“ಕೊರಗರ ಮೇಲೆ ಹಲ್ಲೆ ನಡೆದು ಎರಡ್ಮೂರು ದಿನಗಳ ಬಳಿಕ ಕಾನ್ಸ್ಟೇಬಲ್ವೊಬ್ರು ಆಸ್ಪತ್ರೆಗೆ ದಾಖಲಾಗಿ, ಕೊರಗರ ವಿರುದ್ಧ ಸರ್ಕಾರಿ ನೌಕರಿಗೆ ಅಡ್ಡಿ ಹಾಗೂ ಹಲ್ಲೆ ಪ್ರಕರಣ ದಾಖಲಿಸಿರುವುದು ಮೇಲ್ನೋಟಕ್ಕೆ ಸುಳ್ಳು ಎಂದು ತಿಳಿಯುತ್ತದೆ. ರಕ್ಷಣೆ ನೀಡಬೇಕಾದ ಕಾನ್ಸ್ಟೇಬಲ್ ಸುಳ್ಳು ಪ್ರಕರಣ ದಾಖಲಿಸಿರುವುದು ಖಂಡನೀಯ…”
“ಕೊರಗರ ಮೇಲೆ ಹಲ್ಲೆ ನಡೆದ ದಿನವೇ ಸಂಬಂಧಪಟ್ಟ ಠಾಣೆಯ ಪಿಎಸ್ಐ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಬೇಕಿತ್ತು. ಆದರೆ, ಮಾಹಿತಿ ನೀಡದೆ ದಾಷ್ಟ್ಯತನ ಪ್ರದರ್ಶಿಸಿದ್ದಾರೆ. ಪೊಲೀಸರು ಮನುಷ್ಯತ್ವ ಕಳೆದುಕೊಂಡು ಕೊರಗರ ಮೇಲೆ ಹಲ್ಲೆ ನಡೆಸಿ, ಇಲಾಖೆಗೆ ಕೆಟ್ಟ ಹೆಸರು ತರುವ ಕೆಲಸ ಮಾಡಿದ್ದಾರೆ…”
“ಕೊರಗರು ಹೆದರಬೇಕಿಲ್ಲ. ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಆರು ಮಂದಿಗೆ ಸರ್ಕಾರ ತಲಾ ಎರಡು ಲಕ್ಷ ರುಪಾಯಿ ಪರಿಹಾರ ನೀಡಲಿದೆ. ಮೊದಲ ಹಂತದಲ್ಲಿ ತಲಾ ಐವತ್ತು ಸಾವಿರ ರುಪಾಯಿ ವಿತರಿಸಲಾಗುತ್ತಿದೆ. ಸರ್ಕಾರದ ಪರಿಹಾರ ಧನ ಕೊರಗರ ಮನಸ್ಸಿಗೆ ಆಗಿರುವ ನೋವನ್ನು ಕಡಿಮೆ ಮಾಡುವುದಿಲ್ಲ ಎಂಬ ಅರಿವಿದೆ. ಆದರೆ, ಸರ್ಕಾರ ಕೊರಗರ ಜೊತೆಗಿದೆ ಎಂಬುದನ್ನು ತಿಳಿಸಲಷ್ಟೆ ಪರಿಹಾರ ನೀಡಲಾಗುತ್ತಿದೆ. ಪೊಲೀಸರು ದಾಖಲಿಸಿರುವ ಪ್ರಕರಣದ ಬಗ್ಗೆ ಭಯಪಡಬೇಕಿಲ್ಲ. ಕೊರಗರಿಗೆ ಯಾವುದೇ ತೊಂದರೆ ಎದುರಾಗದಂತೆ ಸರ್ಕಾರ ನೋಡಿಕೊಳ್ಳಲಿದೆ…”
-ಇವಿಷ್ಟೂ, ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೋಟತಟ್ಟು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊರಗರ ಕಾಲೊನಿಯಲ್ಲಿ ನಿಂತು, ರಾಜ್ಯದ ಗೃಹ ಸಚಿವ ಎನಿಸಿಕೊಂಡ ಆರಗ ಜ್ಞಾನೇಂದ್ರ ಆಡಿದ ಮಾತುಗಳು (ಪ್ರ.ವಾ.ವೆಬ್: ಜ.೦೧,೨೦೨೨). ಈ ಮಾತುಗಳಲ್ಲಿ ಗಮನಿಸಬೇಕಾದ ಒಂದಷ್ಟು ಗಂಭೀರ ಪದ ಮತ್ತು ವಾಕ್ಯಗಳಿವೆ.
