ಡಿಜಿಟಲ್ ಮಾಧ್ಯಮ, ಒಟಿಟಿ ಹಾಗೂ ಅಂತರ್ಜಾಲ ತಾಣಗಳಿಗೆ ನಿರ್ಬಂಧ ಹೇರುವ ಕೇಂದ್ರ ಸರ್ಕಾರದ ಹೊಸ ನಿಯಮಾವಳಿಗಳನ್ನು ಪ್ರಶ್ನಿಸಿ ʼThe Wireʼ ಸುದ್ದಿ ಜಾಲತಾಣ ಹಾಗೂ ಇತರರು ದೆಹಲಿ ಹೈಕೊರ್ಟ್ ಮೊರೆ ಹೋಗಿದ್ದಾರೆ.
ದೆಹಲಿಯ ಮುಖ್ಯನ್ಯಾಯಾಧೀಶರಾದ ಜಸ್ಟೀಸ್ ಡಿ ಎನ್ ಪಟೇಲ್ ಅವರು, ಬುಧವಾರದಂದು ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಿದ್ದಾರೆ. Foundation for Independent Journalist ಪರವಾಗಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ.
ಫೆಬ್ರುವರಿ 25ರಂದು ಜಾರಿಗೆ ತರಲಾಗಿದ್ದ ಈ ನಿಯಾಮವಳಿಗಳನ್ನು ಹಲವು ಪತ್ರಕರ್ತರು, ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರು ಟೀಕಿಸಿದ್ದರು. ಇದು ಪತ್ರಿಕಾ ಸ್ವಾತಂತ್ರ್ಯವನ್ನು ಹರಣ ಮಾಡುವ ಪ್ರಯತ್ನ ಎಂದು ಹೇಳಿದ್ದರು. ಈ ನಿಯಮಗಳನ್ನು ವಾಪಾಸ್ ಪಡೆಯುವಂತೆ Editors Guild of India ಒತ್ತಡವನ್ನೂ ಹೇರಿತ್ತು.
ಈ ಕುರಿತಾಗಿ ಮಾತನಾಡಿರುವ ದ ವೈರ್ನ ಸಿದ್ದಾರ್ಥ ವರದರಾಜನ್ ಅವರು, ಈ ನಿಯಮಗಳು ಸಾಮಾನ್ಯ ನಿಯಮಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ವಾಕ್ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿವೆ. ಈಗಾಗಲೇ ಡಿಜಿಟಲ್ ಮಾಧ್ಯಮಗಳ ಮೇಲೆ ಹಲವು ಪ್ರಕರಣಗಳಿವೆ. ಕೆಲವು ಪ್ರಕರಣಗಳ ವಿರುದ್ದ ಬರೆಯದಂತೆ ನಿರ್ಬಂಧ ಹೇರಲಾಗಿದೆ. ಈಗಿರುವಂತಹ ನಿಯಮಗಳನ್ನೆ ಬಳಸಿ ಡಿಜಿಟಲ್ ಮಾಧ್ಯಮಗಳನ್ನು ನಿಯಂತ್ರಿಸಬಹುದಾಗಿದೆ.
“ವೆಬ್ಸೈಟ್ಗಳಲ್ಲಿ ಸುದ್ದಿಗಳು ಪ್ರಕಟ ಮಾಡಬಹುದೇ ಇಲ್ಲವೇ? ಸುದ್ದಿ ಜಾಲತಾಣಗಳು ಜನರ ಕುಂದು ಕೊರತೆಗಳಿಗೆ ಸ್ಪಂದಿಸುತ್ತಿವೆಯೇ ಇಲ್ಲವೇ? ಎಂಬುದನ್ನು ನಿರ್ಧರಿಸಲು ಕೇಂದ್ರದ ಅಧಿಕಾರಿಗಳು ತೀರ್ಪು ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ,” ಎಂದು ಸಿದ್ದಾರ್ಥ್ ಹೇಳಿದ್ದಾರೆ.
ಈ ಟೀಕೆಗಳನ್ನು ಅಲ್ಲಗೆಳೆದಿರುವ ಕೇಂದ್ರ ಕಾನೂನು ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು, ನಾಗರಿಕರ ಹಿತ ರಕ್ಷಣೆಗಾಗಿ ಈ ನಿಯಮಗಳ ಅಗತ್ಯವಿದೆ ಎಂದುದ್ದಾರೆ.