ರಾಜ್ಯದಲ್ಲಿ ಬಿಜೆಪಿ ಸರ್ಕಾರ(BJP) ಕಳೆದ ವರ್ಷ ಪಠ್ಯ ಪರಿಷ್ಕರಣೆ ಮಾಡಿತ್ತು. ಪಠ್ಯ ಪರಿಷ್ಕರಣೆ ವೇಳೆಯಲ್ಲೇ ಸಾಕಷ್ಟು ವಿರೋಧ ಕೇಳಿ ಬಂದರು ತಲೆ ಕೆಡಿಸಿಕೊಳ್ಳದ ಭಾರತೀಯ ಜನತಾ ಪಾರ್ಟಿ ನೇತೃತ್ವದ ಸರ್ಕಾರ, ತನ್ನ ಸಿದ್ಧಾಂತಕ್ಕೆ ತಕ್ಕಂತೆ ಪಠ್ಯಗಳನ್ನು ರೂಪಿಸಿತ್ತು. RSS ಸಂಸ್ಥಾಪಕ ಕೇಶವ ಹೆಡ್ಗೇವಾರ್ ( keshava hedgevar) ಅವರ ಭಾಷಣ ಹಾಗು ಚಕ್ರವರ್ತಿ ಸೂಲಿಬೆಲೆ(chakravarthi soolibele) ಬರೆದಿದ್ದ ತಾಯಿ ಭಾರತಿ ಪಾಠವನ್ನೂ ಸೇರಿಸಲಾಗಿತ್ತು. ಅಷ್ಟೇ ಅಲ್ಲದೆ ಅಪ್ರತಿಮ ಹೋರಾಟಗಾರ ಟಿಪ್ಪು ಸುಲ್ತಾನ್ ಬಗೆಗಿನ ಪಾಠವನ್ನು ತೆಗೆದಿದ್ದ ಬಿಜೆಪಿ ಸರ್ಕಾರ, ಕುವೆಂಪು ಅವರು ರಾಜಕೀಯ ಬೆಂಬಲ ಪಡೆದು ಬೆಳೆದರು ಎನ್ನುವ ರೀತಿಯ ಸಾಲುಗಳು. ಡಾ ಅಂಬೇಡ್ಕರ್ ಅವರಿಗಿದ್ದ ಸಂವಿಧಾನ ಶಿಲ್ಪಿ ಎನ್ನುವ ಬಿರುದುಗಳನ್ನು ಉದ್ದೇಶಪೂರ್ವಕವಾಗಿ ತೆಗೆದು ಹಾಕುವ ಮೂಲಕ ಜನರು ಹಾಗು ಇತರೆ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅಂದೇ ಪಠ್ಯ ಮರು ಪರಿಷ್ಕರಣೆ ಬಗ್ಗೆ ಕಾಂಗ್ರೆಸ್ (congress) ಹೇಳಿಕೊಂಡಿತ್ತು. ಅದರಂತೆ ಅಧಿಕಾರಕ್ಕೆ ಬರುತ್ತಿದ್ದಂತೆ ಪಠ್ಯ ಪರಿಷ್ಕರಣೆಗೆ ತಯಾರಿ ಮಾಡಿಕೊಳ್ತಿದೆ. ಇದೀಗ ಬಿಜೆಪಿ ವಿರೋಧ ಮಾಡಲು ಮುಂದಾಗಿದೆ.