೧.ಹಲ್ಲೆ ಪ್ರಕರಣ ನಡೆದ ಎರಡ್ಮೂರು ದಿನಗಳ ಬಳಿಕವಷ್ಟೇ ಕಾನ್ಸ್ಟೇಬಲ್ ಆಸ್ಪತ್ರೆಗೆ ದಾಖಲಾಗಿರುವುದು.
೨.ಕೊರಗರ ವಿರುದ್ಧ ಸರ್ಕಾರಿ ನೌಕರಿಗೆ ಅಡ್ಡಿ ಹಾಗೂ ಹಲ್ಲೆ ಹೆಸರಲ್ಲಿ ದಾಖಲಿಸಿರುವ ಪ್ರಕರಣ ಮೇಲ್ನೋಟಕ್ಕೆ ಸುಳ್ಳು.
೩.ಪ್ರಕರಣ ನಡೆದ ದಿನ ಸಂಬಂಧಪಟ್ಟ ಠಾಣೆಯ ಪಿಎಸ್ಐ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿರಲೇ ಇಲ್ಲ.
೪.ಈ ಪ್ರಕರಣ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವಂಥದ್ದು.
೫.ಇಲ್ಲಿ ನಡೆದಿರುವುದು ಪೊಲೀಸ್ ದೌರ್ಜನ್ಯ.
೬.ಸರ್ಕಾರ ಕೊರಗರ ಜೊತೆಗಿದೆ. ಪೊಲೀಸರು ದಾಖಲಿಸಿರುವ ಪ್ರಕರಣದ ಬಗ್ಗೆ ಭಯಪಡಬೇಕಿಲ್ಲ.
೭.ಕೊರಗರಿಗೆ ಯಾವುದೇ ತೊಂದರೆ ಎದುರಾಗದಂತೆ ಸರ್ಕಾರ ನೋಡಿಕೊಳ್ಳಲಿದೆ.
ಪೊಲೀಸರ ವರ್ತನೆ ಕುರಿತು ಖುದ್ದು ಗೃಹ ಸಚಿವರೇ ಆಡಿರುವ ಈ ಮಾತುಗಳು, ನಡೆ ಮತ್ತು ಪರಿಹಾರ ವಿತರಣೆಯ ಅವಸರವನ್ನು ತಾಳೆ ಹಾಕಿದರೆ, ತನ್ನ ಇಲಾಖೆಯ ನೌಕರರು ಎಸಗಿದ ದೌರ್ಜನ್ಯದ ಕುರಿತಂತೆ ಅವರು ಸಾರ್ವಜನಿಕವಾಗಿ ತಪ್ಪೊಪ್ಪಿಗೆ (ಕನ್ಫೆಷನ್) ಮಾಡಿಕೊಂಡಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಅಲ್ಲದೆ, ಕಡೆಯಲ್ಲಿ ಆಡಿರುವ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪರಿಹಾರ ಹಣ ವಿತರಣೆ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯ ಪರವಾಗಿ ‘ಸೆಟಲ್ಮೆಂಟ್’ ಮಾಡಿಕೊಂಡಿರುವುದೂ ಸ್ಪಷ್ಟ. ಮಾನ್ಯ ಗೃಹ ಸಚಿವರು ಎಂತ ಅದ್ಭುತ ಹಾಸ್ಯ ಮಾಡುತ್ತಾರೆಂದರೆ… ಸರ್ಕಾರದ ಭಾಗವೇ ಆದ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಹಾಗೂ ಕೊರಗರ ಮೇಲೆಯೇ ಸುಳ್ಳು ಕೇಸು ದಾಖಲಿಸಿದ್ದಾರೆ. ಆದರೆ, ಅದೇ ಇಲಾಖೆಯ ಮಂತ್ರಿ ಬಂದು, “ಕೊರಗರಿಗೆ ಯಾವುದೇ ತೊಂದರೆ ಎದುರಾಗದಂತೆ ಸರ್ಕಾರ ನೋಡಿಕೊಳ್ಳಲಿದೆ,” ಎಂಬ ಆಣಿಮುತ್ತು ಉದುರಿಸುತ್ತಾರೆ. ಕೊನೆಗೆ, ಅದೇ ಪೊಲೀಸರಿಗೇ (ಸಿಒಡಿ) ತನಿಖೆಯ ಉಸ್ತುವಾರಿಯನ್ನೂ ದಯಪಾಲಿಸುತ್ತಾರೆ!
