
ಜೀ಼ ಮ್ಯೂಜಿಕ್ ಇಂದಿನಿಂದ, ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ಅಡಿಯ ಅತ್ಯಂತ ನಿರೀಕ್ಷೆಯ “ಕೊರಗಜ್ಜ” ಚಿತ್ರದಲ್ಲಿ ಮೂಡಿ ಬರುವ ಕರಾವಳಿಯ ಉಗ್ರಭಯಂಕರ, ರಕ್ತದಾಹದ ದೈವ “ಗುಳಿಗ” ನ ಕುರಿತಾದ ಹಾಡನ್ನು ಜನಮನ್ನಣೆಯ “ಮರಳಿ ಮರೆಯಾಗಿಯಂತಹ ಗೀತೆಯ ಸಾಹಿತಿ- ನಿರ್ದೇಶಕ, ಸುಧೀರ್ ಅತ್ತಾವರ್ ರವರೇ ಬರೆದಿರುವ “ಗುಳಿಗ.,.ಗುಳಿಗ…ಗುಳಿಗ…ಗುಳಿಗ…ಗುಳಿಗ…ಗುಳಿಗ…ಘೋರ ಗುಳಿಗಾ…!” ಎನ್ನುವರ ಯಾಪ್ ಮಿಶ್ರಿತ ಹಾಡು ಇಂದು ಎಲ್ಲೆಡೆ ಭೋರ್ಗರೆಯಲಿದೆ…!

ದಕ್ಷಿಣ ಭಾರತದ ಖ್ಯಾತ ಸಂಗೀತಗಾರ ಗೋಪಿಸುಂದರ್ ರ ಸಂಗೀತಕ್ಕೆ ಖ್ಯಾತ ಬಾಲಿವುಡ್ ಗಾಯಕ ಜಾವೆದ್ ಆಲಿ ಜೊತೆ ಸುಧೀರ್ ಅತ್ತಾವರ್ ಹಾಡಿದ್ದಾರೆ. ಕೆಲವು ಭಾಗಗಳಲ್ಲಿ ಗೋಪಿ ಸುಂದರ್ ಕೂಡಾ ಧ್ವನಿ ನೀಡಿದ್ದಾರೆ. ನೆಲವುಲ್ಲ ಸಂಕೆಯ 24 ನೆಯ ಮಗನಾಗಿ ಹುಟ್ಟಿದ “ಗುಳಿಗ” ಹುಟ್ಟುವಾಗಲೇ ಭಯಂಕರ ಹಸಿವಿನಿಂದಾಗಿ ಸಾವಿರ ಕೋಳಿ,ಸಾವಿರ ಕುದುರೆಯ ರಕ್ತ ಹೀರಿದರೂ ಹಸಿವು ನಿಲ್ಲದಿದ್ದಾಗ, ಶ್ರೀಮನ್ನಾರಾಯಣ ದೇವರ ಕಿರುಬೆರಳಿನಿಂದ ಅವರ ರಕ್ತವನ್ನೆಲ್ಲ ಹೀರಿದ… ಎನ್ನುವ ಜನಪದ ಕಥೆ ಗುಳಿಗನ ಹುಟ್ಟಿನ ಕುರಿತಾಗಿ ಇದೆ.

ಇಂತಹ ಘೋರ ಗುಳಿಗನ ಕೋಲ ಸೇವೆಯೂ ಘನ ಘೋರ ರೂಪದಲ್ಲಿ ತುಳುನಾಡಿನಾದ್ಯಂದ ಆಚರಿಸಲ್ಪಡುತ್ತಿದೆ.ಈ ಘೋರ ಗುಳಿಗನ ರಕ್ತ ಹೀರುವ ರುದ್ರ ನರ್ತನವನ್ನು ನೋಡಲಾಗದೆ ಭಯಭೀತಿಯಿಂದ ಅನೇಕರು ಕಣ್ಣು ಮುಚ್ಚಿಕೊಳ್ಳುವುದೂ ಇದೆ. ರಕ್ತ ದಾಹದಿಂದ ಎಲ್ಲೆಂದೆಲ್ಲಿ ಓಡುವ ಗುಳಿಗನನ್ನು ಹಿಡಿಯಲು ಹರಸಾಹಸ ಮಾಡುವ ದ್ರಶ್ಯವಂತೂ ಮೈ ಝುಂ ಎನಿಸುತ್ತದೆ.

