ಕಳ್ಳತನ ಮಾಡಿದರೆಂಬ ಆರೋಪದ ಮೇಲೆ ಬಾಲಕರಿಬ್ಬರಿಗೆ ಬಲವಂತವಾಗಿ ಮೂತ್ರ ಕುಡಿಸಿ, ಅವರ ದೇಹದ ಸೂಕ್ಷ್ಮ ಸ್ಥಳದಲ್ಲಿ ಮೆಣಸಿನಕಾಯಿಗಳ ತಿಕ್ಕಿ ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ನಡೆದಿದೆ ಎಂದು ಮಾಧ್ಯಮಗಳು ಭಾನುವಾರ (ಆಗಸ್ಟ್ 6) ವರದಿಯಾಗಿದೆ.
ಸಂತ್ರಸ್ತ ಬಾಲಕರು 10 ಮತ್ತು 15 ವಯೋಮಾನದವರು ಎಂದು ತಿಳಿದು ಬಂದಿದ್ದು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗುಂಪೊಂದು ಇಬ್ಬರು ಬಾಲಕರಿಗೆ ಬಲವಂತವಾಗಿ ಮೆಣಸಿನಕಾಯಿಗಳ ತಿನ್ನಿಸುವುದು, ಬಾಟಲೊಂದರಲ್ಲಿ ತುಂಬಿಟ್ಟಿದ್ದ ಮೂತ್ರವನ್ನು ಹುಡುಗರು ಕುಡಿಯುತ್ತಿರುವುದು, ತಾವು ಹೇಳಿದಂತೆ ಕೇಳದಿದ್ದರೆ ಚೆನ್ನಾಗಿ ಹೊಡೆಯುವುದಾಗು ಗುಂಪು ಬೆದರಿಕೆ ಹಾಕುತ್ತಿರುವುದು ವಿಡಿಯೊದಲ್ಲಿ ಕಂಡ ಬಂದಿದೆ.
ಬಾಲಕರನ್ನು ಗುಂಪು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದೆ. ಇಬ್ಬರು ಬಾಲಕರನ್ನು ಕೈ ಕಟ್ಟಿ ಹಾಕಿ ಕೆಳಗಡೆ ಮಲಗಿಸಿ ಅವರ ದೇಹದ ಸೂಕ್ಷ್ಮ ಸ್ಥಳದಲ್ಲಿ ಮೆಣಸಿನಕಾಯಿಗಳನ್ನು ತುರುಕಲಾಗಿದೆ. ನೋವಿನಿಂದ ಚೀರಿದ ಬಾಲಕರಿಗೆ ಹಳದಿ ಬಣ್ಣದ ದ್ರಾವಣದ ಚುಚ್ಚುಮದ್ದೊಂದನ್ನು ನೀಡುತ್ತಿರುವುದು ಮತ್ತೊಂದು ವಿಡಿಯೊದಲ್ಲಿ ಕಂಡು ಬಂದಿದೆ.
ಈ ಸುದ್ದಿ ಓದಿದ್ದೀರಾ? ಹರಿಯಾಣ | ನುಹ್ ಗಲಭೆ ಶಮನದಲ್ಲಿ ಜೆಸಿಬಿ ದಾಳಿಗೆ ಉರುಳಿದ 20ಕ್ಕೂ ಹೆಚ್ಚು ಔಷಧ ಮಳಿಗೆಗಳು
ಉತ್ತರ ಪ್ರದೇಶ ಸಿದ್ಧಾರ್ಥನಗರ ಜಿಲ್ಲೆಯ ಪತ್ರಾ ಪೊಲೀಸ್ ಠಾಣಾ ಪ್ರದೇಶದ ಕೊಂಕಟಿ ಚೌರಾಹಾ ಬಳಿಯ ಆಶ್ರಯ ಕೋಳಿ ಮಾಂಸ ಮಳಿಗೆಯಲ್ಲಿ ಆಗಸ್ಟ್ 4 ರಂದು ವಿಡಿಯೊ ಚಿತ್ರೀಕರಿಸಿರುವ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿದ್ದು ಗುಂಪಿನ ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. “ಇಬ್ಬರು ಬಾಲಕರ ವಿರುದ್ಧದ ಆಕ್ಷೇಪಾರ್ಹ ವಿಡಿಯೊ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ಕ್ರಮ ಕೈಗೊಳ್ಳಲಾಗಿದೆ. ಬಾಲಕರು ಆರೋಪಿಗಳನ್ನು ಗುರುತಿಸಿದ್ದಾರೆ” ಎಂದು ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಳಿದರು.