ಗಣರಾಜ್ಯೋತ್ಸವ ಪರೇಡ್ನಿಂದ ಕರ್ನಾಟಕದ ಟ್ಯಾಬ್ಲೋವನ್ನು ಕೈಬಿಡುವ ಕೇಂದ್ರ ಸರ್ಕಾರದ ನಿರ್ಧಾರ ಹೊರಬಿದ್ದ ನಂತರ ಕರ್ನಾಟಕದಲ್ಲಿ ವ್ಯಕ್ತವಾದ ತೀವ್ರವಾದ ಆಕ್ರೋಶಕ್ಕೆ ತಲೆಬಾಗಿದ ಕೇಂದ್ರ ರಕ್ಷಣಾ ಸಚಿವಾಲಯವು ರಾಜ್ಯದ ಟ್ಯಾಬ್ಲೋವನ್ನೂ ಗಣರಾಜ್ಯೋತ್ಸವ ಪರೇಡ್ನಲ್ಲಿ ಪ್ರದರ್ಶಿಸಲು ಒಪ್ಪಿಕೊಂಡಿದೆ.
ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ರಕ್ಷಣಾ ಸಚಿವಾಲಯವು “ಕರ್ನಾಟಕ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು 2023ರ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗಿಯಾಗಿಸಲು ಸರ್ಕಾರವು ಶಾರ್ಟ್ಲಿಸ್ಟ್ ಮಾಡಿದೆ” ಎಂದು ಬರೆದಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
‘ನಾರಿ ಶಕ್ತಿ’ಯನ್ನು ಬಿಂಬಿಸುವ ಮಹಿಳಾ ಕೇಂದ್ರಿತ ಟ್ಯಾಬ್ಲೋವನ್ನು ಕರ್ನಾಟಕವು ಈ ಬಾರಿ ಮಾಡಲು ಉದ್ದೇಶಿಸಿತ್ತು. ಇದೀಗ ಸರ್ಕಾರಕ್ಕೆ ಏಳು ದಿನಗಳ ಅವಕಾಶ ಲಭಿಸಿದ್ದು ಜನವರಿ 19ರ ಒಳಗಡೆ ಟ್ಯಾಬ್ಲೋ ತಯಾರಿಸಿ ದೆಹಲಿಗೆ ಕಳುಹಿಸಬೇಕಾಗಿದೆ..
ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಈ ಬಾರಿ ಅವಕಾಶ ನೀಡದೇ ಇರುವುದು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ತೀವ್ರವಾಗಿ ಟೀಕೆಗೆ ಒಳಗಾಗಿತ್ತು. ಆನಂತರ ಮುಖ್ಯಮಂತ್ರಿ ಬೊಮ್ಮಾಯಿಯವರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದರು. ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಮಾತನಾಡಿ ಕರ್ನಾಟಕಕ್ಕೆ ಈಗ ಮತ್ತೆ ಅವಕಾಶ ಲಭಿಸಿದೆ.
ಕಳೆದ ವರ್ಷ, ರಾಜ್ಯದ ಟ್ಯಾಬ್ಲೋ ‘ಸಾಂಪ್ರದಾಯಿಕ ಕರಕುಶಲತೆಯ ತೊಟ್ಟಿಲು’ ಎರಡನೇ ಅತ್ಯುತ್ತಮ ಪ್ರಶಸ್ತಿಯನ್ನು ಪಡೆದಿದ್ದು, ಕೇಂದ್ರ ಸರ್ಕಾರ ತನ್ನ ಮೊದಲಿನ ನಿರ್ಧಾರಕ್ಕೇ ಬದ್ಧವಾಗಿದ್ದರೆ, 13 ವರ್ಷಗಳಲ್ಲಿ ಮೊದಲ ಬಾರಿಗೆ ಜನವರಿ 26 ರ ಪರೇಡ್ನಲ್ಲಿ ಕರ್ನಾಟಕದ ಟ್ಯಾಬ್ಲೋ ಇರುತ್ತಿರಲಿಲ್ಲ.
ಕೇಂದ್ರ ಸರ್ಮಾರದ ಮೊದಲಿನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಜೋಶಿ, ಈ ಬಾರಿಯು ಇದುವರೆಗೆ ಅವಕಾಶ ಪಡೆಯದ ರಾಜ್ಯಗಳು ಭಾಗವಹಿಸುವಂತೆ ಮಾಡುವುದು ಗುರಿಯಾಗಿತ್ತು ಎಂದು ಹೇಳಿದ್ದರು.
ಗಣರಾಜ್ಯೋತ್ಸವದ ಸ್ತಬ್ಧಚಿತ್ರವನ್ನು ತಿರಸ್ಕರಿಸುವುದು ಸಾಮಾನ್ಯವಾಗಿ ರಾಜಕೀಯ ಕುತಂತ್ರವಾಗಿದ್ದು ಕಳೆದ ವರ್ಷ ಕೇಂದ್ರ ಸರ್ಕಾರವು ಕೇರಳ ಮತ್ತು ಪಶ್ಚಿಮ ಬಂಗಾಳದ ಗಣರಾಜ್ಯೋತ್ಸವದ ಸ್ಥಬ್ಧಚಿತ್ರವನ್ನು ತಿರಸ್ಕರಿಸಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.