ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ ರಕ್ಷಣೆ (ಪಿಪಿವಿಎಫ್ಆರ್) ಪ್ರಾಧಿಕಾರವು ಶುಕ್ರವಾರ ಹೊರಡಿಸಿದ ಆದೇಶದ ಪ್ರಕಾರ, ಪೆಪ್ಸಿಕೋ ಕಂಪನಿಯ ಜನಪ್ರಿಯ LAYs ಆಲೂಗೆಡ್ಡೆ ಚಿಪ್ಸ್ಗಳಿಗಾಗಿ ಪ್ರತ್ಯೇಕವಾಗಿ ಬೆಳೆದ ಆಲೂಗಡ್ಡೆ ತಳಿಯ ಪೇಟೆಂಟ್ ಅನ್ನು ಭಾರತ ರದ್ದುಗೊಳಿಸಿದೆ.
ಇದರಿಂದ ಬಹುರಾಷ್ಟ್ರೀಯ ಕಂಪನಿ ಪೆಪ್ಸಿಕೊಗೆ ಕಪಾಳಮೋಕ್ಷವಾಗಿದೆ. ಆಲೂಗೆಡ್ಡೆ ಬೆಳೆದು ಕೊಟ್ಟ ರೈತರ ಮೇಲೆಯೇ ಈ ರಾಕ್ಷಸ ಕಂಪನಿ ಮೊಕದ್ದಮೆ ಹೂಡುವ ಮೂಲಕ ಅಧಿಕಪ್ರಸಂಗತನ ಮೆರೆದಿತ್ತು.
ತಾನು ಕೊಟ್ಟ ಬೀಜಗಳನ್ನು ತನಗಾಗಿ ಮಾತ್ರ ಬೆಳೆಯಬೇಕು ಎಂದು ಸರ್ವಾಧಿಕಾರಿ ಧೋರಣೆ ತೋರಿತ್ತು. ಪೆಪ್ಸಿಕೊ ಒಪ್ಪಂದದಿಂದ ಆಚೆ ಬಂದ ರೈತರು ಎಫ್ಸಿ-5 ತಳಿಯನ್ನು ಬೆಳೆಯಕೂಡದು ಎಂದು ಅದು ಕೆಲವು ರೈತರ ಮೇಲೆ ಮೊಕದ್ದಮೆ ಹೂಡಿತ್ತು.
2019 ರಲ್ಲಿ, ಪೆಪ್ಸಿಕೋ ಗುಜರಾತ್ ಮೂಲದ ಕೆಲವು ರೈತರ ಮೇಲೆ FC5 ಆಲೂಗೆಡ್ಡೆ ತಳಿಯ ಕುರಿತಾಗಿ ಮೊಕದ್ದಮೆ ಹೂಡಿತ್ತು. ಈ ತಳಿಯು ಆಲೂಗಡ್ಡೆ ಚಿಪ್ಸ್ನಂತಹ ತಿಂಡಿಗಳನ್ನು ತಯಾರಿಸಲು ಅಗತ್ಯವಾದ ಕಡಿಮೆ ತೇವಾಂಶವನ್ನು ಹೊಂದಿದೆ.
ಅದೇ ವರ್ಷ ಮೊಕದ್ದಮೆಗಳನ್ನು ಹಿಂತೆಗೆದುಕೊಂಡ ನ್ಯೂಯಾರ್ಕ್ ಮೂಲದ ಪೆಪ್ಸಿಕೋ ಕಂಪನಿಯು ಸಮಸ್ಯೆಯನ್ನು ಸೌಹಾರ್ದಯುತವಾಗಿ ಇತ್ಯರ್ಥಗೊಳಿಸಲು ಬಯಸಿದ್ದೇವೆ ಎಂದು ಹೇಳಿತ್ತು.
ನಂತರ, ರೈತರ ಹಕ್ಕುಗಳ ಹೋರಾಟಗಾರ್ತಿ ಕವಿತಾ ಕುರುಗಂಟಿ, ಪೆಪ್ಸಿಕೋದ ಎಫ್ಸಿ 5 ಆಲೂಗೆಡ್ಡೆ ಪ್ರಭೇದಕ್ಕೆ ನೀಡಲಾದ ಬೌದ್ಧಿಕ ಹಕ್ಕು (ಪೇಟೆಂಟ್ ರೈಟ್) ರಕ್ಷಣೆಯನ್ನು ಹಿಂಪಡೆಯಲು ʼಸಸ್ಯ ಪ್ರಭೇದಗಳ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರಕ್ಕೆ (ಪಿಪಿವಿಎಫ್ಆರ್ ) ಅರ್ಜಿ ಸಲ್ಲಿಸಿದರು, ಭಾರತದ ನಿಯಮಗಳು ಬೀಜ ಪ್ರಭೇದಗಳ ಮೇಲೆ ಪೇಟೆಂಟ್ ಅನ್ನು ಅನುಮತಿಸುವುದಿಲ್ಲ ಎಂದು ಕವಿತಾ ವಾದ ಮಾಡಿದರು.
