ಚಿತ್ರದುರ್ಗ : ಅಮ್ಮನ ನೆನಪು ಪ್ರೀತಿಯ ಮೂಲ, ದೇವರ ನೆನಪು ಭಕ್ತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ಈ ಮೂರರ ನೆನಪು ಮನುಷ್ಯತ್ವಕ್ಕೆ ಮೂಲ. ಸುಧಾಕರ್ ನೆನಪು ಮೋಕ್ಷಕ್ಕೆ ಮೂಲ. ಸುಧಾಕರ್ ಕೇವಲ ಮಂತ್ರಿಯಲ್ಲ, ನನ್ನ ಆತ್ಮೀಯ ಸ್ನೇಹಿತ ಎಂದು ಮಾಜಿ ಸಚಿವ ದಿ. ಡಿ. ಸುಧಾಕರ್ ಸ್ಮರಿಸಿ ಸಿಎಂ ಡಿಕೆ ಶಿವಕುಮಾರ್ ಭಾವುಕರಾಗಿದ್ದಾರೆ.

ಜಿಲ್ಲೆಯ ಹಿರಿಯೂರಿನ ನೆಹರೂ ಮೈದಾನದಲ್ಲಿ ಇಂದು ನಡೆದ ಮಾಜಿ ಸಚಿವ ದಿವಂಗತ ಡಿ. ಸುಧಾಕರ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಷೇತ್ರದ 14 ಕೆರೆಗಳಿಗೆ ನೀರು ತುಂಬಿಸಬೇಕು ಎನ್ನುವುದು ಅವರ ಕನಸಾಗಿತ್ತು. ಈ ಯೋಜನೆ ಮಾಡಲು ನನ್ನ ಬಳಿ ಅವರು ಕೊನೆಯದಾಗಿ ಮಾತು ತೆಗೆದುಕೊಂಡಿದ್ದರು. ಆ ಮಾತನ್ನು ಉಳಿಸಿಕೊಳ್ಳಲು ನಾವು ಸಚಿವ ಸಂಪುಟದಲ್ಲಿ 244 ಕೋಟಿ ರೂ. ಮೊತ್ತದ ಯೋಜನೆಗೆ ಒಪ್ಪಿಗೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ರೈತರ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದ ಸುಧಾಕರ್ ನೀರುಣಿಸುವ ಯೋಜನೆಗೆ ಅನುಮೋದನೆ ನೀಡಬೇಕೆಂದು ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಒತ್ತಾಯಿಸಿದ್ದರು. ಆ ಯೋಜನೆ ಜಾರಿಗೊಳಿಸಲು ನಾವು ಮುಂದಾಗಿದ್ದೇವೆ ಎಂದು ಕ್ಷೇತ್ರದ ಜನರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ನೀತಿಯ ಮೇಲೆ ರಾಜಕಾರಣ ಮಾಡಿದವರು ಸುಧಾಕರ್..
ದಿ. ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ಶಕ್ತಿ ತುಂಬಿ ರಾಜಕಾರಣ ಆರಂಭಿಸಿದರು. ನಾನು ಹಾಗೂ ಅವರ ಚಿಕ್ಕಪ್ಪ ಬಂಗಾರಪ್ಪ ಅವರ ಕಾಲದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೆವು. ನಾನು ಸಚಿವನಾಗಿದ್ದೆ, ಅವರು ಮುಖ್ಯ ಸಚೇತಕರಾಗಿದ್ದರು. ಸುಧಾಕರ್ ಜಾತಿ ಆಧಾರದ ಮೇಲೆ ರಾಜಕಾರಣ ಮಾಡದೇ ನೀತಿಯ ಮೇಲೆ ರಾಜಕಾರಣ ಮಾಡಿದವರು. ಮಾನವ ಧರ್ಮದವನ್ನು ನಂಬಿದ್ದರು. ಎಲ್ಲಾ ವರ್ಗದ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗಿ, ಈ ಜಿಲ್ಲೆಯನ್ನು ಶಾಂತಿಯ ತೋಟವಾಗಿ ನಿರ್ಮಿಸಿದ್ದರು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶ್ಲಾಘಿಸಿದ್ದಾರೆ.