ಒಂದು ವೇಳೆ, ಪೊಲೀಸರದು ತಪ್ಪಿಲ್ಲ ಎಂದಾಗಿದ್ದಿದ್ದರೆ, ಗೃಹ ಸಚಿವ ಎನಿಸಿಕೊಂಡವರು ಘಟನಾ ಸ್ಥಳಕ್ಕೆ ಭೇಟಿ ನೀಡುವ ಅವಶ್ಯಕತೆಯೇ ಇರಲಿಲ್ಲ. ತಪ್ಪೊಪ್ಪಿಗೆಯ ಹೇಳಿಕೆಗಳನ್ನು ನೀಡುವುದೂ ಬೇಕಿರಲಿಲ್ಲ. ಹಾಗೆಯೇ, ಪರಿಹಾರ ಘೋಷಿಸಿ, ಹಣ ಸಂಧಾನ (ಸೆಟಲ್ಮೆಂಟ್) ಮಾಡಿಕೊಳ್ಳುವ ದರ್ದೂ ಇರುತ್ತಿರಲಿಲ್ಲ. ಸೋ, ಗೃಹ ಸಚಿವರ ವರ್ತನೆ ಮತ್ತು ಮಾತುಗಳಿಂದಾಗಿ ಈ ಪ್ರಕರಣದಲ್ಲಿ ಪೊಲೀಸರ ವರ್ತನೆ ತಪ್ಪು ಎಂಬುದು ಜಗಜ್ಜಾಹೀರು. ಇನ್ನೊಂದೆಡೆ, ಈ ಹಲ್ಲೆಯಲ್ಲಿ ಭಾಗವಹಿಸಿದ್ದ ಪಿಎಸ್ಐನನ್ನು (ಬಿ ಪಿ ಸಂತೋಷ್) ಅಮಾನತಿನ ಹೆಸರಲ್ಲಿ ಹಾಗೂ ಉಳಿದ ಸಿಬ್ಬಂದಿಯನ್ನು ವರ್ಗಾವಣೆ ಹೆಸರಲ್ಲಿ ಸಾಗಹಾಕಲಾಗಿದೆ.
ರಾತ್ರಿ ಹತ್ತು ಗಂಟೆಯ ನಂತರವೂ ಮದುವೆ ಮನೆಯಲ್ಲಿ ಡಿ.ಜೆ ಸಂಭ್ರಮ ನಡೆದಿತ್ತು ಎಂಬ ಕ್ಷುಲ್ಲಕ ಕಾರಣವೊಡ್ಡಿ, ಪೊಲೀಸರು ಕೊರಗರ ಮೇಲೆ ನಡೆಸಿದ ಹಲ್ಲೆ ಪ್ರಕರಣದ ಕುರಿತ ಅತ್ಯಂತ ನಿರ್ಣಾಯಕ ಸಂಗತಿಗಳಿವು. ಘಟನೆ ನಡೆದು ಇವತ್ತಿಗೆ ಬರೋಬ್ಬರಿ ಇಪ್ಪತ್ತು ದಿನಗಳಾಗಿವೆ. ಕನ್ನಡದ ‘ದಿವಂಗತ’ ದಿನಪತ್ರಿಕೆಗಳು ಈ ಬಗ್ಗೆ ಮಾತನಾಡಲು ಇನ್ನೇನು ಘನಂದಾರಿ ಕಾರಣಗಳು ಬೇಕಿತ್ತು ಹೇಳಿ ನೋಡುವ? ನೀವು ನಂಬುತ್ತಿರೋ ಇಲ್ಲವೋ, ‘ವಾರ್ತಾ ಭಾರತಿ’ಯೊಂದನ್ನು ಬಿಟ್ಟು ಕನ್ನಡದ ಯಾವುದೇ ದಿನಪತ್ರಿಕೆಯೂ ಈ ಬಗ್ಗೆ ‘ಸಂಪಾದಕೀಯ’ ಬರೆದಿಲ್ಲ. ಅಂದರೆ, ಈ ಕುರಿತು ಮಾತನಾಡಿಲ್ಲ, ತನ್ನ ನಿಲುವು ಪ್ರಕಟಿಸಿಲ್ಲ!
