ಪ್ರತಿಷ್ಠಿತ 95ನೇ ಆಸ್ಕರ್ ಅಕಾಡಮಿ ಪ್ರಶಸ್ತಿಯ ಅರ್ಹತೆ ವಿಭಾಗದಲ್ಲಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಕೂಡ ಕಾಣಿಸಿಕೊಂಡಿದೆ. ನಟನಾ ವಿಭಾಗದಲ್ಲಿ ಈ ಸಿನಿಮಾ ಆಯ್ಕೆಯಾಗಿದ್ದು, ಕನ್ನಡದ ಎರಡು ಚಿತ್ರಗಳು ಈ ಬಾರಿ ಆಸ್ಕರ್ ಅಂಗಳದಲ್ಲಿವೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ನಿರೂಪ್ ಭಂಡಾರಿ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ.

ವಿಕ್ರಾಂತ್ ರೋಣ ಜೊತೆ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾ ಆಸ್ಕರ್ ಪ್ರಶಸ್ತಿಗಾಗಿ ಅರ್ಹತೆ ಸುತ್ತಿನಲ್ಲಿ ಸ್ಥಾನ ಪಡೆದಿದೆ. ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಟ ಎರಡು ವಿಭಾಗದಲ್ಲಿ ಅದು ಅರ್ಹತೆ ಸುತ್ತನ್ನು ಪಾಸು ಮಾಡಿದ್ದು, ಮುಂದಿನ ಹಂತಕ್ಕೆ ಸಿನಿಮಾ ಹೋಗಬೇಕಾದರೆ, ಆಸ್ಕರ್ ಸದಸ್ಯರು ಮತ ಚಲಾಯಿಸುವುದು ಕಡ್ಡಾಯವಾಗಿದೆ. ವಿಶ್ವದಾದ್ಯಂತ ಒಟ್ಟು 301 ಸಿನಿಮಾಗಳು ಅರ್ಹತೆ ಸುತ್ತಿನಲ್ಲಿ ಪಾಸಾಗಿವೆ.
ಈ ಕುರಿತು ನಿರ್ದೇಶಕ ರಿಷಬ್ ಶೆಟ್ಟಿ ಟ್ವಿಟ್ ಮಾಡಿದ್ದು, ‘ಕಾಂತಾರ ಸಿನಿಮಾ ಆಸ್ಕರ್ ಅರ್ಹತೆಯ ಸುತ್ತಿನಲ್ಲಿ ಎರಡು ವಿಭಾಗದಲ್ಲಿ ಅರ್ಹತೆ ಪಡೆದುಕೊಂಡಿದೆ. ಈ ವಿಚಾರ ತಿಳಿಸಲು ಸಂತಸವಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಅಲ್ಲದೇ, ಮುಂದಿನ ಹಂತಕ್ಕೆ ಹೋಗಿದ್ದು ಸಂಭ್ರಮ ತಂದಿದೆ’ ಎಂದು ಅವರು ಬರೆದುಕೊಂಡಿದ್ದಾರೆ.






