ಇತ್ತೀಚಿಗೆ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ತನ್ಮಯ್ ಘೋಷ್, ಟಿಎಂಸಿ ಸೇರಿದ್ದಾರೆ. ಸೋಮವಾರದಂದು ಬಿಜೆಪಿ ತೊರೆದು ಅಧಿಕೃತವಾಗಿ ಟಿಎಂಸಿಯ ಧ್ವಜವನ್ನು ಸ್ವೀಕರಿಸಿದ್ದಾರೆ. ಇದರೊಂದಿಗೆ ತನ್ಮಯ್ ಬಿಜೆಪಿ ತೊರೆದ ಎರಡನೇ ಶಾಸಕರಾಗಿದ್ದಾರೆ.
ಪಶ್ಚಿಮ ಬಂಗಾಳದ ಬಿಶ್ನುಪುರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತನ್ಮಯ್ ಅವರು ಬಿಜೆಪಿ ಟಿಕೆಟ್ ಪಡೆದಿದ್ದರು. ಚುನಾವಣೆಗೂ ಮುನ್ನ ಟಿಎಂಸಿಯಲ್ಲೇ ಇದ್ದ ತನ್ಮಯ್, ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈಗ ಹಿರಿಯ ಟಿಎಂಸಿ ನಾಯಕ ಹಾಗೂ ಸಚಿವ ಬ್ರಾತ್ಯ ಬಸು ನೇತೃತ್ವದಲ್ಲಿ ಮತ್ತೆ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ.
ಜೂನ್ ತಿಂಗಳಲ್ಲಿ ಕೃಷ್ಣನಗರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಹಿಂದೆ ಟಿಎಂಸಿಯಲ್ಲಿ ಇದ್ದಂತಹ ಹಿರಿಯ ರಾಜಕಾರಣಿ ಮುಕುಲ್ ರಾಯ್ ಅವರು ಪಕ್ಷಕ್ಕೆ ಮರಳಿದ್ದರು. ಒಂದು ಕಾಲದಲ್ಲಿ ಟಿಎಂಸಿಯಲ್ಲಿ ಮಮತಾ ಬ್ಯಾನರ್ಜಿ ಬಳಿಕ ಅತೀ ಹೆಚ್ಚು ಮನ್ನಣೆ ಪಡೆದ ನಾಯಕರಾಗಿದ್ದ ಮುಕುಲ್ ರಾಯ್ 2017ರಲ್ಲಿ ಬಿಜೆಪಿ ಸೇರಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸೋಲಿನ ಬಳಿಕ ಮತ್ತೆ ಟಿಎಂಸಿಗೆ ಮರಳಿದ್ದಾರೆ.
ಚುನಾವಣೆಯ ಫಲಿತಾಂಶ ಘೋಷಿಸುವ ವೇಳೆ 77 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಯ ಬಲ ಈಗ 73ಕ್ಕೆ ಕುಗ್ಗಿದೆ. ಲೋಕಸಭಾ ಸದಸ್ಯರಾಗಿದ್ದುಕೊಂಡು ವಿಧಾನಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಇಬ್ಬರು ನಾಯಕರು, ತಮ್ಮ ವಿಧಾನಸಭಾ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಮುಕುಲ್ ರಾಯ್ ಹಾಗೂ ತನ್ಮಯ್ ಘೋಷ್ ಟಿಎಂಸಿಗೆ ಮರಳಿದ್ದಾರೆ.
ಇವರಿಬ್ಬರು ಮಾತ್ರವಲ್ಲದೇ, ಬಿಜೆಪಿಯ ಇತರೆ ಶಾಸಕರು ಕೂಡಾ ಟಿಎಂಸಿ ಪಕ್ಷದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಮತಾ ಬ್ಯಾನರ್ಜಿ ಅನುಮತಿ ಸಿಕ್ಕ ಕ್ಷಣವೇ ಟಿಎಂಸಿಗೆ ಸೇರುವ ಅಭಿಲಾಷೆ ಹೊಂದಿದ್ದಾರೆ ಎಂದು ಟಿಎಂಸಿ ಮೂಲಗಳು ತಿಳಿಸಿವೆ. ಇನ್ನು ಚುನಾವಣಾ ಸಮಯದಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದವರನ್ನು ವಾಪಾಸ್ ಕರೆಸಿಕೊಳ್ಳಲಾಗುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರೂ, ತನ್ಮಯ್ ಘೋಷ್ ಅವರಿಗೆ ಅವಕಾಶ ನೀಡಿದ್ದರಿಂದ ಉಳಿದವರಲ್ಲಿಯೂ ಟಿಎಂಸಿ ಸೇರುವ ಆಸೆ ಚಿಗುರೊಡೆದಿದೆ.