“ಮಳ್ಳಿ ಮಳ್ಳಿ ಮಂಚಕ್ಕೆಷ್ಟು ಕಾಲು?” ಅಂದ್ರೆ, “ಮೂರು ಮತ್ತೊಂದು,” ಎನ್ನುವ ದಿ ಗ್ರೇಟ್ ದೈನಿಕ ‘ಪ್ರಜಾವಾಣಿ,’ ಜನವರಿ ಒಂದರ ನಂತರ ಈ ಪ್ರಕರಣದ ಕಡೆ ತಲೆ ಹಾಕಿ ಮಲಗಿಲ್ಲ! ಅಲ್ಲದೆ, ಘಟನೆ ಕುರಿತ ಈ ಪತ್ರಿಕೆಯ ವರದಿಗಳಿಗೂ, ಪ್ರೆಸ್ ನೋಟ್ಗೂ ಯಾವುದೇ ವ್ಯತ್ಯಾಸವಿಲ್ಲ. ಹಾಗೆಯೇ ತೇಲಿಸಿ, ಅಲ್ಲಲ್ಲಿ ಚೂರು ಮುಳುಗಿಸಿ ಚಂದ ತಿಪ್ಪೆ ಸಾರಿಸಲಾಗಿದೆಯಷ್ಟೆ. ಪ್ರಕರಣದ ಪ್ರಾಥಮಿಕ ವರದಿ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರರ ಹೇಳಿಕೆ ಆಧರಿಸಿದ ಕಾಪಿ-ಪೇಸ್ಟ್ ವರದಿಗಳಷ್ಟಕ್ಕೇ ಈ ಪತ್ರಿಕೆಯ ಕಸರತ್ತು ಖಾಲಿಯಾಗಿದೆ. ಹಾಗಾದರೆ, ಈ ಘನಂದಾರಿ ಪತ್ರಿಕೆಯ ಸ್ಟ್ಯಾಮಿನಾ ಖರ್ಚಾಗಿದ್ದೆಲ್ಲಿ ಅಂತ ನಂತರ ನೋಡುವ.
ಇನ್ನು, ‘ಕನ್ನಡಪ್ರಭ’ದ್ದು ಒಂದಷ್ಟು ಕಾಮಿಡಿಯೂ ಉಂಟು! ಕೊರಗರ ಮೇಲೆ ಪೊಲೀಸರ ಹಲ್ಲೆ ನಡೆದದ್ದು ಡಿಸೆಂಬರ್ ಇಪ್ಪತ್ತೇಳರ ರಾತ್ರಿ. ಇಪ್ಪತ್ತೆಂಟನೇ ತಾರೀಖು ಎಲ್ಲ ಮಾಧ್ಯಮಗಳಲ್ಲೂ ಸುದ್ದಿ ಬಂದಿದೆ. ಆದರೆ, ಪ್ರಕರಣದ ಸಂಬಂಧ ‘ಕನ್ನಡಪ್ರಭ’ದ ಮೊದಲ ವರದಿ ಪ್ರಕಟ ಆಗುವುದು ಇಪ್ಪತ್ತೊಂಬತ್ತನೇ ತಾರೀಖು! ಅದೂ, ಒಳಗಿನ ‘ರಾಜ್ಯ’ ಪುಟದಲ್ಲಿ. ಅದೂ, ಸಚಿವ ಕೋಟ ಶ್ರೀನಿವಾಸ್ ಪೂಜಾರಿಯ ಎಂಟ್ರಿ ಆದ ನಂತರ! ತಮ್ಮದೇ ಊರು ಕೋಟತಟ್ಟು ಗ್ರಾಮದ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂಥದ್ದೊಂದು ಪೊಲೀಸ್ ದೌರ್ಜನ್ಯ ಘಟನೆ ನಡೆದ ನಂತರವೂ ಸಚಿವ ಪೂಜಾರಿ ಅವರಿಗೆ, ಇಡೀ ಒಂದು ದಿನ ಎಚ್ಚರವೇ ಆಗದಂತಹ ಪೊಗದಸ್ತಾದ ಸೊಕ್ಕಿನ ನಿದ್ದೆ ಬಂದಿತ್ತು ಎಂದು ಕಾಣುತ್ತದೆ. ಹಾಗಾಗಿ, ಇಪ್ಪತ್ತೆಂಟನೇ ತಾರೀಖು ಆಸಾಮಿ ನಾಪತ್ತೆ. ಸಚಿವ ಹಾಳಾಗಿಹೋಗಲಿ. ‘ನೇರ, ದಿಟ್ಟ, ನಿರಂತರ’ ಎಂದು ಬೊಗಳಿಕೊಳ್ಳುವ ‘ಕನ್ನಡಪ್ರಭ’ಕ್ಕೂ ಇಪ್ಪತ್ತೆಂಟನೇ ತಾರೀಖು ಗರ ಬಡಿದಿತ್ತೇ? ಘಟನೆಯ ಮರುದಿನ ಕನಿಷ್ಟಪಕ್ಷ ವರದಿಯನ್ನೂ ಪ್ರಕಟಿಸದ ಇಂತಹ ಬೇಜವಾಬ್ದಾರಿ ಪತ್ರಿಕೆ, ‘ಸಂಪಾದಕೀಯ’ ಹೇಗೆ ಬರೆದೀತು?
