ಪ್ರತಿ ಬಜೆಟ್ ನಲ್ಲೂ ಆದಾಯ ತೆರಿಗೆ ಮಿತಿಯನ್ನು ಏರಿಕೆ ಮಾಡಬೇಕೆಂಬ ನಿರೀಕ್ಷೆ ಜನಸಾಮಾನ್ಯರದ್ದು. ಏರುತ್ತಿರುವ ಹಣದುಬ್ಬರದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಮಿತಿ ಏರಿಕೆ ಮಾಡುವುದು ನ್ಯಾಯಸಮ್ಮತ ಎಂಬ ಪ್ರತಿಪಾದನೆ ಅರ್ಥಶಾಸ್ತ್ರಜ್ಞರದ್ದು. ಆದರೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ.
ಆದಾಯ ತೆರಿಗೆ ಮಿತಿಯನ್ನು ಯಥಾಸ್ಥಿತಿ ಕಾಪಾಡಿದ್ದಾರೆ. ಅಷ್ಟರ ಮಟ್ಟಿಗೆ ಆದಾಯ ತೆರಿಗೆ ವರ್ಗಕ್ಕೆ ತೀವ್ರ ನಿರಾಶೆ ಮೂಡಿಸಿದ್ದಾರೆ. ಒಂದೇ ಅನುಕೂಲ ಎಂದರೆ ಆದಾಯ ತೆರಿಗೆದಾರರು ಏಕಗವಾಕ್ಷಿ ಮೂಲಕ ಎರಡುವರ್ಷಗಳ ಅವಧಿಯೊಳಗೆ ತಮ್ಮ ಆದಾಯ ತೆರಿಗೆ ವಿವರಗಳನ್ನು ಪರಿಷ್ಕರಿಸಿ ಸಲ್ಲಿಸಲು ಅವಕಾಶ ಪ್ರಸ್ತಾಪಿಸಿದ್ದಾರೆ.
ಷೇರುಪೇಟೆಯಲ್ಲಿ ಹೂಡಿಕೆ ಮಾಡಿ ಗಳಿಸುವ ದೀರ್ಘಾವಧಿ ಲಾಭ ಗಳಿಕೆ ಮೇಲಿನ ತೆರಿಗೆಯನ್ನು ಶೇ.15ಕ್ಕೆ ಮಿತಿಗೊಳಿಸಿದ್ದಾರೆ. ಹಾಲಿ ಈ ತೆರಿಗೆಯು ಲಾಭದ ಪ್ರಮಾಣ ಆಧರಿಸಿ ಶೇ.15ರಿಂದ 35ರಷ್ಟು ಇದೆ. ದೀರ್ಘಾವಧಿ ಹೂಡಿಕೆಗೆ ಇದರಿಂದ ಹೆಚ್ಚಿನ ಉತ್ತೇಜನ ಸಿಗಲಿದೆಯೆಂದು ನಿರೀಕ್ಷಿಸಲಾಗಿದೆ.
ಜತೆಗೆ ಹೊಸದೊಂದು ತೆರಿಗೆ ಪ್ರಸ್ತಾಪ ಮಾಡಿದ್ದಾರೆ. ಅದು ಡಿಜಿಟಲ್ ಆಸ್ತಿಗಳ ವರ್ಗಾವಣೆ ಮೇಲೆ ಶೇ.30ರಷ್ಟು ತೆರಿಗೆ ಹೇರುವುದಾಗಿದೆ. ಇಲ್ಲಿ ಡಿಜಿಟಲ್ ಆಸ್ತಿ ಎಂದರೆ ಕ್ರಿಪ್ಟೊ ಕರೆನ್ಸಿ ಎಂದೇ ಅರ್ಥ.
