮ್ಮ ಪ್ರತಿನಿಧಿಗಳು ಇರುತ್ತಾರೆ. ಆದರೆ ನನ್ನ ಕ್ಷೇತ್ರದಲ್ಲಿ, ನಾನು ಶಾಸಕನಾಗಿರುತ್ತೇನೆ. ಸರ್ಕಾರ ರಚಿಸುವ ವಿಶ್ವಾಸ ನಮಗಿದೆ. ನಾನು ಪ್ರತಿ ತಿಂಗಳು ನನ್ನ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ. ನೀವು ನನ್ನನ್ನು ಸುಲಭವಾಗಿ ಭೇಟಿ ಮಾಡಬಹುದು. ಅದು ಕಷ್ಟವಾಗುತ್ತದೆ ಎಂದು ಭಾವಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಕಳೆದ 2024ರಿಂದಲೂ ತಮ್ಮ ರಾಜಕೀಯ ಪಕ್ಷವನ್ನು (Political Party) ಸ್ಥಾಪಿಸಿದ್ದಾಗಿನಿಂದ, ನಟ ವಿಜಯ್ ವಿರುದ್ಧ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವುದಿಲ್ಲ ಎಂಬ ಆರೋಪವಿದೆ. ವಿರೋಧ ಪಕ್ಷದ ನಾಯಕರೂ ಸಹ ವಿಜಯ್ ಮನೆಯಿಂದ ಕೆಲಸ ಮಾಡುವ ರಾಜಕಾರಣಿ ಎಂದು ಹಣೆಪಟ್ಟಿ ಕಟ್ಟಿದ್ದಾರೆ. ಎರಡೂ ಕ್ಷೇತ್ರಗಳಲ್ಲಿನ ಪ್ರತಿಸ್ಪರ್ಧಿ ಅಭ್ಯರ್ಥಿಗಳು ವಿಜಯ್ ವಿರುದ್ಧ ಇದೇ ಅಸ್ತ್ರವನ್ನು ಪ್ರಯೋಗಿಸುತ್ತಿದ್ದಾರೆ.
ಇದನ್ನೂ ಓದಿ : ಮಹಿಳಾ ಮೀಸಲಾತಿ ಬಿಲ್ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..
ಇನ್ನೂ ತಿರುಚ್ಚಿ ಪೂರ್ವ ಕ್ಷೇತ್ರದಲ್ಲಿ ನಡೆದ ಚುನಾವಣಾ ಪ್ರಚಾರದ (Election Campaign) ಸಂದರ್ಭದಲ್ಲಿ, ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ಡಿಎಂಕೆ ಅಭ್ಯರ್ಥಿ ಇನಿಗೊ ಇರುದಯರಾಜ್ ಅವರನ್ನು ಬೆಂಬಲಿಸುತ್ತಾ, ಪರೋಕ್ಷವಾಗಿ ವಿಜಯ್ ಅವರನ್ನು ಟೀಕಿಸಿದ್ದಾರೆ. ಅಲ್ಲದೆ ಇರುದಯರಾಜ್ ಅವರು ಜನರ ಸೇವಕ, ಜನಸಾಮಾನ್ಯರ ಕೈಗೆ ಸುಲಭವಾಗಿ ಸಿಗುತ್ತಾರೆ. ಇಂತವರನ್ನು ಆಯ್ಕೆ ಮಾಡಿ ಎಂದು ಉದಯನಿಧಿ ಮನವಿ ಮಾಡಿದ್ದಾರೆ.
ನಮ್ಮ ಅಭ್ಯರ್ಥಿ ಇರುದಯರಾಜ್ ಜನರ ಮನೆಗಳಿಗೆ ಭೇಟಿ ನೀಡುತ್ತಾರೆ, ನೋವು – ನಲಿವುಗಳಲ್ಲಿ ಜನರ ಬೆಂಬಲಕ್ಕೆ ನಿಲ್ಲುತ್ತಾರೆ. ಜನರ ಬೇಕು ಬೇಡಗಳನ್ನು ಅರಿತುಕೊಂಡಿದ್ದಾರೆ ಎಂದು ತಮಿಳುನಾಡು ಡಿಸಿಎಂ ಪರೋಕ್ಷವಾಗಿ ನಟ ವಿಯಜ್ರನ್ನು ಕುಟುಕಿದ್ದಾರೆ.