ಪಠ್ಯ ಪರಿಷ್ಕರಣೆ ಬಗ್ಗೆ ಹಾಲಿ ಮಾಜಿ ಶಿಕ್ಷಣ ಸಚಿವರ ಗುದ್ದಾಟ

ಹಾಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಠ್ಯ ಪರಿಷ್ಕರಣೆ ಬಗ್ಗೆ ಸ್ಪಷ್ಟನೆ ನೀಡಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಠ್ಯ ಬದಲಾವಣೆ ಮಾಡಿಯೇ ಮಾಡ್ತೇವೆ. ಈ ವರ್ಷ ಮಾಡಲ್ಲ ಪಠ್ಯ ಪರಿಷ್ಕರಣೆ ಇಲ್ಲ, ಮುಂದಿನ ವರ್ಷ ಎಂದು ಕೆಲವು ಮಾಧ್ಯಮಗಳಲ್ಲಿ ಬರ್ತಿದೆ. ಆದರೆ ಮಕ್ಕಳು ತಪ್ಪು ಓದಬಾರದು, ತಪ್ಪು ಪಠ್ಯಗಳನ್ನು ತೆಗೆಯಲು ಮುಂದಿನ ವರ್ಷದ ತನಕ ಕಾಯಬೇಕಿಲ್ಲ. ಹೀಗಾಗಿ ಶಿಕ್ಷಣ ತಜ್ಞರೂ ಕೂಡ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಈ ಬಗ್ಗೆ ಹೆಚ್ಚು ಆಸಕ್ತಿ ಇಟ್ಟುಕೊಂಡಿದ್ದಾರೆ. ಈ ಕ್ಷಣದಲ್ಲೂ ಕೂಡ ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧಿಸಿದಂತೆ ಸಭೆ ನಡೆಯುತ್ತಿದೆ. ಸಪ್ಲಿಮೆಂಟ್ ಮಾದರಿಯ ಪುಸ್ತಕ ನೀಡುತ್ತೇವೆ. ಯಾವ ಪಾಠ ಮಾಡಬೇಕು, ಯಾವುದನ್ನು ಮಕ್ಕಳಿಗೆ ಬೋಧಿಸಬಾರದು ಎಂಬುದನ್ನು ತಿಳಿಸುತ್ತೇವೆ ಎಂದಿದ್ದಾರೆ.
ಪಠ್ಯ ಮರು ಪರಿಷ್ಕರಣೆ ಮಾಡುವ ಅಗತ್ಯವಿರಲಿಲ್ಲ, ಈ ಕುರಿತು ನಾವು ಜನರ ಬಳಿಗೆ ಹೋಗ್ತೇವೆ ಎಂದು ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ. ಪೋಷಕರು, ಶಿಕ್ಷಣ ತಜ್ಞರು ಪಠ್ಯದ ಬಗ್ಗೆ ದೂರು ನೀಡಿದ್ರು. ಹೀಗಾಗಿ ಕಳೆದ ವರ್ಷ ಪಠ್ಯ ಪರಿಷ್ಕರಣೆ ಮಾಡಿ ಕೆಲವೊಂದು ಮಾರ್ಪಾಟು ಮಾಡಿದ್ದೇವೆ. ಕೆಲ ವಿಷಯಗಳನ್ನು ಪಠ್ಯದಿಂದ ತೆಗೆಯಲಾಗಿತ್ತು. ಅದನ್ನ ಪಠ್ಯಕ್ಕೆ ಸೇರಿಸಿದ್ದೆವು. RSS ಸಂಸ್ಥಾಪಕ ಹೆಡ್ಗೇವಾರ್ ಅವರ ಆದರ್ಶ ಕುರಿತು ಭಾಷಣ ಸೇರಿಸಿದ್ದೆವು. ಚಕ್ರವರ್ತಿ ಸೂಲಿಬೆಲೆ ಪಠ್ಯ ತೆಗೆಯಲು ಮುಂದಾಗಿದ್ದಾರೆ. ಆದರೆ ಯಾವುದು ಕೇಸರಿಕರಣ ಪಠ್ಯದಲ್ಲಿ ಆಗಿಲ್ಲ. ಟಿಪ್ಪು ಸುಲ್ತಾನ್ ಬಗ್ಗೆ ಮತ್ತೆ ಸೇರಿಸಲು ಮುಂದಾಗ್ತಿದಾರೆ. ಹೀಗೆ ಮಾಡಿದ್ರೆ ನಾವು ಹೋರಾಟ ಮಾಡ್ತಿವಿ ಎಂದು ಎಚ್ಚರಿಸಿದ್ದಾರೆ. ಇನ್ನು ಕೆಲವು ಬುದ್ಧಿ ಜೀವಿಗಳಿಗೆ ಕೆಲಸ ಇಲ್ಲ ಅಂತ ಅವರಿಗೆ ಕೆಲಸ ಕೊಡಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಟೀಕಿಸಿದ್ದಾರೆ.