ಆ ಮೂಲಕ ಕ್ರಿಪ್ಟೊ ಕರೆನ್ಸಿಗೆ ವಹಿವಾಟಿಗೆ ಅಧಿಕೃತ ಅನುಮೋದನೆ ನೀಡುವ ಮುನ್ಸೂಚನೆಯನ್ನೂ ನೀಡಿದ್ದಾರೆ. ಸದ್ಯಕ್ಕೆ ದೇಶದಲ್ಲಿ ಕ್ರಿಪ್ಟೊಕರೆನ್ಸಿ ಕುರಿತಂತೆ ತೆರಿಗೆ ನಿಯಮಗಳಿಲ್ಲ. ಇದಕ್ಕೆ ಪೂರಕವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಮುಂದಿನ ವಿತ್ತೀಯ ವರ್ಷದಿಂದ ಡಿಜಿಟಲ್ ಕರೆನ್ಸಿ ಪರಿಚಯಿಸಲಿದೆ ಎಂದು ಹೇಳಿದ್ದಾರೆ. ಇದು ದೇಶೀಯ ಕ್ರಿಪ್ಟೊ ಕರೆನ್ಸಿಯಾಗಲಿದೆಯೇ ಅಥವಾ ಹಾಲಿ ಇರುವ ಕಾಗದದ ರೂಪಾಯಿಗೆ ಬದಲಾಗಿ ಡಿಜಿಟಲ್ ರೂಪಾಯಿಯನ್ನು ಮಾರುಕಟ್ಟೆಗೆ ಬಿಡಲಾಗುತ್ತದೆಯೇ ಎಂಬುದರ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ಒಂದು ವೇಳೆ ಇದು ಕ್ರಿಪ್ಟೊಕರೆನ್ಸಿಯ ದೇಶೀ ಸ್ವರೂಪ ಇದ್ದಿರಬಹುದಾದರೆ, ಹೂಡಿಕೆಗೆ ಹೊಸ ಹೆಬ್ಬಾಗಿಗೇ ತೆರೆದಂತಾಗುತ್ತದೆ. ಕ್ರಿಪ್ಟೊ ಕರೆನ್ಸಿಗೆ ಯಾವುದೇ ಕೇಂದ್ರೀಯ ಬ್ಯಾಂಕುಗಳ, ಸರ್ಕಾರಗಳ ಗ್ಯಾರಂಟಿ ಇಲ್ಲ. ಭಾರತೀಯ ರಿಸರ್ವ್ ಬ್ಯಾಂಕೇ ಪರಿಚಯಿಸುತ್ತಿದೆ ಎಂದಾದರೆ ಅದಕ್ಕೆ ಕಾನೂನುಬದ್ಧ ರಕ್ಷಣೆ ಇದ್ದೇ ಇರುತ್ತದೆ.
ಎಲ್ಲಾ ವಲಯಗಳಲ್ಲೂ ತಂತ್ರಜ್ಞಾನವನ್ನು ಸಂಯೋಜಿಸಲು ಬಜೆಟ್ಟಿನಲ್ಲಿ ಹೆಚ್ಚು ಗಮನಹರಿಸಿಲಾಗಿದೆ. ಮಾಹಿತಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆಯಲ್ಲಿ ಮುಂಚೂಣಿಯಲ್ಲಿರುವುದರಿಂದ ಡಿಜಿಟಲ್ ಕರೆನ್ಸಿ, ಬ್ಲಾಕ್ಚೈನ್ ತಂತ್ರಜ್ಞಾನ ಮತ್ತು ವರ್ಚುವಲ್ ಡಿಜಿಟಲ್ ಸ್ವತ್ತುಗಳ ಕ್ರಮೇಣ ಸ್ವೀಕಾರವು ಬ್ಲಾಕ್ಚೈನ್- ತಂತ್ರಜ್ಞಾನದ ಕ್ಷೇತ್ರದಲ್ಲಿ ಭಾರತವು ನಾಯಕನಾಗಿ ಉದಯಿಸುವುದಕ್ಕೆ ಪೂರಕವಾಗಲಿದೆ ಎಂದು ವಿತ್ತ ಸಚಿವೆ ತಿಳಿಸಿದ್ದಾರೆ.

ತ್ವರಿತ ಅಭಿವೃದ್ಧಿ
ಈಗಾಗಲೇ ಆರ್ಥಿಕ ಸಮೀಕ್ಷೆಯಲ್ಲಿ ಪ್ರಸ್ತಾಪಿಸಿದಂತೆ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಜಿಡಿಪಿ ಅಭಿವೃದ್ಧಿ ದರವನ್ನು ಶೇ.9.2ರಷ್ಟು ಎಂದು ಅಂದಾಜಿಸಲಾಗಿದೆ. ಆ ಮೂಲಕ ಕೋವಿಡೋತ್ತರ ಅವಧಿಯಲ್ಲಿ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತವು ತ್ವರಿತವಾಗಿ ಚೇತರಿಕೆ ಕಂಡರಾಷ್ಟ್ರವಾಗಿ ಹೊರಹೊಮ್ಮಿದೆ ಎಂದೂ ವಿತ್ತ ಸಚಿವೆ ಹೇಳಿಕೊಂಡಿದ್ದಾರೆ. ಪ್ರಸಕ್ತ ವಿತ್ತೀಯ ವರ್ಷದಷ್ಟೇ ಆರ್ಥಿಕಾಭಿವೃದ್ಧಿಯನ್ನು ಮುಂದಿನ ವರ್ಷವೂ ನಿರೀಕ್ಷಿಸಲಾಗಿದ್ದರೂ ಒಟ್ಟಾರೆ ಜಿಡಿಪಿ ಬೆಳವಣಿಗೆಯು ಶೇ.8-8.5ರಷ್ಟಾಗುತ್ತೆ ಎಂದು ಮುನ್ನಂದಾಜಿಸಿದ್ದಾರೆ.