ನೇರವಾಗಿಯೇ ಬಿಜೆಪಿ ಪರ, ಬಿಜೆಪಿ ಸರ್ಕಾರಗಳ ಪರ ವಕಾಲತ್ತು ವಹಿಸುವ ‘ವಿಜಯವಾಣಿ’ ಮತ್ತು ‘ಉದಯವಾಣಿ’ ದೈನಿಕಗಳು ಈ ಕುರಿತು ಸಂಪಾದಕೀಯ ಬರೆಯುವ ಧೈರ್ಯ ಮಾಡದಿರುವುದು ಅಚ್ಚರಿಯೇನಲ್ಲ. ಯಾರು ಒದೆ ತಿಂದರೇನಂತೆ, ಯಾರು ಸತ್ತರೇನಂತೆ, ಬಿಜೆಪಿ ಬೆಳೆಯಲಿ, ಬಿಜೆಪಿ ಸರ್ಕಾರ ಬಲಿಯಲಿ ಎಂಬುದು ಈ ಪತ್ರಿಕೆಗಳ ಒತ್ತಾಸೆ, ಆಸೆ. ‘ಮೂರು ಕೊಟ್ರೆ ಸೊಸೆ ಕೊಡೆ, ಆರು ಕೊಟ್ರೆ ಅತ್ತೆ ಕಡೆ’ ಎಂಬಂತಾಡುವ ‘ವಿಜಯ ಕರ್ನಾಟಕ’ವೂ ಸಂಪಾದಕೀಯದಿಂದ ದೂರ ಉಳಿದಿದೆ. ಬಹುಶಃ ಅದರ ಸಂಪಾದಕ ವರ್ಗಕ್ಕೆ, ‘ಇಂಥದ್ದೊಂದು ಕ್ಷುಲ್ಲಕ ಸಂಗತಿ ಬಗ್ಗೆ ಸಂಪಾದಕೀಯ ಬರೆದು, ರಾಜ್ಯ ಬಿಜೆಪಿ ಸರ್ಕಾರದ ಮಾನ ಕಳೆಯುವುದ್ಯಾಕೆ ಬಿಡು ಪಾಪ,’ ಅನ್ನಿಸಿದ್ದಿರಬೇಕು. ಇನ್ನು, ರಾಜ್ಯದ ಮೊದಲ ದೈನಿಕ ಎಂಬ ಉರುಳಲ್ಲೇ ಒದ್ದಾಡುತ್ತಿರುವ ‘ಸಂಯುಕ್ತ ಕರ್ನಾಟಕ’ದ ಬಗ್ಗೆ ಕೇಳಲೇಬೇಡಿ. ‘ವಿಶ್ವವಾಣಿ’ ಎಂಬ ವೇಷಧಾರಿ ಪಾಂಪ್ಲೆಟ್ನ ಬಗ್ಗೆ ಮಾತನಾಡುವುದಿಲ್ಲ, ಏಕೆಂದರೆ ಅದು ಪತ್ರಿಕೆಯೇ ಅಲ್ಲ.
