ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಜೂನ್ 3ರಂದು ಪ್ರಮಾಣವಚನ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್ ಅವರ ಅಧಿಕಾರ ಸ್ವೀಕಾರಕ್ಕೆ ಸಂಬಂಧಿಸಿದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಇದರ ನಡುವೆ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯಲ್ಲಿ ವಾಸ್ತು ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಕೆಲವು ಬದಲಾವಣೆಗಳು ನಡೆದಿರುವುದು ಗಮನ ಸೆಳೆದಿದೆ.ಮೂಲಗಳ ಪ್ರಕಾರ, ಜ್ಯೋತಿಷಿಗಳು ಮತ್ತು ವಾಸ್ತು ತಜ್ಞರು ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಕೊಠಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಡಿ.ಕೆ. ಶಿವಕುಮಾರ್ ಅವರು ಕುಳಿತುಕೊಳ್ಳಲಿರುವ ಮುಖ್ಯಮಂತ್ರಿಗಳ ಕುರ್ಚಿಯ ದಿಕ್ಕನ್ನು ವಾಸ್ತು ಸಲಹೆಯಂತೆ ಬದಲಾಯಿಸಲಾಗಿದೆ ಎಂದು ತಿಳಿದುಬಂದಿದೆ.

ಇದೇ ವೇಳೆ, ಮುಖ್ಯಮಂತ್ರಿಗಳ ಕಚೇರಿಯಲ್ಲಿ ನೊಣವಿನಕೆರೆ ಅಜ್ಜಯ್ಯನವರ ಚಿತ್ರವನ್ನು ಅಳವಡಿಸಲಾಗಿದೆ. ಡಿ.ಕೆ. ಶಿವಕುಮಾರ್ ಅವರು ಅಜ್ಜಯ್ಯನವರ ಮೇಲೆ ವಿಶೇಷ ಭಕ್ತಿ ಮತ್ತು ನಂಬಿಕೆ ಹೊಂದಿದ್ದು, ಹಲವು ಬಾರಿ ಸಾರ್ವಜನಿಕವಾಗಿ ಅದನ್ನು ವ್ಯಕ್ತಪಡಿಸಿದ್ದಾರೆ.“ನಾನು ಭವಿಷ್ಯದಲ್ಲಿ ರಾಜನಾಗುತ್ತೇನೆ ಎಂದು ಬಾಲ್ಯದಲ್ಲಿಯೇ ನೊಣವಿನಕೆರೆ ಅಜ್ಜಯ್ಯ ಹೇಳಿದ್ದರು. ಅವರ ಆಶೀರ್ವಾದ ಮತ್ತು ಅನುಗ್ರಹದಿಂದಲೇ ನಾನು ಮುಖ್ಯಮಂತ್ರಿ ಹುದ್ದೆಗೇರುತ್ತಿದ್ದೇನೆ” ಎಂದು ಡಿ.ಕೆ. ಶಿವಕುಮಾರ್ ಈ ಹಿಂದೆ ಹೇಳಿದ್ದರು.

ನಾಳೆ ಸಂಜೆ ಬೆಂಗಳೂರಿನ ಕರ್ನಾಟಕ ಲೋಕಭವನದಲ್ಲಿ ನಡೆಯಲಿರುವ ಪ್ರಮಾಣವಚನ ಸಮಾರಂಭಕ್ಕೆ ರಾಜ್ಯದ ರಾಜಕೀಯ ನಾಯಕರು, ಗಣ್ಯರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆಯಿದೆ. ಇದರ ನಡುವೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ನಡೆದಿರುವ ವಾಸ್ತು ಬದಲಾವಣೆಗಳು ಹಾಗೂ ಅಜ್ಜಯ್ಯನ ಚಿತ್ರದ ಅಳವಡಿಕೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿವೆ.






