
ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ಜಾತಿ ಕೇಳಿ, ಧರ್ಮ ಕೇಳಿ ಬಲಿ ಹಾಕಿದರು. ಆ ರೀತಿ ನಡೆಯಬಾರದು. ಈ ರಾಜ್ಯದಲ್ಲೂ ಕೂಡ ಕೆಲವರು ಜಾತಿಯನ್ನು ಆಧರಿಸಿ, ಧರ್ಮವನ್ನೇ ಆಧರಿಸಿ ಮಾತನಾಡುತ್ತಾರೆ. ಅದು ಯಾವುದೇ ಕಾರಣಕ್ಕೂ ನಡೆಯಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಶಿಕ್ಷಣ ಸಂಸ್ಥೆಯಲ್ಲಿ ನಾನು ಜಾತಿ ಧರ್ಮದ ಬಗ್ಗೆ ಮಾತನಾಡುವುದಿಲ್ಲ. ನೀವು ವಿದ್ಯಾರ್ಥಿಗಳು ಕೂಡ ಜಾತಿ ಧರ್ಮದ ಬಗ್ಗೆ ಮಾತನಾಡಬಾರದು ಎಂದಿರುವ ಮಲ್ಲಿಕಾರ್ಜುನ ಖರ್ಗೆ, ಯುದ್ಧ ಅನಿವಾರ್ಯತೆ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಕೇಳಿದಾಗ ನಾನು ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಬೇಕಾ..? ಅಥವಾ ಎಐಸಿಸಿ ಅಧ್ಯಕ್ಷನಾಗಿ ಮಾತನಾಡಬೇಕೆ? ಎಂದು ಪ್ರಶ್ನಿಸಿದ್ದಾರೆ.

ಪಹಲ್ಗಾಮ್ ದಾಳಿ ವಿಚಾರವಾಗಿ ಪ್ರಧಾನ ಮಂತ್ರಿಗಳು ಸರ್ವ ಪಕ್ಷಗಳ ಸಭೆ ಕರೆದಿದ್ದರು. ನಾವು ಎಲ್ಲರೂ ಹೋಗಿದ್ದೆವು, ಎಲ್ಲರೂ ಭಾಗಿಯಾಗಿದ್ದೆವು. ಲೋಕಸಭೆ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರುಗಳು ಕೂಡ ಇದ್ದರು. ಸರ್ಕಾರ ಒಂದು ಸಭೆಯನ್ನ ಕರೆದ ನಂತರ ಸರ್ಕಾರದ ವತಿಯಿಂದ ಪ್ರಧಾನ ಮಂತ್ರಿ ಹಾಜರಿರಬೇಕಿತ್ತು. ಅವರ ಹಾಜರಾತಿ ಇರಲಿಲ್ಲ. ಈ ನಡೆ ಸರಿಯಲ್ಲ, ಇಂತಹ ಘಟನೆ ನಡೆದಿದೆ. ಉಗ್ರರ ದಾಳಿಗೆ ಸುಮಾರು 26 ಜನರು ಮೃತಪಟ್ಟಿದ್ದಾರೆ. ಅನೇಕ ಜನರು ಗಾಯಾಳುಗಳಾಗಿದ್ದಾರೆ. ಈ ಸಮಯದಲ್ಲಿ ಪ್ರಧಾನ ಮಂತ್ರಿಗಳ ಈ ಆಟಿಟ್ಯೂಡ್ ಸರಿ ಇಲ್ಲ. ಚುನಾವಣಾ ಭಾಷಣ ಮಾಡಲು ಬಿಹಾರಕ್ಕೆ ಹೋಗಿದ್ದೀರಿ. ದೆಹಲಿಯಲ್ಲಿ ಬರಲು ಆಗುವುದಿಲ್ಲ. ಅಂದರೆ ಅವರು ಸೀರಿಯಸ್ ಇಲ್ಲ ಅಂತ ಅರ್ಥ ಎಂದು ಟೀಕಿಸಿದ್ದಾರೆ.
ಪ್ರಧಾನಿ ಮೋದಿ ಅವರು ಇಂಗ್ಲಿಷ್ ಹಾಗು ಹಿಂದಿಯಲ್ಲಿ ಬೇರೆ ಕಡೆ ಭಾಷಣ ಮಾಡುವ ಬದಲು, ಸರ್ವಪಕ್ಷ ಸಭೆಗೆ ಬಂದು ಸಮಜಾಯಿಷಿ ಹೇಳಬೇಕಿತ್ತು. ಏನೇನು ಘಟನೆ ನಡೆಯಿತು. ಯಾಕೆ ನಡೆಯಿತು. ಯಾರು ಹೊಣೆ ಹೊತ್ತಿದ್ದಾರೆ. ಸೆಕ್ಯೂರಿಟಿ ಲ್ಯಾಪ್ಸ್ ಆಗಿದೆಯೇ, ಇಂಟೆಲಿಜೆನ್ಸ್ ಲ್ಯಾಪ್ಸ್ ಆಗಿದೆಯೇ, ಐಬಿ ಲ್ಯಾಪ್ಸ್ ಆಗಿದೆಯೇ, ಇನ್ಫಾರ್ಮರ್ಸ್ ಲ್ಯಾಪ್ಸ್ ಆಗಿದೆಯೇ, ಪೊಲೀಸರ ಲ್ಯಾಪ್ಸ್ ಆಗಿದೆಯೇ..? ಯಾರದ್ದು ಸಮಸ್ಯೆ ಆಯ್ತು ಅನ್ನೋದು ನಮಗೆ ತಿಳಿಸಬೇಕಿತ್ತು. ಆದರೆ ಅವರು ಬರಲೇ ಇಲ್ಲ. ಅದಕ್ಕೆ ರಾಜನಾಥ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯಿತು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಧ್ಯಮಗಳ ಎದುರು ವ್ಯಂಗ್ಯವಾಡಿದ್ದಾರೆ.