ಘಟನೆ ಕುರಿತು ಸಂಪಾದಕೀಯ ಪ್ರಕಟಿಸಿರುವ ಏಕೈಕ ಪತ್ರಿಕೆ ‘ವಾರ್ತಾ ಭಾರತಿ.’ ಒಟ್ಟಾರೆ ಸುದ್ದಿಗಳ ಗುಣಮಟ್ಟ ಮತ್ತು ಪತ್ರಿಕೆಯ ಪ್ರಸಾರ ವ್ಯಾಪ್ತಿಯನ್ನು ಗಮನದಲ್ಲಿ ಇಟ್ಟುಕೊಂಡರೆ, ಇದನ್ನೂ ‘ವಿಶ್ವವಾಣಿ’ಯ ಪಟ್ಟಿಗೆ ಸೇರಿಸಲು ಅಡ್ಡಿಯಿಲ್ಲ. ಆದರೆ, ಕೆಲವು ಪ್ರಜಾಸತ್ತಾತ್ಮಕ ನಿಲುವುಗಳ ಕಾರಣಕ್ಕೆ ಗಮನಾರ್ಹ ದೈನಿಕ. ಡಿಸೆಂಬರ್ ಮೂವತ್ತರಂದು ಈ ಪತ್ರಿಕೆ ಕೊರಗರ ಮೇಲಿನ ಹಲ್ಲೆಯ ಸಂಬಂಧ ಸಂಪಾದಕೀಯ ಪ್ರಕಟಿಸುತ್ತದೆ. ಆದರೆ, ಇಡೀ ಸಂಪಾದಕೀಯ ವ್ಯಂಗ್ಯದ ಹೊಂಡದಲ್ಲಿ ಮುಳುಗಿ, ಸಂಪಾದಕೀಯ ಬರಹಕ್ಕೆ ಇರಬೇಕಾಗಿದ್ದ ತೀಕ್ಷ್ಣತೆ, ಚೂಪು, ಹರಿತ, ತೂಕ ಮಾಯವಾಗಿದೆ. ‘ಗುಣಮಟ್ಟ’ದ ಬಗ್ಗೆ ಪ್ರಸ್ತಾಪ ಮಾಡಿದ್ದು ಇದೇ ಕಾರಣಕ್ಕೆ. ಆದರೆ, ವೈಷ್ಣೋದೇವಿ ಕಾಲ್ತುಳಿತ ಪ್ರಕರಣ ಕುರಿತು ಜನವರಿ ಮೂರರಂದು ಇದೇ ಪತ್ರಿಕೆಯಲ್ಲಿ ಪ್ರಕಟವಾದ ‘ಸಂಪಾದಕೀಯ’ದಲ್ಲಿ ಕೊರಗರ ಮೇಲಿನ ಹಲ್ಲೆಯ ಪ್ರಕರಣವೂ ಉಲ್ಲೇಖವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಬಹಳ ಗಂಭೀರವಾದ ಕೆಲವು ಕೇಳ್ವಿಗಳನ್ನು ಸರ್ಕಾರಕ್ಕೆ ಕೇಳಲಾಗಿದೆ. “ಸ್ಥಳಕ್ಕೆ ಭೇಟಿ ನೀಡಿ, ಪರಿಹಾರ ವಿತರಣೆ ಮಾಡಿ, ಕೊರಗರಿಗೆ ಅನ್ಯಾಯವಾಗಿದೆ ಎನ್ನುವ ಗೃಹ ಸಚಿವರಿಗೆ, ಕೊರಗರ ವಿರುದ್ಧ ದಾಖಲಾದ ಸುಳ್ಳು ಕೇಸು ವಾಪಸು ಪಡೆಯುವಂತೆ ಅಥವಾ ರದ್ದು ಮಾಡುವಂತೆ ಪೊಲೀಸರಿಗೆ ಹೇಳಲಾಗದೇ?” ಎಂಬ ಅತ್ಯಂತ ಗಮನಾರ್ಹ ಸಂಗತಿಯನ್ನು ಪ್ರಸ್ತಾಪ ಮಾಡಲಾಗಿದೆ. ಅಸಲಿಗೆ, ಕೊರಗರ ಮೇಲಿನ ಹಲ್ಲೆ ಕುರಿತು ಬರೆದ ಸಂಪಾದಕೀಯವನ್ನೂ ಇಷ್ಟೇ ಗಂಭೀರವಾಗಿ ನಿಭಾಯಿಸುವ ಸಂಯಮವನ್ನು ‘ವಾರ್ತಾ ಭಾರತಿ’ ಕಾಯ್ದುಕೊಳ್ಳಬಹುದಿತ್ತು.