ಬೀಜ ವೈವಿಧ್ಯದ ಮೇಲೆ ಪೆಪ್ಸಿ ಪೇಟೆಂಟ್ ಪಡೆಯಲು ಸಾಧ್ಯವಿಲ್ಲ ಎಂಬ ಕುರುಗಂಟಿಯವರ ವಾದವನ್ನು PPVFR ಪ್ರಾಧಿಕಾರವು ಒಪ್ಪಿಕೊಂಡಿತು.
“ನೋಂದಣಿ ಪ್ರಮಾಣಪತ್ರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ” ಎಂದು ಪಿಪಿವಿಎಫ್ಆರ್ ಪ್ರಾಧಿಕಾರದ ಅಧ್ಯಕ್ಷ ಕೆ ವಿ ಪ್ರಭು ಆದೇಶದಲ್ಲಿ ತಿಳಿಸಿದ್ದಾರೆ.
ಪೆಪ್ಸಿಕೊ ಇಂಡಿಯಾ ವಕ್ತಾರರು, “PPVFR ಪ್ರಾಧಿಕಾರವು ಜಾರಿಗೊಳಿಸಿದ ಆದೇಶದ ಬಗ್ಗೆ ನಮಗೆ ತಿಳಿದಿದೆ ಮತ್ತು ಅದನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿದ್ದೇವೆ” ಎಂದು ಹೇಳಿದ್ದಾರೆ.
ಪೆಪ್ಸಿಕೋ ತಾನು FC5 ವಿಧದ ಆಲೂಗಡ್ಡೆಯನ್ನು ಅಭಿವೃದ್ಧಿಪಡಿಸಿದ್ದು, 2016 ರಲ್ಲಿ ಗುಣಲಕ್ಷಣವನ್ನು ನೋಂದಾಯಿಸಿದೆ ಎಂದು ಸಮರ್ಥಿಸಿಕೊಂಡಿತ್ತು..
1989 ರಲ್ಲಿ ಭಾರತದಲ್ಲಿ ತನ್ನ ಮೊದಲ ಆಲೂಗೆಡ್ಡೆ ಚಿಪ್ಸ್ ಸ್ಥಾವರವನ್ನು ಸ್ಥಾಪಿಸಿದ ಕಂಪನಿಯು FC5 ಬೀಜದ ವಿಧವನ್ನು ರೈತರ ಗುಂಪಿಗೆ ಪೂರೈಸುತ್ತದೆ, ಅವರು ತಮ್ಮ ಉತ್ಪನ್ನಗಳನ್ನು ಕಂಪನಿಗೆ ನಿಗದಿತ ಬೆಲೆಗೆ ಮಾರಾಟ ಮಾಡುತ್ತಾರೆ.
PPVFR ಪ್ರಾಧಿಕಾರದ ತೀರ್ಪನ್ನು ಶ್ಲಾಘಿಸಿದ ಗುಜರಾತ್ನ ಆಲೂಗಡ್ಡೆ ರೈತರು, ಇದು ಬೆಳೆಗಾರರ ವಿಜಯ ಎಂದು ಹೇಳಿದ್ದಾರೆ.
“ಈ ಆದೇಶವು ಭಾರತದ ರೈತರಿಗೆ ದೊಡ್ಡ ವಿಜಯವಾಗಿದೆ ಮತ್ತು ಯಾವುದೇ ಬೆಳೆಗಳನ್ನು ಬೆಳೆಯುವ ಅವರ ಹಕ್ಕನ್ನು ಪುನರುಚ್ಚರಿಸುತ್ತದೆ” ಎಂದು 2019 ರಲ್ಲಿ ಪೆಪ್ಸಿಯಿಂದ ಮೊಕದ್ದಮೆ ಹೂಡಲ್ಪಟ್ಟಿದ್ದ ಗುಜರಾತ್ ಮೂಲದ ರೈತರಲ್ಲಿ ಒಬ್ಬರಾದ ಬಿಪಿನ್ ಪಟೇಲ್ ಹೇಳಿದ್ದಾರೆ.