ರಾಜ್ಯದಲ್ಲಿ ಎರಡನೇ ಹಂತದ ಚುನಾವಣಾ ಕಣ ರಂಗೇರಿದ್ದು, ಮೇ 7ರಂದು ಮತದಾನ ನಡೆಯಲಿದೆ. ಅಂತಿಮ ಹಂತದ ಮತಬೇಟೆ ಶುರುವಾಗಿದ್ದು, ಆದಷ್ಟು ಜನರನ್ನು ಸೆಳೆಯಲು ಎಲ್ಲಾ ಪಕ್ಷಗಳ ನಾಯಕರು ಪ್ರಚಾರದ ಮೊರೆ ಹೋಗಿದ್ದಾರೆ. ಇಂದು ರಾಜ್ಯಕ್ಕೆ ಕಾಂಗ್ರೆಸ್ ನಾಯಕರ ದಂಡಯಾತ್ರೆ ನಡೆಯುತ್ತಿದೆ.
ನಿನ್ನೆಯಷ್ಟೇ ಅಮಿತ್ ಷಾ ಹಾವೇರಿ ಹಾಗು ಹುಬ್ಬಳ್ಳಿಯಲ್ಲಿ ಪ್ರಚಾರ ನಡೆಸಿದ್ದರು. ಅಮಿತ್ ಷಾ ಪ್ರಚಾರದ ಬೆನ್ನಲ್ಲೇ ಇಂದು ರಾಜ್ಯಕ್ಕೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಆಗಮಿಸುತ್ತಿದ್ದಾರೆ. ಶಿವಮೊಗ್ಗ ಹಾಗು ರಾಯಚೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ರಾಹುಲ್ ಮತಯಾಚನೆ ಮಾಡಲಿದ್ದಾರೆ.
ಮಧ್ಯಾಹ್ನ 12:25ಕ್ಕೆ ಶಿವಮೊಗ್ಗ ಏರ್ಪೋರ್ಟ್ಗೆ ಬಂದಿಳಿಯಲಿರುವ ರಾಹುಲ್ ಗಾಂಧಿ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರ ಮತಯಾಚಿಸಲಿದ್ದಾರೆ. ಶಿವಮೊಗ್ಗದಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದ್ದು, ಸಮಾವೇಶದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ.
ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೆವಾಲ, ನಟ ಶಿವರಾಜ್ ಕುಮಾರ್ ಸೇರಿದಂತೆ ಸಾಕಷ್ಟು ನಾಯಕರು ಭಾಗಿಯಾಗಲಿದ್ದಾರೆ. ಶಿವಮೊಗ್ಗ ಕಾರ್ಯಕ್ರಮದ ಬಳಿಕ ರಾಯಚೂರಿನಲ್ಲಿ ರಾಹುಲ್ ಪ್ರಚಾರ ನಡೆಸಲಿದ್ದಾರೆ.