ಪ್ರಕರಣ ಕುರಿತು ಕನ್ನಡದ ಎಲ್ಲ ದೈನಿಕಗಳೂ ಪ್ರಕಟಿಸಿರುವ ಎಲ್ಲ ಬಗೆಯ ಬರಹಗಳನ್ನೂ ಒಟ್ಟು ಮಾಡಿದರೆ, ಅದರಲ್ಲಿ ಮುಖ್ಯವಾಗಿ ಎದ್ದು ಕಾಣುವಂಥದ್ದು ‘ವಾರ್ತಾ ಭಾರತಿ’ಯ ಸಂಪಾದಕೀಯ ಮತ್ತು ‘ವಿಜಯ ಕರ್ನಾಟಕ’ ಜಾಲತಾಣದಲ್ಲಿ ಪ್ರಕಟವಾಗಿರುವ, ಘಟನೆ ಕುರಿತ ವಿಸ್ತೃತ ವರದಿ. ಅವಿನಾಶ್ ಕಡೇಶಿವಾಲಯ ಬರೆದಿರುವ ಈ ವರದಿಯಲ್ಲಿ, ಅಂದು ರಾತ್ರಿ ಕೊರಗರ ಕಾಲನಿಯಲ್ಲಿ ನಡೆದ ಘಟನೆಯ ಸಂಪೂರ್ಣ ಚಿತ್ರಣ ಸಿಗುತ್ತದೆ.
ಇನ್ನು, ‘ಪ್ರಜಾವಾಣಿ’ ಸೇರಿದಂತೆ ಕನ್ನಡ ದೈನಿಕಗಳ ಸಂಪಾದಕೀಯ ತಲೆಗಳ ಸ್ಟ್ಯಾಮಿನಾ ಖರ್ಚಾಗಿದ್ದೆಲ್ಲಿ ಅಂತ ನೋಡುವ. ಇದನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು, ಇವೇ ಪತ್ರಿಕೆಗಳು ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಬಗ್ಗೆ ಬರೆದಿರುವ ಅತ್ಯದ್ಭುತ ಸಂಪಾದಕೀಯಗಳನ್ನು ಗಮನಿಸೋಣ.
ಕರ್ನಾಟಕದ ಬುದ್ಧಿಜೀವಿಗಳಿಗೂ, ಬಲಪಂಥೀಯ ಮಂದಿಗೂ ಕಣ್ಮಣಿ (ಡಾರ್ಲಿಂಗ್) ಆಗಿರುವ ‘ಪ್ರಜಾವಾಣಿ’ಯು, ಡಿಸೆಂಬರ್ ಮೂವತ್ತೊಂದರಂದು ಚುನಾವಣಾ ಫಲಿತಾಂಶ ಕುರಿತು ಸಂಪಾದಕೀಯ ಪ್ರಕಟಿಸಿದೆ. ನಿಮ್ಮ ಮನೆಯಲ್ಲಿ ಇದೇ ಮಹಾನ್ ಪತ್ರಿಕೆ ತರಿಸುತ್ತಿದ್ದರೆ, ದಯವಿಟ್ಟು ಒಮ್ಮೆ ತೆರೆದು ನೋಡಿ. ಚುನಾವಣೆ ನಡೆದದ್ದು ಯಾವ ಸಂಸ್ಥೆಗಳಿಗೆ, ಫಲಿತಾಂಶ ಏನಾಯಿತು ಮತ್ತು ಯಾವ್ಯಾವ ಪಕ್ಷದ ಸಾಧನೆ ಎಷ್ಟು ಎಂಬ ಕೆಲವು ಪ್ರಾಥಮಿಕ ಸಂಗತಿಗಳನ್ನು ಬಿಟ್ಟರೆ, ಉಳಿದ ಶೇಕಡ ಎಂಬತ್ತೈದರಷ್ಟು ಬರಹವನ್ನು ಬಿಜೆಪಿಗೆ ಚುನಾವಣಾ ಟಿಪ್ಸ್ ಕೊಡಲು ಮೀಸಲಿಡಲಾಗಿದೆ! ಬಿಜೆಪಿ ನೀರಸ ಪ್ರದರ್ಶನ ಮಾಡಿದ್ದೇಕೆ, ಮತಗಳು ಏಕೆ ಕಡಿಮೆ ಆಗಿರಬಹುದು, ಇನ್ನೇನು ವಿಧಾನಸಭೆ ಚುನಾವಣೆ ಬರುತ್ತಿರುವುದರಿಂದ ಬಿಜೆಪಿ ಮಾಡಬೇಕಿದ್ದೇನು ಇತ್ಯಾದಿ ಪಿ.