ರುದ್ರಭಯಂಕರ ಗುಳಿಗದೈವ ಪಂಜುರ್ಲಿ ಜೊತೆ ಸೇರಿ “ಕೊರಗಜ್ಜ” ನನ್ನು ಭೇಟಿಯಾಗುವ ಸನ್ನಿವೇಶವು ಚಿತ್ರದಲ್ಲಿ ಮೂಡಿಬರಲಿದೆ. ಗುಳಿಗ ದೈವದ ರಣ ಭಯಂಕರ ನರ್ತನವನ್ನು ಹಾಲಿವುಡ್-ಬಾಲಿವುಡ್ ನ ಡಾನ್ಸರ್-ಕೊರಿಯೋಗ್ರಾಫರ್ ಸಂದೀಪ್ ಸೋಪರ್ಕರ್ ನಿರ್ವಹಿಸಿದ್ದು, ಗುಳಿಗ ದೈವದ ರುದ್ರನರ್ತನದ ಕೊರಿಯೋಗ್ರಾಫಿ ಯನ್ನು ಸ್ವತಃ ಸೋಪರ್ಕರ್ ಮಾಡಿರುತ್ತಾರೆ.ಪಂಜುರ್ಲಿಯಾಗಿ ಸರ್ದಾರ್ ಸತ್ಯ ಅಭಿನಯಿಸಿರುವರು.

ಈ ಸನ್ನಿವೇಶವನ್ನು ಮಂಗಳೂರಿನ ಸೋಮೇಶ್ವರ ಕಡಲಕಿನಾರೆಯಲ್ಲಿ ನೂರು ಫೀಟ್ ನ ಎರಡು ಕ್ರೇನ್ ಗಳ ಸಹಾಯದಿಂದ 5 ಕ್ಯಾಮರಗಳ ಮುಖಾಂತರ ಚಿತ್ರೀಕರಿಸುವ ವೇಳೆ ರೌಡಿಗಳ ಗ್ಯಾಂಗ್ ಎರಡು ದಿನ ಧಾಳಿಮಾಡಿ, ಚಿತ್ರತಂಡಕ್ಕೆ ಅಪಾರವಾದ ನಷ್ಟ ಉಂಟುಮಾಡಿತ್ತು. ಎರಡನೆಯ ದಿನ ನಿರ್ಮಾಪಕ ತ್ರಿವಿಕ್ರಮರವರು ಸುಮಾರು 25 ಜನ ಬೌನ್ಸರ್ ಗಳನ್ನು ನೇಮಿಸಿದ್ದರು.ಆದರೆ ಚಿತ್ರೀಕರಣ ಆರಂಭವಾದ ಕೆಲವೇ ನಿಮಿಷಗಳಲ್ಲಿ ಬೆದರಿಕೆಯ “ಕಾಲ್”ನಿಂದ ಬೌನ್ಸರ್ ಗಳೇ ಓಡಿಹೋಗಿ, ಮಂಗಳೂರಿನ ಬೌನ್ಸರ್ ಗಳು ತಮ್ಮ ಕರ್ತವ್ಯಕ್ಜೆ ಮಸಿಬಳಿದುಕೊಂಡರು..

ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಯವರು ಪರಿಪರಿಯಾಗಿ ರೌಡಿಗಳ ಮನ ಒಲಿಸಿದರೂ ಕೇಳದ ಗೂಂಡಗಳು ಶೂಟಿಂಗನ್ನು ಸ್ಥಗಿತಗೊಳಿಸಿ ವಿಕ್ರತಿ ಮೆರೆದಿದ್ದರು. ಆದರೆ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಎದೆಗುಂದದೆ, ಪೋಲೀಸರ ಸರ್ಪಗಾವಲಿನಲ್ಲಿ ಮೂರನೇ ಭಾರಿ ಮತ್ತೆ ಅದೇ ಸೋಮೇಶ್ವರ ಕಡಲ ಕಿನಾರೆಯಲ್ಲಿ ಗುಳಿಗ ಹಾಡಿನ ಚಿತ್ರೀಕರಣ ಮುಗಿಸುವಲ್ಲಿ ಯಶಸ್ವಿಯಾದರು. ಇವತ್ತು ಈ ಹಾಡು ಶ್ರೋತ್ರಗಳ ಮತ್ತು ವೀಕ್ಷಕರ ಮನತಣಿಸಲು ನುಗ್ಗಿ ಬರುತ್ತಿದೆ…!!