ಇದನ್ನೂ ಓದಿ : ಚುನಾವಣಾ ರಾಜಕೀಯಕ್ಕೆ ಸಿದ್ದರಾಮಯ್ಯ ಗುಡ್ಬೈ? ಐದು ದಶಕಗಳ ರಾಜಕೀಯ ಪಯಣಕ್ಕೆ ತೆರೆ?
ಜಿಲ್ಲೆಯಲ್ಲಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಿ, ಹೇಗೆ ಅಭಿವೃದ್ಧಿ ಮಾಡಿದ್ದಾರೆ ಎಂದು ನೀವು ನೋಡಿದ್ದೀರಿ. ಅವರು ರಾಜಕಾರಣ ಮಾಡುವುದರ ಜೊತೆಗೆ ಸರಳತೆಗೆ ಹೆಸರಾಗಿದ್ದರು. ಕೊಡುಗೈ ದಾನಿಯಾಗಿದ್ದರು. ಬಹಳ ಸರಳತೆಯಿಂದ ಹಿರಿಯೂರು ಹಾಗೂ ಚಳ್ಳಕೆರೆ ಭಾಗದ ಜನರ ಬದುಕಿಗೆ ನೀರಾವರಿ ಬಲ ತುಂಬಲು ದಿಟ್ಟ ನಿರ್ಧಾರ ಮಾಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅಪಮಾನ, ಆದರ್ಶ ಇಲ್ಲದೇ ಬದುಕಿದರೆ ಬದುಕಿಗೆ ಅಪಮಾನ ಎಂದು ಹಿರಿಯರು ಹೇಳಿದ್ದಾರೆ. ಹಣ ಎಷ್ಟೇ ಇದ್ದರು, ಜನರ ಪ್ರೀತಿ ಶಾಶ್ವತಕ್ಕೆ ಈ ನುಡಿನಮನ ಸಾಕ್ಷಿ. ನಾವು ಹೋರಾಟ ಮಾಡದಿದ್ದರೆ, ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡುವಾಗ ಈ ಚಿತ್ರದುರ್ಗದಲ್ಲಿ ಮಳೆ ಬಂದು ಸಮಸ್ಯೆ ಆದಾಗ ನಿಮ್ಮೆಲ್ಲರ ಸಹಕಾರದಿಂದ ಸುಧಾಕರ್ ಅವರು ಅದನ್ನು ಹೇಗೆ ನಿಭಾಯಿಸಿದ್ದರು ಎಂಬುದನ್ನು ನೋಡಿದ್ದೇವೆ. ಅವರು ನಮ್ಮನ್ನು ಅಗಲಿದ ಸುದ್ದಿ ತಿಳಿದ ತಕ್ಷಣ, ರಾಹುಲ್ ಗಾಂಧಿ ಅವರು ಸುಧಾಕರ್ ಅವರ ಬೆನ್ನಿಗೆ ನಿಲ್ಲಲ್ಲಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ ಎಂದು ತಿಳಿಸಿದ್ದಾರೆ.
ನೀರಾವರಿ ಕ್ಷೇತ್ರದಲ್ಲಿ ಸಾಕ್ಷಿಗುಡ್ಡೆ ಬಿಟ್ಟಿದ್ದಾರೆ..