ವಿಧಾನಪರಿಷತ್ ಸದಸ್ಯರಾದ ವೈ.ಎ ನಾರಾಯಣಸ್ವಾಮಿ, ಶಶಿಲ್ ನಮೋಶಿ, ಅ ದೇವೇಗೌಡ, ಚಿದಾನಂದ ಗೌಡ, ಅರುಣ್ ಶಹಾಪುರ ಈ ಬಗ್ಗೆ ಮಾತನಾಡಿ, ಹೊಸ ಸರ್ಕಾರ ಬಂದ ಬಳಿಕ ಪಠ್ಯಪುಸ್ತಕ ಪರಿಷ್ಕರಣೆ ಬಹಳ ಸದ್ದು ಮಾಡ್ತಿದೆ. ಕೆಲ ಸಾಹಿತಿಗಳು ಸಿಎಂ ಹಾಗೂ ಶಿಕ್ಷಣ ಸಚಿವ ಹಿಂದೆ ಮುಂದೆ ತಿರುಗುತ್ತಿದ್ದಾರೆ. ಅವರ ಸಾಹಿತ್ಯ ತುರುಕುವ ಕೆಲಸ ಮಾಡಲಾಗ್ತಿದೆ
ಅದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಶಿಕ್ಷಣ ಸಚಿವರನ್ನು ಎಚ್ಚರಿಸಿದ್ದಾರೆ. ಅನೇಕರು ಕಾಂಗ್ರೆಸ್ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ರು, ಅವರಿಂದ ಸಲಹೆ ಪಡೆಯಿರಿ ಎಂದಿರುವ ಪರಿಷತ್ ಸದಸ್ಯರು, ಕೆಲವರು ಮಾತು ಕಟ್ಟಿಕೊಂಡು ಈ ರೀತಿ ಹೆಜ್ಜೆ ಇಡಬೇಡಿ. ಇದು ನಿಮಗೆ ಸಂಕಷ್ಟ ತರಲಿದೆ ಎಂದಿದ್ದಾರೆ. ಇನ್ನು ಮಾಜಿ ಸಚಿವ ಸಿಟಿ ರವಿ ಮಾತನಾಡಿ, ಹೆಡ್ಗೆವಾರ್ ಅವರು ದೇಶ ಭಕ್ತ. ಅವರನ್ನು ಬದಲಿಸೋ ಮನಸ್ಥಿತಿ ಇವರದ್ದು. ಮಾರ್ಕ್ಸ್, ಮಾವೋ ಸಿದ್ಧಾಂತ ಒಪ್ಪಬಹುದು. ಆದರೆ ಹೆಡ್ಗೆವಾರ್ ಬದಲಾವಣೆ ಮಾಡಬೇಕು ಅನ್ನೋದು ಇವರ ಮನಸ್ಥಿತಿ. ಜನ ಅವರಿಗೆ ಅಧಿಕಾರ ಕೊಟ್ಟಿದ್ದಾರೆ. ಅವರು ಏನು ಮಾಡ್ತಾರೆ ನೋಡೋಣ ಎಂದಿದ್ದಾರೆ.

ಚಕ್ರವರ್ತಿ ಪಾಠವನ್ನು ನಾನು ಓದಿಲ್ಲ, ಮಕ್ಕಳು ಓದ್ಬೇಕಾ..?