ಪಹಲ್ಗಾಮ್ ಘಟನೆಗೆ ಸೆಕ್ಯೂರಿಟಿ ಲ್ಯಾಪ್ಸ್ ಅಂತ ಸ್ವತಃ ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ. ಆ ಕಾರಣಕ್ಕಾಗಿ ಸಭೆ ಕರೆದಿದ್ದೇವೆ ಅಂತ ಅಮಿತ್ ಶಾ ಹೇಳಿದ್ದಾರೆ. ಅಮಿತ್ ಶಾ ಅವರಿಗೆ ನಾವು ಹೇಳಿದ್ದೇವೆ. ಇದನ್ನ ಚಾಲೆಂಜ್ ಆಗಿ ತೆಗೆದುಕೊಳ್ಳಬೇಕು. ಎಲ್ಲವನ್ನೂ ವ್ಯವಸ್ಥೆ ಮಾಡಬೇಕಿತ್ತು. ನೀವು ವ್ಯವಸ್ಥೆ ಮಾಡದೆ ಇರುವುದರಿಂದಲೇ ಈ ಸ್ಥಿತಿಗೆ ಬಂದಿರೋದು. ಆಗ ಇನ್ಮುಂದೆ ಈ ರೀತಿ ಆಗೋದಿಲ್ಲ ಅಂತ ಅಮಿತ್ ಶಾ ತಿಳಿಸಿದ್ದಾರೆ. ಮೂರು ಹಂತಗಳ ಸೆಕ್ಯೂರಿಟಿ ಇದ್ದರೂ ಕೂಡ ಇಷ್ಟು ಜನರಿಗೆ ರಕ್ಷಣೆ ಕೊಡಲು ಆಗಲಿಲ್ಲ . ಏನೇ ಆದರೂ ಕೂಡ ದೇಶದ ದೃಷ್ಟಿಯಿಂದ ದೇಶದ ಒಗ್ಗಟ್ಟಿನ ದೃಷ್ಟಿಯಿಂದ ನಾವೆಲ್ಲರೂ ಕೂಡ ಒಂದಾಗಿ ರಕ್ಷಣೆ ಮಾಡೋಣ ಅಂತ ತಿಳಿಸಿದ್ದೇವೆ. ಸರ್ಕಾರದ ನಿರ್ಣಯಕ್ಕೆ ನಾವು ಕೂಡ ಬೆಂಬಲ ಸೂಚಿಸುತ್ತೇವೆ ಅಂತ ತಿಳಿಸಿದ್ದೇವೆ ಎಂದಿದ್ದಾರೆ.

ಪಾಕಿಸ್ತಾನದ ವಿಚಾರವಾಗಿ ಕೇಂದ್ರ ಸರ್ಕಾರ ಹಾಕಿರುವ ಎಲ್ಲಾ ನಿರ್ಬಂಧನೆಗಳ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಹುಳುಕು ಹುಡುಕುವ ಸಮಯ ಅಲ್ಲ. ಸಂದರ್ಭ ಬಂದಾಗ ನಾವು ಹೇಳುತ್ತೇವೆ. ಕೆಲವು ವಿಶೇಷತೆಗಳು ಇರುತ್ತವೆ. ಎಲ್ಲವನ್ನ ಈಗಲೇ ಹೇಳಲು ಚೆನ್ನಾಗಿರೋದಿಲ್ಲ. ಆಕ್ಷನ್ ಏನಾಗುತ್ತೆ ರಿಯಾಕ್ಷನ್ ಏನಾಗುತ್ತೆ ನೋಡಬೇಕು. ನಮ್ಮಿಂದ ಹೋಗುವಂತ ನೀರನ್ನ ಹಿಡಿದಿಡಲು ಹೇಗೆ ಆಗುತ್ತೆ..? ಈಗ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ, ನಿರ್ಣಯ ದೇಶಕ್ಕೆ ಒಳ್ಳೇದು ಆಗುತ್ತೆ ಅಂತ ತೆಗೆದುಕೊಂಡಿದ್ದಾರೆ. ನಾವು ಕೇವಲ ಟೀಕೆ ಮಾಡುತ್ತಾ ಹೋಗಿ, ರಿಸಲ್ಟ್ ನೋಡದೆ ಹೋದರೆ ಒಳ್ಳೆಯದಲ್ಲ ಎಂದು ಖರ್ಗೆ ಮಾರ್ಮಿಕವಾಗಿ ತಿಳಿಸಿದ್ದಾರೆ.