ಮೈಸೂರು: ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಐತಿಹಾಸಿಕ ಕ್ಷಣಕ್ಕಾಗಿ ವಿಶ್ವವೇ ಕಾಯುತ್ತಿರುವ ನಡುವೆ ಮೈಸೂರಿನಲ್ಲಿ ಸಂಭ್ರಮ ಮನೆ ಮಾಡಿದೆ.
ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ತಲೆಎತ್ತುತ್ತಿರುವ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಆಗುತ್ತಿರುವ ಬಾಲರಾಮನ ಮೂರ್ತಿ ಕೆತ್ತನೆ ಮಾಡಿದ್ದು ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಎಂಬುದು ಮೈಸೂರಿಗರಲ್ಲಿ ಸಂತಸ ಮೂಡಿಸಿದ್ದರೆ. ಇದಕ್ಕೆ ಬಳಸಿದ ಕೃಷ್ಣಶಿಲೆ ಮೈಸೂರು ತಾಲೂಕಿನ ಹಾರೋಹಳ್ಳಿ- ಗುಜ್ಜೇಗೌಡನಪುರದಲ್ಲಿ ಸಿಕ್ಕಿದ್ದು ಎಂಬುದು ಮೈಸೂರಿಗರ ಸಂಭ್ರಮ, ಸಡಗರವನ್ನು ಇಮ್ಮಡಿಗೊಳಿಸಿದೆ.
![](https://pratidhvani.com/wp-content/uploads/2024/01/WhatsApp-Image-2024-01-17-at-08.11.32.jpeg)
ಈ ನಡುವೆ ಶಿಲ್ಪಿ ಅರುಣ್ ಯೋಗಿರಾಜ್ ಬಾಲರಾಮನ ಮೂರ್ತಿ ಕೆತ್ತಲು ಬಳಸಿರುವ ಕಲ್ಲು ದೊರೆತ ಸ್ಥಳ ಇದೀಗ ಪೂಜಾ ಕೇಂದ್ರವಾಗಿದ್ದು, ಕೃಷ್ಣಶಿಲೆ ದೊರೆತ ಸ್ಥಳದಲ್ಲಿ ಸ್ಥಳೀಯ ಗ್ರಾಮಸ್ಥರು ಸಂಭ್ರಮದಿಂದ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕಲ್ಲು ದೊರೆತ ಸ್ಥಳದಲ್ಲಿ ಚಪ್ಪರ ಹಾಕಿ ಅರಮನೆ ಪುರೋಹಿತ ಪ್ರಹ್ಲಾದ್ ನೇತೃತ್ವದಲ್ಲಿ ಭೂಮಿಪೂಜೆ ನೆರವೇರಿಸಿ ಭಕ್ತಿಭಾವ ಮರೆದಿದ್ದಾರೆ. ಆ ಮೂಲಕ ಐತಿಹಾಸಿಕ ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಆಗುತ್ತಿರುವ ಬಾಲರಾಮನ ಮೂರ್ತಿ ಕೆತ್ತನೆಗೆ ತಮ್ಮ ಊರಿನ ಕಲ್ಲು ಬಳಕೆಯಾಗಿರುವ ಸಂಗತಿಯನ್ನು ಸಂಭ್ರಮಿಸಿದ್ದಾರೆ.