ಮಾನವ ಜನ್ಮಕ್ಕಿಂತ ಮಾನವೀಯತೆ ದೊಡ್ಡದು ಎಂದು ಬಸವಣ್ಣನವರು ನಮಗೆ ಮಾರ್ಗದರ್ಶನ ನೀಡಿದ್ದಾರೆ. ಶಾಸಕರಾದ ವೀರೇಂದ್ರ ಪಪ್ಪಿ, ಆಂಜನೇಯ, ಚಂದ್ರಪ್ಪ, ಗೋಪಾಲಕೃಷ್ಣ ಅವರು ಸೇರಿ ಜಿಲ್ಲೆಯ ನಾಯಕರು ಕೈ ಬೆರಳುಗಳಂತೆ ಒಗ್ಗಟ್ಟಾಗಿ ಇದ್ದರು. ಸುಧಾಕರ್ ಅವರು ಈ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಲ್ಲಿ ಸಾಕ್ಷಿ ಗುಡ್ಡೆ ಬಿಟ್ಟು ಹೋಗಿದ್ದಾರೆ. ಆ ಮೂಲಕ ನಿಮ್ಮ ಬದುಕಿನಲ್ಲಿ ಬದಲಾವಣೆ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಮುಷ್ಟಿಯಯಿತು. ಸಂಪಾದನೆ ಅಂದರೆ ಕೇವಲ ಹಣ ಮಾತ್ರವಲ್ಲ. ಗೌರವ, ಸಂಬಂಧ, ಪ್ರೀತಿ, ಸಾಕ್ಷಿ ಗುಡ್ಡೆಯೂ ಸೇರಿದೆ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ನಮ್ಮ ಸರ್ಕಾರ ನುಡಿದಂತೆ ನಡೆದಿದೆ..
ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಕೊಟ್ಟ ಮಾತಿನಂತೆ ನಡೆದಿದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು. ಐದು ಗ್ಯಾರಂಟಿಗಳಿಂದ ಕೈ ಗಟ್ಟಿಯಾಗಿದೆ. ಗ್ಯಾರಂಟಿಗಳಿಂದ ರಾಜ್ಯದ 1.60 ಕೋಟಿ ಕುಟುಂಬಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಸಿಕ್ಕಿದ್ದು, ಅವರ ಮನೆಗಳು ಬೆಳಗುತ್ತಿವೆ. ಗೃಹಲಕ್ಷ್ಮಿ ಯೋಜನೆ ಮೂಲಕ 1.21 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ 2000 ರೂ. ತಲುಪುತ್ತಿದೆ. ಬೆಲೆಗಳು ಏರುತ್ತಿದ್ದು, ಆದಾಯಗಳು ಕುಸಿಯುತ್ತಿರುವ ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನ್ನಭಾಗ್ಯ ಯೋಜನೆ ಜನರ ತುತ್ತಿನ ಚೀಲವನ್ನು ತುಂಬಿದೆ ಎಂದು ಗ್ಯಾರಂಟಿಗಳ ಯಶೋಗಾಥೆ ಬಿಚ್ಚಿಟ್ಟಿದ್ದಾರೆ.
ರಾಜ್ಯದ ಜನ ಋಣ ತೀರಿಸಲು ಈ ಗ್ಯಾರಂಟಿ ಯೋಜನೆಗಳು..
ಉಚಿತ ಬಸ್ ಪ್ರಯಾಣದ ಸೌಲಭ್ಯದಿಂದ ಕೋಟ್ಯಾಂತರ ಮಹಿಳೆಯರಿಗೆ ಅನುಕೂಲ ಕಲ್ಪಿಸಲಾಗಿದೆ. ಇವು ಸಿದ್ದರಾಮಯ್ಯ ಅಥವಾ ಡಿ ಕೆ ಶಿವಕುಮಾರ್ ಅವರ ಕಾರ್ಯಕ್ರಮಗಳಲ್ಲ. ಇದು ರಾಜ್ಯದ ಬಡಜನರ ಉನ್ನತಿಗಾಗಿ ಜಾರಿಗೊಂಡಿರುವ ಕಾರ್ಯಕ್ರಮಗಳು. ಇಂತಹ ಜನಪರ ಯೋಜನೆಗಳನ್ನು ಜೆಡಿಎಸ್, ಬಿಜೆಪಿಯವರಿಗೆ ಜಾರಿಗೊಳಿಸಲು ಸಾಧ್ಯವಾಗಲಿಲ್ಲ. ನಮಗೆ 136 ಶಾಸಕರನ್ನು ನೀಡಿದ ಜನತೆಯ ಋಣವನ್ನು ತೀರಿಸುವ ಐದು ಕಾರ್ಯಕ್ರಮಗಳಾಗಿವೆ ಎಂದು ವಿಪಕ್ಷಗಳ ವಿರುದ್ಧ ಡಿಕೆ ಶಿವಕುಮಾರ್ ಗುಡುಗಿದ್ದಾರೆ.
