ಬೆಂಗಳೂರು: ನಟ ದರ್ಶನ್ ಅವರ ಪುತ್ರ ವಿನೀಶ್ ಪ್ರಯಾಣಿಸುತ್ತಿದ್ದ ಕಾರು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಸಣ್ಣ ರಸ್ತೆ ಅಪಘಾತಕ್ಕೀಡಾಗಿದ್ದು, ವಿನೀಶ್ ಕಾರು ಚಲಾಯಿಸಿ ಅಪಘಾತ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಅಲ್ಲದೇ ವಿನೀಶ್ ಸ್ಥಳೀಯರೊಂದಿಗೆ ಮಾತನಾಡುತ್ತಿದ್ದ ವಿಡಿಯೋ ಕೂಡ ಸಾಮಾಜಿಕ ಜಾಲತಾಣ ಹಾಗೂ ಕೆಲವು ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಹೀಗಾಗಿ ಈ ಬಗ್ಗೆ ಸ್ವತಃ ವಿನೀಶ್ ವಿಜಯಲಕ್ಷ್ಮಿ ದರ್ಶನ್ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಕೆಲವು ಮಾಧ್ಯಮಗಳು ಪ್ರಸಾರ ಮಾಡುತ್ತಿರುವ, ವಿನೀಶ್ ಅಪಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಸಂಪೂರ್ಣವಾಗಿ ಸುಳ್ಳು ಎಂಬುದನ್ನು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ ಎಂದಿದ್ದಾರೆ.

ವಿನೀಶ್ ಸಂಪೂರ್ಣವಾಗಿ ಸುರಕ್ಷಿತರಾಗಿದ್ದು ಆರೋಗ್ಯವಾಗಿದ್ದಾರೆ. ಅವರು ವಾಹನವನ್ನು ಚಾಲನೆ ಮಾಡುತ್ತಿರಲಿಲ್ಲ, ಎಂದಿನಂತೆ ನಮ್ಮ ಚಾಲಕರೇ ವಾಹನ ಚಲಾಯಿಸುತ್ತಿದ್ದರು. ಬೆಂಗಳೂರಿನ ಟ್ರಾಫಿಕ್ನಲ್ಲಿ ಸಾಮಾನ್ಯವಾಗಿ ನಡೆಯುವಂತಹ ಒಂದು ಸಣ್ಣ ರಸ್ತೆ ಘಟನೆ ಸಂಭವಿಸಿತು. ಇದರಲ್ಲಿ ಭಾಗಿಯಾಗಿದ್ದ ಇನ್ನೊಂದು ಪಕ್ಷವೇ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯನ್ನೂ ಕೇಳಿದೆ.
ವಿನೀಶ್ ಅವರು ಕೇವಲ ಬೈಕ್ನಲ್ಲಿದ್ದವರು ಸುರಕ್ಷಿತರಾಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ವಾಹನದಿಂದ ಇಳಿದಿದ್ದರು. ದುರದೃಷ್ಟವಶಾತ್, ಆ ಕೆಲ ಕ್ಷಣಗಳ ದೃಶ್ಯಗಳನ್ನು ಸಂದರ್ಭದಿಂದ ಹೊರತೆಗೆದು ಸಂಪೂರ್ಣ ತಪ್ಪು ರೀತಿಯಲ್ಲಿ ಪ್ರದರ್ಶಿಸಲಾಗಿದೆ.

ಒಂದು ಕುಟುಂಬವಾಗಿ ನಾವು ಈಗಾಗಲೇ ಕಷ್ಟದ ಸಮಯವನ್ನು ಎದುರಿಸುತ್ತಿದ್ದೇವೆ. ಇಂತಹ ದೃಢೀಕರಿಸದ ಮತ್ತು ಸಂಚಲನ ಸೃಷ್ಟಿಸುವ ಸುದ್ದಿಗಳ ಪ್ರಸಾರವು ನಮ್ಮ ನೋವು ಹಾಗೂ ಆತಂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದ್ದರಿಂದ, ವಿಶೇಷವಾಗಿ ಮಾಧ್ಯಮ ಸಂಸ್ಥೆಗಳು, ಯಾವುದೇ ಮಾಹಿತಿಯನ್ನು ಪ್ರಕಟಿಸುವ ಅಥವಾ ಪ್ರಸಾರ ಮಾಡುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ನಾವು ವಿನಂತಿಸುತ್ತೇವೆ. ಇಂತಹ ಸುಳ್ಳು ವರದಿಗಳನ್ನು ನಂಬಬೇಡಿ ಹಾಗೂ ಹಂಚಿಕೊಳ್ಳಬೇಡಿ ಎಂದು ಎಲ್ಲರಿಗೂ ಮನವಿ ಮಾಡಿಕೊಳ್ಳುತ್ತೇವೆ ಎಂದು ವಿಜಯಲಕ್ಷ್ಮಿ ದರ್ಶನ್ ಸ್ಪಷ್ಟನೆ ನೀಡಿದ್ದಾರೆ.