ಬಿಜೆಪಿ ಅವಧಿಯ ಪಠ್ಯ ಪರಿಷ್ಕರಣೆ ವಿಚಾರವಾಗಿ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಚಕ್ರವರ್ತಿ ಸೂಲಿಬೆಲೆ ಬರೆದಿರೋ ಪಠ್ಯ ತೆಗೆಯುತ್ತೇವೆ ಎಂದು ನೇರವಾಗಿಯೇ ಹೇಳಿದ್ದಾರೆ. ನಾನು ಚಕ್ರವರ್ತಿ ಸೂಲಿಬೆಲೆ ಬರೆದಿರೊ ಪಠ್ಯ ಓದಿಲ್ಲ. ಆದ್ರು ಅವರು ಬರೆದಿರೋ ಪಠ್ಯವನ್ನು ನಮ್ಮ ಮಕ್ಕಳು ಓದೋದು ಬೇಡ. ಯಾವ ಆಧಾರದಲ್ಲಿ ಚಕ್ರವರ್ತಿ ಸೂಲಿಬೆಲೆ ಪಾಠವನ್ನು ಪುಸ್ತಕದಲ್ಲಿ ಸೇರ್ಪಡೆ ಮಾಡಿದ್ದಾರೆ. ಅವನು ಯಾವ PhD ಮಾಡಿದ್ದಾರೆ..? ಬಾಡಿಗೆ ಭಾಷಣಕಾರರಿಗೆಲ್ಲ ನೀವು ಲೇಖಕರು, ಸಾಹಿತಿಗಳು ಮಾಡಿ, ಅದನ್ನ ನಮ್ಮ ಮಕ್ಕಳು ಓದಬೇಕಾ..? ಎಂದು ಪ್ರಶ್ನಿಸಿದ್ದಾರೆ. ಕರ್ನಾಟಕ ಸಾಹಿತ್ಯಕ್ಕೆ ಅಷ್ಟೊಂದು ಬರ ಬಂದಿಲ್ಲ ಎಂದಿರುವ ಸಚಿವರು, ಯಾರು ಇವರೆಲ್ಲಾ..? ವಾಟ್ಸ್ ಅಪ್ ಯುನಿವರ್ಸಿಟಿಯಲ್ಲಿ ಓದೋರು ಇವರು. ಅಲ್ಲಿಯೋ ವಿಸಿಗಳು ನಮ್ಮ ಪಠ್ಯ ಓದೋಕೆ ಪಠ್ಯ ರಚನೆ ಮಾಡಲು ಪ್ರಾರಂಭ ಮಾಡಿದ್ದಾರೆ. ಅಂತಹ ಪಾಠ ನಮ್ಮ ಮಕ್ಕಳು ಕಲಿತರೆ ನಮ್ಮ ಮಕ್ಕಳ ಭವಿಷ್ಯ ಏನಾಗಬೇಕು..? ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ನಾನು ನಾಸ್ತಿಕ ಏಕೆ ಆಗಿದ್ದೇನೆ..? ಅಂತ ಭಗತ್ ಸಿಂಗ್ ಪುಸ್ತಕ ಇದೆ, ಅದನ್ನ ಚಕ್ರವರ್ತಿ ಸೂಲಿಬೆಲೆ ಓದಿ ಬಿಡಲಿ ಸಾಕು. ಇತಿಹಾಸ ತಿರುಚದ ಪಾಠ ನಾವು ಸೇರಿಸ್ತೀವಿ. ಚಕ್ರವರ್ತಿ ಸೂಲಿಬೆಲೆಗಿಂತ ಒಳ್ಳೆ ಸಾಹಿತಿಗಳು ನಮ್ಮಲ್ಲಿ ಇಲ್ಲವಾ..? ಚಕ್ರವರ್ತಿ ಸೂಲಿಬೆಲೆ ವಾಸ್ತವ ಹೇಳೋ ವ್ಯಕ್ತಿ ಅಲ್ಲ. ಚಕ್ರವರ್ತಿ ಸೂಲಿಬೆಲೆ ಪಾಠ ನಮ್ಮ ಜನರಿಗೆ, ನಮ್ಮ ಮಕ್ಕಳಿಗೆ ಅಗತ್ಯ ಇಲ್ಲ ಎಂದು ಕಟುವಾಗಿ ಹೇಳಿದ್ದಾರೆ. ಆಡಳಿತ ಪಕ್ಷಕ್ಕೆ ಹತ್ತಿರ ಇದ್ದವರ ಪಠ್ಯ ಹಾಕೋದು ಸರಿನಾ..? ನಿಮ್ಮ ಮಕ್ಕಳು ವಾಟ್ಸ್ ಅಪ್ ಯುನಿವರ್ಸಿಟಿ ಓದಬೇಕಾ..? ಒಳ್ಳೆ ಯುನಿವರ್ಸಿಟಿ ಓದಬೇಕಾ..? ಎಂದು ಮರು ಪ್ರಶ್ನೆ ಹಾಕಿದ್ದಾರೆ.
ಕೃಷ್ಣಮಣಿ