ಉದಯನಿಧಿ ಸ್ಟಾಲಿನ್ ಟೀಕೆಗಳಿಗೆ ತಿರುಗೇಟು ನೀಡಿರುವ ಟಿವಿಕೆ ಮುಖ್ಯಸ್ಥ, ನಟ ವಿಜಯ್, ಪೆರಂಬೂರು ಮತ್ತು ತಿರುಚ್ಚಿ ಪೂರ್ವ ಎರಡೂ ಕ್ಷೇತ್ರಗಳು ನನಗೆ ಅಚ್ಚು ಮೆಚ್ಚಿನ ಕ್ಷೇತ್ರಗಳಾಗಿವೆ. ಪ್ರತಿ ತಿಂಗಳಿಗೊಮ್ಮೆಯಾದರೂ ಈ ನನ್ನ ಕ್ಷೇತ್ರಗಳಿಗೆ ಭೇಟಿ ನೀಡುತ್ತೇನೆ. ಜನರೂ ಕೂಡ ನನ್ನನ್ನು ಸುಲಭವಾಗಿ ಭೇಟಿ ಮಾಡಬಹುದು ಎಂದು ತಿಳಿಸಿದ್ದಾರೆ.

ಪ್ರಮುಖವಾಗಿ ಈ ಹಿಂದೆಯೂ ವಿಜಯ್ ಟೀಕೆಗೆ ಗುರಿಯಾಗಿದ್ದರು, ವಿಶೇಷವಾಗಿ ಕರೂರು ಕಾಲ್ತುಳಿತ ಘಟನೆಯ ನಂತರ, ಸಂತ್ರಸ್ತರ ಕುಟುಂಬಗಳನ್ನು ಅವರನ್ನು ಭೇಟಿ ಮಾಡಲು ಚೆನ್ನೈಗೆ ತೆರಳುವಂತೆ ತಿಳಿಸಲಾಗಿತ್ತು. ಆದರೂ ಡಿಎಂಕೆ ಸರ್ಕಾರವು ವಿಜಯ್ ಕರೂರ್ಗೆ ಭೇಟಿ ನೀಡಲು ಅನುಮತಿ ನಿರಾಕರಿಸಿದೆ ಎಂದು ಟಿವಿಕೆ ಕಿಡಿಕಾರಿದೆ ಇದಕ್ಕೂ ಮೊದಲು, ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ವಿಜಯ್ ತಮಿಳುನಾಡಿನಾದ್ಯಂತ ತಮ್ಮ ಪ್ರವಾಸವನ್ನು ಪ್ರಾರಂಭಿಸಿದಾಗ, ಅವರು ಶನಿವಾರದಂದು ಮಾತ್ರ ಪ್ರಚಾರ ಮಾಡುತ್ತಿದ್ದರು. ಹೀಗಾಗಿ ಅವರು ವಾರಾಂತ್ಯದ ರಾಜಕಾರಣಿ (Weekend Politician) ಎಂಬ ವಿರೋಧ ಪಕ್ಷದ ಟೀಕೆಗೆ ಗುರಿಯಾಗಿದ್ದರು.
ಹೀಗೆ ಟೀಕೆ, ಟಿಪ್ಪಣಿ ಆರೋಪ – ಪ್ರತ್ಯಾರೋಪಗಳ ನಡುವೆಯೂ ಏಪ್ರಿಲ್ 23 ರಂದು ತಮಿಳುನಾಡಿನ 234 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ. ಹೀಗಾಗಿ ತಮಿಳುನಾಡಿನ ರಾಜಕೀಯದಲ್ಲಿ ಡಿಎಂಕೆ ಮೈತ್ರಿಕೂಟ ಹಾಗೂ ಎಐಎಡಿಎಂಕೆ ಮಿತ್ರ ಕೂಟಗಳನ್ನು ಹೊರತುಪಡಿಸಿ ಪರ್ಯಾಯ ಶಕ್ತಿಯಾಗಿ ವಿಜಯ್ ನೇತೃತ್ವದ ಟಿವಿಕೆ () ರಾಜ್ಯದ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ರಾಷ್ಟ್ರೀಯ ಹಾಗೂ ಸ್ಥಳೀಯ ಪಕ್ಷಗಳಿಗೆ ಸೆಡ್ಡು ಹೊಡೆಯುವ ಕೆಲಸಕ್ಕೆ ಮುಂದಾಗಿದೆ.






