
ಕನ್ನಡದಲ್ಲೇ ಸಾಕಷ್ಟು ಹಾಡುಗಳನ್ನು ಹಾಡಿ, ಸಾಕಷ್ಟು ಹೆಸರು ಮಾಡಿ.. ಒಳ್ಳೆ ಹಣವನ್ನೂ ಮಾಡಿಕೊಂಡು ಆ ಬಳಿಕ ಕನ್ನಡಿಗರನ್ನೇ ಹಿಯ್ಯಾಳಿಸುವುದು ಹಿಂದಿ ಭಾಷಿಕರಿಗೆ ಪಿತ್ರಾರ್ಜಿತ ಆಸ್ತಿ ಎನ್ನುವಂತಾಗಿದೆ. ಹೇಳೋದು ವೇದಾಂತ, ತಿನ್ನೋದು ಬದನೇಕಾಯಿ ಅಂತಾರಲ್ಲ ಹಾಗೆ ಗಾಯಕ ಸೋನು ನಿಗಮ್ ಮಾಡಿದ್ದಾರೆ.
ಕನ್ನಡಿಗರಿಂದಲೇ ಮನೆ ಮಾತಾದ ಗಾಯಕ ಸೋನು ನಿಗಮ್, ಈಗ ಕನ್ನಡಿಗರ ಬಗ್ಗೆ ನಾಲಿಗೆ ಹರಿಬಿಡುವ ಮೂಲಕ ಸುದ್ದಿಯಾಗಿದ್ದಾರೆ. ನಾನು ಹಿಂದಿನ ಜನ್ಮದಲ್ಲಿ ಕನ್ನಡದ ಮಗನಾಗಿ ಹುಟ್ಟಿದ್ದೆ ಅಂತಾ ಹಿಂದೊಮ್ಮೆ ಕನ್ನಡಿಗರನ್ನ ಕೊಂಡಾಡಿದ್ದ ಗಾಯಕ ಸೋನು ನಿಗಮ್, ಕನ್ನಡ ಕನ್ನಡ ಎಂದಿದ್ದಕ್ಕೆ ಕಾಶ್ಮೀರದ ಪಹಲ್ಗಾಮ್ ದಾಳಿ ಆಯ್ತು ಅಂತಾ ಹೇಳುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಬೇಕಾಗಿದೆ.

ಜೀವನದಿ ಚಿತ್ರದಿಂದ ಆರಂಭವಾದ ಸೋನು ನಿಗಮ್ ಗಾನಯಾನ, ಇತ್ತೀಚಿನ ಕೃಷ್ಣಂ ಪ್ರಣಯ ಸಖಿ ಚಿತ್ರದ ಹೇ ಗಗನ ಅನ್ನೋ ಹಾಡಿನಲ್ಲೂ ಮುಂದುವರಿದಿದೆ. ಸೋನು ನಿಗಮ್ ಸ್ಟಾರ್ ಪಟ್ಟಕ್ಕೆ ಏರಲು ಕನ್ನಡಿಗರ ಪಾತ್ರವೂ ಇದೆ. ಇದೀಗ ಅಹಂನಿಂದ ಕನ್ನಡದ ಬಗ್ಗೆ ಅಪಹಾಸ್ಯ ಮಾಡಿದ್ದಾರೆ. ಕನ್ನಡಿಗರನ್ನ ಕೆಣಕುವ ಕೆಲಸ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ಕನ್ನಡದ ಹಾಡು ಹೇಳಿ ಅಂದಿದ್ದಕ್ಕೆ ಇದಕ್ಕೇನೇ ಪಹಲ್ಗಾಮ್ ದಾಳಿ ನಡೆದಿದ್ದು ಎಂದಿದ್ದಾರೆ.

ಸೋನು ನಿಗಮ್ ಹೇಳಿಕೆಗೆ ಕನ್ನಡಪರ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಕನ್ನಡ ಹಾಡು ಹಾಡುವಂತೆ ಕೇಳಿದ್ದಕ್ಕೂ, ಭಯೋತ್ಪಾದಕರ ದಾಳಿಗೂ ಏನು ಸಂಬಂಧ. ಕನ್ನಡಿಗರನ್ನ ಅವಮಾನಿಸಿದ ಸೋನು ನಿಗಮ್ ಅವರನ್ನು ಕನ್ನಡ ಚಿತ್ರೋದ್ಯಮದಿಂದ ದೂರ ಇಡಿ. ಜೊತೆಗೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿ ಅಂತಾ ಕರವೇ ಅಧ್ಯಕ್ಷ ನಾರಾಯಣ ಗೌಡ ಆಕ್ರೋಶ ಹೊರ ಹಾಕಿದ್ದಾರೆ..

ಸೋನು ನಿಗಮ್ ಒಬ್ಬ ಸಾಂಸ್ಕೃತಿಕ ಭಯೋತ್ಪಾದಕ, ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸ್ತಿಯಾ? ಕೂಡಲೇ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲವಾದ್ರೆ ಸೋನು ನಿಗಮ್ ಕನ್ನಡ ಹಾಡು ಹಾಡುವಂತಿಲ್ಲ. ಕನ್ನಡ ಚಲನಚಿತ್ರ ಮಂಡಳಿ, ನಿರ್ಮಾಪಕ ಸಂಘಕ್ಕೆ ನಾನು ಆಗ್ರಹಿಸುತ್ತೇನೆ. ಸೋನು ನಿಗಮ್ ಅವರಿಂದ ಕನ್ನಡ ಹಾಡು ಹಾಡಿಸಬೇಡಿ. ನಮ್ಮಲ್ಲೇ ಪ್ರತಿಭಾವಂತ ಕನ್ನಡ ಗಾಯಕರಿದ್ದಾರೆ. ಅಂಥವರಿಗೆ ಅವಕಾಶ ಕೊಡಿ ಎಂದು ಒತ್ತಾಯ ಮಾಡಿದ್ದಾರೆ.
ಸೋನು ನಿಗಮ್ ವಿರುದ್ಧ ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕರವೇ ದೂರು ನೀಡಿದೆ. ಕನ್ನಡಪರ ಹೋರಾಟಗಾರರು, ಕನ್ನಡಿಗರನ್ನು ಅವಮಾನ ಮಾಡಿರುವ ಸೋನು ನಿಗಮ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ನೀಡಲು ಕರವೇ ತಯಾರಿ ಮಾಡಿಕೊಂಡಿದೆ. ಕನ್ನಡಿಗರನ್ನು ಕೆಣಕಿ ಉಳಿದವರುಂಟೇ ಎನ್ನುವಂತಾಗಿದೆ ಸೋನು ನಿಗಮ್ ಪರಿಸ್ಥಿತಿ.