ಮಧ್ಯಪ್ರದೇಶ, ಬಿಹಾರ ಸೇರಿದಂತೆ ದೇಶದ ಬೇರೆ ಯಾವುದೇ ರಾಜ್ಯಗಳಲ್ಲಿ ಚುನಾವಣೆ ನಡೆದರೂ ನಮ್ಮ ಗ್ಯಾರಂಟಿಗಳು ಪ್ರತಿಧ್ವನಿಸುತ್ತಿವೆ. ನಾವು ಗ್ಯಾರಂಟಿ ಯೋಜನೆ ನೀಡುವ ಮೂಲಕ ಬಡ ಜನರ ಬದುಕಿನಲ್ಲಿ ಬದಲಾವಣೆ ತಂದಿದ್ದೇವೆ ಎಂದು ತಿಳಿಸಿದ್ದಾರೆ.

“ಡಿ. ಸುಧಾಕರ್ ಅವರ ಆತ್ಮಕ್ಕೆ ಶಾಂತಿ ಕೋರಲು ನಾವೆಲ್ಲಾ ಸೇರಿದ್ದೇವೆ. ಅವರ ಆಚಾರ ವಿಚಾರಗಳಿಗೆ ಸ್ಪಂದಿಸಿ, ಜ್ಯೋತಿಯನ್ನು ಚಿರಂತನಗೊಳಿಸಬೇಕೆಂದು ಪ್ರಾರ್ಥಿಸುತ್ತೇನೆ. ರಾಜಕೀಯದಲ್ಲಿ ಸೇವೆ ಸಲ್ಲಿಸಲು ಎಲ್ಲರಿಗೂ ಆಸೆಯಿರುತ್ತದೆ. ಆದರೆ ಶಿಸ್ತು,ಪ್ರಾಮಾಣಿಕತೆ, ಸೇವಾಮನೋಭಾವವಿರುವ ಎಲ್ಲರಿಗೂ ರಾಜಕಾರಣದಲ್ಲಿ ಅವಕಾಶ ದೊರೆಯುತ್ತದೆ. ಪಕ್ಷದ ರಾಷ್ಟ್ರಾಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯಾಧ್ಯಕ್ಷರು ಹರಿಪ್ರಸಾದ್ ಅವರು ಅನೇಕ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಹರಿಪ್ರಸಾದ್ ಅವರು ಪಕ್ಷದ ನಿಷ್ಠಾವಂತ ಹೋರಾಟಗಾರರು. ಕಾಂಗ್ರೆಸ್ ಪಕ್ಷದ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿಯವರು ರಾಜ್ಯದ ಚುಕ್ಕಾಣಿಯನ್ನು ಅವರಿಗೆ ನೀಡಿದ್ದಾರೆ” ಎಂದರು.
ಇದನ್ನೂ ಓದಿ : ನೀಟ್ ಪ್ರತಿಭಟನೆ ಹಿಂಸಾಚಾರಕ್ಕೆ ಪಾಕ್ ಲಿಂಕ್?
ಸುಧಾಕರ್ ಚಿಂತನೆ ಹಾಗೂ ಅಶೋತ್ತರಗಳಿಗೆ ಸ್ಪಂದನೆ..
