ವಿಜಯೇಂದ್ರ ಎಲ್ಲಿ ಸ್ಪರ್ಧೆ ಮಾಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ನಿನ್ನೆ ಜನರು ಒತ್ತಾಯ ಮಾಡಿದರು ಅಂತ ನಾನು ಹಾಗೆ ಹೇಳಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಯು ಟರ್ನ್ ಹೊಡೆದಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕಾರಿಪುರದಲ್ಲಿ ಜನರು ಒತ್ತಾಯ ಮಾಡಿದ್ದರಿಂದ ನಾನು ಮುಂದಿನ ಬಾರಿ ಚುನಾವಣೆಗೆ ವಿಜಯೇಂದ್ರನಿಗೆ ಕ್ಷೇತ್ರ ಬಿಟ್ಟುಕೊಟ್ಟಿರುವುದಾಗಿ ಹೇಳಿದ್ದೆ ಎಂದರು.
ನನ್ನ ಹೇಳಿಕೆಯಿಂದ ಪಕ್ಷದಲ್ಲಿ ಗೊಂದಲ ಉಂಟಾಗಿದೆ. ವಿಜಯೇಂದ್ರ ಎಲ್ಲಿ ನಿಲ್ಲಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತೆ. ನಾನು ಹೈಕಮಾಂಡ್ ಗೆ ಸಲಹೆ ನೀಡಬಹುದಷ್ಟೇ. ನಿರ್ಧಾರ ಮಾಡಲು ಆಗಲ್ಲ ಎಂದು ಅವರು ಹೇಳಿದರು.