2019ರ ಉತ್ತರ ಪ್ರದೇಶದ ಶಿಕ್ಷಕರ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಕ್ಯಾಂಡಲ್ಲೈಟ್ ಮೆರವಣಿಗೆ ಮಾಡುತ್ತಿದ್ದ ಪ್ರತಿಭಟನಾಕಾರರ ನೇಲೆ ಲಕ್ನೋ ಪೊಲೀಸರು ಶನಿವಾರ ಸಂಜೆ ಲಾಠಿಚಾರ್ಜ್ ನಡೆಸಿದ್ದಾರೆ. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನಾ ಗುಂಪನ್ನು ಪೋಲಿಸರು ಚದುರಿಸಿರುವುದು ಈಗ ವ್ಯಾಪಾರ ಆಕ್ರೋಶಕ್ಕೆ ಕಾರಣವಾಗಿದೆ. 69,000 ಸಹಾಯಕ ಶಿಕ್ಷಕರನ್ನು ನೇಮಕ ಮಾಡಲು ಈ ಅರ್ಹತಾ ಪರೀಕ್ಷೆ ಮಾಡಲಾಗಿತ್ತು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದ ಕಡೆಗೆ ಹೋಗುವ ಪ್ರಮುಖ ಜಂಕ್ಷನ್ನಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿದ್ದರು.
ಪೊಲೀಸರು ಪ್ರತಿಭಟನಾಕಾರರನ್ನು ಹಿಂಬಾಲಿಸಿ ಥಳಿಸಿದ ಘಟನೆಯ ವಿಡಿಯೋ ತುಣುಕನ್ನು ಅನೇಕ ವಿರೋಧ ಪಕ್ಷಗಳು ಹಂಚಿಕೊಂಡು ಯುಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಲಕ್ನೋದಲ್ಲಿ ಪ್ರತಿಭಟನಾಕಾರರ ಗುಂಪಿನ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ವರದಿಯಾದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ, “ಉದ್ಯೋಗ ಹುಡುಕುವವರನ್ನು ಯುಪಿ ಸರ್ಕಾರವು ಲಾಠಿಯಿಂದ ಹೊಡೆದಿದೆ. ಬಿಜೆಪಿ ಮತ ಕೇಳಲು ಬಂದಾಗ ಇದನ್ನು ನೆನಪಿಸಿಕೊಳ್ಳಿ!” ಎಂದು ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.