ಆರ್.ಒ (ಪಬ್ಲಿಕ್ ರಿಲೇಷನ್ ಆಫೀಸರ್) ಕಸರತ್ತುಗಳನ್ನು ಮಾನ್ಯ ‘ಪ್ರಜಾವಾಣಿ’ಯು ಮಾನ-ಮರ್ಯಾದೆ ಬಿಟ್ಟು ಯಶಸ್ವಿಯಾಗಿ ಮಾಡಿ ಮುಗಿಸಿದೆ. ‘ವಿಜಯ ಕರ್ನಾಟಕ,’ ‘ವಿಜಯವಾಣಿ,’ ‘ಉದಯವಾಣಿ,’ ‘ಕನ್ನಡಪ್ರಭ’ದ್ದೂ ಇದೇ ‘ಕಾಳಜಿ’ಯಾದರೂ ದಿ ಗ್ರೇಟ್ ‘ಪ್ರಜಾವಾಣಿ’ಯಷ್ಟು ಕೀಳುಮಟ್ಟ ತಲುಪಿಲ್ಲ. ಅಚ್ಚರಿಯ ಸಂಗತಿ ಎಂದರೆ, ಈ ವಿಷ್ಯದಲ್ಲಿ ‘ಸಂಯುಕ್ತ ಕರ್ನಾಟಕ’ ಅತ್ಯಂತ ಪ್ರಬುದ್ಧ ಸಂಪಾದಕೀಯ (ಜ.೦೧) ಪ್ರಕಟಿಸಿದೆ. ಸಂಪಾದಕೀಯ ಬರಹವೊಂದು ಹೇಗಿರಬೇಕು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಇದನ್ನು ಗಮನಿಸಬಹುದು.
ಪೊಲೀಸರ ವರ್ತನೆ, ಸೇಡಿನ ಸುಳ್ಳು ಕೇಸು, ಪಿಎಸ್ಐನ ದಾಷ್ಟ್ಯ ಕುರಿತು ರಾಜ್ಯದ ಗೃಹ ಸಚಿವರ ಬಾಯಿಂದಲೇ ಅಧಿಕೃತ ಹೇಳಿಕೆಗಳು ಹೊರಬಿದ್ದ ನಂತರವೂ, ಈ ನೆಲದ ದಿನಪತ್ರಿಕೆಗಳಿಗೆ ಘಟನೆಯ ಗಾಂಭೀರ್ಯ ಅರ್ಥ ಆಗುವುದಿಲ್ಲವೆಂದರೆ ಏನನ್ನಬೇಕು? ದನಿ ಇಲ್ಲದವರ ಅಳಲು ಆಲಿಸದ, ಅಸಹಾಯಕ ವರ್ಗಗಳ ಮೇಲಿನ ದೌರ್ಜನ್ಯದ ಬಗ್ಗೆ ಕನಿಷ್ಟಪಕ್ಷ ಮಾತೂ ಆಡದ ಕನ್ನಡದ ಈ ‘ದಿವಂಗತ ಪತ್ರಿಕೆ’ಗಳು ತಮ್ಮನ್ನು ತಾವು ‘ಜನಪರ’ ಎಂದು ಯಾವ ಮುಖ ಇಟ್ಟುಕೊಂಡು ಹೇಳಿಕೊಳ್ಳುತ್ತವೆ? ಜನಸಾಮಾನ್ಯರ ಪರ ನಿಲ್ಲದ ಈ ಕೀಳುದರ್ಜೆಯ ಪತ್ರಿಕೆಗಳನ್ನು ಜನಸಾಮಾನ್ಯರು ಎಂತಕ್ಕೆ ಕೊಂಡು ಓದಬೇಕು?