ವೆಚ್ಚ ಹೆಚ್ಚಳ
2022-23ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಒಟ್ಟು ವೆಚ್ಚವು 39.5 ಲಕ್ಷ ಕೋಟಿ ರೂಪಾಯಿಗಳಾಗಿರುತ್ತದೆ. ಇದು ಪ್ರಸಕ್ತ ವಿತ್ತೀಯ ವರ್ಷದ ಮೊತ್ತಕ್ಕೆ ಹೋಲಿಸಿದರೆ ಶೇ.4.5ರಷ್ಟು ಹೆಚ್ಚಳವಾಗಿದೆ. ವೆಚ್ಚ ಹೆಚ್ಚಳದಿಂದಾಗಿ ದೇಶದಲ್ಲಿ ಆರ್ಥಿಕತೆ ಚೇತರಿಕೆ ನೆರವಾಗಲಿದೆ. ಅದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಸೃಷ್ಟಿಸಲಿದೆ ಎಂಬುದು ವಿತ್ತ ಸಚಿವರ ಅಂದಾಜು. ಇದೇ ವೇಳೆ ಮುಂದಿನ ವರ್ಷದ ವಿತ್ತೀಯ ಕೊರತೆ ಮಿತಿಯನ್ನು ಶೇ.6.4ರಷ್ಟಾಗಲಿದೆ ಎಂದು ಅಂದಾಜಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಇದು ಐತಿಹಾಸಿಕ ಗರಿಷ್ಠ ಮಟ್ಟವಾದ ಶೇ.9.6ರಷ್ಟಿದೆ.
ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಸಲುವಾಗಿ ಕೇಂದ್ರ ಸರ್ಕಾರವು 2.25 ಲಕ್ಷ ಕೋಟಿ ರೂಪಾಯಿಗಳನ್ನು ಒದಗಿಸಲಿದೆ. ಜನ ಮತ್ತು ಸರಕು ಸಾಗಣೆಗಳ ತ್ವರಿತ ಚಲನೆಗೆ ಅನುಕೂಲವಾಗುವಂತೆ ಗತಿ-ಶಕ್ತಿ ಯೋಜನೆಯನ್ನು ರೂಪಿಸಲಾಗಿದೆ. ಯೋಜನೆಯಡಿ 25 ಸಾವಿರ ಕಿಲೋಮೀಟರ್ ಎಕ್ಸ್ ಪ್ರೆಸ್ ವೇ ಗಳನ್ನು ನಿರ್ಮಿಸಲುದ್ದೇಶಿಸಲಾಗಿದೆ. ಈ ವಲಯಕ್ಕೆ ಹೂಡಿಕೆ ಹರಿದು ಬರಲು ಪೂರಕವಾಗುವಂತೆ ಮಾಹಿತಿ ಕೇಂದ್ರ ಮತ್ತು ಇಂಧನ ಸಂಗ್ರಹ ವ್ಯವಸ್ಥೆಗಳಿಗೆ ಮೂಲಭೂತಸೌಕರ್ಯಗಳ ಸ್ಥಾನ ಮಾನ ನೀಡಲುದ್ದೇಶಿಸಿದೆ.
ದೂರಸಂಪರ್ಕ ಕ್ಷೇತ್ರದಲ್ಲಿ ಮತ್ತೊಂದು ಸುತ್ತಿನ ಕ್ರಾಂತಿ ತರಬಹುದಾದ 5ಜಿ ಸೇವೆಯನ್ನು ಮುಂದಿನ ಆರ್ಥಿಕ ವರ್ಷದಿಂದ ಜಾರಿಗೆ ತರಲಿದೆ. ಇದಕ್ಕಾಗಿ ಸ್ಪ್ರೆಕ್ಟ್ರಂಗಳ ಹರಾಜು ಸೇರಿದಂತೆ ಅಗತ್ಯ ಔಪಚಾರಿಕತೆಗಳನ್ನು ತ್ವರಿತವಾಗಿ ಪೂರೈಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಇದರ ಜತೆಗೆ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಸಲುವಾಗಿ ಚಿಪ್ ತಂತ್ರಜ್ಞಾನಾಧಾರಿತ ಇ- ಪಾಸ್ಪೋರ್ಟ್ ಗಳನ್ನು ಮುಂದಿನ ವರ್ಷ ಪ್ರಾರಂಭಿಸಲಿದೆ.
ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡುವ ಸಲುವಾಗಿ ಬ್ಯಾಟರಿ ಬದಲಾಯಿಸಿಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಲಿದೆ. ಈ ವ್ಯವಸ್ಥೆಯು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡಲಿದ್ದು, ದೀರ್ಘಕಾಲದಲ್ಲಿ ದೇಶವು ಕಚ್ಚಾ ತೈಲಗಳ ಮೇಲಿನ ಅವಲಂಬನೆಯನ್ನು ತಗ್ಗಿಸಿ, ವಿದೇಶಿ ವಿನಿಮಯದ ಮೇಲಿನ ಒತ್ತಡವನ್ನು ತಗ್ಗಿಸಲಿದೆ. ವಿತ್ತೀಯಕೊರತೆ ತುಂಬಿಕೊಳ್ಳಲು ಮುಂದಿನ ವಿತ್ತೀಯ ವರ್ಷದ ಪೂರ್ವಾರ್ಧದಲ್ಲೇ ಭಾರತೀಯಜೀವ ವಿಮಾ ನಿಗಮದ ಶೇ.10ರಷ್ಟು ಪಾಲನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಪ್ರಸ್ತಾಪ ಮಾಡಿದ್ದಾರೆ. ಅಂದರೆ, ಏಪ್ರಿಲ್ ನಂತರ ಎಲ್ಐಸಿ ಷೇರುಪೇಟೆಯಲ್ಲಿ ಲಿಸ್ಟಾಗಲಿದೆ.
ರೂಪಾಯಿಗೆ ಎಷ್ಟು ಪೈಸೆ ಎಲ್ಲಿಂದ ಬರುತ್ತದೆ?
ಸರ್ಕಾರದ ಬೊಕ್ಕಸಕ್ಕೆ ಪ್ರತಿ ರೂಪಾಯಿಗೆ, ನೇರ ಮತ್ತು ಪರೋಕ್ಷ ತೆರಿಗೆಗಳಿಂದ 58 ಪೈಸೆ ಬರುತ್ತದೆ. ಸಾಲ ಮತ್ತು ಇತರ ಹೊಣೆಗಾರಿಕೆಗಳಿಂದ 35 ಪೈಸೆ ಬಂದರೆ, ಹೂಡಿಕೆಯಂತಹ ತೆರಿಗೆಯೇತರ ಆದಾಯದಿಂದ 5 ಪೈಸೆ ಮತ್ತು ಸಾಲೇತರ ಬಂಡವಾಳ ಸ್ವೀಕೃತಿಗಳಿಂದ 2 ಪೈಸೆ ಬರುತ್ತದೆ. ಜಿಎಸ್ಟಿಯು ಪ್ರತಿ ರೂಪಾಯಿ ಆದಾಯದಲ್ಲಿ 16 ಪೈಸೆ ಕೊಡುಗೆ ನೀಡಿದರೆ, ಕಾರ್ಪೊರೇಷನ್ ತೆರಿಗೆಯು ಗಳಿಸಿದ ಪ್ರತಿ ರೂಪಾಯಿಗೆ 15 ಪೈಸೆ ಕೊಡುಗೆ ನೀಡುತ್ತದೆ. ಕೇಂದ್ರ ಅಬಕಾರಿ ಸುಂಕದಿಂದ ಪ್ರತಿ ರೂಪಾಯಿಗೆ 7 ಪೈಸೆ ಮತ್ತು ಕಸ್ಟಮ್ಸ್ ಸುಂಕದಿಂದ 5 ಪೈಸೆ ನಿರೀಕ್ಷಿಸಲಾಗುತ್ತಿದೆ. ಆದಾಯ ತೆರಿಗೆಯು ಪ್ರತಿ ರೂಪಾಯಿ ಸಂಗ್ರಹಕ್ಕೆ 15 ಪೈಸೆ ನೀಡುತ್ತದೆ.