ಚಿತ್ರದುರ್ಗ ಸುಧಾಕರ್ ಅವರ ಕ್ಷೇತ್ರವಲ್ಲ. ಸುಧಾಕರ್ ಪರವಾಗಿ ಪ್ರಜೆಗಳಿಗೆ ಸೇವೆ ಮಾಡುವ ಅವಕಾಶ ಎಂದು ಭಾವಿಸಿದ್ದೇನೆ. ಇದು ನನ್ನ ಹಾಗೂ ಸಿದ್ದರಾಮಯ್ಯನವರ ಕ್ಷೇತ್ರ. ಸುಧಾಕರ್ ಅವರ ಚಿಂತನೆ ಹಾಗೂ ಅಶೋತ್ತರಗಳಿಗೆ ಸ್ಪಂದಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ನೀಡುವ ಕೆಲಸ ಮಾಡಲಾಗುವುದು ಎಂದು ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.

ರಾಜ್ಯದ ಜನ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿರಿಸಿದ್ದಾರೆ..
ಡಿ.ಸುಧಾಕರ್ ಅವರು ಚಿತ್ರದುರ್ಗಕ್ಕೆ ಬಿಟ್ಟುಹೋಗಿರುವ ಕೊಡುಗೆಗಳನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಇಂದು ರಾಜ್ಯದ ಜನರು ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವನ್ನಿಟ್ಟಿದ್ದಾರೆ. ಬೇರು ಗಟ್ಟಿಯಾಗಿಲ್ಲದಿದ್ದರೆ ಮರ ಗಟ್ಟಿಯಾಗಿರಲು ಸಾಧ್ಯವಿಲ್ಲ. ಮನುಷ್ಯನಿಗೆ ನಂಬಿಕೆ ಬಹಳ ಮುಖ್ಯ. ನಾವು ಜಾತಿಯ ಮೇಲೆ ರಾಜಕಾರಣ ಮಾಡುವುದು ಬೇಡ. ನೀತಿಯ ಮೇಲೆ ರಾಜಕಾರಣ ಮಾಡಲು ಮುಂದಾಗೋಣ. ಚಿತ್ರದುರ್ಗ ಜನರ ಮತ್ತು ಸುಧಾಕರ್ ಅವಿನಾಭಾವ ಸಂಬಂಧದಿಂದಾಗಿ ಹಲವು ಬಾರಿ ಆಶೀರ್ವಾದ ಮಾಡುತ್ತಾ ಬಂದಿದ್ದಾರೆ. ಪಕ್ಷದಲ್ಲಿ ಎಲ್ಲರೂ ಸಮಾನರು.ಪಕ್ಷದಲ್ಲಿ ವ್ಯಕ್ತಿಗಳು ಮುಖ್ಯರಲ್ಲ. ಪಕ್ಷದ ಸಿದ್ಧಾಂತಗಳು ಮುಖ್ಯ ಎಂದು ಹೇಳಿದ್ದಾರೆ.
ನೋವಿನ ಸಂದರ್ಭದಲ್ಲಿ ನನ್ನ ಸಹೋದರಿ ಹಾಗೂ ಆ ಕುಟುಂಬದ ಜೊತೆಗೆ ನಾವು ನಿಲ್ಲುತ್ತೇವೆ. ಸುಧಾಕರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡುತ್ತೇವೆ. ನಿಮ್ಮ ಶಕ್ತಿ ಅವರ ಜೊತೆಗೆ ಇರಲಿ. ನಾವು ನಿಮ್ಮ ಜೊತೆ ಇರುತ್ತೇವೆ. ಇದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಜಿಲ್ಲೆಯ ಐದೂ ಶಾಸಕರ ಕ್ಷೇತ್ರವಾಗಿದೆ. ನಾವೆಲ್ಲರೂ ಒಟ್ಟಾಗಿ ಈ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡೋಣ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.






